
ಬಿರಿಯಾನಿ, ಪುಲಾವ್, ಸಾಂಬಾರ್, ವಿವಿಧ ಗ್ರೇವಿ ಹಾಗೂ ಮಸಾಲೆ ಪದಾರ್ಥಗಳಲ್ಲಿ ಪರಿಮಳಕ್ಕಾಗಿ ಬಳಸುವ ಬಿರಿಯಾನಿ ಎಲೆ (Bay Leaf) ಅಡುಗೆಯ ಮಾಡುವಾಗ ಬಳಸುವ ಪ್ರಮುಖ ಮಸಾಲೆಗಳಲ್ಲಿ ಒಂದಾಗಿದೆ. ಅಡುಗೆ ಮುಗಿದ ಬಳಿಕ ಹೆಚ್ಚಿನವರು ಈ ಎಲೆಯನ್ನು ಆಹಾರದಿಂದ ತೆಗೆದು ಬದಿಗಿಡುತ್ತಾರೆ. ಕೆಲವರು ಮಾತ್ರ ಅದನ್ನು ನೇರವಾಗಿ ಜಗಿದು ತಿನ್ನಲು ಪ್ರಯತ್ನಿಸುತ್ತಾರೆ. ಆದರೆ ಬಿರಿಯಾನಿ ಎಲೆಯನ್ನು ನೇರವಾಗಿ ತಿನ್ನುವುದು ಆರೋಗ್ಯಕ್ಕೆ ಸುರಕ್ಷಿತವೇ ಎಂಬುದರ ಬಗ್ಗೆ ಈ ಬಗ್ಗೆ ಪೌಷ್ಟಿಕ ತಜ್ಞರು ಹಾಗೂ ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ, ಬಿರಿಯಾನಿ ಎಲೆಯನ್ನು ಅಡುಗೆಯಲ್ಲಿ ಬಳಸುವುದು ಸುರಕ್ಷಿತವಾದರೂ, ಅದನ್ನು ಚಿಕ್ಕ ಚಿಕ್ಕ ತುಂಡಾಗಿ ನುಂಗುವುದು ಅಥವಾ ಜಗಿದು ತಿನ್ನುವುದು ಸೂಕ್ತವಲ್ಲ ಎಂದು ಎಚ್ಚರಿಸುತ್ತಾರೆ.
ಸಾಮಾನ್ಯವಾಗಿ ಬಿರಿಯಾನಿ ಎಲೆ ಗಟ್ಟಿಯಾದ ನಾರಿನ ರಚನೆಯನ್ನು ಹೊಂದಿರುತ್ತದೆ. ಇದರಲ್ಲಿ ಇರುವ ಫೈಬರ್ ಪದಾರ್ಥವನ್ನು ನಮ್ಮ ಜೀರ್ಣಾಂಗದ ಎನ್ಜೈಮ್ಗಳು ಸಂಪೂರ್ಣವಾಗಿ ಒಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಲೆ ಸುಲಭವಾಗಿ ಜೀರ್ಣವಾಗದೆ ಜೀರ್ಣಾಂಗದಲ್ಲೇ ಉಳಿಯುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಒಣಗಿದ ಬಿರಿಯಾನಿ ಎಲೆಗಳ ಅಂಚುಗಳು ತೀಕ್ಷ್ಣವಾಗಿರುವುದರಿಂದ ಅವು ಗಂಟಲಿನಲ್ಲಿ ಸಿಲುಕುವ ಅಪಾಯ, ಅನ್ನನಾಳಕ್ಕೆ ಗಾಯವಾಗುವ ಸಾಧ್ಯತೆ, ಅಪರೂಪದ ಸಂದರ್ಭಗಳಲ್ಲಿ ಜೀರ್ಣಾಂಗದ ಒಳಭಾಗಕ್ಕೆ ಚುಚ್ಚುವ ಅಪಾಯ ಮತ್ತು ಸರಿಯಾಗಿ ಜಗಿಯದೆ ನುಂಗಿದರೆ ಉಸಿರಾಟದ ತೊಂದರೆಯನ್ನು ಉಂಟುಮಾಡಬಹುದು.
ಇದು ಅನೇಕರಲ್ಲಿ ಇರುವ ದೊಡ್ಡ ತಪ್ಪು ಕಲ್ಪನೆ. ಬಿರಿಯಾನಿ ಎಲೆ ವಿಷಕಾರಿ ಅಲ್ಲ. ಇದರಲ್ಲಿರುವ ಸಮಸ್ಯೆ ರಾಸಾಯನಿಕ ಅಂಶಗಳಿಂದಲ್ಲ, ಅದರ ಗಟ್ಟಿತನ ಹಾಗೂ ನಾರಿನ ರಚನೆಯಿಂದ. ಅಂದರೆ, ಆಹಾರಕ್ಕೆ ಪರಿಮಳ ನೀಡುವ ಕೆಲಸವನ್ನು ಇದು ಅತ್ಯುತ್ತಮವಾಗಿ ಮಾಡುತ್ತದೆ. ಆದರೆ ಅದನ್ನೇ ಎಲೆ ಸಮೇತ ತಿನ್ನುವುದು ಸುರಕ್ಷಿತವಲ್ಲ.
ಬಿರಿಯಾನಿ ಎಲೆಯಲ್ಲಿರುವ ನೈಸರ್ಗಿಕ ತೈಲಗಳು (Essential Oils) ಬೇಯುವ ಸಮಯದಲ್ಲಿ ಆಹಾರಕ್ಕೆ ಸೇರಿ ಉತ್ತಮ ಪರಿಮಳ ನೀಡುತ್ತವೆ. ಇದರ ಜೊತೆಗೆ ಕೆಲವು ಪೌಷ್ಟಿಕ ಪ್ರಯೋಜನಗಳೂ ದೊರೆಯಬಹುದು.
ಇದನ್ನೂ ಓದಿ: ಬೆಚ್ಚಗಿನ ನೀರಿಗೆ ಕರಿಮೆಣಸು, ಅರಿಶಿನ ಸೇರಿಸಿ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ!
ಜೀರ್ಣಕ್ರಿಯೆಗೆ ನೆರವಾಗಬಹುದು: ಬಿರಿಯಾನಿ ಎಲೆಯಲ್ಲಿರುವ ಕೆಲವು ಸಸ್ಯಸಾರಗಳು ಜೀರ್ಣರಸಗಳ ಉತ್ಪಾದನೆಯನ್ನು ಉತ್ತೇಜಿಸಬಹುದು. ಇದರಿಂದ ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗಲು ಸಹಾಯವಾಗಬಹುದು.
ಆ್ಯಂಟಿಆಕ್ಸಿಡೆಂಟ್ಗಳ ಮೂಲ: ಇದರಲ್ಲಿ ಫ್ಲೇವನಾಯ್ಡ್ಗಳು ಹಾಗೂ ಪಾಲಿಫಿನಾಲ್ಗಳಂತಹ ಆ್ಯಂಟಿಆಕ್ಸಿಡೆಂಟ್ ಅಂಶಗಳಿದ್ದು, ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ನೆರವಾಗಬಹುದು.
ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ: ಕೆಲವು ಸಣ್ಣ ಅಧ್ಯಯನಗಳ ಪ್ರಕಾರ ಬಿರಿಯಾನಿ ಎಲೆಯಲ್ಲಿರುವ ಸಕ್ರಿಯ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆಯ ನಿಯಂತ್ರಣಕ್ಕೆ ಸಹಾಯ ಮಾಡಬಹುದು. ಆದರೆ ಇದನ್ನು ಮಧುಮೇಹದ ಚಿಕಿತ್ಸೆಯ ಪರ್ಯಾಯವಾಗಿ ಬಳಸಬಾರದು.
ಉರಿಯೂತ ಕಡಿಮೆ ಮಾಡಲು ನೆರವಾಗುತ್ತದೆ: ಇದರಲ್ಲಿ ಇರುವ ಕೆಲವು ಸಸ್ಯರಾಸಾಯನಿಕಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು ಎಂದು ಪ್ರಾಥಮಿಕ ಅಧ್ಯಯನಗಳಿಂದ ತಿಳಿದುಬಂದಿದೆ.
ಗಮನಿಸಿ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಆಹಾರ ಪದಾರ್ಥವನ್ನು ಔಷಧಿಯ ಪರ್ಯಾಯವಾಗಿ ಬಳಸಬಾರದು. ಗಂಟಲು, ಜೀರ್ಣಾಂಗ ಅಥವಾ ಆಹಾರ ನುಂಗುವ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ