ಶಿವರಾತ್ರಿ ಹಬ್ಬದ ಪ್ರಯುಕ್ತ ‘ಕಣ್ಣಪ್ಪ’ ಸಿನಿಮಾದ ಹೊಸ ಪೋಸ್ಟರ್​ ಬಿಡುಗಡೆ

ವಿಷ್ಣು ಮಂಚು ಅಭಿನಯದ ಬಹುನಿರೀಕ್ಷಿತ ‘ಕಣ್ಣಪ್ಪ: ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍’ ಸಿನಿಮಾದಿಂದ ಹೊಸ ಪೋಸ್ಟರ್​ ಬಿಡುಗಡೆ ಆಗಿದೆ. ಇದು ಶಿವಭಕ್ತನ ಕಹಾನಿ ಇರುವ ಸಿನಿಮಾ. ಹಾಗಾಗಿ ಕಣ್ಣಪ್ಪ ಚಿತ್ರತಂಡದಿಂದ ಶಿವರಾತ್ರಿಗೆ ಸರ್ಪ್ರೈಸ್‌ ರೀತಿಯಲ್ಲಿ ಈ ಪೋಸ್ಟರ್​ ಅನಾವರಣ ಮಾಡಲಾಗಿದೆ. ಈ ಸಿನಿಮಾ ಮೂಡಿಬರುತ್ತಿರುವ ರೀತಿಗೆ ನಟ ವಿಷ್ಣು ಮಂಚು ಅವರು ಥ್ರಿಲ್‌ ಆಗಿದ್ದಾರೆ.

ಶಿವರಾತ್ರಿ ಹಬ್ಬದ ಪ್ರಯುಕ್ತ ‘ಕಣ್ಣಪ್ಪ’ ಸಿನಿಮಾದ ಹೊಸ ಪೋಸ್ಟರ್​ ಬಿಡುಗಡೆ
ಕಣ್ಣಪ್ಪ ಸಿನಿಮಾ ಹೊಸ ಪೋಸ್ಟರ್​

Updated on: Mar 08, 2024 | 5:49 PM

‘ಕಣ್ಣಪ್ಪ: ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍’ ಸಿನಿಮಾ ಬಹುಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ಈ ಸಿನಿಮಾ ಘೋಷಣೆಯಾದಾಗಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಸದ್ದು ಮಾಡುತ್ತಿದೆ. ನಾಯಕನಾಗಿ ವಿಷ್ಣು ಮಂಚು (Vishnu Manchu) ಅವರು ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಬಹುತಾರಾಗಣ ಇದೆ. ಅದು ಕೂಡ ಈ ಸಿನಿಮಾದ ಪ್ರಮುಖ ಹೈಲೈಟ್​ಗಳಲ್ಲೊಂದು. ಮುಕೇಶ್‍ ಕುಮಾರ್ ಸಿಂಗ್‍ ನಿರ್ದೇಶನ ಮಾಡುತ್ತಿರುವ ‘ಕಣ್ಣಪ್ಪ’ (Kannappa) ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್​ ಈಗಾಗಲೇ ಕುತೂಹಲ ಮೂಡಿಸಿದೆ. ಇಂದು (ಮಾರ್ಚ್​ 8) ಮಹಾ ಶಿವರಾತ್ರಿ (Shivaratri 2024) ಪ್ರಯುಕ್ತ ಇನ್ನೊಂದು ಹೊಸ ಲುಕ್‌ ಅನಾವರಣ ಆಗಿದೆ. ಇದರಿಂದಾಗಿ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

ಭಕ್ತ ಕಣ್ಣಪ್ಪನ ಪಾತ್ರದಲ್ಲಿ ನಟಿಸುತ್ತಿರುವ ವಿಷ್ಣು ಮಂಚು ಅವರು ಈ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಮಿಂಚು ಹರಿಸಿದ್ದಾರೆ. ಬಿಲ್ಲು, ಬಾಣದೊಂದಿಗೆ ಕಣ್ಣಪ್ಪನಾಗಿ ಅವರು ಕಾಣಿಸಿಕೊಂಡಿದ್ದಾರೆ. ಬೆರಗುಗೊಳಿಸುವ ದೃಶ್ಯದಲ್ಲಿ, ಜಲಪಾತದಿಂದ ಹೊರಬರುತ್ತಾ, ಗುರಿಯತ್ತ ಬಾಣ ನೆಟ್ಟಿದ್ದಾರೆ. ಇದು ಭಕ್ತಿಪ್ರಧಾನ ಸಿನಿಮಾ. ಅದರ ಜತೆಗೆ ಸಖತ್​ ಆ್ಯಕ್ಷನ್ ದೃಶ್ಯಗಳೂ ಇರಲಿವೆ ಎಂಬುದರ ಸುಳಿವು ನೀಡುವಂತಿದೆ ಈ ಹೊಸ ಪೋಸ್ಟರ್​. ಸಿನಿಮಾವನ್ನು ‘24 ಫ್ರೇಮ್ಸ್‌ ಫ್ಯಾಕ್ಟರಿ’ ಹಾಗೂ ‘AVA ಎಂಟರ್‌ಟೈನ್‌ಮೆಂಟ್‌’ ಸಂಸ್ಥೆಗಳು ಜೊತೆಯಾಗಿ ನಿರ್ಮಾಣ ಮಾಡುತ್ತಿವೆ. ದೊಡ್ಡ ಬಜೆಟ್‌ನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದ ಬಹುತೇಕ ಶೂಟಿಂಗ್‌ ವಿದೇಶದಲ್ಲಿಯೇ ಆಗುತ್ತಿದೆ. ನ್ಯೂಜಿಲೆಂಡ್‌ನ ಸುಂದರ ತಾಣಗಳಲ್ಲಿ ಭರ್ಜರಿಯಾಗಿಯೇ ಈ ಸಿನಿಮಾದ 2ನೇ ಹಂತದ ಶೂಟಿಂಗ್​​ ನಡೆಯುತ್ತಿದೆ. ಈ ಚಿತ್ರೀಕರಣದಲ್ಲಿ 600 ಜನರು ಭಾಗವಹಿಸಿದ್ದಾರೆ.

ಇದನ್ನೂ ಓದಿ: ಶಿವರಾತ್ರಿ ಹಬ್ಬದಂದು ಸಿಂಪಲ್​ ಸುನಿ, ರಕ್ಷಿತ್​ ಶೆಟ್ಟಿಗೆ ಎರಡನೇ ಹುಟ್ಟು ದಿನ

ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ವಿಷ್ಣು ಮಂಚು ಅವರ ಮುಖ್ಯ ಭೂಮಿಕೆ ನಿಭಾಯಿಸುತ್ತಿರುವ ‘ಕಣ್ಣಪ್ಪ: ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍’ ಸಿನಿಮಾದ ಬಗ್ಗೆ ಈಗಾಗಲೇ ಸಿನಿಪ್ರಿಯರ ವಲಯದಲ್ಲಿ ಕುತೂಹಲ ಹಾಗೂ ನಿರೀಕ್ಷೆ ಮನೆ ಮಾಡಿದೆ. ತಾರಾಗಣದ ಕಾರಣದಿಂದಲೂ ಈ ಚಿತ್ರ ಸದ್ದು ಮಾಡುತ್ತಿದೆ. ತೆಲುಗಿನ ಪ್ಯಾನ್‍ ಇಂಡಿಯಾ ನಟ ಪ್ರಭಾಸ್‍, ಮಲಯಾಳಂನ ಜನಪ್ರಿಯ ಕಲಾವಿದ ಮೋಹನ್​ಲಾಲ್‍ ಹಾಗೂ ಚಂದನವನದ ಸ್ಟಾರ್​ ನಟ ಶಿವರಾಜ್​ಕುಮಾರ್ ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೋಹನ್‌ ಬಾಬು, ಬ್ರಹ್ಮಾನಂದಂ, ಶರತ್‌ ಕುಮಾರ್‌ ಮುಂತಾದವರು ಕೂಡ ಪಾತ್ರವರ್ಗದಲ್ಲಿದ್ದಾರೆ.

ಇದನ್ನೂ ಓದಿ: ಹೃದಯಾಘಾತದಿಂದ ಶಿವರಾತ್ರಿಯಂದೇ ಶಿವೈಕ್ಯಳಾದ ಧರ್ಮಸ್ಥಳದ ಆನೆ ಲತಾ

‘ಕಣ್ಣಪ್ಪ ಸಿನಿಮಾದ ಶೂಟಿಂಗ್​ ಭರದಿಂದ ನಡೆಯುತ್ತಿದೆ. ಒಳ್ಳೆಯ ತಂಡದೊಂದಿಗೆ ನಿರೀಕ್ಷೆ ಮೀರಿ ಈ ಸಿನಿಮಾ ಮೂಡಿಬರುತ್ತಿದೆ. ಆ ಬಗ್ಗೆ ಖುಷಿಯಿದೆ. ಕಣ್ಣಪ್ಪನು ಇಲ್ಲಿ ಕೇವಲ ಒಬ್ಬ ಶಿವಭಕ್ತನಾಗಿ ಮಾತ್ರವಲ್ಲದೇ, ಯೋಧನಂತೆಯೂ ಕಾಣಿಸುತ್ತಾರೆ. ಈ ಚಿತ್ರದ ಝಲಕ್‌ ಹೇಗಿರಲಿದೆ ಎಂಬುದನ್ನು ಜನರ ಮುಂದಿಡಲು ನಾನು ತುಂಬ ಉತ್ಸುಕನಾಗಿದ್ದೇನೆ’ ಎಂದು ವಿಷ್ಣು ಮಂಚು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us