
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ತಮಿಳುನಾಡಿನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಿನಿಮಾ ಸ್ಟಾರ್ ಆಗಿ ದೊರೆತಿದ್ದ ಭಾರಿ ಜನಪ್ರಿಯತೆ ಮತಗಳಾಗಿ ಪರಿವರ್ತನೆ ಆಗಿದ್ದು, ಕಾಂಗ್ರೆಸ್ ಮತ್ತು ಇನ್ನಿತರೆ ಕೆಲ ಪಕ್ಷಗಳ ಜೊತೆಗೂಡಿ ಸರ್ಕಾರ ರಚನೆ ಮಾಡಿದ್ದಾರೆ. ವಿಜಯ್ ಅವರಿಗೆ ರಾಜಕೀಯ ಎಂಟ್ರಿಯ ಕನಸು ವರ್ಷಗಳಿಂದಲೂ ಇತ್ತು. ಸುಮಾರು ಎರಡು ದಶಕದಿಂದಲೂ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹಲವು ಬಾರಿ ತಮಿಳುನಾಡಿನ ಸಾಮಾಜಿಕ ವಿಷಯಗಳ ಬಗ್ಗೆ ಸಿನಿಮಾ ಮೂಲಕ ಧ್ವನಿ ಎತ್ತಿದ್ದರು. ಕೊನೆಗೂ ಈಗ ಸಿಎಂ ಆಗಿದ್ದಾರೆ. ಆದರೆ ವಿಜಯ್ ಅವರು 27 ವರ್ಷಗಳ ಹಿಂದೆ ‘ಸಿಎಂ’ ಆಗಬೇಕಿತ್ತು! ಅದು ಹೇಗೆ?
1999 ರಲ್ಲಿ ತಮಿಳಿನಲ್ಲಿ ಸಿನಿಮಾ ಒಂದು ಬಿಡುಗಡೆ ಆಗಿತ್ತು. ಸಿನಿಮಾದ ಹೆಸರು ‘ಮೊದಲ್ವನ್’. ಸಿನಿಮಾನಲ್ಲಿ ಅರ್ಜುನ್ ಸರ್ಜಾ ನಾಯಕ. ಮೊನಿಷಾ ಕೊಯಿರಾಲ ನಾಯಕಿ. ಸಿನಿಮಾ ನಿರ್ದೇಶಿಸಿದ್ದು ಆಗಿನ ಬ್ಲಾಕ್ ಬಸ್ಟರ್ ಸಿನಿಮಾ ನಿರ್ದೇಶಕ ಶಂಕರ್. ಅಸಲಿಗೆ ಆ ಸಿನಿಮಾದ ಕತೆಯನ್ನು ಶಂಕರ್ ಬರೆದಿದ್ದು ದಳಪತಿ ವಿಜಯ್ ಅವರಿಗಾಗಿ. ಆದರೆ ಅನಿವಾರ್ಯ ಕಾರಣಗಳಿಂದ ವಿಜಯ್ ಅವರು ‘ಮುದಲ್ವನ್’ ಸಿನಿಮಾನಲ್ಲಿ ನಟಿಸಲಾಗಲಿಲ್ಲ.
ಇದನ್ನೂ ಓದಿ:ಸಿಎಂ ಆಗಾಯ್ತು, ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ದಳಪತಿ ವಿಜಯ್?
‘ಮುದಲ್ವನ್’ ಸಿನಿಮಾ, ಪತ್ರಕರ್ತನೊಬ್ಬ ಒಂದು ದಿನದ ಮಟ್ಟಿಗೆ ಸಿಎಂ ಆಗಿ ಭ್ರಷ್ಟರನ್ನು ಜೈಲಿಗೆ ಅಟ್ಟುವ ಕತೆಯನ್ನು ಒಳಗೊಂಡಿದೆ. ಅರ್ಜುನ್ ಸರ್ಜಾ ಆ ಸಿನಿಮಾನಲ್ಲಿ ಒಂದು ದಿನದ ಮಟ್ಟಿಗೆ ಸಿಎಂ ಆಗುತ್ತಾರೆ. ಒಂದೊಮ್ಮೆ ವಿಜಯ್ ಅವರು ಆ ಸಿನಿಮಾನಲ್ಲಿ ನಟಿಸಿದ್ದರೆ 1999ರಲ್ಲೇ ‘ಸಿಎಂ’ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ತೆರೆಯ ಮೇಲೆ ಸಿಎಂ ಆಗುವುದನ್ನು ತಪ್ಪಿಸಿಕೊಂಡಿದ್ದ ವಿಜಯ್, ಈಗ ನಿಜ ಜೀವನದಲ್ಲಿ ಸಿಎಂ ಆಗಿದ್ದಾರೆ. ಸಿನಿಮಾನಲ್ಲಿ ನಾಯಕ ಮಾಡಿದ ಕ್ರಾಂತಿಯನ್ನು ಈಗ ನಿಜವಾಗಿಯೂ ಮಾಡುವ ಅವಕಾಶ ವಿಜಯ್ ಮುಂದಿದೆ.
ಶಂಕರ್ ಅವರ ‘ಮುದಲ್ವನ್’ ಸಿನಿಮಾ ಹಿಂದಿಗೆ ‘ನಾಯಕ್’ ಆಗಿ ರೀಮೇಕ್ ಆಯ್ತು. ಅಲ್ಲಿ ಅನಿಲ್ ಕಪೂರ್ ನಾಯಕ, ರಾಣಿ ಮುಖರ್ಜಿ ನಾಯಕಿ. ಶಂಕರ್ ಜೊತೆಗೆ ‘ಮೊದಲ್ವನ್’ ಸಿನಿಮಾನಲ್ಲಿ ನಟಿಸುವುದು ಮಿಸ್ ಮಾಡಿಕೊಂಡಿದ್ದ ವಿಜಯ್ ಬಹಳ ವರ್ಷಗಳ ಬಳಿಕ ಶಂಕರ್ ನಿರ್ದೇಶನ ಮಾಡಿದ ‘ನನ್ಬ’ ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ‘ನನ್ಬ’ ಸಿನಿಮಾ ಹಿಂದಿಯ ‘3 ಇಡಿಯಟ್ಸ್’ ಸಿನಿಮಾದ ರೀಮೇಕ್ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ