World Organ Donation Day 2025: ಸತ್ತ ನಂತರ ಮಣ್ಣಾಗುವ ದೇಹದ ಅಂಗವನ್ನು ದಾನ ಮಾಡುವ ಮೂಲಕ ಮರುಜೀವ ನೀಡಿ
ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಮತ್ತು ಅಂಗಾಂಗ ದಾನಕ್ಕೆ ಪ್ರತಿಯೊಬ್ಬ ವ್ಯಕ್ತಿಯನ್ನು ಉತ್ತೇಜಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 13 ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಅಂಗದಾನ ದಿನವನ್ನು ಆಚರಿಸಲಾಗುತ್ತದೆ. ಸಾಕಷ್ಟು ಜೀವಗಳನ್ನು ಉಳಿಸುವ ಸಲುವಾಗಿ ಸಾವಿನ ನಂತರ ತಮ್ಮ ಆರೋಗ್ಯಕರ ಅಂಗಗಳನ್ನು ದಾನ ಮಾಡಲು ಜನರನ್ನು ಪ್ರೋತ್ಸಾಹಿಸಲು ಈ ದಿನವನ್ನು ಮೀಸಲಿರಿಸಲಾಗಿದೆ. ಹಾಗಾದರೆ ಯಾವ ಅಂಗಗಳನ್ನು ದಾನ ಮಾಡಬಹುದು? ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದಾನಗಳಲ್ಲಿ ಶ್ರೇಷ್ಠ ದಾನವೆಂದರೆ ಅದು ಅಂಗಾಂಗ ದಾನ. ಇದರಿಂದ ಒಬ್ಬ ವ್ಯಕ್ತಿಗೆ ಹೊಸ ಜೀವನವನ್ನು ನೀಡಿದ ಪುಣ್ಯ ಸಿಗುತ್ತದೆ. ಆದರೆ ಈ ಆ ಬಗ್ಗೆ ಜನರಿಗೆ ಅರಿವಿನ ಕೊರತೆ ಇರುವುದರಿಂದ ಅಂಗಾಂಗ ದಾನದ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆಗಳು ಹುಟ್ಟುಕೊಂಡಿದೆ. ಈ ಕಾರಣದಿಂದ ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನ ಮಾಡಲು ಜನರನ್ನು ಉತ್ತೇಜಿಸಲು ಪ್ರತಿವರ್ಷ ಆಗಸ್ಟ್ 13 ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಅಂಗದಾನ ದಿನವನ್ನು (World Organ Donation Day) ಆಚರಿಸಲಾಗುತ್ತದೆ. ಮೂತ್ರಪಿಂಡ, ಹೃದಯ, ಮೇದೋಜ್ಜೀರಕ ಗ್ರಂಥಿ, ಕಣ್ಣು, ಶ್ವಾಸಕೋಶ ಮುಂತಾದ ಅಂಗಗಳನು ದಾನ ಮಾಡುವುದರಿಂದ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರ ಜೀವವನ್ನು ಉಳಿಸಬಹುದು.
ಈ ದಿನದ ಮುಖ್ಯ ಉದ್ದೇಶವೇನು?
ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಇದರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ಮತ್ತು ಇನ್ನೊಂದು ಜೀವಗಳನ್ನು ಉಳಿಸಲು ಇದು ಒಂದು ಅವಕಾಶವಾಗಿದೆ. ಮೂತ್ರಪಿಂಡ, ಹೃದಯ, ಮೇದೋಜ್ಜೀರಕ ಗ್ರಂಥಿ, ಕಣ್ಣು, ಶ್ವಾಸಕೋಶ ಮುಂತಾದ ಅಂಗಗಳನ್ನು ದಾನ ಮಾಡಬಹುದು.
ಭಾರತೀಯ ಅಂಗಾಂಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಭಾರತದಲ್ಲಿ, ಪ್ರತಿ ವರ್ಷ ನವೆಂಬರ್ 27 ರಂದು ಅಂಗಾಂಗ ದಾನ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ಭಾರತೀಯ ನಾಗರಿಕರನ್ನು ಸ್ವಯಂಪ್ರೇರಿತರಾಗಿ ಅಂಗಗಳನ್ನು ದಾನ ಮಾಡಲು ಪ್ರೋತ್ಸಾಹಿಸಲಾಗುತ್ತದೆ.
ಅಂಗಾಂಗ ದಾನದ ಮಹತ್ವ:
ಅಂಗಾಂಗ ದಾನವು ಒಬ್ಬ ವ್ಯಕ್ತಿಗೆ ಜೀವ ಉಳಿಸಿಕೊಳ್ಳಲು ನೀಡುವಂತಹ ಉಡುಗೊರೆಯಾಗಿದೆ. ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವವರಿಗೆ ಒಂದು ರೀತಿಯ ಆಶಾಕಿರಣವಾಗಿದೆ. ಈಗ ಯಾವುದೇ ವಯಸ್ಸಿನ ವ್ಯಕ್ತಿಯೂ ಅಂದರೆ ಹುಟ್ಟಿನಿಂದ 65 ವರ್ಷ ವಯಸ್ಸಿನ ಒಳಗಿನ ವ್ಯಕ್ತಿ ತನ್ನ ಅಂಗಗಳನ್ನು ದಾನ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನದ ಸಂಖ್ಯೆಯು ಹೆಚ್ಚುತ್ತಿದೆ. ಇದರಿಂದ ಅದೆಷ್ಟೋ ಜೀವಗಳಿಗೆ ಹೊಸ ಜೀವನ ದೊರೆತಂತಾಗಿದೆ. ಆದ್ದರಿಂದ ಈ ದಿನವು ಅಂಗಾಂಗ ದಾನದ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ. ರಸ್ತೆ ಅಪಘಾತ ಸೇರಿದಂತೆ ನಾನಾ ಕಾರಣಗಳಿಂದ ಮೆದುಳು ನಿಷ್ಕ್ರಿಯಗೊಳ್ಳುವ ರೋಗಿಗಳ ಅಂಗಾಂಗ ದಾನಕ್ಕೆ ಅವಕಾಶವಿದೆ. ರೋಗಿಗಳು ಮೃತ ಪಡುವ ಮುನ್ನ ಅವರ ಅಂಗಾಂಗ ದಾನಕ್ಕೆ ಕುಟುಂಬದವರು ಸಮ್ಮತಿಸಿದರೆ ಸಾಕಷ್ಟು ಜೀವ ಉಳಿಯಲಿದೆ. ಒಬ್ಬ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ 8 ಮಂದಿಯ ಜೀವ ಉಳಿಸಬಹುದಾಗಿದೆ ಎಂದು ವೈದ್ಯರು ಹೇಳುತ್ತಾರೆ.
ಇದನ್ನೂ ಓದಿ: ಅಂಗಾಂಗ ದಾನ ಮಾಡುವ ಮೂಲಕ ಮಾದರಿಯಾದ 3 ಬಡ ಜೀವಗಳು
ಅಂಗಾಂಗ ದಾನ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿ
ನೀವು ಅಂಗಾಂಗ ದಾನ ಮಾಡಲು ಬಯಸಿದಲ್ಲಿ, ನಿಮ್ಮ ಕುಟುಂಬ ವೈದ್ಯರೊಂದಿಗೆ ಮಾತನಾಡಿ. ಅಂಗಾಂಗ ದಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹತ್ತಿರವಿರುವ ವಿವಿಧ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳ ವೆಬ್ಸೈಟ್ಗಳನ್ನು ಸಂಪರ್ಕಿಸಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




