Vakeel Saab: ವಕೀಲ್​ ಸಾಬ್​ ನೋಡಲು ಬಂದು ಥಿಯೇಟರ್​ಗೆ ಕಲ್ಲು ಹೊಡೆದ ಪವನ್​ ಕಲ್ಯಾಣ್​ ಫ್ಯಾನ್ಸ್​! ಕಾರಣ ಏನು?

Pawan Kalyan: ಪವನ್ ಕಲ್ಯಾಣ್​ ನಟನೆಯ ‘ವಕೀಲ್​ ಸಾಬ್​’ ಸಿನಿಮಾ ನೋಡಲು ಬಂದ ಹಲವು ಅಭಿಮಾನಿಗಳು ದಾಂಧಲೆ ಮಾಡಿದ್ದಾರೆ. ಚಿತ್ರಮಂದಿರದ ಕುರ್ಚಿ,‌ ಗಾಜು ಪುಡಿ‌ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vakeel Saab: ವಕೀಲ್​ ಸಾಬ್​ ನೋಡಲು ಬಂದು ಥಿಯೇಟರ್​ಗೆ ಕಲ್ಲು ಹೊಡೆದ ಪವನ್​ ಕಲ್ಯಾಣ್​ ಫ್ಯಾನ್ಸ್​! ಕಾರಣ ಏನು?
ಪವನ್​ ಕಲ್ಯಾಣ್​- ಅಭಿಮಾನಿಗಳಿಂದ ಚಿತ್ರಮಂದಿರದ ಗಾಜು ಪುಡಿ
Edited By:

Updated on: Apr 09, 2021 | 2:05 PM

ನಟ ಪವನ್​ ಕಲ್ಯಾಣ್​ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ಇಂದು (ಏ.9) ವಕೀಲ್​ ಸಾಬ್​ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತು ಕಾದಿದ್ದರು. ಕೊರೊನಾ ವೈರಸ್​ ಎರಡನೇ ಅಲೆ ಭೀತಿ ನಡುವೆಯೂ ಎಲ್ಲರೂ ಚಿತ್ರಮಂದಿರಕ್ಕೆ ಮುಗಿ ಬಿದ್ದಿದ್ದಾರೆ. ಹಾಗಂತ ಸುಮ್ಮನೆ ಸಿನಿಮಾ ನೋಡಿ ಎಂಜಾಯ್​ ಮಾಡುವ ಬದಲು ಕೆಲವು ಅಭಿಮಾನಿಗಳು ದಾಂಧಲೆ ಮಾಡಿದ್ದಾರೆ! ಇದರಿಂದ ಚಿತ್ರಮಂದಿರಕ್ಕೆ ಹಾನಿ ಆಗಿದೆ.

‘ಅಜ್ಞಾತವಾಸಿ’ ಬಿಡುಗಡೆಯಾದ ಬಳಿಕ ಪವನ್​ ನಟನೆಯ ಬೇರೆ ಯಾವುದೇ ಚಿತ್ರಗಳು ಬಂದಿರಲಿಲ್ಲ. ಹಾಗಾಗಿ ಮೂರು ವರ್ಷಗಳ ನಂತರ ಪವನ್​ ಕಲ್ಯಾಣ್​ ಸಿನಿಮಾ ತೆರೆಕಾಣುತ್ತಿರುವುದರಿಂದ ಅಭಿಮಾನಿಗಳಲ್ಲಿ ಭಾರಿ ಉತ್ಸಾಹವಿತ್ತು. ಕಟೌಟ್​ಗೆ ಹಾಲಿನ ಅಭಿಷೇಕ್​ ಮಾಡಿ ಸಂಭ್ರಮದಿಂದ ಕಾಯುತ್ತಿದ್ದರು. ಆದರೆ ಕೆಲವು ಕಡೆಗಳಲ್ಲಿ ಚಿತ್ರ ಪ್ರದರ್ಶನಕ್ಕೆ ತಡವಾದ‌ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್​ ಅಭಿಮಾನಿಗಳು ದಾಂಧಲೆ ಮಾಡಿದ್ದಾರೆ! ಚಿತ್ರಮಂದಿರದ ಕುರ್ಚಿ,‌ ಗಾಜು ಪುಡಿ‌ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಂಧ್ರದ‌ ತಿರುಪತಿಯ 5 ಚಿತ್ರಮಂದಿರಗಳಲ್ಲಿ ಮತ್ತು ಕಡಪಾ‌ ಜಿಲ್ಲೆಯ ಬದ್ವೇಲ್ ನಗರದಲ್ಲಿ ಚಿತ್ರ ಪ್ರದರ್ಶನ‌ ವಿಳಂಬ ಆಯಿತು. ಇದರಿಂದ ಕೋಪಗೊಂಡ ಅಭಿಮಾನಿಗಳು ಪುಂಡಾಟಿಕೆ ಮೆರೆದಿದ್ದಾರೆ. ತಿರುಪತಿಯ ಶಾಂತಿ, ಸಂಧ್ಯಾ ಚಿತ್ರಮಂದಿರಗಳ ಪೀಠೋಪಕರಣ ಮತ್ತು ಕಿಟಕಿ-ಬಾಗಿಲಿನ ಗಾಜುಗಳನ್ನು ಒಡೆದುಹಾಕಿದ್ದಾರೆ. ನಂತರ ಪುಂಡ‌ ಅಭಿಮಾನಿಗಳನ್ನು‌ ಹೊರಗೆ ಕಳುಹಿಸಿ ಚಿತ್ರ ಪ್ರದರ್ಶನ ಮುಂದುವರಿಸಲಾಯಿತು.

ಕೆಲವು ದಿನಗಳ ಹಿಂದೆ ಈ ಸಿನಿಮಾ ಟ್ರೇಲರ್​ ಬಿಡುಗಡೆ ಆಗಿತ್ತು. ತೆಲಂಗಾಣದ ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಟ್ರೇಲರ್​ ಬಿತ್ತರಿಸಲಾಯಿತು. ಆಗಲೂ ಸಹ ಪವನ್​ ಕಲ್ಯಾಣ್​ ಅಭಿಮಾನಿಗಳು ಚಿತ್ರಮಂದಿರದ ಬಾಗಿಲಿನ ಗಾಜು ಒಡೆದು ಹಾಕಿದ್ದರು. ಈಗ ಮತ್ತೆ ಅದೇ ಚಾಳಿ ಮುಂದುವರಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಅಭಿಮಾನಿಗಳು ‘ವಕೀಲ್​ ಸಾಬ್​’ ಕಂಡು ಫಿದಾ ಆಗಿದ್ದಾರೆ. ಇನ್ನೂ ಕೆಲವರು ಇದು ಪವನ್​ ಕಲ್ಯಾಣ್​ ಅವರ ಅತಿ ಕೆಟ್ಟ ಸಿನಿಮಾ ಎಂದು ತೆಗಳುತ್ತಿದ್ದಾರೆ.

ಬಾಲಿವುಡ್​ನ ಪಿಂಕ್​ ಸಿನಿಮಾದ ತೆಲುಗು ರಿಮೇಕ್​ ಆಗಿ ‘ವಕೀಲ್​ ಸಾಬ್​’ ಮೂಡಿಬಂದಿದೆ. ಹಿಂದಿಯಲ್ಲಿ ಅಮಿತಾಭ್​ ಬಚ್ಚನ್​ ಮಾಡಿದ್ದ ಪಾತ್ರವನ್ನು ಟಾಲಿವುಡ್​ನಲ್ಲಿ ಪವನ್​ ಕಲ್ಯಾಣ್​ ಮಾಡಿದ್ದಾರೆ. ಲಾಯರ್​ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಪ್ರಕಾಶ್​ ರೈ, ಶ್ರುತಿ ಹಾಸನ್​, ನಿವೇತಾ ಥಾಮಸ್​, ಅಂಜಲಿ, ಅನನ್ಯಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Vakeel Saab Review: ವಕೀಲ್​ ಸಾಬ್​ ಟ್ವಿಟರ್​ ವಿಮರ್ಶೆ; ಪವನ್​ ಕಲ್ಯಾಣ್​ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟವಾಯ್ತಾ?

( Vakeel Saab actor Pawan Kalyan fans pelt stones at movie theaters)

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us