Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 19ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 19ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮಗೆ ಶುಭವಾಗಲಿದೆಯೇ ಅಥವಾ ಸವಾಲುಗಳಿವೆಯೇ ಎಂದು ತಿಳಿದುಕೊಳ್ಳಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಖರ್ಚಿಗೆ ಹಣ ಹೊಂದಿಸುವುದು ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಾ ಇದ್ದಲ್ಲಿ ಅದು ಈ ದಿನ ದೂರವಾಗಲಿದೆ. ಹೊಸ ಆದಾಯ ಮೂಲಗಳು ತೆರೆದುಕೊಳ್ಳಲಿವೆ. ಹಣಕಾಸಿನ ಹರಿವು ಸರಾಗ ಆಗಲಿದೆ. ಬಹಳ ಆಪ್ತರಾದವರು ನಿಮ್ಮಲ್ಲಿ ಕೆಲವರಿಗೆ ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ. ಯಾರು ದ್ವಿಚಕ್ರ ವಾಹನವನ್ನೋ ಅಥವಾ ಕಾರು ಇತ್ಯಾದಿಗಳನ್ನೋ ಖರೀದಿ ಮಾಡಬೇಕು ಎಂದುಕೊಳ್ಳುತ್ತಾ ಇರುತ್ತೀರಿ ಅದಕ್ಕೆ ಬೇಕಾದ ಹಣಕಾಸಿನ ಹೊಂದಾಣಿಕೆ ಆಗಿ, ಅಡ್ವಾನ್ಸ್ ನೀಡಿ- ಬುಕ್ ಮಾಡುವ ಸಾಧ್ಯತೆ ಇದೆ. ಅಥವಾ ಲೋನ್ ಗಾಗಿ ಪ್ರಯತ್ನ ಮಾಡಬೇಕು ಎಂದಿರುವವರು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಮಾತುಕತೆಯನ್ನಾದರೂ ಮಾಡುತ್ತೀರಿ. ಹೂಡಿಕೆ ಬಗ್ಗೆ ನಿಮಗೆ ಯಾರಾದರೂ ಸಲಹೆ ಕೇಳಿಕೊಂಡು ಬಂದಲ್ಲಿ ಸಾಧ್ಯವಾದಷ್ಟೂ ಏನೂ ಸಲಹೆ ನೀಡದಿರುವುದು ಉತ್ತಮ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಮನೆಗೆ ಹೊಸದಾದ ಇಂಟರ್ ನೆಟ್ ಸಂಪರ್ಕ ಅಥವಾ ವೈ-ಫೈಗೆ ಸಂಬಂಧಿಸಿದ ಸಲಕರಣೆ ಇಂಥವುಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಈ ದಿನ ಇದೆ. ಮ್ಯಾನೇಜರ್ ಅಥವಾ ಅದಕ್ಕಿಂತ ಮೇಲಿನ ಹುದ್ದೆಯಲ್ಲಿ ಇರುವವರಿಗೆ ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರಕ್ಕೆ ಕಾರಣ ಏನು ಹಾಗೂ ಅದರ ಫಲಿತಾಂಶ ಏನು ಎಂಬ ಬಗ್ಗೆ ವಿಪರೀತ ಸಮಜಾಯಿಷಿ- ಕಾರಣಗಳನ್ನು ನೀಡುವಂತೆ ಆಗಲಿದೆ. ಸೋದರ- ಸೋದರಿಯರ ಜತೆಗೆ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳು ಅಥವಾ ಅಭಿಪ್ರಾಯ ಭೇದ ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ಸೂಕ್ತ ವೇದಿಕೆ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಪಿಎಫ್ ಸೇರಿದಂತೆ ಮತ್ಯಾವುದಾದರೂ ಉಳಿತಾಯದ ಹಣವನ್ನು ವಿಥ್ ಡ್ರಾ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮಗೆ ಬರಬೇಕಾದ ಹಣದ ಬಾಕಿ ವಸೂಲಿಗೆ ಸೂಕ್ತವಾದ ದಿನ ಇದಾಗಲಿದ್ದು, ಈ ದಿನ ಒಂದು ಕಾಲ್ ಮಾಡಿಯಾದರೂ ವಿಚಾರಿಸಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3);
ಅತಿ ಬುದ್ಧಿವಂತಿಕೆ ನಿರ್ಧಾರಗಳನ್ನು ಈ ದಿನ ತೆಗೆದುಕೊಳ್ಳಲು ಹೋಗಬೇಡಿ. ಅದರಲ್ಲೂ ನೀವೇನಾದರೂ ದೂರ ಪ್ರಯಾಣ ಮಾಡಬೇಕಿದೆ, ಅದಕ್ಕೆ ಸಂಬಂಧಿಸಿದ ಹೋಟೆಲ್ ಬುಕ್ಕಿಂಗ್, ವಿಮಾನದ ಸೀಟ್ ಬುಕ್ಕಿಂಗ್ ಮಾಡಿಸಬೇಕಿದೆ ಎಂದಾದಲ್ಲಿ ಬೇರೆಯವರಿಗೆ ಆ ಜವಾಬ್ದಾರಿಯನ್ನು ನೀಡುವುದು ಉತ್ತಮ ನಿರ್ಧಾರ ಎನಿಸಿಕೊಳ್ಳಲಿದೆ. ಸೆಕೆಂಡ್ ಹ್ಯಾಂಡ್ ಕಾರು- ಸ್ಕೂಟರ್- ಬೈಕ್ ಗಳ ಖರೀದಿ, ಮಾರಾಟ ಮಾಡುವಂಥ ವ್ಯವಹಾರ ನಡೆಸುತ್ತಿರುವವರಿಗೆ ಆದಾಯದಲ್ಲಿ ಏರಿಕೆ ಆಗುವಂಥ ಸಾಧ್ಯತೆ ಇದೆ. ರೀ ಸೇಲ್ ದೃಷ್ಟಿಯಿಂದ ಸೈಟು ಒಂದಕ್ಕೆ ಅಡ್ವಾನ್ಸ್ ನೀಡುವ ಬಗ್ಗೆ ಸ್ನೇಹಿತರ ಜೊತೆಗೂಡಿ ನಿಮ್ಮಲ್ಲಿ ಕೆಲವರು ಮಾತುಕತೆ ನಡೆಸಲಿದ್ದೀರಿ. ನಿಮ್ಮ ಸಲಹೆಗೆ ಇತರರು ಸಹ ಒಪ್ಪಿಗೆ ಸೂಚಿಸಲಿದ್ದಾರೆ. ನಿಮ್ಮ ಮನೆ ಹತ್ತಿರ ಇರುವಂಥ ಗಣಪತಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದುಕೊಳ್ಳಿ ಅಥವಾ ಗಣಪತಿ ಅಥರ್ವಶೀರ್ಷವನ್ನು ಕೇಳಿಸಿಕೊಳ್ಳಿ. ಇದರಿಂದ ನಿಮಗೆ ಕಾಡುವ ಅಡೆತಡೆಗಳು ದೂರವಾಗಲಿವೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ನೀವು ಯಾವುದನ್ನು ಕನಿಷ್ಠ ಪ್ರಮಾಣದ ಶಿಸ್ತು ಎಂದು ಭಾವಿಸಿರುತ್ತೀರೋ ಇತರರಿಗೆ ಅದು ಕಿರಿಕಿರಿಯಾಗಿ ಪರಿಣಮಿಸಲಿದೆ. ಅದರಲ್ಲೂ ನೀವು ಸ್ವಂತ ವ್ಯವಹಾರ- ವ್ಯಾಪಾರ ಮಾಡುವಂಥವರು ಆಗಿದ್ದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕು. ನಿಮಗೆ ಹಿರಿಯರಿಂದ ಬಂದಂಥ ಒಡವೆ, ಆಸ್ತಿ ಇಂಥವುಗಳನ್ನು ಮಾರಾಟ ಮಾಡುವ ಆಲೋಚನೆ ಮಾಡಲಿದ್ದೀರಿ. ಹೀಗೆ ಮಾಡುವ ಮುಂಚೆ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ, ಮುಂದಕ್ಕೆ ಹೆಜ್ಜೆಯನ್ನು ಇಡಿ. ಕ್ರೀಡಾಪಟುಗಳಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ. ಹೆಚ್ಚಿನ ತರಬೇತಿಗಾಗಿ ವಿದೇಶಗಳಿಗೆ ಅಥವಾ ನೀವು ಇರುವ ಸ್ಥಳದಲ್ಲಿಯೇ ಅತ್ಯುತ್ತಮ ತರಬೇತಿ ಸಂಸ್ಥೆಗಳಿಗೆ ತೆರಳುವ ಅವಕಾಶ ಸೃಷ್ಟಿ ಆಗಲಿದೆ. ನಿಮ್ಮಲ್ಲಿ ಯಾರಿಗೆ ಸೋದರ- ಸೋದರಿಯರು ಇದ್ದಾರೋ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಮಾಡುವುದು ಒಳ್ಳೆಯದು. ಈ ದಿನ ಅವರಿಗೆ ನಿಮ್ಮ ನೆರವಿನ ಅಗತ್ಯ ಕಂಡುಬರಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ನಿಮ್ಮಲ್ಲಿ ಕೆಲವರಿಗೆ ಹಳೇ ಗೆಳೆಯ ಅಥವಾ ಗೆಳತಿಯ ನೆನಪು ವಿಪರೀತ ಕಾಡುವಂಥ ದಿನ ಇದಾಗಿರಲಿದೆ. ಅಥವಾ ಅಚಾನಕ್ ಆಗಿ ಭೇಟಿ ಆಗುವುದೋ ಅಥವಾ ಕಾಲ್ ಮಾಡುವುದೋ ಇಂಥದ್ದು ಕೂಡ ಆಗಬಹುದು. ಹೀಗೆ ಆಗುವುದರಿಂದ ನಿಮ್ಮ ಏಕಾಗ್ರತೆ ಕಳೆದುಕೊಳ್ಳುವಂತೆ ಆಗಲಿದೆ. ಹೊಸ ವಾಹನ ಖರೀದಿ ಮಾಡಿದ್ದೀರಿ ಅಂತಾದಲ್ಲಿ ಚಾಲನೆ ವೇಳೆ ಮುಂಜಾಗ್ರತೆ ವಹಿಸಿ. ಏಕೆಂದರೆ ಸಣ್ಣ ಪುಟ್ಟದಾದರೂ ಡೆಂಟ್ ಅಥವಾ ಪೇಂಟ್ ಹೋಗುವಂತಾಗುವುದು ಈ ರೀತಿಯಾದದ್ದು ಆಗಬಹುದು. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ದಿನಾಂಕವನ್ನು ಒಮ್ಮೆ ಪರಿಶೀಲನೆ ಮಾಡಿಟ್ಟುಕೊಳ್ಳಿ. ಏಕೆಂದರೆ ಇದು ಕೂಡ ಮರೆತು, ಆ ನಂತರ ದಂಡದ ರೂಪದಲ್ಲಿ ಹೆಚ್ಚುವರಿಯಾಗಿ ಹಣ ಕಟ್ಟುವ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಇದರಿಂದ ಸಮಸ್ಯೆಯಾಗುವ ಸಾಧ್ಯತೆ ಇದೆ. ಮುಖ್ಯವಾದ ವ್ಯಕ್ತಿಗಳ ಭೇಟಿಗೆ ತೆರಳುತ್ತೀರಿ ಅಂತಾದಲ್ಲಿ ಮುಂಚಿತವಾಗಿ ಅಲ್ಲಿರುವಂತೆ ಹೊರಡಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ದಂಪತಿ ಮಧ್ಯೆ ಮಕ್ಕಳ ವಿಚಾರಕ್ಕೆ ಬೇಸರ- ಕಲಹಗಳು ಆಗುವ ಸಾಧ್ಯತೆ ಇರುತ್ತದೆ. ನಾನು ಹೇಳಿದ್ದೇ ಆಗಬೇಕು ಎಂಬ ಹಠ ಯಾವ ಕಾರಣಕ್ಕೂ ಬೇಡ. ಅಲಂಕಾರಿಕ ವಸ್ತುಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುವಂಥ ಯೋಗ ಇದೆ. ನಿಮ್ಮ ಆಲೋಚನೆಗೆ ಹೊಂದಾಣಿಕೆ ಆಗುವ ವ್ಯಕ್ತಿಗಳಿಗೆ ಮಾತ್ರ ಸಲಹೆ- ಸೂಚನೆ, ಮಾರ್ಗದರ್ಶನ ಮಾಡಿ. ಈ ದಿನ ಸಾಧ್ಯವಾದಲ್ಲಿ ದುರ್ಗಾದೇವಿಯ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಿರಿ. ಇದು ಸಾಧ್ಯವಿಲ್ಲ ಅಂತಾದಲ್ಲಿ ಮೊಬೈಲ್ ಫೋನ್ ನಲ್ಲಿ ದೇವಿಯ ಚಿತ್ರವನ್ನು ಸ್ಕ್ರೀನ್ ಸೇವರ್ ಆಗಿ ಹಾಕಿಕೊಳ್ಳಿ. ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರಿಗೆ ಈ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಬೇಕು ಎಂದೆನಿಸಲಿದೆ. ಹೊಸದಾಗಿ ಪರಿಚಯ ಆಗುವಂಥ ವ್ಯಕ್ತಿಗಳಿಂದ ಕೆಲವು ಅನುಕೂಲಗಳು ಒದಗಿ ಬರಲಿವೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ನಿಮ್ಮ ಮಾತಿನ ಮೂಲಕ ಪ್ರಭಾವ ಬೀರಿ, ಯಾವ ಕೆಲಸ- ಹೇಗೆ ಆಗಬೇಕೋ ಆ ರೀತಿಯಾಗಿ ಮಾಡಿಸಿಕೊಳ್ಳಲು ಯಶಸ್ವಿ ಆಗಲಿದ್ದೀರಿ. ವಿದೇಶಕ್ಕೆ ತೆರಳಬೇಕು ಎಂದು ಪ್ರಯತ್ನ ಮಾಡುತ್ತಿದ್ದು, ಅದರಲ್ಲಿ ನಾನಾ ಬಗೆಯ ಅಡೆತಡೆಗಳನ್ನು ಎದುರಿಸುತ್ತಾ ಇದ್ದಲ್ಲಿ ಅದನ್ನು ನಿವಾರಿಸಿಕೊಳ್ಳಲು ಬೇಕಾದ ಮಾರ್ಗೋಪಾಯಗಳು ಹೊಳೆಯಲಿವೆ. ಅಥವಾ ನಿಮ್ಮ ಸ್ನೇಹಿತರೋ- ಸಂಬಂಧಿಗಳೋ ಈ ಬಗ್ಗೆ ಕೆಲವು ಟಿಪ್ಸ್ ಗಳನ್ನು ನೀಡಲಿದ್ದಾರೆ. ಊಟ- ತಿಂಡಿ ವಿಚಾರಕ್ಕೆ ಜೋರು ಧ್ವನಿಯ ಮಾತುಕತೆ ಆಗುವಂಥ ಯೋಗ ಇದೆ. ನಿಮ್ಮ ಎದುರಿನಲ್ಲಿ ಇರುವವರು ಏನು ಹೇಳುತ್ತಾರೋ ಅದನ್ನು ಸಹ ಕೇಳಿಸಿಕೊಳ್ಳಿ. ನೀವು ಈ ಹಿಂದೆ ಬೇಡ ಅಂದುಕೊಂಡಿದ್ದ ಪ್ರಾಜೆಕ್ಟ್ ವೊಂದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮತ್ತೆ ಹುಡುಕಿಕೊಂಡು ಬರಬಹುದು. ಈ ಬಾರಿ ಹಿಂದೆ ಯಾವ ವಿಚಾರಕ್ಕೆ ಅಭಿಪ್ರಾಯ ಭೇದ ಮೂಡಿತ್ತೋ ಅದನ್ನು ಬಗೆಹರಿಸಿಕೊಂಡು ಮುಂದುವರಿಸಿಕೊಂಡು ಹೋಗುವ ಅವಕಾಶ ಇರುತ್ತದೆ, ಗಮನದಲ್ಲಿ ಇರಲಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಬಹಳ ಸಮಯದಿಂದ ಒಂದೇ ವಿಷಯಕ್ಕೆ ಜಗ್ಗಾಡುತ್ತಲೇ ಇದ್ದಲ್ಲಿ ಅದರ ತೀರ್ಮಾನ ಮಾಡಿಕೊಂಡು ಬಿಡಬೇಕು ಎಂದು ನಿರ್ಧಾರ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಪ್ರಕೃತಿ ಚಿಕಿತ್ಸೆ ಪಡೆಯಲು ಮುಂದಾಗಲಿದ್ದೀರಿ. ವಿವಾಹಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಸ್ನೇಹಿತರು- ಸಂಬಂಧಿಗಳ ಮೂಲಕ ಒಳ್ಳೆ ರೆಫರೆನ್ಸ್ ದೊರೆಯಲಿದೆ. ಈ ಹಿಂದೆ ಒಮ್ಮೆ ವಿಚಾರಿಸಿಕೊಂಡು ಬಂದಂಥ ಸಂಬಂಧವೇ ಇದಾಗಿರುವ ಸಾಧ್ಯತೆ ಹೆಚ್ಚಿದೆ. ಆ ಕಾರಣಕ್ಕೆ ಇನ್ನೊಮ್ಮೆ ಯಾಕೆ ನೋಡಬೇಕು ಎಂಬ ಆಲೋಚನೆ ಬೇಡ. ನಿಮ್ಮಲ್ಲಿ ಯಾರು ವಾಸ್ತು, ಜ್ಯೋತಿಷ್ಯ ಇಂಥ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಾ ಇದ್ದೀರಿ ಅಂಥವರಿಗೆ ಕಿರಿಕಿರಿ ಆಗುವಂತಹ ಕೆಲವು ಬೆಳವಣಿಗೆಗಳು ಆಗಬಹುದು. ಅದರಲ್ಲೂ ಇಷ್ಟು ಸಮಯ ನಿಮ್ಮ ಜೊತೆಗೆ ಕೆಲಸ ಮಾಡುತ್ತಿದ್ದವರು ತಾವೇ ಸ್ವಂತ ಕಚೇರಿ ಆರಂಭಿಸಬಹುದು, ಅಥವಾ ನಿಮ್ಮ ಪ್ರತಿಸ್ಪರ್ಧಿ ಆಗಿರುವವರು ಬಳಿ ಉದ್ಯೋಗಿಯಾಗಿ ಹೋಗಬಹುದು.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ನಿಮ್ಮ ಸ್ವಂತ ಸಮಸ್ಯೆಯನ್ನು ಎಲ್ಲರ ತೊಂದರೆ ಎಂಬಂತೆ ಮಾತನಾಡುವುದಕ್ಕೆ ಹೋಗಬೇಡಿ. ನಿಮ್ಮ ಬಳಿ ಏನಿದೆ ಅದಕ್ಕೆ ತಕ್ಕಂತೆ ಆಲೋಚನೆ ಮಾಡಿ. ಅಂದರೆ ಹಣ, ಸಮಯ, ಯೋಜನೆ ಹೀಗೆ ಯಾವ ಸಂಪನ್ಮೂಲ ಇದೆಯೋ ಅದಕ್ಕೆ ತಕ್ಕಂತೆ ಆಲೋಚನೆಯನ್ನು ಮಾಡಿಕೊಳ್ಳಿ. ಆರ್ಥಿಕವಾಗಿ ನಾನಾ ಕಡೆಯಿಂದ ಒತ್ತಡದ ಸನ್ನಿವೇಶ ಎದುರಾಗಲಿದೆ. ಕೆಲವು ವ್ಯಾಪಾರ- ವ್ಯವಹಾರದ ಅವಕಾಶ ತೆರೆದುಕೊಳ್ಳಲಿವೆ. ಅದರ ಕಾರಣಕ್ಕೆ ಓಡಾಟ ನಡೆಸಲಿದ್ದೀರಿ. ಯಾವ ವಿಚಾರಕ್ಕೆ ರಾಜೀ- ಸಂಧಾನ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಹೇಳಿದ್ದಿರೋ ಅದಕ್ಕೆ ಸಂಬಂಧಿಸಿದಂತೆ ನಿಮ್ಮ ನಿಲವು ಬದಲಾವಣೆ ಮಾಡಿಕೊಳ್ಳಲೇ ಬೇಕಾಗುತ್ತದೆ. ನೀವು ರಹಸ್ಯ ಎಂದು ಸ್ನೇಹಿತರ ಬಳಿ ಹೇಳಿಕೊಂಡಿದ್ದ ಕೆಲವು ಸಂಗತಿಗಳನ್ನು ಎಲ್ಲ ಕಡೆ ತಿಳಿಯುವಂತೆ ಮಾಡಿದ್ದಾರೆ ಎಂಬುದು ತಿಳಿದು ಬರಲಿದ್ದು, ಡ್ಯಾಮೇಜ್ ಕಂಟ್ರೋಲ್ ಗೆ ಏನು ಮಾಡಬೇಕು ಎಂಬ ಬಗ್ಗೆ ಯೋಜನೆ ರೂಪಿಸಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ




