ನಿರ್ದೇಶಕನ ಮನೆಯಲ್ಲಿ ಕಳ್ಳತನ, ಕ್ಷಮೆ ಕೇಳಿ ವಸ್ತು ಹಿಂತಿರುಗಿಸಿ ಹೋದ ಕಳ್ಳರು

|

Updated on: Feb 13, 2024 | 3:48 PM

M Manikandan: ರಾಷ್ಟ್ರಪ್ರಶಸ್ತಿ ವಿಜೇತ ‘ಕಡೈಸಿ ವ್ಯವಸಾಯಿ’ ಸಿನಿಮಾದ ನಿರ್ದೇಶಕ ಮಣಿಕಾಂದನ್ ಮನೆಯಲ್ಲಿ ಕಳ್ಳತನವಾಗಿತ್ತು. ಇದೀಗ ಕಳ್ಳರು ವಸ್ತು ಮರಳಿಸಿ ಕ್ಷಮೆ ಸಹ ಕೇಳಿದ್ದಾರೆ.

ನಿರ್ದೇಶಕನ ಮನೆಯಲ್ಲಿ ಕಳ್ಳತನ, ಕ್ಷಮೆ ಕೇಳಿ ವಸ್ತು ಹಿಂತಿರುಗಿಸಿ ಹೋದ ಕಳ್ಳರು
ಮಣಿಕಾಂದನ್
Follow us on

ಇದೇ ತಿಂಗಳ ಆರಂಭದಲ್ಲಿ ರಾಷ್ಟ್ರಪ್ರಶಸ್ತಿ (National Award) ವಿಜೇತ ತಮಿಳು ಸಿನಿಮಾ ನಿರ್ದೇಶಕ ಎಂ ಮಣಿಕಾಂದನ್ (M Manikandan) ಮನೆಯಲ್ಲಿ ಕಳ್ಳತನವಾಗಿತ್ತು. ಮನೆಯ ಬೀಗ ಒಡೆದು ಬೀರು ಬೀಗ ಒಡೆದು ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಮಣಿಕಾಂದನ್ ಅವರಿಗೆ ನೀಡಲಾಗಿದ್ದ ರಾಷ್ಟ್ರಪ್ರಶಸ್ತಿಯನ್ನೂ ಸಹ ಕಳ್ಳರು ದೋಚಿಕೊಂಡು ಹೋಗಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಕಳ್ಳರು ಮಣಿಕಾಂದನ್ ಅವರ ಅಮೂಲ್ಯ ವಸ್ತುವೊಂದನ್ನು ಮರಳಿಸಿದ್ದಾರೆ, ಮಾತ್ರವಲ್ಲದೆ ಕ್ಷಮೆ ಕೋರಿ ಪತ್ರವನ್ನು ಸಹ ಬರೆದಿದ್ದಾರೆ.

ಮಣಿಕಾಂದನ್ ಮನೆಯಲ್ಲಿ ಒಂದು ಲಕ್ಷ ರೂಪಾಯಿ ನಗದು, ಕೆಲವು ಗ್ರಾಂಗಳಷ್ಟು ಚಿನ್ನ ಹಾಗೂ ಅವರ ‘ಕಡೈಸಿ ವ್ಯವಸಾಯಿ’ ಸಿನಿಮಾಕ್ಕೆ ನೀಡಿದ ರಾಷ್ಟ್ರಪ್ರಶಸ್ತಿಯನ್ನು ಸಹ ಕದ್ದೊಯ್ದಿದ್ದರು. ಆದರೆ ಈಗ ರಾಷ್ಟ್ರಪ್ರಶಸ್ತಿಯನ್ನು ಮರಳಿಸಿರುವ ಕಳ್ಳರು, ಜೊತೆಗೊಂದು ಪತ್ರವನ್ನು ಸಹ ಇಟ್ಟು ಹೋಗಿದ್ದಾರೆ, ಪತ್ರದಲ್ಲಿ ‘ದಯವಿಟ್ಟು ಕ್ಷಮಿಸಿ, ನಿಮ್ಮ ಶ್ರಮಕ್ಕೆ ಸಿಕ್ಕಿದ ಪ್ರತಿಫಲ ನಿಮ್ಮದು ಮಾತ್ರ’ ಎಂದು ಬರೆದಿದ್ದಾರೆ.

ಇದನ್ನೂ ಓದಿ:ರಾಷ್ಟ್ರಪ್ರಶಸ್ತಿ ಪಡೆಯಲು ಪತ್ನಿಯೊಂದಿಗೆ ಹೊರಟ ಅಲ್ಲು ಅರ್ಜುನ್

ಮಣಿಕಾಂದನ್ ಅವರದ್ದು ಮೂಲತಃ ಮಧುರೈ ಜಿಲ್ಲೆಯ ಉಸಿಲಾಂಪಟ್ಟಿ ಗ್ರಾಮ. ಮಣಿಕಾಂದನ್ ಸಿನಿಮಾ ಕೆಲಸವಿಲ್ಲದಾಗ ಇಲ್ಲಿಯೇ ಇರುತ್ತಾರೆ. ಸಿನಿಮಾ ಕೆಲಸದ ಮೇಲೆ ಚೆನ್ನೈಗೆ ಬಂದಾಗ ಅವರ ಡ್ರೈವರ್ ಆ ಮನೆಯನ್ನು ನೋಡಿಕೊಳ್ಳುತ್ತಾರೆ. ಮಣಿಕಾಂದನ್, ಚೆನ್ನೈಗೆ ಬಂದಿದ್ದಾಗ ಉಸಿಲಾಂಪಟ್ಟಿ ಗ್ರಾಮದ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಘಟನೆ ಕುರಿತು ಮಣಿಕಾಂದನ್ ಅವರ ವಾಹನ ಚಾಲಕ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಪೊಲೀಸರು ಮಾಡುತ್ತಿರುವಾಗಲೇ ಕಳ್ಳರು ನಿರ್ದೇಶಕರ ರಾಷ್ಟ್ರಪ್ರಶಸ್ತಿಯನ್ನು ಮರಳಿಸಿದ್ದಾರೆ.

ಎಂ ಮಣಿಕಂದನ್ ತಮಿಳಿನ ಜನಪ್ರಿಯ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು. ಈ ಹಿಂದೆ ಧನುಶ್ ನಿರ್ಮಾಣ ಮಾಡಿದ್ದ ‘ಕಾಕ ಮೊಟ್ಟೈ’ ಸಿನಿಮಾವನ್ನು ಅವರೇ ನಿರ್ದೇಶನ ಮಾಡಿದ್ದರು. ಆ ಸಿನಿಮಾಕ್ಕೂ ಸಹ ರಾಷ್ಟ್ರಪ್ರಶಸ್ತಿ ಬಂದಿತ್ತು. ಮಣಿಕಾಂದನ್ ನಿರ್ದೇಶನ ಮಾಡಿರುವ ‘ಕಡೈಸಿ ವ್ಯವಸಾಯಿ’ ಸಿನಿಮಾ 2022ರಲ್ಲಿ ಬಿಡುಗಡೆ ಆಗಿತ್ತು ವಿಜಯ್ ಸೇತುಪತಿ ನಟಿಸಿದ್ದ ಈ ಸಿನಿಮಾಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಸಹ ದೊರಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Tue, 13 February 24