
ಕೃಷಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಣಕಾಸಿನ ಹೊಂದಾಣಿಕೆ ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಮುಖ್ಯವಾದ ಮಾತುಕತೆ ನಡೆಸುವುದಕ್ಕೆ ತೆರಳುವಾಗ ಹಸಿರು ಬಣ್ಣದ ಕರ್ಚೀಫ್ ಅಥವಾ ವಸ್ತ್ರವನ್ನು ಬಳಸಿ.
ತಂದೆ ಅಥವಾ ತಂದೆ ಸಮಾನರಾದವರ ಜತೆಗೆ ವಿವಿಧ ವಿಚಾರಗಳಿಗೆ ಅಭಿಪ್ರಾಯ ಭೇದಗಳು ಉದ್ಭವ ಆಗಲಿದೆ. ಒಂದು ವೇಳೆ ನೀವು ಇದನ್ನು ಕೂತು, ಮಾತನಾಡಿ ಬಗೆಹರಿಸಿಕೊಳ್ಳದೇ ಹೋದಲ್ಲಿ ಮೂರನೇ ವ್ಯಕ್ತಿಯ ಮಧ್ಯಪ್ರವೇಶದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ಹೋಗಬಹುದು. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಯಾವುದೇ ಕೆಲಸವನ್ನು ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ. ಬೇರೆಯವರಿಗೆ ಒಪ್ಪಿಸಿ, ಮುಗಿಸಬೇಕು ಎಂದು ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಹೋದೀತು.
ಕೃಷಿಕರಿದ್ದಲ್ಲಿ ಬೆಳೆ ನಷ್ಟ ಅಥವಾ ಬೇರೆ ಯಾವುದಾದರೂ ರೀತಿಯಿಂದ ಹಣಕಾಸಿನ ವಿಚಾರದಲ್ಲಿ ನಿಮಗೆ ನಷ್ಟ ಆಗುವಂಥ ಯೋಗ ಇದೆ. ಯಾರಿಗಾದರೂ ವಸ್ತುವನ್ನು ಕೊಡುವುದಾಗಿಯೋ ಅಥವಾ ಇಂಥ ಕೆಲಸವನ್ನು ಇಷ್ಟೇ ಸಮಯದಲ್ಲಿ ಮಾಡಿಕೊಡುತ್ತೇನೆ ಎಂದು ಮಾತು ನೀಡುವ ಮುನ್ನ ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಸಾಧ್ಯಾಸಾಧ್ಯತೆಗಳನ್ನು ಅಳೆದು- ತೂಗಿ ನೋಡುವುದು ಮುಖ್ಯ.
ನಡೆಯುವಷ್ಟು ದಿನ ನಾಣ್ಯ ಎಂಬಂತೆ ಕೆಲವು ಕೆಲಸಗಳನ್ನು ಡೆಡ್ ಲೈನ್ ಇಟ್ಟುಕೊಂಡು ಮಾಡುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಒಂದು ಹಂತದ ನಂತರ ಆ ಕೆಲಸವನ್ನು ಮಾಡಬಾರದು ಎಂಬ ಗಟ್ಟಿ ನಿರ್ಧಾರವನ್ನು ಕೈಗೊಳ್ಳಲಿದ್ದೀರಿ. ನಿಮ್ಮ ಈ ದಿನದ ನಡವಳಿಕೆ ಹಾಗೂ ಮಾತುಕತೆ ಆಪ್ತರಾದವರಿಗೆ ಆಶ್ಚರ್ಯ ಹಾಗೂ ಗಾಬರಿ ಉಂಟುಮಾಡುತ್ತದೆ.
ಲೇಖನ- ಸ್ವಾತಿ ಎನ್.ಕೆ.