ಮಲಬದ್ಧತೆಯಿಂದ ಕಂಗೆಟ್ಟಿರುವವರಿಗೆ ಕಾಮಕಸ್ತೂರಿ ಬೀಜಗಳನ್ನು ಈ ರೀತಿ ಸೇವಿಸಿದರೆ ಜೀರ್ಣಕ್ರಿಯೆ ಸರಿಯಾಗಿ ಆಗಬಹುದು!

ಮಲಬದ್ಧತೆಯಿಂದ ಬಳಲುತ್ತಿದ್ದರೆ ಆಹಾರದಲ್ಲಿ ಫೈಬರ್ ಅಂಶ ಹೆಚ್ಚಿಸುವುದರಿಂದ ಇಂತಹ ಸಮಸ್ಯೆಗೆಯಿಂದ ಮುಕ್ತಿ ಪಡೆಯಲು ಸಹಾಯಕವಾಗಬಹುದು. ತುಳಸಿ ಬೀಜ ಅಥವಾ ಸಬ್ಜಾ ಬೀಜಗಳೆಂದು ಕರೆಯಲ್ಪಡುವ ಕಾಮಕಸ್ತೂರಿ ಬೀಜಗಳು ಮಲಬದ್ಧತೆ ಇರುವವರಿಗೆ ಉಪಯುಕ್ತ ಆಹಾರ ವಾಗಬಹುದು. ಹಾಗಾದರೆ ಇದನ್ನು ಯಾವ ರೀತಿ ಸೇವನೆ ಮಾಡಬೇಕು, ಹೆಚ್ಚು ಸೇವನೆ ಮಾಡಿದರೆ ಸಮಸ್ಯೆಯಾಗುತ್ತದೆಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಲಬದ್ಧತೆಯಿಂದ ಕಂಗೆಟ್ಟಿರುವವರಿಗೆ ಕಾಮಕಸ್ತೂರಿ ಬೀಜಗಳನ್ನು ಈ ರೀತಿ ಸೇವಿಸಿದರೆ ಜೀರ್ಣಕ್ರಿಯೆ ಸರಿಯಾಗಿ ಆಗಬಹುದು!
Basil Seeds For Constipation
Image Credit source: Getty Images

Updated on: Sep 16, 2026 | 5:46 PM

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಮಲ ಗಟ್ಟಿಯಾಗುವುದು, ಸರಿಯಾಗಿ ಮಲವಿಸರ್ಜನೆ ಆಗದಿರುವುದು, ಹೊಟ್ಟೆ ಉಬ್ಬರ ಮತ್ತು ಅಸ್ವಸ್ಥತೆ ಮುಂತಾದ ಸಮಸ್ಯೆಗಳಿಂದ ಜನ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನೀರು, ಹಣ್ಣು, ತರಕಾರಿಗಳು ಮತ್ತು ನಾರಿನಾಂಶ ಹೆಚ್ಚಿರುವ ಆಹಾರಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ಇದರ ಜೊತೆಗೆ ತುಳಸಿ ಬೀಜ ಅಥವಾ ಸಬ್ಜಾ ಬೀಜಗಳೆಂದು ಕರೆಯಲ್ಪಡುವ ಕಾಮಕಸ್ತೂರಿ ಬೀಜಗಳು ಮಲಬದ್ಧತೆ ಇರುವವರಿಗೆ ಉಪಯುಕ್ತ ಆಹಾರ ವಾಗಬಹುದು. ಹಾಗಾದರೆ ಇದನ್ನು ಯಾವ ರೀತಿ ಸೇವನೆ ಮಾಡಬೇಕು, ಹೆಚ್ಚು ಸೇವನೆ ಮಾಡಿದರೆ ಸಮಸ್ಯೆಯಾಗುತ್ತದೆಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಬ್ಜಾ ಬೀಜ ಅಥವಾ ಕಾಮಕಸ್ತೂರಿ ಬೀಜ ನೀರಿನಲ್ಲಿ ನೆನೆಸಿದಾಗ ಅವು ಜೆಲ್‌ನಂತಹ ಪದರವನ್ನು ರೂಪಿಸುತ್ತವೆ. ಇವುಗಳಲ್ಲಿ ನಾರಿನಾಂಶವಿದ್ದು, ಇವುಗಳನ್ನು ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗಬಹುದು. ಆದರೆ ಒಂದು ಚಮಚ ಸಬ್ಜಾ ಬೀಜ ತಿಂದ ತಕ್ಷಣ ಕರುಳನ್ನು ಸಂಪೂರ್ಣವಾಗಿ ಶುದ್ಧಗೊಳಿಸುತ್ತದೆ ಅಥವಾ ಮಲಬದ್ಧತೆಯನ್ನು ಖಚಿತವಾಗಿ ನಿವಾರಿಸುತ್ತದೆ ಎಂದು ಹೇಳುವುದು ಸರಿಯಲ್ಲ.

ಕಾಮಕಸ್ತೂರಿ ಬೀಜಗಳಲ್ಲಿದೆ ಫೈಬರ್ ಅಂಶ:

ಮಲಬದ್ಧತೆ ನಿಯಂತ್ರಿಸಲು ಆಹಾರದಲ್ಲಿರುವ ಫೈಬರ್ ಪ್ರಮುಖ ಪಾತ್ರ ವಹಿಸುತ್ತದೆ. ಫೈಬರ್‌ನ ಕೆಲವು ವಿಧಗಳು ನೀರನ್ನು ಹೀರಿಕೊಂಡು ಮಲ ಮೃದುವಾಗಲು ನೆರವಾಗುತ್ತವೆ. ಇನ್ನು ಕೆಲವು ವಿಧಗಳು ಮಲದ ಪ್ರಮಾಣ ಹೆಚ್ಚಿಸಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಕಾಮಕಸ್ತೂರಿ ಬೀಜಗಳನ್ನು ಮಾತ್ರ ಅವಲಂಬಿಸುವ ಬದಲು, ತರಕಾರಿಗಳು, ಹಣ್ಣುಗಳು, ಬೇಳೆಕಾಳುಗಳು, ಧಾನ್ಯಗಳು ಮತ್ತು ಇತರ ನಾರಿನಾಂಶಯುಕ್ತ ಆಹಾರಗಳನ್ನೂ ಸೇವನೆ ಮಾಡುವುದು ಬಹಳ ಒಳ್ಳೆಯದು.

ಇದನ್ನೂ ಓದಿ: ಡ್ರ್ಯಾಗನ್ ಫ್ರೂಟ್ ತಿನ್ನುವವರು ರೆಡ್ ಮತ್ತು ವೈಟ್ ಡ್ರ್ಯಾಗನ್ ಹಣ್ಣಿನಲ್ಲಿರುವ ವ್ಯತ್ಯಾಸ ತಿಳಿಯಿರಿ

ಕಾಮಕಸ್ತೂರಿ ಬೀಜಗಳನ್ನು ಹೇಗೆ ಸೇವಿಸಬಹುದು?

ಇವುಗಳನ್ನು ಸಾಮಾನ್ಯವಾಗಿ ನೀರಿನಲ್ಲಿ ಸುಮಾರು 15 ರಿಂದ 30 ನಿಮಿಷ ನೆನೆಸಿದ ನಂತರ ಸೇವಿಸುವುದು ಸೂಕ್ತ. ನೆನೆಸಿದ ಬೀಜಗಳನ್ನು ನೀರು, ಮಜ್ಜಿಗೆ, ಹಣ್ಣಿನ ಪಾನೀಯ ಅಥವಾ ಇತರ ಸೂಕ್ತ ಆಹಾರಗಳಲ್ಲಿ ಸೇರಿಸಬಹುದು. ಒಣ ಬೀಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೇರವಾಗಿ ಸೇವಿಸುವುದಕ್ಕಿಂತ ನೆನೆಸಿ ಸೇವಿಸುವುದು ಉತ್ತಮ. ಜೊತೆಗೆ ಫೈಬರ್ ಅಂಶವನ್ನು ಹೆಚ್ಚು ಸೇವನೆ ಮಾಡುವಾಗ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದೂ ಕೂಡ ಬಹಳ ಮುಖ್ಯ.

ಹೆಚ್ಚು ಸೇವಿಸಿದರೆ ಸಮಸ್ಯೆಯಾಗಬಹುದೇ?

ಯಾವುದೇ ನಾರಿನಾಂಶಯುಕ್ತ ಆಹಾರವನ್ನು ಒಂದೇ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಕೆಲವರಿಗೆ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಅಸ್ವಸ್ಥತೆ ಉಂಟಾಗಬಹುದು. ಆದ್ದರಿಂದ ಕಡಿಮೆ ಪ್ರಮಾಣದಿಂದ ಆರಂಭಿಸಿ, ದೇಹದ ಪ್ರತಿಕ್ರಿಯೆಗೆ ಅನುಗುಣವಾಗಿ ಸೇವಿಸುವುದು ಉತ್ತಮ. ಮಕ್ಕಳು, ನುಂಗುವ ಸಮಸ್ಯೆ ಇರುವವರು ಅಥವಾ ವಿಶೇಷ ಆರೋಗ್ಯ ಸಮಸ್ಯೆ ಹೊಂದಿರುವವರು ಸಬ್ಜಾ ಬೀಜಗಳನ್ನು ನೀಡುವ ಅಥವಾ ಸೇವಿಸುವ ಮೊದಲು ವೈದ್ಯರು ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆಯಬೇಕು.

ಮಲಬದ್ಧತೆಗೆ ಕಾಮಕಸ್ತೂರಿ ಬೀಜ ಮಾತ್ರ ಪರಿಹಾರವೇ?

ಪ್ರತಿದಿನ ಸಾಕಷ್ಟು ನೀರು ಕುಡಿಯುವುದು, ನಾರಿನಾಂಶಯುಕ್ತ ಆಹಾರ ಸೇವಿಸುವುದು, ನಿಯಮಿತ ದೈಹಿಕ ಚಟುವಟಿಕೆ ಮತ್ತು ಸರಿಯಾದ ಮಲವಿಸರ್ಜನೆ ಅಭ್ಯಾಸಗಳು ಮಲಬದ್ಧತೆ ನಿಯಂತ್ರಣಕ್ಕೆ ಬಹಳ ಮುಖ್ಯವಾಗುತ್ತದೆ. ಮಲಬದ್ಧತೆ ದೀರ್ಘಕಾಲ ಮುಂದುವರಿದರೆ, ಮಲದಲ್ಲಿ ರಕ್ತ ಕಾಣಿಸಿದರೆ, ತೀವ್ರ ಹೊಟ್ಟೆನೋವು ಅಥವಾ ಕಾರಣವಿಲ್ಲದೆ ತೂಕ ಕಡಿಮೆಯಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಗಮನಿಸಿ: ಈ ಮಾಹಿತಿ ಸಾಮಾನ್ಯ ಆರೋಗ್ಯ ಅರಿವಿಗಾಗಿ ಮಾತ್ರ. ನಿರಂತರ ಜೀರ್ಣಕ್ರಿಯೆ ಅಥವಾ ಮಲಬದ್ಧತೆ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯಿರಿ.

Loading...
Unable to load recommendations.
Follow Us