Anjeer benefits: ನೆನೆಸಿದ ಅಂಜೂರದ ನೀರು ಕುಡಿಯುವುದರಿಂದ ಸಿಗುತ್ತೆ ಅನೇಕ ಲಾಭಗಳು!

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 02, 2024 | 12:05 PM

ತೂಕ ನಷ್ಟದಿಂದ ಹಿಡಿದು ಮಧುಮೇಹ ನಿಯಂತ್ರಣದವರೆಗೆ, ಅಂಜೂರ ನೆನೆಸಿದ ನೀರಿನಿಂದ ನಿಮ್ಮ ದಿನವನ್ನು ಪ್ರಾರಂಭಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಅಂಜೂರವು ನಿಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದ್ದರೆ, ಅಂಜೂರ ನೆನಸಿದ ನೀರು ನಿಮ್ಮ ಆರೋಗ್ಯಕ್ಕೆ ಹೆಚ್ಚು ಅವಶ್ಯಕವಾಗಿದೆ. ಹೇಗೆ? ಇದನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Anjeer benefits: ನೆನೆಸಿದ ಅಂಜೂರದ ನೀರು ಕುಡಿಯುವುದರಿಂದ ಸಿಗುತ್ತೆ ಅನೇಕ ಲಾಭಗಳು!
Follow us on

ಡ್ರೈ ಫ್ರೂಟ್ ಅಥವಾ ಒಣ ಹಣ್ಣುಗಳು ಭಾರತೀಯರು ಆನಂದಿಸುವ ನೆಚ್ಚಿನ ತಿಂಡಿಗಳಲ್ಲಿ ಒಂದಾಗಿದೆ. ಇದು ರುಚಿಕರ ಮಾತ್ರವಲ್ಲದೆ ಪೌಷ್ಟಿಕವೂ ಆಗಿದೆ. ಒಣದ್ರಾಕ್ಷಿ, ಖರ್ಜೂರ, ಬೆರ್ರಿ ಹೀಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಡ್ರೈ ಫ್ರೂಟ್ ಲಭ್ಯವಿದೆ. ಆದರೆ ನೀವು ಅಂಜೂರದ ಬಗ್ಗೆ ತಿಳಿದುಕೊಂಡಿದ್ದೀರಾ? ಇದು ಹಿಪ್ಪುನೇರಳೆ ಕುಟುಂಬದ್ದಾಗಿದ್ದು ಇದನ್ನು ಅದರ ರುಚಿ ಮತ್ತು ಅದು ನೀಡುವ ಪೋಷಕಾಂಶಗಳಿಗಾಗಿ ಸೇವನೆ ಮಾಡಲಾಗುತ್ತದೆ. ಇನ್ನು ಹೃದಯ ಸಮಸ್ಯೆಗಳು, ಅಜೀರ್ಣ, ಗಂಟಲು ನೋವು ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಾಂಪ್ರದಾಯಿಕವಾಗಿ ಇದನ್ನು ಬಳಸಲಾಗುತ್ತದೆ, ಅವು ಹಲವಾರು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ, ಇದು ನಿಮ್ಮ ಆಹಾರಕ್ಕೆ ಉತ್ತಮ ಸೇರ್ಪಡೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂಜೂರವು ನಿಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದ್ದರೆ, ಅಂಜೂರ ನೆನಸಿದ ನೀರು ನಿಮ್ಮ ಆರೋಗ್ಯಕ್ಕೆ ಹೆಚ್ಚು ಅವಶ್ಯಕವಾಗಿದೆ. ಹೇಗೆ? ಇದನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ರಾತ್ರಿಯಲ್ಲಿ ಅಂಜೂರ ನೆನೆಸಿದ ನೀರನ್ನು ಕುಡಿಯುವುದರಿಂದ ಸಿಗುವ ಪ್ರಯೋಜನಗಳು ಮತ್ತು ಅದನ್ನು ನಿಮ್ಮ ಆಹಾರದಲ್ಲಿ ಹೇಗೆ ಸೇರಿಸುವುದು ಎಂಬುದರ ಬಗೆಗಿನ ಇನ್ನಷ್ಟು ಮಾಹಿತಿಯನ್ನು, ಆಂಧ್ರಪ್ರದೇಶದ ವಿಜಯವಾಡದ ಮಣಿಪಾಲ್ ಆಸ್ಪತ್ರೆಯ ಆಹಾರ ತಜ್ಞೆ ನಂದಿನಿ ಅಲಪಾಟಿ ಹಂಚಿಕೊಂಡಿದ್ದಾರೆ.

ಅಂಜೂರ ನೆನೆಸಿದ ನೀರಿನ 6 ಆರೋಗ್ಯ ಪ್ರಯೋಜನಗಳು ಇಲ್ಲಿವೆ;

1. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ, ಅಂಜೂರ ನೆನೆಸಿದ ನೀರು ಉತ್ತಮ ಆಯ್ಕೆಯಾಗಬಲ್ಲದು. ಇದು ನಾರಿನಂಶದಿಂದ ಸಮೃದ್ಧವಾಗಿದೆ ಮತ್ತು ನಿಮ್ಮನ್ನು ದೀರ್ಘಕಾಲದವರೆಗೆ ಸಂತೃಪ್ತಿಗೊಳಿಸುತ್ತದೆ ಇದರಿಂದ ನಿಮಗೆ ಬೇಗನೆ ಹಸಿವಾಗುವುದಿಲ್ಲ ಆಗ ನೀವು ಸೀಮಿತ ಪ್ರಮಾಣದ ಕ್ಯಾಲೊರಿಗಳನ್ನು ಸೇವಿಸುತ್ತೀರಿ. ಇದು ಕಡುಬಯಕೆಗಳನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಅದರಲ್ಲಿಯೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂಜೂರವನ್ನು ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದೆಲ್ಲದರ ಪರಿಣಾಮ ನಿಮ್ಮ ತೂಕ ಇಳಿಕೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

2. ಜೀರ್ಣಕ್ರಿಯೆಗೆ ಒಳ್ಳೆಯದು

ನೀವು ಜೀರ್ಣಕಾರಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅಂಜೂರ ನೆನೆಸಿದ ನೀರು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುವ ನೈಸರ್ಗಿಕ ವಿರೇಚಕವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ನಾರಿನ ಉತ್ತಮ ಮೂಲವಾಗಿದೆ, ಕರುಳಿನ ಚಲನೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಫಾರ್ಮಾಸ್ಯುಟಿಕಲ್ ಬಯಾಲಜಿ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವು ಅಂಜೂರವನ್ನು ಸೇವಿಸುವುದರಿಂದ ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ ಎಂದು ಕಂಡು ಹಿಡಿದಿದೆ. ಆದ್ದರಿಂದ, ಅಂಜೂರದ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳನ್ನು ದೂರವಿರಿಸಬಹುದು.

3. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಅಂಜೂರದ ನೀರು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಇದರಲ್ಲಿ ಕರಗುವ ನಾರಿನಂಶ ಅಧಿಕವಾಗಿದ್ದು, ಇದು ದೇಹದಲ್ಲಿ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗದಂತೆ ತಡೆಯುತ್ತದೆ. ಮಧುಮೇಹ ಇರುವವರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಲು ಸಹ ಶಿಫಾರಸು ಮಾಡಲಾಗಿದೆ. ಡಯಾಬಿಟಿಸ್ ರಿಸರ್ಚ್ ಅಂಡ್ ಕ್ಲಿನಿಕಲ್ ಪ್ರಾಕ್ಟೀಸ್ ನಲ್ಲಿ ಪ್ರಕಟವಾದ ಒಂದು ಸಣ್ಣ ಅಧ್ಯಯನವು ಅಂಜೂರ ತೆಗೆದುಕೊಂಡ ಜನರು ಊಟದ ನಂತರದ ಗ್ಲೂಕೋಸ್ ಮಟ್ಟದಲ್ಲಿ ಇಳಿಕೆಯನ್ನು ಕಂಡುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅಂಜೂರ ಹಣ್ಣು ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು

4. ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ

ಅಂಜೂರದ ನೀರು ಪೊಟ್ಯಾಸಿಯಮ್ನ ಸಮೃದ್ಧ ಮೂಲವಾಗಿದೆ, ಇದು ಹೃದಯ ಸ್ನೇಹಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಸಾಕಷ್ಟು ಪೊಟ್ಯಾಸಿಯಮ್ ಸೇವನೆಯು ಆರೋಗ್ಯಕರ ರಕ್ತದೊತ್ತಡದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ.

5. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ವಿಟಮಿನ್ ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಅಂಜೂರದ ನೀರು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ರೋಗಗಳನ್ನು ದೂರವಿರಿಸಲು ದೇಹವನ್ನು ಸಿದ್ಧಪಡಿಸುತ್ತದೆ. ಅಂಜೂರದ ನೀರನ್ನು ನಿಮ್ಮ ಜೀವನದ ನಿಯಮಿತ ಭಾಗವನ್ನಾಗಿ ಮಾಡುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

6. ಕಾಂತಿಯುತ ಚರ್ಮವನ್ನು ನೀಡುತ್ತದೆ

ಹೊಳೆಯುವ ಚರ್ಮವನ್ನು ಯಾರು ಬಯಸುವುದಿಲ್ಲ? ನಿಮ್ಮ ಆಹಾರದಲ್ಲಿ ಅಂಜೂರದ ನೀರನ್ನು ಸೇರಿಸುವುದರಿಂದ ಇದು ಸಾಧ್ಯವಾಗುತ್ತದೆ. ಇದರಲ್ಲಿರುವ ಉತ್ತಮ ಪ್ರಮಾಣದ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ನಿಮ್ಮ ಚರ್ಮವನ್ನು ಫ್ರೀ ರಾಡಿಕಲ್ಗಳ ನಕಾರಾತ್ಮಕ ಪರಿಣಾಮಗಳಿಂದ ರಕ್ಷಿಸುವ ಗುಣಲಕ್ಷಣಗಳನ್ನು ಕೂಡ ಹೊಂದಿದೆ. ಹೊಳೆಯುವ ಮತ್ತು ಕಾಂತಿಯುತ ಚರ್ಮವನ್ನು ಪಡೆಯಲು ನೀವು ನೈಸರ್ಗಿಕ ಮಾರ್ಗಗಳನ್ನು ಹುಡುಕುತ್ತಿದ್ದರೆ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ