ವಿಕ್ಟರಿ ವೆಂಕಟೇಶ್ ಪುತ್ರಿಯ ನಿಶ್ಚಿತಾರ್ಥ: ವರ ಯಾರು?

Venkatesh: ನಟ ವೆಂಕಟೇಶ್ ದಗ್ಗುಬಾಟಿಯ ಎರಡನೇ ಪುತ್ರಿಯ ನಿಶ್ಚಿತಾರ್ಥ ಅಕ್ಟೋಬರ್ 25ರಂದು ಹೈದರಾಬಾದ್​ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ವರ ಯಾರು?

ವಿಕ್ಟರಿ ವೆಂಕಟೇಶ್ ಪುತ್ರಿಯ ನಿಶ್ಚಿತಾರ್ಥ: ವರ ಯಾರು?
ಭಾವನಾ

Updated on: Oct 24, 2023 | 7:07 PM

ತೆಲುಗು ಚಿತ್ರರಂಗದಲ್ಲಿ (Tollywood) ಈಗ ಮದುವೆ ಪರ್ವ ನಡೆಯುತ್ತಿದ್ದಂತಿದೆ. ಮೆಗಾಸ್ಟಾರ್ ಕುಟುಂಬದಲ್ಲಿ ಕೆಲವೇ ದಿನಗಳಲ್ಲಿ ಅದ್ಧೂರಿಯಾಗಿ ಮದುವೆಯೊಂದು ನಡೆಯಲಿದೆ. ಇದರ ನಡುವೆ, ತೆಲುಗು ಚಿತ್ರರಂಗದ ಮತ್ತೊಂದು ಪ್ರಮುಖ ಕುಟುಂಬವಾದ ರಾಮಾನಾಯ್ಡು ಕುಟುಂಬದಲ್ಲಿಯೂ ಶುಭ ಸಮಾರಂಭವೊಂದು ನಾಳೆ (ಅಕ್ಟೋಬರ್ 25) ಕ್ಕೆ ನಡೆಯಲಿದೆ. ವಿಕ್ಟರಿ ವೆಂಕಟೇಶ್​ರ ಎರಡನೇ ಪುತ್ರಿಯ ಮದುವೆ ನಿಶ್ಚಯವಾಗಿದ್ದು, ನಿಶ್ಚಿತಾರ್ಥ ನಾಳೆ ಇದೆ.

ವಿಕ್ಟರಿ ವೆಂಕಟೇಶ್​ರ ಎರಡನೇ ಪುತ್ರಿ ಭಾವನಾ ಅವರು ವೈದ್ಯರೊಬ್ಬರನ್ನು ವರಿಸಲಿದ್ದು ನಾಳೆ ಹೈದರಾಬಾದ್​ನಲ್ಲಿ ಅದ್ಧೂರಿಯಾಗಿ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ದಗ್ಗುಬಾಟಿ ಕುಟುಂಬ ಸದಸ್ಯರ ಜೊತೆಗೆ ತೆಲುಗು ಚಿತ್ರರಂಗದ ಹಲವು ಪ್ರಮುಖರು ಭಾಗಿಯಾಗಲಿದ್ದಾರೆ. ಭಾವನಾ ಅವರು ವಿಜಯವಾಡದ ಪ್ರಮುಖ ವೈದ್ಯ ಕುಟುಂಬದ ಪುತ್ರನನ್ನು ವಿವಾಹವಾಗಲಿದ್ದಾರೆ.

ಇದನ್ನೂ ಓದಿ:ದರ್ಶನ್, ರಾಕ್​ಲೈನ್ ವೆಂಕಟೇಶ್ ಕತ್ತಲ್ಲೂ ಇತ್ತು ಹುಲಿ ಉಗುರು?

ವೆಂಕಟೇಶ್​ರ ಮೊದಲ ಪುತ್ರಿ ಆಶ್ರಿತಾ ದಗ್ಗುಬಾಟಿ ವಿವಾಹ 2019ರ ಮಾರ್ಚ್ ತಿಂಗಳಲ್ಲಿ ನಡೆದಿತ್ತು. ಆಶ್ರಿತಾ ಅವರು ತಮ್ಮ ಬಹು ಸಮಯದ ಬಾಯ್​ಫ್ರೆಂಡ್ ವಿನಾಯಕ ರೆಡ್ಡಿಯನ್ನು ವಿವಾಹವಾದರು. ಹೈದರಾಬಾದ್ ರೇಸ್​ಕ್ಲಬ್ ಚೇರ್​ಮ್ಯಾನ್ ಹಾಗೂ ಜನಪ್ರಿಯ ಉದ್ಯಮಿ ಸುರೇಂದ್ರ ರೆಡ್ಡಿಯ ಪುತ್ರ ವಿನಾಯಕ ರೆಡ್ಡಿ. ಇವರಿಬ್ಬರ ವಿವಾಹ ಜೈಪುರದಲ್ಲಿ ನಡೆದಿತ್ತು. ಆಶ್ರಿತಾ ಫುಡ್ ವ್ಲಾಗರ್ ಸಹ ಆಗಿದ್ದು ‘ಇನ್​ಫಿನಿಟಿ ಪ್ಲಾಟರ್’ ಹೆಸರಿನ ಯೂಟ್ಯೂಬ್ ಚಾನೆಲ್ ಸಹ ಹೊಂದಿದ್ದಾರೆ.

ಇದನ್ನೂ ಓದಿ:Salman Khan: ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ ನೋಡಿ ಸಿಟ್ಟು ಮಾಡಿಕೊಂಡ ದಗ್ಗುಬಾಟಿ ವೆಂಕಟೇಶ್​ ಅಭಿಮಾನಿಗಳು

ಇನ್ನು ನಟ ವೆಂಕಟೇಶ್, 1985 ರಲ್ಲಿ ನೀರಜಾ ಅವರೊಟ್ಟಿಗೆ ವಿವಾಹವಾದರು. ಅವರಿಗೆ ಒಟ್ಟು ನಾಲ್ಕು ಜನ ಮಕ್ಕಳು. ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ. ಇದೀಗ ಎರಡನೇ ಪುತ್ರಿಗೆ ವಿವಾಹವಾಗಲಿದೆ. ವೆಂಕಟೇಶ್ ಪುತ್ರ ಚಿತ್ರರಂಗ ಪ್ರವೇಶಿಸಲು ರೆಡಿಯಾಗುತ್ತಿದ್ದಾನೆ. ಇನ್ನು ವೆಂಕಟೇಶ್​ರ ಅಣ್ಣನ ಪುತ್ರ ರಾಣಾ ದಗ್ಗುಬಾಟಿ ಈಗಾಗಲೇ ತೆಲುಗು ಚಿತ್ರರಂಗದ ಸ್ಟಾರ್ ನಟ ಹಾಗೂ ನಿರ್ಮಾಪಕ. ವೆಂಕಟೇಶ್ ಸಹ ತೆಲುಗು ಚಿತ್ರರಂಗದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಸ್ಟಾರ್ ನಟ, ‘ಸೈಂಧವ’ ಹೆಸರಿನ ಸಿನಿಮಾದಲ್ಲಿ ವೆಂಕಟೇಶ್ ನಟಿಸಿದ್ದು ಈ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಆಗಲಿದೆ.

ಮೆಗಾಸ್ಟಾರ್ ಕುಟುಂಬದಲ್ಲಿಯೂ ಶೀಘ್ರವೇ ವಿವಾಹ ಕಾರ್ಯವೊಂದು ನಡೆಯಲಿದೆ. ಚಿರಂಜೀವಿ ಸಹೋದರ ನಾಗಬಾಬು ಪುತ್ರ, ನಾಯಕ ನಟನಾಗಿ ಗುರುತಿಸಿಕೊಂಡಿರುವ ವರುಣ್ ತೇಜ್, ಜನಪ್ರಿಯ ನಾಯಕಿ ಲಾವಣ್ಯ ತ್ರಿಪಾಠಿಯನ್ನು ವಿವಾಹವಾಗಲಿದ್ದಾರೆ. ಇವರ ವಿವಾಹವು ಜೈಪುರದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:06 pm, Tue, 24 October 23

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us