ವೈರಲ್ ಆಗಿದ್ದ ‘ಕುರ್ಚಿ ತಾತ’ ಬಂಧನ, ಮಹೇಶ್ ಬಾಬುನೇ ಕಾರಣ?

|

Updated on: Jan 26, 2024 | 8:55 AM

Kurchi Tata: ತೆಲುಗಿನ ವೈರಲ್ ‘ಕುರ್ಚಿ ತಾತ’ ಅಲಿಯಾಸ್ ಕಾಲಾ ಪಾಷಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.

ವೈರಲ್ ಆಗಿದ್ದ ‘ಕುರ್ಚಿ ತಾತ’ ಬಂಧನ, ಮಹೇಶ್ ಬಾಬುನೇ ಕಾರಣ?
Follow us on

ಇತ್ತೀಚೆಗೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿರುವ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ (Gunturu Kaaram) ಸಿನಿಮಾದಲ್ಲಿ ‘ಕುರ್ಚಿನಿ ಮಡತಪೆಟ್ಟಿ’ ಎಂಬ ಹಾಡೊಂದಿದೆ. ಅಸಲಿಗೆ ಈ ಹಾಡಿನ ಕ್ಯಾಚಿ ಲೈನ್ ‘ಕುರ್ಚಿನಿ ಮಡತಪೆಟ್ಟಿ’ ಬಂದಿದ್ದು ವೈರಲ್ ತಾತನಿಂದ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಕಾಲಾ ಪಾಷಾ ಅಲಿಯಾಸ್ ಕುರ್ಚಿ ತಾತ ತಮ್ಮ ಖಡಕ್ ಡೈಲಾಗ್​ನಿಂದ ಸಖತ್ ವೈರಲ್ ಆಗಿದ್ದರು. ಇದೀಗ ಕಾಲಾ ಪಾಷಾ ವೈಜಾಗ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.

‘ಕುರ್ಚಿ ತಾತ’ನ ವಿರುದ್ಧ ಯೂಟ್ಯೂಬರ್​ಗಳಾದ ವೈಜಾಗ್ ಸತ್ಯ ಮತ್ತು ಸ್ವಾತಿ ನಾಯ್ಡು ಜ್ಯೂಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಕುರ್ಚಿ ತಾತ ಅಲಿಯಾಸ್ ಕಾಲಾ ಪಾಷಾ ಅನ್ನು ಬಂಧಿಸಿದ್ದಾರೆ. ಕುರ್ಚಿ ತಾತ, ತಮ್ಮ ಮನೆಯಲ್ಲಿ ಹಣ ಕದ್ದಿರುವ ಜೊತೆಗೆ ತಮ್ಮನ್ನು ತೀರಾ ಹೀನಾಯವಾಗಿ ನಿಂದಿಸಿದ್ದಾರೆ, ಬೆದರಿಕೆ ಹಾಕಿದ್ದಾರೆ ಎಂದು ವೈಜಾಗ್ ಸತ್ಯ ಮತ್ತು ಸ್ವಾತಿ ನಾಯ್ಡು ಆರೋಪ ಮಾಡಿದ್ದರು.

‘ಗುಂಟೂರು ಖಾರಂ’ ಸಿನಿಮಾನಲ್ಲಿ ಕುರ್ಚಿ ತಾತನ ಡೈಲಾಗ್ ಅನ್ನು ಬಳಸಿಕೊಂಡಿದ್ದಕ್ಕೆ ಸಂಗೀತ ನಿರ್ದೇಶಕ ತಮನ್, ಕುರ್ಚಿ ತಾತನಿಗೆ ಹಣ ನೀಡಿದ್ದರು. ಇದು ಸಾಧ್ಯವಾಗಿದ್ದು ಯೂಟ್ಯೂಬರ್ ವೈಜಾಗ್ ಸತ್ಯ ಇಂದಾಗಿ. ಇದನ್ನು ಕುರ್ಚಿ ತಾತ ಕೆಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ತಾವು ನಿರ್ದೇಶಕ ತ್ರಿವಿಕ್ರಮ್ ಅವರನ್ನೂ ಸಹ ಭೇಟಿಯಾಗಿದ್ದು, ಅವರು ತಮ್ಮ ಮುಂದಿನ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿದ್ದಾರೆ ಎಂದು ಕುರ್ಚಿ ತಾತ ಹೇಳಿದ್ದರು.

ಇದನ್ನೂ ಓದಿ:‘ಗುಂಟೂರು ಖಾರಂ’ ಸಿನಿಮಾ ನೋಡಲಿರುವ ಶಾರುಖ್​ ಖಾನ್​; ಮಹೇಶ್​ ಬಾಬು ಫ್ಯಾನ್ಸ್​ಗೆ ಖುಷಿ

ಆದರೆ ಜನವರಿ 12ರ ಬಳಿಕ ಕುರ್ಚಿ ತಾತ ಹಾಗೂ ಯೂಟ್ಯೂಬರ್ ವೈಜಾಗ್ ಸತ್ಯ ನಡುವೆ ಭಿನ್ನಾಭಿಪ್ರಾಯ ತಲೆದೂರಿದ್ದು, ಬೇರೊಂದು ಯೂಟ್ಯೂಬ್ ಚಾನೆಲ್​ನಲ್ಲಿ ವೈಜಾಗ್ ಸತ್ಯ ಬಗ್ಗೆ ಕೆಟ್ಟದಾಗಿ ಕುರ್ಚಿ ತಾತ ಮಾತನಾಡಿದ್ದರು. ಸತ್ಯ ತನಗೆ ಮೋಸ ಮಾಡಿದ್ದಾನೆ, ಅವನು ಸಿಕ್ಕರೆ ಕೊಂದು ಹಾಕುವೆ ಎಂದೆಲ್ಲ ಹೇಳಿದ್ದರು. ಆಗಲೇ ವೈಗಾಜ್ ಸತ್ಯ ಪೊಲೀಸರ ಮೊರೆ ಹೋಗಿದ್ದರು, ಆಗ ಪೊಲೀಸರ ಬಳಿ ಹೇಳಿಕೆ ನೀಡಿದ್ದ ಕುರ್ಚಿ ತಾತ, ‘ಯೂಟ್ಯೂಬ್ ಚಾನೆಲ್​ನವರು ಏನು ಹೇಳಲು ಹೇಳಿದ್ದರೋ ನಾನು ಅದನ್ನು ಹೇಳಿದೆ. ಅವರು ಮದ್ಯ ಕುಡಿಯಲು ಕೊಟ್ಟು ಸತ್ಯ ಅನ್ನು ಬೈಯ್ಯುವಂತೆ ಹೇಳಿದ್ದರು’ ಎಂದಿದ್ದರು.

ಅದಾದ ಬಳಿಕವೂ ಕುರ್ಚಿ ತಾತ ವೈಜಾಗ್ ಸತ್ಯ ಬಳಿ ಜಗಳ ಮಾಡಿಕೊಂಡಿದ್ದರು. ತನ್ನನ್ನು ಮಹೇಶ್ ಬಾಬು ಜೊತೆ ಭೇಟಿ ಮಾಡಿಸು, ತನಗೊಂದು ಮನೆ ಕೊಡಿಸು ಎಂದು ಕುರ್ಚಿ ತಾತ ವೈಜಾಗ್ ಸತ್ಯ ಹಿಂದೆ ಬಿದ್ದಿದ್ದರು. ಅದು ಸಾಧ್ಯವಿಲ್ಲ ಎಂದಾಗ ಕುರ್ಚಿ ತಾತ, ವೈಜಾಗ್ ಸತ್ಯನನ್ನು ಕೆಟ್ಟದಾಗಿ ನಿಂದಿಸಿದ್ದರು. ಅವರ ಮನೆಯಿಂದ ಕೆಲವು ವಸ್ತುಗಳನ್ನು ಸಹ ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕ ವೈಜಾಗ್ ಸತ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಇದೀಗ ಕುರ್ಚಿ ತಾತನನ್ನು ಬಂಧಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ