
ನಟ ದರ್ಶನ್ (Darshan), ಜೈಲಿನಲ್ಲಿದ್ದಾರೆ. ಪತಿಯನ್ನು ಜೈಲಿಂದ ಹೊರಗೆ ತರಲು ಪತ್ನಿ ವಿಜಯಲಕ್ಷ್ಮಿ ದರ್ಶನ್ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪತಿಯ ಅನುಪಸ್ಥಿತಿಯಲ್ಲಿ ಕುಟುಂಬದ ಜವಾಬ್ದಾರಿ ಅವರ ಮೇಲೆ ಬಿದ್ದಿದೆ. ಎಲ್ಲವನ್ನೂ ತಕ್ಕ ಮಟ್ಟಿಗೆ ವಿಜಯಲಕ್ಷ್ಮಿ ನಿಭಾಯಿಸುತ್ತಿದ್ದಾರೆ. ದರ್ಶನ್ ಆಪ್ತರಾದ ಧನ್ವೀರ್ ಗೌಡ ಅವರು ವಿಜಯಲಕ್ಷ್ಮಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಕೆಲ ಕಾಣದ ಕೈಗಳು ಸಹ ವಿಜಯಲಕ್ಷ್ಮಿ ಅವರ ಬೆಂಬಲಕ್ಕೆ ನಿಂತಿವೆ ಎನ್ನಲಾಗಿದೆ. ಇದೀಗ ವಿಜಯಲಕ್ಷ್ಮಿ ದರ್ಶನ್ ಅವರು ಹಂಚಿಕೊಂಡಿರುವ ಇನ್ಸ್ಟಾಗ್ರಾಂ ಪೋಸ್ಟ್ ಒಂದು ಕುತೂಹಲ ಕೆರಳಿಸಿದೆ.
ವಿಜಯಲಕ್ಷ್ಮಿ ದರ್ಶನ್ ಅವರು ಸಾಮಾಜಿಕ ಜಾಲತಾಣವನ್ನು ಬಲು ಅಪರೂಪಕ್ಕೆ ಬಳಸುತ್ತಾರೆ. ಅದರಲ್ಲಿಯೂ ಸುಖಾ-ಸುಮ್ಮನೆ ಯಾವುದೇ ಕೋಟ್ಗಳನ್ನು, ಸುಭಾಷಿತಗಳನ್ನೆಲ್ಲ ಹಂಚಿಕೊಳ್ಳುವುದಿಲ್ಲ. ಯಾರಿಗಾದರೂ ಪರೋಕ್ಷವಾಗಿ ಸಂದೇಶ ತಲುಪಿಸಲು, ತಮ್ಮ ಅಸಹಮತ, ಭಿನ್ನಾಭಿಪ್ರಾಯಗಳನ್ನು ಪರೋಕ್ಷವಾಗಿ ವ್ಯಕ್ತಪಡಿಸಲಷ್ಟೆ ಈ ರೀತಿಯ ಕೋಟ್ಗಳು, ಪೋಸ್ಟ್ಗಳನ್ನು ಬಳಸುತ್ತಾರೆ. ಇದೀಗ ಅಂಥಹುದೇ ಒಂದು ಸುಭಾಷಿತ ಮಾದರಿ ಸಾಲನ್ನು ವಿಜಯಲಕ್ಷ್ಮಿ ಅವರು ಹಂಚಿಕೊಂಡಿದ್ದಾರೆ.
‘ಪಡೆದುಕೊಂಡ ಮೇಲೆ, ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ, ಅದು ವಸ್ತುವಾಗಲಿ ವ್ಯಕ್ತಿಯಾಗಲಿ’ ಎಂಬ ಸಾಲನ್ನು ವಿಜಯಲಕ್ಷ್ಮಿ ದರ್ಶನ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ಗೆ ವಿಜಯಲಕ್ಷ್ಮಿ ಅವರು ಯಾರನ್ನೂ ಟ್ಯಾಗ್ ಮಾಡಿಲ್ಲವಾದರೂ ಇದು ಯಾರಿಗೋ ಟಾಂಗ್ ಕೊಡವ ಉದ್ದೇಶದಿಂದಲೇ ಹಂಚಿಕೊಂಡಿರುವ ಪೋಸ್ಟ್ ಎನ್ನಲಾಗುತ್ತಿದೆ. ಅದರಲ್ಲೂ ತಮ್ಮ ಕುಟುಂಬಕ್ಕೆ ಹಿಂದೆ ಆಪ್ತರಾಗಿದ್ದವರಿಗೆಂದೇ ಈ ಪೋಸ್ಟ್ ಅನ್ನು ನಟಿ ವಿಜಯಲಕ್ಷ್ಮಿ ಅವರು ಹಂಚಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ:‘ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ’: ಮತ್ತೊಮ್ಮೆ ಜಾಮೀನು ಕನಸು ಭಗ್ನ
ಕೆಲ ಮಾಹಿತಿಗಳ ಪ್ರಕಾರ, ದರ್ಶನ್ ಹಾಗೂ ಅವರ ಕುಟುಂಬಕ್ಕೆ ಬಲು ಆಪ್ತವಾಗಿದ್ದ ಹಾಗೂ ದರ್ಶನ್ ಜೈಲು ಸೇರಿದ ಬಳಿಕ ದರ್ಶನ್ ಅವರ ಕುಟುಂಬಕ್ಕೆ ಸಹೋದರನಂತೆ ಬೆಂಬಲ ನೀಡಿದ್ದ ನಟ ಧನ್ವೀರ್ ಹಾಗೂ ದರ್ಶನ್ ಅವರ ಕುಟುಂಬಕ್ಕೆ ಸಣ್ಣ ಮನಸ್ಥಾಪ ಉಂಟಾಗಿದೆ. ಮೊದಲಿನಂತೆ ಅವರು ಆತ್ಮೀಯವಾಗಿ ಉಳಿದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಯಾವುದೇ ಖಾತ್ರಿ ಇಲ್ಲ. ಈಗ ಧನ್ವೀರ್ ಅವರನ್ನು ಉದ್ದೇಶಿಸಿಯೇ ವಿಜಯಲಕ್ಷ್ಮಿ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಚರ್ಚೆಯೂ ಸಹ ಚಾಲ್ತಿಯಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ