ಪೈರಸಿ ತಡೆಯಲು ದಿಟ್ಟ ಹೆಜ್ಜೆ ಇಟ್ಟ ತೆಲುಗು ಚಿತ್ರರಂಗ

War against Piracy: ವಿಶ್ವಮಟ್ಟದಲ್ಲಿ ತೆಲುಗು ಚಿತ್ರರಂಗ ಯಶಸ್ಸು ಕಂಡಿದೆ. ಭಾರತದ ದೊಡ್ಡ ಚಿತ್ರರಂಗಗಳಲ್ಲಿ ಅತಿ ಹೆಚ್ಚು ಯಶಸ್ವಿ ಸರಾಸರಿ ಹೊಂದಿರುವ ಚಿತ್ರರಂಗವೂ ತೆಲುಗು ಚಿತ್ರರಂಗವೇ ಆಗಿದೆ. ಆದರೆ ತೆಲುಗು ಚಿತ್ರರಂಗವನ್ನು ಪೈರಸಿ ಎಂಬುದು ದಶಕಗಳಿಂದಲೂ ಕಾಡುತ್ತಲೇ ಬಂದಿದೆ. ಆದರೆ ಇತ್ತೀಚೆಗೆ ಈ ಪೈರಸಿ ತಡೆಗಾಗಿ ಚಿತ್ರರಂಗ ಕೆಲವು ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ.

ಪೈರಸಿ ತಡೆಯಲು ದಿಟ್ಟ ಹೆಜ್ಜೆ ಇಟ್ಟ ತೆಲುಗು ಚಿತ್ರರಂಗ
Piracy

Updated on: Jan 06, 2026 | 3:35 PM

ತೆಲುಗು ಚಿತ್ರರಂಗ (Tollywood), ಭಾರತದ ಚಿತ್ರರಂಗಗಳಲ್ಲಿಯೇ ಅತ್ಯಂತ ಲಾಭದಾಯಕ ಚಿತ್ರರಂಗವಾಗಿದೆ. ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ ಎಂಬ ವಿದೇಶಿಗರ ನಂಬಿಕೆಯನ್ನು ಅಳಿಸಿ ಹಾಕಿದ ಶ್ರೇಯ ತೆಲುಗು ಚಿತ್ರರಂಗಕ್ಕೆ ಸಲ್ಲಬೇಕಿದೆ. ‘ಬಾಹುಬಲಿ’, ‘ಆರ್​ಆರ್​ಆರ್’ ಸೇರಿದಂತೆ ಇನ್ನೂ ಹಲವು ಸಿನಿಮಾಗಳ ಮೂಲಕ ವಿಶ್ವಮಟ್ಟದಲ್ಲಿ ತೆಲುಗು ಚಿತ್ರರಂಗ ಜನಪ್ರಿಯತೆ ಕಂಡಿದೆ. ದೊಡ್ಡ ಚಿತ್ರರಂಗಗಳಲ್ಲಿ ಅತಿ ಹೆಚ್ಚು ಯಶಸ್ವಿ ಸರಾಸರಿ ಹೊಂದಿರುವ ಚಿತ್ರರಂಗವೂ ತೆಲುಗು ಚಿತ್ರರಂಗವೇ ಆಗಿದೆ. ಆದರೆ ತೆಲುಗು ಚಿತ್ರರಂಗವನ್ನು ಪೈರಸಿ ಎಂಬುದು ದಶಕಗಳಿಂದಲೂ ಕಾಡುತ್ತಲೇ ಬಂದಿದೆ. ಆದರೆ ಇತ್ತೀಚೆಗೆ ಈ ಪೈರಸಿ ತಡೆಗಾಗಿ ಚಿತ್ರರಂಗ ಕೆಲವು ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ.

ಕೋವಿಡ್ ಬಳಿಕ ಆದ ಒಟಿಟಿ ಕ್ರಾಂತಿಯ ಅಡ್ಡಪರಿಣಾಮವಾಗಿ ಪೈರಸಿ ಮೊದಲಿಗಿಂತಲೂ ಹೆಚ್ಚಾಗಿದೆ ಮತ್ತು ಮೊದಲಿಗಿಂತಲೂ ಹೆಚ್ಚು ವಿಸ್ತಾರವನ್ನು ಪಡೆದುಕೊಂಡಿದೆ. ಈಗಂತೂ ಬೆರಳ ತುದಿಯಲ್ಲಿ ಪೈರಸಿ ಸಿನಿಮಾಗಳು ಲಭ್ಯವಾಗುವಂತಾಗಿದೆ. ಇದರಿಂದಾಗಿ ಚಿತ್ರರಂಗಗಳಿಗೆ ವಾರ್ಷಿಕ ಸಾವಿರಾರು ಕೋಟಿ ನಷ್ಟವಾಗುತ್ತಿದೆ. ಇದರಲ್ಲಿ ಹೆಚ್ಚು ನಷ್ಟ ಅನುಭವಿಸುತ್ತಿರುವುದು ತೆಲುಗು ಚಿತ್ರರಂಗ. ಏಕೆಂದರೆ ಚಿತ್ರಮಂದಿರ ಮತ್ತು ಒಟಿಟಿಗಳಲ್ಲಿ ತೆಲುಗು ಸಿನಿಮಾಗಳಿಗೆ ಒಳ್ಳೆಯ ಬೇಡಿಕೆ ಇದೆ. ಅಲ್ಲದೆ, ಪೈರಸಿ ಕೋರರು ಟಾರ್ಗೆಟ್ ಮಾಡುತ್ತಿರುವುದು ಸಹ ತೆಲುಗು ಸಿನಿಮಾಗಳನ್ನೇ ಹೆಚ್ಚು.

ಇತ್ತೀಚೆಗಿನ ವರ್ಷಗಳಲ್ಲಿ ತೆಲುಗು ಚಿತ್ರರಂಗ ಈ ಪೈರಸಿ ತಡೆಯಲು ದಿಟ್ಟ ಹೆಜ್ಜೆಗಳನ್ನು ಇಡುತ್ತಾ ಬಂದಿದೆ. ಮೆಗಾಸ್ಟಾರ್ ಚಿರಂಜೀವಿ ನೇತೃತ್ವದಲ್ಲಿ ಟಾಲಿವುಡ್​ನ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡ ಉನ್ನತ ವರ್ಗದ ನಿಯೋಗ ಕಾಲ ಕಾಲಕ್ಕೆ ಸೈಬರ್ ಪೊಲೀಸರನ್ನು ಭೇಟಿ ಮಾಡಿ ಪೈರಸಿ ಬಗ್ಗೆ ದೂರುಗಳನ್ನು ನೀಡುತ್ತಲೇ ಬಂದಿದೆ. ಸರ್ಕಾರದ ಸಿನಿಮಾಟೊಗ್ರಫಿ ಸಚಿವರು, ಗೃಹ ಮಂತ್ರಿಗಳನ್ನು ಸಹ ಭೇಟಿ ಮಾಡಿ ದೂರುಗಳನ್ನು ನೀಡಲಾಗಿತ್ತು.

ಇದನ್ನೂ ಓದಿ:ದೀಕ್ಷಿತ್ ಶೆಟ್ಟಿ ವೇಗಕ್ಕೆ ಬ್ರೇಕ್ ಇಲ್ಲ, ಮತ್ತೊಂದು ಬಿಗ್ ಬಜೆಟ್ ತೆಲುಗು ಸಿನಿಮಾನಲ್ಲಿ ನಟನೆ

ಅದರ ಫಲವಾಗಿ ಐಬೊಮ್ಮ ರವಿ ಸೇರಿದಂತೆ ಇನ್ನೂ ಕೆಲವು ಪ್ರಮುಖ ಪೈರಸಿಕೋರರನ್ನು ಸೈಬರಾಬಾದ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಅವರು ನಡೆಸುತ್ತಿದ್ದ ಕೆಲವಾರು ಪೈರಸಿ ಸೈಟ್​ ಮತ್ತು ಅಪ್ಲಿಕೇಶನ್​​ಗಳನ್ನು ಬಂದ್ ಮಾಡಿಸಿದ್ದಾರೆ. ಇತ್ತೀಚೆಗಷ್ಟೆ ತೆಲುಗು ಸಿನಿಮಾ ಚೇಂಬರ್​​ಗೆ ನೂತನ ಅಧ್ಯಕ್ಷರಾಗಿ ಖ್ಯಾತ ಸಿನಿಮಾ ನಿರ್ಮಾಪಕ ದಗ್ಗುಬಾಟಿ ಸುರೇಶ್ ಬಾಬು ಆಯ್ಕೆ ಆಗಿದ್ದು, ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪೈರಸಿ ತಡೆ ಕುರಿತಾಗಿ ಪೊಲೀಸರೊಂದಿಗೆ ಮೆಮೊರ್ಯಾಂಡಮ್ (ಜ್ಞಾಪಕ ಪತ್ರ) ಸಹಿ ಮಾಡಿಕೊಂಡಿದ್ದಾರೆ.

ಇದರಂತೆ ಪೈರಸಿ ತಡೆಗೆ ಪೊಲೀಸರು ಮತ್ತು ತೆಲುಗು ಚಿತ್ರರಂಗ ಇನ್ನು ಮುಂದೆ ಜೊತೆ-ಜೊತೆಯಾಗಿ ಕೆಲಸ ಮಾಡಲಿದೆ. ಈಗಾಗಲೇ ಲಭ್ಯವಿರುವ ಪೈರಸಿ ಸೈಟುಗಳನ್ನು ತೆಗೆದು ಹಾಕುವ ಜೊತೆಗೆ ಮುಂದಿನ ದಿನಗಳಲ್ಲಿ ಸಿನಿಮಾಗಳ ಪೈರಸಿ ಆಗದಂತೆ ತಡೆಯುವ ಪ್ರಯತ್ನಗಳನ್ನು ಒಕ್ಕೂರಲಿನಿಂದ ಮಾಡುವ ಯೋಜನೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ