
ದಾಳಿಂಬೆ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಇದನ್ನು ವಿವಿಧ ರೀತಿಯ ಆಹಾರಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದರಲ್ಲಿ ವಿಟಮಿನ್ ಸಿ, ಕೆ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಫೈಬರ್ ಮತ್ತು ಪ್ರೋಟೀನ್ ನಂತಹ ಅನೇಕ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಅದಲ್ಲದೆ ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೆ ಇವುಗಳ ನಿಯಮಿತ ಸೇವನೆಯು ಮೂಳೆಗಳನ್ನು ಬಲಪಡಿಸುವಲ್ಲಿ, ಕೋಶ ವಿಭಜನೆಯಲ್ಲಿ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಜೊತೆಗೆ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಹೊಳಪನ್ನು ನೀಡುತ್ತದೆ. ಇದು ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ. ಕೆಂಪು ಕೆಂಪಾಗಿರುವ ಈ ಹಣ್ಣು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹ ಸಾಕಷ್ಟು ಸಹಾಯ ಮಾಡುತ್ತದೆ. ಕೇವಲ ಹಣ್ಣು ಮಾತ್ರವಲ್ಲ ಅದರ ಸಿಪ್ಪೆ, ಬೀಜ ಮತ್ತು ಹೂವುಗಳು ಕೂಡ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಆದರೆ ನಿಮಗೆ ಗೊತ್ತಾ? ಇಷ್ಟೆಲ್ಲಾ ಪ್ರಯೋಜನಗಳಿರುವ ಹಣ್ಣು ಕೆಲವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದರೆ ಯಾರು ಈ ಹಣ್ಣನ್ನು ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಸಾಮಾನ್ಯವಾಗಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ದಾಳಿಂಬೆ ಹಣ್ಣನ್ನು ತಿನ್ನಬೇಡಿ. ಇದು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳುತ್ತಾರೆ. ದಾಳಿಂಬೆ ಸೇವನೆಯಿಂದ ಚರ್ಮದ ಕಲೆಗಳು ಮತ್ತು ಅಲರ್ಜಿಗಳಂತಹ ಸಮಸ್ಯೆಗಳು ಹೆಚ್ಚಾಗಬಹುದು. ಹಾಗಾಗಿ ಸೇವನೆ ಮಾಡುವಾಗ ಅತಿಯಾಗಿ ಸೇವನೆ ಮಾಡಬೇಡಿ. ಜೊತೆಗೆ ವೈದ್ಯರ ಸಲಹೆಯನುಸಾರ ಸೇವನೆ ಮಾಡಿ.
ರಕ್ತದೊತ್ತಡ ಕಡಿಮೆ ಇರುವವರು ಕೂಡ ದಾಳಿಂಬೆ ತಿನ್ನಬಾರದು. ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ನಿಧಾನಗೊಳಿಸುತ್ತದೆ. ಜೊತೆಗೆ ಕಡಿಮೆ ರಕ್ತದೊತ್ತಡಕ್ಕೆ ಸಂಬಂಧಿಸಿ ಔಷಧಿ ತೆಗೆದುಕೊಳ್ಳುವವರಿಗೆ ದಾಳಿಂಬೆ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ.
ಅಧಿಕ ರಕ್ತದೊತ್ತಡ ಇರುವವರು ದಾಳಿಂಬೆ ಸೇವಿಸಿದರೆ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಮೂತ್ರಪಿಂಡ ಸಂಬಂಧಿತ ಸಮಸ್ಯೆ ಇರುವವರು ದಾಳಿಂಬೆ ಸೇವಿಸಿದರೆ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಥೈರಾಯ್ಡ್ ಸಮಸ್ಯೆ ಇರುವವರು ದಾಳಿಂಬೆ ಸೇವಿಸಿದರೆ ಹಾರ್ಮೋನ್ ಅಸಮತೋಲನ ಆಗಬಹುದು. ಅದರಲ್ಲಿಯೂ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ತಿನ್ನಬೇಡಿ. ಏಕೆಂದರೆ ಇದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಇದನ್ನೂ ಓದಿ: ಕಿಡ್ನಿ ವೈಫಲ್ಯವಾಗುವ ಮೊದಲು ದೇಹದಲ್ಲಿ ಈ ರೀತಿ ಲಕ್ಷಣಗಳು ಕಂಡುಬರುತ್ತೆ
ದಾಳಿಂಬೆ ಹಣ್ಣನ್ನು ಮಧುಮೇಹಿಗಳು ತಿನ್ನಬಾರದು. ದೇಹದಲ್ಲಿ ಅಧಿಕ ಸಕ್ಕರೆ ಅಂಶ ಇರುವವರು ಈ ಹಣ್ಣನ್ನು ಸೇವನೆ ಮಾಡುವುದನ್ನು ತಪ್ಪಿಸಬೇಕು. ದಾಳಿಂಬೆಯನ್ನು ಅತಿಯಾಗಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಏಕೆಂದರೆ ದಾಳಿಂಬೆ ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತದೆ. ಇವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಆದ್ದರಿಂದ, ಮಧುಮೇಹ ಇದ್ದರೆ ದಾಳಿಂಬೆ ಸೇವಿಸಬೇಡಿ.
ಸಾಮಾನ್ಯವಾಗಿ ಜೀರ್ಣ ಶಕ್ತಿ ಸರಿಯಾಗಿ ಇಲ್ಲದಿದ್ದರೆ, ಅಜೀರ್ಣದಿಂದ ಬಳಲುತ್ತಿರುವವರು ದಾಳಿಂಬೆಯನ್ನು ಸೇವಿಸಿದರೆ ಹೊಟ್ಟೆ ಉಬ್ಬರ ಮತ್ತು ಅಸ್ವಸ್ಥತೆ ಉಂಟಾಗಬಹುದು. ಏಕೆಂದರೆ ದಾಳಿಂಬೆಯ ಶೀತ ಸ್ವಭಾವದ ಹಣ್ಣು. ಹೀಗಾಗಿ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಅದರಲ್ಲಿಯೂ ಪಿತ್ತಜನಕಾಂಗದ ಸಮಸ್ಯೆ ಇರುವವರು ದಾಳಿಂಬೆ ತಿನ್ನುವಾಗ ಜೀರ್ಣಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಗ್ಯಾಸ್ ಸಮಸ್ಯೆ ಇರುವವರು ದಾಳಿಂಬೆ ತಿಂದರೆ ಸಮಸ್ಯೆ ಹೆಚ್ಚಾಗಬಹುದು. ಹಾಗಾಗಿ ಸೇವನೆ ಮಾಡುವಾಗ ಎಚ್ಚರವಿರಲಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ