ವಾಯು ಮಾಲಿನ್ಯದಿಂದ ಕ್ಯಾನ್ಸರ್, ಹೃದಯಾಘಾತ ಹೆಚ್ಚಳ; ಏನಿದು ಶಾಕಿಂಗ್ ವಿಷಯ?

ವಾಯು ಮಾಲಿನ್ಯವು ಮೆದುಳು ಮತ್ತು ಹೃದಯ ಎರಡಕ್ಕೂ ಹಾನಿಯನ್ನುಂಟುಮಾಡುತ್ತದೆ. ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಹೆಚ್ಚು ಕಲುಷಿತ ಗಾಳಿಗೆ ಒಡ್ಡಿಕೊಳ್ಳುವುದರಿಂದ ಹೃದಯಾಘಾತದಿಂದ ಸಾವನ್ನಪ್ಪುವ ಅಪಾಯ ಹೆಚ್ಚಾಗುತ್ತದೆ.

ವಾಯು ಮಾಲಿನ್ಯದಿಂದ ಕ್ಯಾನ್ಸರ್, ಹೃದಯಾಘಾತ ಹೆಚ್ಚಳ; ಏನಿದು ಶಾಕಿಂಗ್ ವಿಷಯ?
ವಾಯು ಮಾಲಿನ್ಯ Image Credit source: iStock
Follow us
|

Updated on: Nov 06, 2023 | 3:15 PM

ನಮ್ಮ ಸುತ್ತಮುತ್ತಲೂ ಶುದ್ಧವಾದ ಗಾಳಿಗಾಗಿ ಪರದಾಡುವಂತಾಗಿದೆ. ಉಸಿರಾಡಲು ಶುದ್ಧವಾದ ಗಾಳಿ ಇಲ್ಲದೆ ಅನೇಕ ರೋಗಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೇವೆ. ಅದರಲ್ಲೂ ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು ಇಂದು ಅತ್ಯಂತ ಕಳಪೆಯಾಗಿದ್ದು, ಜನರ ಆರೋಗ್ಯದ ಬಗ್ಗೆ ಆತಂಕ ಹೆಚ್ಚಾಗಿದೆ. ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ (ಎಐಐಎಂಎಸ್) ಮೆಡಿಸಿನ್ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ. ಪಿಯೂಷ್ ರಂಜನ್, ವಾಯು ಮಾಲಿನ್ಯವು ವಿವಿಧ ರೀತಿಯ ಕ್ಯಾನ್ಸರ್​ಗೆ ಕಾರಣವಾಗುತ್ತದೆ ಎಂಬುದಕ್ಕೆ ಹಲವು ವೈಜ್ಞಾನಿಕ ಪುರಾವೆಗಳಿವೆ ಎಂದು ಹೇಳಿದ್ದಾರೆ.

ವಾಯು ಮಾಲಿನ್ಯವು ಉಸಿರಾಟದ ಕಾಯಿಲೆಗಳನ್ನು ಉಂಟುಮಾಡುವುದರ ಜೊತೆಗೆ ದೇಹದ ವಿವಿಧ ಅಂಗಗಳ ಮೇಲೆಯೂ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಮಾಲಿನ್ಯವು ಹೃದಯಾಘಾತ, ಮೆದುಳಿನ ಪಾರ್ಶ್ವವಾಯು ಮತ್ತು ಸಂಧಿವಾತದಂತಹ ಕಾಯಿಲೆಗಳೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ವಿವಿಧ ರೀತಿಯ ಕ್ಯಾನ್ಸರ್‌ಗಳಿಗೆ ವಾಯು ಮಾಲಿನ್ಯ ಕಾರಣವಾಗುತ್ತದೆ ಎಂಬುದಕ್ಕೆ ಹಲವು ವೈಜ್ಞಾನಿಕ ಪುರಾವೆಗಳು ನಮ್ಮ ಬಳಿ ಇವೆ ಎಂದು AIIMS ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ವಾಯುಮಾಲಿನ್ಯವು ಶಿಶುಗಳಲ್ಲಿ ಅರಿವಿನ ಸಮಸ್ಯೆಗೆ ಹಾನಿಕಾರಕ: ಅಧ್ಯಯನ

ವಾಯುಮಾಲಿನ್ಯ ಗರ್ಭಿಣಿಯರ ಹೊಟ್ಟೆಯಲ್ಲಿರುವ ಭ್ರೂಣದ ಆರೋಗ್ಯದ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಕೆಗಳನ್ನು ನೀಡಿದ್ದಾರೆ. ವೈದ್ಯಕೀಯ ತಜ್ಞರ ಪ್ರಕಾರ, ವಾಯು ಮಾಲಿನ್ಯವು ಮೆದುಳು ಮತ್ತು ಹೃದಯ ಎರಡಕ್ಕೂ ಹಾನಿಯನ್ನುಂಟುಮಾಡುತ್ತದೆ. ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ.

ಈ ಬಗ್ಗೆ ಬೆಂಗಳೂರಿನ ಸಕ್ರಾ ವರ್ಲ್ಡ್ ಆಸ್ಪತ್ರೆಯ ಹಿರಿಯ ಇಂಟರ್​ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ದೀಪಕ್ ಕೃಷ್ಣಮೂರ್ತಿ ಟ್ವೀಟ್ ಮಾಡಿದ್ದು, ಹೆಚ್ಚು ಕಲುಷಿತ ಗಾಳಿಗೆ ಒಡ್ಡಿಕೊಳ್ಳುವುದರಿಂದ ಹೃದಯಾಘಾತದಿಂದ ಸಾವನ್ನಪ್ಪುವ ಅಪಾಯ ಹೆಚ್ಚಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: 10 ವರ್ಷಗಳಲ್ಲಿ ಹೃದಯಾಘಾತ ಶೇ 22 ರಷ್ಟು ಹೆಚ್ಚಳ: ಡಾ ಸಿಎನ್ ಮಂಜುನಾಥ್ ಕೊಟ್ಟ ಕಾರಣ ಇಲ್ಲಿದೆ

ವಾಯು ಮಾಲಿನ್ಯ ನಮ್ಮ ಕಣ್ಣಿಗೆ ಕಾಣದ ಕೊಲೆಗಾರನಿದ್ದಂತೆ. ಹೃದಯರಕ್ತನಾಳದ ಸಮಸ್ಯೆಗಳಿಗೆ ವಾಯುಮಾಲಿನ್ಯವು ಒಂದು ಪ್ರಮುಖ ಅಪಾಯಕಾರಿ ಅಂಶವಾಗಿದೆ ಎಂದು ಅವರು ಹೇಳಿದ್ದಾರೆ. ಹೃದ್ರೋಗಗಳಿಂದ ಉಂಟಾದ ಶೇ. 25ರಷ್ಟು ಸಾವುಗಳು ಮಾರಣಾಂತಿಕವಾದ ವಾಯುಮಾಲಿನ್ಯಕ್ಕೆ ಒಡ್ಡಿಕೊಂಡಿದ್ದರ ಪರಿಣಾಮವಾಗಿದೆ. ತಂಬಾಕು, ಧೂಮಪಾನ, ರಸ್ತೆ ಅಪಘಾತಗಳು, ಮದ್ಯದ ದುರ್ಬಳಕೆ, ಏಡ್ಸ್, ಮಲೇರಿಯಾ ಮತ್ತು ಕ್ಷಯರೋಗದಂತಹ ಕಾಯಿಲೆಗಳಿಗಿಂತ ಮಾಲಿನ್ಯವು ಪ್ರಪಂಚದಾದ್ಯಂತ ಹೆಚ್ಚು ಜನರನ್ನು ಕೊಲ್ಲುತ್ತಿದೆ ಎಂಬುದನ್ನು ತೋರಿಸುವ ಗ್ರಾಫ್ ಅನ್ನು ಅವರು ಹಂಚಿಕೊಂಡಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ