ಲೈವ್ ಬಂದು ಸಾಯಲು ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ; ಪರಿಸ್ಥಿತಿ ಚಿಂತಾಜನಕ

ಖ್ಯಾತ ಯೂಟ್ಯೂಬರ್ ಅನುರಾಗ್ ದೊಭಾಲ್ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇನ್​ಸ್ಟಾಗ್ರಾಮ್​​ನಲ್ಲಿ ಲೈವ್ ಬಂದು ಸಾಯಲು ಪ್ರಯತ್ನಿಸಿದ ಅವರ ಪರಿಸ್ಥಿತಿ ಚಿಂತಾಜನಕ ಆಗಿದೆ. ಬೇಕಂತಲೇ ಕಾರನ್ನು ಡಿವೈಡರ್​​ಗೆ ಡಿಕ್ಕಿ ಹೊಡೆಸಿದಾಗ 80,000 ಜನರು ಲೈವ್ ವಿಡಿಯೋ ವೀಕ್ಷಿಸುತ್ತಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ..

ಲೈವ್ ಬಂದು ಸಾಯಲು ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ; ಪರಿಸ್ಥಿತಿ ಚಿಂತಾಜನಕ
Anurag Dobhal

Updated on: Mar 09, 2026 | 4:00 PM

ಜನಪ್ರಿಯ ಯೂಟ್ಯೂಬರ್ ಅನುರಾಗ್ ದೊಭಾಲ್ (Anurag Dobhal) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಹಿಂದಿ ಬಿಗ್ ಬಾಸ್ ಸೀಸನ್ 17’ (Bigg Boss 17) ಶೋನಲ್ಲಿ ಸ್ಪರ್ಧಿಸಿದ್ದ ಅವರು ಮಾನಸಿಕವಾಗಿ ಬಹಳ ನೊಂದಿದ್ದರು. ಖಿನ್ನತೆಯಿಂದ ಬಳಲುತ್ತಿದ್ದ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಶನಿವಾರ (ಮಾರ್ಚ್ 7) ರಾತ್ರಿ 10 ಗಂಟೆ ಸುಮಾರಿಗೆ ಕಾರು ಓಡಿಸುತ್ತಾ ಲೈವ್ (UK07 Rider livestream) ಬಂದಿದ್ದ ಅನುರಾಗ್ ದೊಭಾಲ್ ಅವರು ‘ಇದು ಕೊನೆಯೇ ವಿದಾಯ’ ಎಂದು ಹೇಳಿ ಡಿವೈಡರ್​ಗೆ ಡಿಕ್ಕಿ ಹೊಡೆದರು. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.

ಕಾರು ಓಡಿಸುವಾಗ ಅನುರಾಗ್ ದೊಭಾಲ್ ಅವರು ಬಹಳ ಎಮೋಷನಲ್ ಆಗಿದ್ದರು. ತಂದೆ-ತಾಯಿ ಮತ್ತು ಪತ್ನಿಯಿಂದ ತಮಗೆ ಪ್ರೀತಿ ಸಿಕ್ಕಿಲ್ಲ ಎನ್ನುತ್ತಾ ಅವರು ಕಣ್ಣೀರು ಹಾಕಿದರು. ಇದು ಕೊನೆಯ ವ್ಲಾಗ್ ಎಂದು ಕೂಡ ಅವರು ತಮ್ಮ ಅಭಿಮಾನಿಗಳಿಗೆ ತಿಳಿಸಿದರು. ದಯವಿಟ್ಟು ಕಾರು ನಿಲ್ಲಿಸಿ ಮಾತನಾಡಿ ಎಂದು ಅಭಿಮಾನಿಗಳು ಮನವಿ ಮಾಡಿದರೂ ಕೂಡ ಅನುರಾಗ್ ದೊಭಾಲ್ ನಿಲ್ಲಿಸಲೇ ಇಲ್ಲ.

ಬಹುಕಾಲದ ಗೆಳತಿ ರಿತಿಕಾ ಚೌಹಾಣ್ ಜೊತೆ ಅನುರಾಗ್ ದೊಭಾಲ್ ಮದುವೆ ಆಗಿದ್ದರು. ಆದರೆ ಜಾತಿಯ ಕಾರಣದಿಂದ ಅನುರಾಗ್ ಮನೆಯವರು ಈ ಮದುವೆಯನ್ನು ಒಪ್ಪಿಕೊಂಡಿರಲಿಲ್ಲ. ಇದರಿಂದಾಗಿ ಅವರು ಬಹಳ ನೊಂದಿದ್ದರು. ಹಣ ಮತ್ತು ಆಸ್ತಿಯ ಸಂಪೂರ್ಣ ನಿಯಂತ್ರಣವನ್ನು ಅನುರಾಗ್ ಅವರ ತಂದೆ-ತಾಯಿ ಮತ್ತು ಸಹೋದರ ಪಡೆದುಕೊಂಡಿದ್ದರು. ಈ ಎಲ್ಲ ಕಾರಣಗಳಿಂದಾಗಿ ಅವರು ಖಿನ್ನತೆಗೆ ಜಾರಿದ್ದರು.

ಅನುರಾಗ್ ದೊಭಾಲ್ ಅವರು 150 ಕಿಲೋ ಮೀಟರ್ ವೇಗದಲ್ಲಿ ಕಾರು ಓಡಿಸುತ್ತಿದ್ದರು. ಸಾಯಲೇ ಬೇಕು ಎಂಬುದು ಅವರ ನಿರ್ಧಾರ ಆಗಿತ್ತು. ಕಣ್ಣೀರು ಹಾಕುತ್ತಲೇ ಅವರು ತಮ್ಮ ನೋವಿನ ಕಥೆಯನ್ನು ವಿವರಿಸಿದರು. ‘ಮುಂದಿನ ಜನ್ಮದಲ್ಲಿ ನಾನು ಮರಳಿ ಬಂದಾಗ ದಯವಿಟ್ಟು ನನಗೆ ಪ್ರೀತಿ ನೀಡಿ ಅಮ್ಮ.. ನನಗೆ ಪ್ರೀತಿಯ ಅವಶ್ಯಕತೆ ಇತ್ತು’ ಎಂದು ಲೈವ್​​ನಲ್ಲಿ ಹೇಳಿದರು.

ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗೆ ಬಂತು ಬೆದರಿಕೆ; 10 ಕೋಟಿ ರೂಪಾಯಿಗೆ ಬೇಡಿಕೆ

ಬೇಕಂತಲೇ ಕಾರನ್ನು ಡಿವೈಡರ್​​ಗೆ ಡಿಕ್ಕಿ ಹೊಡೆಸಿದಾಗ 80 ಸಾವಿರ ಜನರು ಲೈವ್ ವಿಡಿಯೋ ವೀಕ್ಷಿಸುತ್ತಿದ್ದರು. ದೆಹಲಿ-ಮೀರತ್ ಹೈವೇನಲ್ಲಿ ಅಪಘಾತ ಸಂಭವಿಸಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಯಾವುದೇ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಅನುರಾಗ್ ಮ್ಯಾನೇಜರ್ ರೋಹಿತ್ ಪಾಂಡೆ ಅವರು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:59 pm, Mon, 9 March 26

Follow Us