ಭಾರತೀಯ ಸೇನೆ ಅಭಿನಂದನೆ ಸಲ್ಲಿಸಿದ ಯಶ್, ನಾಗರೀಕರಿಗೆ ಜಾಗೃತೆ ಸಂದೇಶ
Yash: ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ಇದೆ. ಭಾರತೀಯ ಸೈನಿಕರು ಪಾಕಿಸ್ತಾನದ ಸತತ ವೈಮಾನಿಕ ದಾಳಿಯನ್ನು ತಡೆಯುತ್ತಿದ್ದಾರೆ. ಇದೀಗ ನಟ ಯಶ್ ಟ್ವೀಟ್ ಮಾಡಿದ್ದು ಭಾರತೀಯ ಸೇನೆಯ ಅಚಲ ಶಕ್ತಿ ಮತ್ತು ನಿಖರತೆಗೆ ಸಲಾಂ ಎಂದಿದ್ದಾರೆ. ಇದರ ಜೊತೆಗೆ ಈ ಸಮಯದಲ್ಲಿ ನಾಗರೀಕರಾದ ನಾವು ಏನು ಮಾಡಬೇಕೆಂದು ಸಲಹೆ ನೀಡಿದ್ದಾರೆ.

ಪಾಕಿಸ್ತಾನದ ಸತತ ದಾಳಿಯ ವಿರುದ್ಧ ಭಾರತ ಸೇನೆಯು ಪ್ರಬಲ ಹೋರಾಟ ಮಾಡುತ್ತಿದೆ. ಸೇನೆಯ ಮಾಹಿತಿಯಂತೆ ಪಾಕಿಸ್ತಾನದ ಸತತ ವೈಮಾನಿಕ ದಾಳಿಯನ್ನು ಭಾರತೀಯ ಸೇನೆಯು ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ತಡೆಯೊಡ್ಡಿದೆ. ಆಗಬಹುದಾಗಿದ್ದ ಭಾರಿ ದೊಡ್ಡ ಅನಾಹುತ, ಪ್ರಾಣಹಾನಿಯನ್ನು ಸೈನ್ಯವು ತಡೆದಿದೆ. ಅದರ ಜೊತೆಗೆ ಪಾಕಿಸ್ತಾನದ ಉಗ್ರರ ನೆಲೆಗಳು, ಸೇನಾ ನೆಲೆಗಳ ಮೇಲೆ ದಾಳಿಯನ್ನು ಮುಂದುವರೆಸಿದೆ. ಭಾರತದ ಹಲವು ಸಿನಿಮಾ ಸೆಲೆಬ್ರಿಟಿಗಳು, ಕ್ರಿಕೆಟಿಗರು ಸೈನ್ಯದ ಕಾರ್ಯವೈಖರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಟ ಯಶ್ ಇದೀಗ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಅಚಲ ಶಕ್ತಿ ಮತ್ತು ನಿಖರತೆಗೆ ಸಲಾಂ, ಭಾರತೀಯ ಸೇನೆ ನಮ್ಮ ಪ್ರಬಲ ರಕ್ಷಣೆ. ಸೈನಿಕರ ಅವಿರತ ಸೇವೆಗೆ ಕೃತಜ್ಞತೆಯ ಜೊತೆಗೆ ನಾವೆಲ್ಲ ಒಗ್ಗಟ್ಟಾಗಿ ನಿಲ್ಲುತ್ತೇವೆ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಖಾತ್ರಿಪಡಿಸಬೇಕಿದೆ. ಈ ಸಮಯದಲ್ಲಿ ನಾವು ಹೆಚ್ಚು ಜಾಗೃತೆಯಿಂದ ಕಾರ್ಯ ನಿರ್ವಹಿಸಬೇಕಿದೆ. ವಿಶೇಷವಾಗಿ ಆನ್ಲೈನ್ನಲ್ಲಿ ಮಾಹಿತಿ ಅಥವಾ ಸುದ್ದಿ ಹಂಚಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕಾಗಿದೆ. ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ನಾವು ಖಾತ್ರಿಪಡಿಸಿಕೊಳ್ಳಬೇಕಿದೆ. ತಪ್ಪು ಮಾಹಿತಿಯ ವಿರುದ್ಧ ನಮ್ಮ ಹೋರಾಟ ಭಾರತೀಯ ಸೇನೆಗೆ ಶಕ್ತಿ ತುಂಬಲಿದೆ. ಇಂಥಹಾ ಸಂಕಷ್ಟದ ಸನ್ನಿವೇಶದಲ್ಲಿ ನಮ್ಮ ಪ್ರಾರ್ಥನೆ ದೇಶದ ಸೈನಿಕರೊಂದಿಗೆ ಇರಲಿದೆ’ ಎಂದಿದ್ದಾರೆ ನಟ ಯಶ್.
ಇದನ್ನೂ ಓದಿ:ಯಶ್ ಬಾಲಿವುಡ್ ಸಿನಿಮಾಕ್ಕೆ ಮಹಾರಾಷ್ಟ್ರ ಸಿಎಂ ಮೆಚ್ಚುಗೆ
ನಟ ಯಶ್ ಟ್ವೀಟ್ ಮಾಡುವುದು ತುಸು ಅಪರೂಪವಾಗಿದೆ. ಆದರೆ ರಾಷ್ಟ್ರೀಯ ದುರ್ಘಟನೆಗಳು ನಡೆದಾಗ ತಪ್ಪದೆ ಯಶ್ ಟ್ವೀಟ್ ಮಾಡುತ್ತಾರೆ. ಏಪ್ರಿಲ್ 23ರಂದು ನಡೆದ ಪಹಾಲ್ಗಾಮ್ ದಾಳಿಯ ಬಗ್ಗೆ ಯಶ್ ಟ್ವೀಟ್ ಮಾಡಿ ಮೃತರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದರು. ಅದಾದ ಬಳಿಕ ಮತ್ತೆ ಇಂದು ಟ್ವೀಟ್ ಮಾಡಿ ಭಾರತೀಯ ಸೇನೆಗೆ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಮುಂಚೆ ಜನವರಿಯಲ್ಲಿ ತಮ್ಮದೇ ಹುಟ್ಟಹಬ್ಬದಂದು ಟ್ವೀಟ್ ಮಾಡಿದ್ದರು.
ಏಪ್ರಿಲ್ 23 ರಂದು ನಡೆದ ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತವು ಪಿಓಕೆಗೆ ನುಗ್ಗಿ ಅಲ್ಲಿನ ಉಗ್ರರ ಅಡಗುತಾಣಗಳ ಮೇಲೆ ಬಾಂಬ್ ಮಳೆಗರಿದಿತ್ತು. ಈ ದಾಳಿಯಲ್ಲಿ ಹಲವಾರು ಉಗ್ರರು ನಿಧನ ಹೊಂದಿದ್ದರು. ಈ ಮಿಲಿಟರಿ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಗಿತ್ತು. ಇದೀಗ ಆಪರೇಷನ್ ಸಿಂಧೂರದ ಬಳಿಕ ಪಾಕ್ ಸೈನ್ಯ ಭಾರತದ ವಿರುದ್ಧ ಅಪ್ರಚೋದಿತ ದಾಳಿ ನಡೆಸಿದ್ದು, ಭಾರತೀಯ ಸೇನೆಯು ಅದಕ್ಕೆ ದಿಟ್ಟ ಪ್ರತ್ಯುತ್ತರ ನೀಡುತ್ತಿದೆ. ನಟ ಯಶ್ ಮಾತ್ರವಲ್ಲದೆ ನಟ ಸುದೀಪ್, ಶಿವರಾಜ್ ಕುಮಾರ್, ಧನಂಜಯ್ ಇನ್ನೂ ಹಲವಾರು ಮಂದಿ ಭಾರತೀಯ ಸೇನೆಯ ಶೌರ್ಯವನ್ನು ಕೊಂಡಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ