
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 30ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನೀವು ಇಷ್ಟವಿರುತ್ತದೋ ಇಲ್ಲವೋ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಈ ಹಿಂದೆ ಅಭಿಪ್ರಾಯ ಭೇದಗಳು, ಜಗಳ- ಕಲಹ ಏನೇ ಆಗಿದ್ದರೂ ಅಂಥವರ ಜತೆಗೂಡಿಯೇ ಕೆಲಸ ಮಾಡುವಂಥ ಅನಿವಾರ್ಯ ಸೃಷ್ಟಿ ಆಗುತ್ತದೆ. ದೈಹಿಕ ದೃಢತೆ ಕಾಪಾಡಿಕೊಳ್ಳುವ ಸಲುವಾಗಿ ಜಿಮ್, ಯೋಗ ಅಥವಾ ಇಂಥ ಯಾವುದಾದರೂ ಒಂದರಲ್ಲಿ ತೊಡಗಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಗುರುವಿನ ಸ್ಮರಣೆ, ಆರಾಧನೆಯಿಂದ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಕೃಷಿಕರಿಗೆ ಡೇರಿ ವ್ಯವಹಾರ ಕೈ ಹಿಡಿಯಲಿದೆ. ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಉದ್ದೇಶದಿಂದಲೇ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದೀರಿ. ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಪ್ರತಿಷ್ಠಿತ ಕಂಪನಿಯೊಂದರ ಜತೆಗೆ ವ್ಯವಹಾರದ ಮಾತುಕತೆಗಳು ನಡೆಯುವ ಸಾಧ್ಯತೆ ಇದೆ.
ಇತರರಿಗೆ ಸಹಾಯ ಮಾಡುವುದು ತಪ್ಪಲ್ಲ. ಆದರೆ ಅವರು ಸಂಪೂರ್ಣವಾಗಿ ನಿಮ್ಮ ಮೇಲೆ ಆನಿಕೊಂಡು ಬಿಟ್ಟರೆ ಬಹಳ ಕಷ್ಟ ಆಗುತ್ತದೆ. ಈ ವಾರ ಆಗುವುದು ಹಾಗೆ. ಬೇರೆ ಯಾರದೋ ಖರ್ಚು ನಿಮ್ಮ ತಲೆ ಮೇಲೆ ಬೀಳಲಿದೆ. ಇದಕ್ಕೆ ತಕ್ಕ ಹಾಗೆ ಊರವರ ಮದುವೆಗೆಲ್ಲ ನಂದೇ ಪೌರೋಹಿತ್ಯ ಎಂದು ಎಲ್ಲ ವಿಚಾರಗಳಿಗೆ ಮೂಗು ತೂರಿಸದಿರಿ. ಲೋಕಜ್ಞಾನದಿಂದ ಮುಂದುವರಿದಲ್ಲಿ – ಸ್ವಲ್ಪ ಮಟ್ಟಿಗೆ ಎಚ್ಚರಿಕೆ ವಹಿಸಿದರೆ ಉತ್ತಮ. ಇನ್ನು ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ವೃತ್ತಿಯಲ್ಲಿ ಇರುವವರಿಗೆ ರಾಜಕೀಯ ವೈಷಮ್ಯದಿಂದಾಗಿ ಸಿಗಬೇಕಾದ ಸವಲತ್ತುಗಳು ದೊರೆಯದಿರುವ ಸಾಧ್ಯತೆ ಇದೆ. ಶಿವನ ಆರಾಧನೆ ಮಾಡುವ ಮೂಲಕವಾಗಿ ಈ ಸಮಸ್ಯೆ ನಿವಾರಿಸಿಕೊಳ್ಳಬಹುದು.
ವಿಮಾ ಏಜೆಂಟರು, ಸೆಕೆಂಡ್ ಹ್ಯಾಂಡ್ ವಾಹನಗಳ ಡೀಲರ್ ಗಳು, ಮನೆ- ಸೈಟುಗಳ ದಲ್ಲಾಳಿಗಳಿಗೆ ಆದಾಯ ಹೆಚ್ಚಾಗಲಿದೆ. ಈ ಹಿಂದೆ ನೀವು ಮಾಡಿದ ಸಹಾಯ, ನೀಡಿದ ಸಲಹೆ- ಸೂಚನೆಗಳಿಂದ ಲಾಭವಾದಂಥವರು ಈಗ ಮತ್ತೆ ನಿಮ್ಮನ್ನು ಹುಡುಕಿಕೊಂಡು ಬಂದು, ಕೆಲವು ಕೆಲಸಗಳನ್ನು ನೀಡಲಿದ್ದೀರಿ. ಪರ್ಫಾರ್ಮೆನ್ಸ್ ಅಪ್ರೈಸಲ್ ನಿರೀಕ್ಷೆಯಲ್ಲಿ ಇರುವವರಿಗೆ ನೀವು ಅಂದುಕೊಂಡಂತೆಯೇ ಬೆಳವಣಿಗೆಗಳು ಆಗಲಿವೆ. ಎಲೆಕ್ಟ್ರಿಕಲ್ ವಾಹನ ಖರೀದಿ ಮಾಡಬೇಕು ಎಂಬ ಕಾರಣಕ್ಕೆ ಹಣಕಾಸಿಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಅದು ಒದಗಿ ಬರುವ ಸಾಧ್ಯತೆ ಇದೆ. ನೀವು ತೆಗೆದುಕೊಂಡ ಕೆಲವು ನಿರ್ಧಾರಗಳು ತಕ್ಷಣವೇ ಫಲ ನೀಡುವುದಕ್ಕೆ ಆರಂಭಿಸಲಿವೆ. ಸೋದರಮಾವ, ತಾಯಿಯ ತಂದೆ ಇವರ ಆರೋಗ್ಯದ ಬಗ್ಗೆ ಮಾತ್ರ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ.
ನಿಮ್ಮ ಸ್ವಂತ ವಿಚಾರಗಳನ್ನು ಯಾರ ಜತೆಗೆ ಹಂಚಿಕೊಳ್ಳುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಆಪ್ತರು ಎನಿಸಿಕೊಂಡವರ ಬಳಿ ನಿಮ್ಮ ಖಾಸಗಿ ಅಥವಾ ಸ್ವಂತ ವಿಚಾರಗಳು ಎಷ್ಟರ ಮಟ್ಟಿಗೆ ರಹಸ್ಯವಾಗಿ ಉಳಿದೀತು ಎಂಬುದರ ಬಗ್ಗೆಯೂ ನಿಗಾ ಇರಲಿ. ಕೆಲವು ಅನಾರೋಗ್ಯ ಸಮಸ್ಯೆಗಾಗಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಸಾಕು ಪ್ರಾಣಿಗಳ ಜತೆಗೆ ಇರುವಾಗ ಮಾಮೂಲಿಗಿಂತ ಸ್ವಲ್ಪ ಜಾಸ್ತಿಯೇ ಎಚ್ಚರಿಕೆಯಿಂದ ಇರುವುದು ಉತ್ತಮ. ಇಲ್ಲದಿದ್ದಲ್ಲಿ ಅವುಗಳಿಂದ ಗಾಯ ಆಗಬಹುದು ಅಥವಾ ಕಡಿತವಾಗಬಹುದು. ಮನೆಯಲ್ಲಿ ಆಸ್ತಿ ಹಂಚಿಕೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಲಿದೆ. ಮಕ್ಕಳ ಶಿಕ್ಷಣದ ಸಲುವಾಗಿ ರಾಸುಗಳನ್ನೋ ಅಥವಾ ಸೈಟು- ಸ್ವಲ್ಪ ಜಮೀನನ್ನು ಮಾರಾಟ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವವರಿಗೆ ಹೊಸದಾಗಿ ಹುದ್ದೆ ಅಥವಾ ಜವಾಬ್ದಾರಿ ನಿಮ್ಮ ಪಾಲಿಗೆ ಬರಲಿವೆ.
ಉದ್ಯೋಗ ಸ್ಥಳದಲ್ಲಿ ಭಾರೀ ಬದಲಾವಣೆಗಳನ್ನು ಕಾಣಬೇಕಾಗುತ್ತದೆ. ಮಹತ್ತರವಾದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ನೀವು ಸಿದ್ಧವಾಗಬೇಕಾಗುತ್ತದೆ. ವಾಹನಗಳ ದುರಸ್ತಿ, ಸರ್ವೀಸ್ ಗಾಗಿ ಹಣ ಖರ್ಚು ಮಾಡಲಿದ್ದೀರಿ. ನೇರವಂತಿಕೆಯಿಂದ ಮಾಡಿದಲ್ಲಿ ವ್ಯವಹಾರಗಳು ಕೈ ಹಿಡಿಯಲಿವೆ. ದೂರದ ಊರಿನಲ್ಲಿ ಇರುವ ಸಂಬಂಧಿಕರು ತುರ್ತಾಗಿ ಹಣದ ಅಗತ್ಯವಿದೆ ಎಂದು ಕೇಳಿಕೊಂಡು ಬರಬಹುದು. ಸಣ್ಣ ಮಟ್ಟದ ವ್ಯಾಜ್ಯವೋ ಅಥವಾ ಮನಸ್ತಾಪವೋ ಇದು ಇಲ್ಲಿಗೇ ನಿಲ್ಲುವುದಿಲ್ಲ ಎಂದು ಬಲವಾಗಿ ಅನಿಸುತ್ತದೆ. ಆದರೆ ನೀವಾಗಿಯೇ ಇದನ್ನು ಮುಂದುವರಿಸಿಕೊಂಡು ಹೋಗದಿರುವುದು ಕ್ಷೇಮ. ನಿಮಗಿಂತ ಸಣ್ಣ ವಯಸ್ಸಿನವರ ಜತೆಗೆ ವ್ಯವಹರಿಸುವಾಗ ಬಳಸುವ ಪದಗಳ ಬಗ್ಗೆ ನಿಗಾ ಇರಲಿ. ಇಲ್ಲದಿದ್ದರೆ ಅವಮಾನದ ಪಾಲಾಗುತ್ತೀರಿ.
ಅನಗತ್ಯವಾಗಿ ಸಮಯ ಕಳೆದುಹೋಗುತ್ತಿದೆ, ಅಂದುಕೊಂಡಿದ್ದನ್ನು ಮಾಡಲು ಆಗುತ್ತಿಲ್ಲ ಎಂದು ನಿಮಗೆ ಅನಿಸುವುದಕ್ಕೆ ಶುರುವಾಗುತ್ತದೆ. ವಾರದ ಶುರುವಿನಲ್ಲಿ ಕೆಲವು ಕೆಲಸಗಳನ್ನು ಮುಗಿಸುವುದಕ್ಕೆ ಶತಾಯಗತಾಯ ಪ್ರಯತ್ನ ಪಡಲಿದ್ದೀರಿ. ಇನ್ನು ಮದುವೆಗಾಗಿ ಪ್ರಯತ್ನಿಸುತ್ತಿರುವವರಿಗೆ ಸಂಬಂಧಿಗಳ ಮೂಲಕವಾಗಿ ಕೆಲವು ಸಲಹೆ, ರೆಫರೆನ್ಸ್ ಗಳನ್ನು ನೀಡುವ ಸಾಧ್ಯತೆ ಇದೆ. ಕುಟುಂಬದಲ್ಲಿ ಹಣಕಾಸಿನ ತುರ್ತು, ಭವಿಷ್ಯದ ಅಗತ್ಯಗಳ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯಲಿದೆ. ಉದ್ಯೋಗದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿದ್ದಲ್ಲಿ ಜಾಬ್ ಕನ್ಸಲ್ಟೆನ್ಸಿ ಮೂಲಕವಾಗಿ ಸಹಾಯ ಆಗಲಿದೆ.
ತುಂಬ ನಿರೀಕ್ಷೆ ಇಟ್ಟುಕೊಂಡಿದ್ದಂಥ ಪ್ರಾಜೆಕ್ಟ್ ಕೈ ತಪ್ಪಿ ಹೋಗುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಹೇಗಾದರೂ ಅದನ್ನು ಪಡೆದುಕೊಳ್ಳಲೇಬೇಕು ಎಂಬ ಪ್ರಯತ್ನದಲ್ಲಿ ಸಣ್ಣ- ಪುಟ್ಟ ಸುಳ್ಳನಾದರೂ ಹೇಳಿಬಿಡೋಣ ಎಂದುಕೊಳ್ಳದಿರಿ. ಈ ರೀತಿಯಾಗಿ ಸ್ನೇಹಿತರು- ಸಂಬಂಧಿಕರು ಸಲಹೆ ನೀಡಿದರೂ ಹಾಗೆ ಮಾಡದಿರಿ. ಇನ್ನು ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರಿಗೆ ಸಂಬಂಧಿಕರಿಂದ ಅವಮಾನ ಆಗಬಹುದು. ಆದ್ದರಿಂದ ಸಮಾರಂಭಗಳಿಗೋ ಕಾರ್ಯಕ್ರಮಗಳಿಗೋ ಭಾಗವಹಿಸುತ್ತಿದ್ದೀರಿ ಎಂದಾದಲ್ಲಿ ಆ ಸ್ಥಳದಲ್ಲಿ ನೀವಾಡುವ ಮಾತಿನ ಮೇಲೆ ನಿಗಾ ಇರಿಸಿಕೊಳ್ಳಿ. ನಿಮ್ಮಿಂದ ತಪ್ಪು ಮಾತುಗಳನ್ನು ಆಡಿಸುವುದಕ್ಕೆ ಅಥವಾ ಬೇಕೆಂತಲೇ ಕೆರಳಿಸುವುದಕ್ಕೆ ಕೆಲವರು ಪ್ರಯತ್ನಿಸುತ್ತಾರೆ.
ಕುಟುಂಬ ಸದಸ್ಯರ ಜತೆಗೆ ಪ್ರವಾಸ ತೆರಳುವಂಥ ಯೋಗ ಇದೆ. ದಂಪತಿ ಮಧ್ಯೆ ಸಣ್ಣ- ಪುಟ್ಟ ಮನಸ್ತಾಪಗಳು ಇದ್ದಲ್ಲಿ ಬಗೆಹರಿಸಿಕೊಳ್ಳುವುದಕ್ಕೆ ಉತ್ತಮ ವೇದಿಕೆ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಮನೆಯನ್ನು ಬದಲಿಸಿ, ಬೇರೆಡೆ ತೆರಳುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಈ ಓಡಾಟದಲ್ಲಿ ಹೆಚ್ಚಿನ ಸಮಯ ಹೋಗಲಿದೆ. ಇನ್ನು ಮನೆಗೆ ದೊಡ್ಡ ಅಳತೆಯ ಟೀವಿ, ಹೋಮ್ ಥಿಯೇಟರ್ ಇಂಥದ್ದನ್ನು ಕೊಳ್ಳುವುದಕ್ಕೆ ಹಣ ಖರ್ಚು ಮಾಡಲಿದ್ದೀರಿ. ಒಟ್ಟಾರೆಯಾಗಿ ನೋಡಿದಾಗ ಕುಟುಂಬ- ಮನೆಯ ಸಲುವಾಗಿಯೇ ಹೆಚ್ಚು ಖರ್ಚು ಮಾಡುವಂಥ ಯೋಗ ಕಂಡುಬರುತ್ತಿದೆ. ಮಕ್ಕಳ ಶಿಕ್ಷಣದ ಸಲುವಾಗಿ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಸಹ ಆರಂಭಿಸುವುದಕ್ಕೆ ಮುಂದಾಗಲಿದ್ದೀರಿ. ಸಾಕುಪ್ರಾಣಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಿ.
ಚೀಟಿ ವ್ಯವಹಾರ ನಡೆಸುತ್ತಿರುವವರಿಗೆ ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ಅಥವಾ ನಿಮ್ಮದೇ ಅತಿಯಾದ ಆತ್ಮವಿಶ್ವಾಸದ ಕಾರಣಕ್ಕೆ ಕೆಲವು ಎಡವಟ್ಟುಗಳನ್ನು ಮಾಡಿಕೊಳ್ಳಲಿದ್ದೀರಿ. ಯಾವುದೇ ನಿರ್ಧಾರವನ್ನು ಆತುರವಾಗಿ ಮಾಡದಿರಿ. ಅತಿಯಾದ ಲಾಭ ಅಥವಾ ಆದಾಯದ ಆಸೆಗೆ ಬಿದ್ದು, ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುವಂತಾಗಲಿದೆ. ಯಾರು ಉದ್ಯೋಗದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದೀರಿ, ಅಂಥವರು ನಿಮ್ಮ ಕೈ ಕೆಳಗೆ ಕೆಲಸ ಮಾಡುವವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ನಿಮ್ಮ ಜತೆಗೆ ಮಾತನಾಡಬೇಕು ಎಂದು ಕೇಳಿಕೊಂಡರೆ ಅವರಿಗೆ ಸಮಯವನ್ನು ಕೊಡಿ. ಇನ್ನು ನಿಮ್ಮ ವೈಯಕ್ತಿಕ ಕೆಲಸಗಳು ಎಷ್ಟೇ ಇರಲಿ, ಏನೇ ಇರಲಿ ಉದ್ಯೋಗಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ಮುಂದಕ್ಕೆ ಹಾಕದಿರಿ.
ಲೇಖನ- ಎನ್.ಕೆ.ಸ್ವಾತಿ