ಆಂಧ್ರದಲ್ಲಿ ಸಿನಿಮಾ ರಾಜಕೀಯ, ಸಿಎಂ ಜಗನ್ ಕುರಿತ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ

|

Updated on: Jul 02, 2023 | 6:05 PM

CM Jagan Mohan Reddy: ಸಿಎಂ ಜಗನ್ ಮೋಹನ್ ರೆಡ್ಡಿ ಜೀವನ ಆಧರಿಸಿದ ಹೊಸ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಆಂಧ್ರ ಚುನಾವಣೆಗೆ ಮುನ್ನ ಸಿನಿಮಾ ಬಿಡುಗಡೆ ಆಗಲಿದೆ.

ಆಂಧ್ರದಲ್ಲಿ ಸಿನಿಮಾ ರಾಜಕೀಯ, ಸಿಎಂ ಜಗನ್ ಕುರಿತ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ
ಜಗನ್ ಮೋಹನ್ ರೆಡ್ಡಿ
Follow us on

ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ (Andhra Pradesh Assembly Election) ಹತ್ತಿರದಲ್ಲಿದೆ. ಆಡಳಿತ ಪಕ್ಷ ವೈಸಿಪಿ (YCP), ವಿಪಕ್ಷಗಳಾದ ಟಿಡಿಪಿ (TDP), ಜನಸೇನಾ (Janasena), ಕಾಂಗ್ರೆಸ್ ಪಕ್ಷಗಳು ಚುನಾವಣೆಗೆ ಸಜ್ಜಾಗುತ್ತಿವೆ. ಆಂಧ್ರದಲ್ಲಿ ಸಿನಿಮಾ ಹಾಗೂ ರಾಜಕೀಯ ಇತರೆ ರಾಜ್ಯಗಳಿಗಿಂತಲೂ ಹೆಚ್ಚು ಪರಸ್ಪರ ಸಂಬಂಧ ಹೊಂದಿವೆ. ಈ ಬಾರಿಯ ಚುನಾವಣೆಯಲ್ಲಿ ನಟ ಪವನ್ ಕಲ್ಯಾಣ್ (Pawan Kalyan) ನಿರ್ಣಾಯಕ ಸ್ಥಾನ ವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪವನ್ ಪರವಾಗಿ ಹಾಗೂ ಇತರೆ ರಾಜಕೀಯ ಪಕ್ಷಗಳ ಪರವಾಗಿ ಸ್ಟಾರ್ ನಟರು ಪ್ರಚಾರಕ್ಕೆ ಧುಮುಕುವ ಸಾಧ್ಯತೆಯೂ ಇದೆ. ಇದರ ನಡುವೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಕೆಲವರ ಪರವಾಗಿ, ಕೆಲವರ ವಿರುದ್ಧವಾಗಿ ಸಿನಿಮಾಗಳು ತಯಾರಾಗಿದ್ದು ಚುನಾವಣೆ ಹೊಸ್ತಿಲಲ್ಲಿ ಸಾಲು ಸಾಲಾಗಿ ಬಿಡುಗಡೆ ಆಗಲಿವೆ.

ಈ ಚುನಾವಣಾ ಉದ್ದೇಶದಿಂದ ಮಾಡಿರುವ ಸಿನಿಮಾಗಳಲ್ಲಿ ವೈಸಿಪಿ ಪರವಾದ ಸಿನಿಮಾಗಳ ಸಂಖ್ಯೆ ಹೆಚ್ಚಿವೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಜಗನ್ ಮೋಹನ್ ರೆಡ್ಡಿ ಜೀವನ ಆಧರಿಸಿ ವ್ಯೂಹಂ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದು ಸಿನಿಮಾದ ಟ್ರೈಲರ್ ಅನ್ನು ಕೆಲವೇ ದಿನಗಳ ಹಿಂದೆ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಜಗನ್ ಎದುರಾಳಿಗಳಾದ ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಅನ್ನು ತೀರ ಕೆಟ್ಟದಾಗಿ ಚಿತ್ರಿಸಲಾಗಿರವುದು ಟ್ರೈಲರ್​ನಲ್ಲಿಯೇ ತಿಳಿದು ಬರುತ್ತಿದೆ.

ಇನ್ನು ಜಗನ್ ಪರವಾಗಿ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಹಿಂದಿನ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಜಗನ್​ ಗೆಲ್ಲಲು ಪರೋಕ್ಷವಾಗಿ ಸಹಾಯ ಮಾಡಿದ್ದ ಯಾತ್ರಾ ಸಿನಿಮಾದ ಎರಡನೇ ಭಾಗ ಚಿತ್ರೀಕರಣ ನಡೆಯುತ್ತಿದ್ದು ಸರಿಯಾಗಿ ಆಂಧ್ರ ಚುನಾವಣೆ ನಡೆವ ಒಂದು ತಿಂಗಳ ಹಿಂದೆ ಬಿಡುಗಡೆ ಆಗಲಿದೆ. ಜಗನ್ ತಂದೆ ರಾಜಶೇಖರ ರೆಡ್ಡಿ ಜೀವನ ಕತೆಯುಳ್ಳ ಯಾತ್ರ ಸಿನಿಮಾ ಕಳೆದ ಆಂಧ್ರ ವಿಧಾನಸಭೆ ಚುನಾವಣೆಗೆ ಒಂದು ತಿಂಗಳು ಮೊದಲು ಬಿಡುಗಡೆ ಆಗಿ, ಜಗನ್​ ಗೆಲುವಿಗೆ ಪರೋಕ್ಷವಾಗಿ ಸಹಾಯ ಮಾಡಿತ್ತು. ಈ ಬಾರಿ ಬಿಡುಗಡೆ ಆಗಲಿರುವ ಯಾತ್ರಾ 2 ಸಿನಿಮಾ ಸ್ವತಃ ಸಿಎಂ ಜಗನ್ ಬಗೆಗೇ ಇರಲಿದೆ.

ಇದನ್ನೂ ಓದಿ:‘ಪ್ರಭಾಸ್ ಮತ್ತು ಮಹೇಶ್ ಬಾಬು ನನಗಿಂತ ದೊಡ್ಡ ಹೀರೋಗಳು’; ಸಾರ್ವಜನಿಕವಾಗಿ ಒಪ್ಪಿಕೊಂಡ ಪವನ್ ಕಲ್ಯಾಣ್

ಯಾತ್ರಾ 2 ಸಿನಿಮಾದ ಪೋಸ್ಟರ್ ಇಂದು ಬಿಡುಗಡೆ ಆಗಿದೆ. 2019ರಲ್ಲಿ ಬಿಡುಗಡೆ ಆಗಿದ್ದ ಯಾತ್ರಾ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಮಹಿ ವಿ ರಾಘವ್ ಅವರೇ ಯಾತ್ರಾ 2 ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಮೊದಲ ಭಾಗವನ್ನು ನಿರ್ಮಾಣ ಮಾಡಿದ್ದ ಶಿವ ಮೇಕ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 2019ರಲ್ಲಿ ಬಿಡುಗಡೆ ಆಗಿದ್ದ ಯಾತ್ರಾ ಸಿನಿಮಾದಲ್ಲಿ ವೈಎಸ್ ರಾಜಶೇಖರ ರೆಡ್ಡಿ ಪಾತ್ರದಲ್ಲಿ ಮಲಯಾಳಂ ಸ್ಟಾರ್ ನಟ ಮಮ್ಮುಟಿ ನಟಿಸಿದ್ದರು. ಆ ಸಿನಿಮಾದಲ್ಲಿ ವೈಎಸ್ ರಾಜಶೇಖರ ರೆಡ್ಡಿ ಜೀವನ ಹೋರಾಟವನ್ನು ಕಟ್ಟಿಕೊಡಲಾಗಿತ್ತು. ಈಗಿನ ಯಾತ್ರಾ 2 ಸಿನಿಮಾ ಸಂಪೂರ್ಣ ಜಗನ್ ಜೀವನವನ್ನು ಆಧರಿಸಿದ್ದಾಗಿರಲಿದೆ.

ಇನ್ನು ಪವನ್ ಕಲ್ಯಾಣ್ ಸಹ ಚುನಾವಣೆಗೆ ಮುನ್ನ ತನ್ನ ನಟನೆಯ ಎರಡು ಸಿನಿಮಾಗಳನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ಪವನ್ ನಟನೆಯ ಹರಿಹರ ವೀರ ಮಲ್ಲು ಐತಿಹಾಸಿಕ ಸಿನಿಮಾ ತೆರೆಗೆ ಬರುತ್ತಿದೆ. ಅದಾದ ಬಳಿಕ ಉಸ್ತಾದ್ ಭಗತ್ ಸಿಂಗ್ ಲಸಿನಿಮಾ ಸಹ ಬಿಡುಗಡೆ ಆಗಲಿದೆ. ಈ ಎರಡೂ ಸಿನಿಮಾಗಳು ತಮ್ಮ ಪರವಾಗಿ ಅಲೆ ಎಬ್ಬಿಸುವ ನಿರೀಕ್ಷೆ ಪವನ್ ಕಲ್ಯಾಣ್ ಅವರದ್ದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ