
ಗ್ರಹಗಳ ಸ್ಥಿತಿಯು ವೃಷಭ ರಾಶಿಯವರ ಮೇಲೆ ಮಿಶ್ರ ಪ್ರಭಾವವನ್ನು ಬೀರುತ್ತಿದೆ. ಮುಖ್ಯವಾಗಿ, ಪ್ರಮುಖ ಕ್ರೂರ ಗ್ರಹವಾದ ಮಂಗಳನು ವೃಷಭ ರಾಶಿಯ ಮೃಗಶಿರ ನಕ್ಷತ್ರದಲ್ಲಿ ಇದ್ದಾನೆ. ಇನ್ನು ವೃಷಭ ರಾಶಿಯ ಅಧಿಪತಿಯಾದ ಶುಕ್ರನು ಕೇತುವಿನೊಂದಿಗೆ ಸಿಂಹ ರಾಶಿಯಲ್ಲಿದ್ದಾನೆ. ಈ ಗ್ರಹಗತಿಗಳ ಆಧಾರದ ಮೇಲೆ ಜುಲೈ ತಿಂಗಳಿನಲ್ಲಿ ಎದುರಾಗಬಹುದಾದ ಸಮಸ್ಯೆಗಳೂ ಹಾಗೂ ಪರಿಹಾರೋಪಾಯಗಳೂ ಇವೆ.
ಪ್ರಮುಖ ಸಮಸ್ಯೆಗಳು
ಅತಿಯಾದ ಕೋಪ ಮತ್ತು ಆತುರ:
ಮಂಗಳನು ನಿಮ್ಮದೇ ರಾಶಿಯಲ್ಲಿ ನೆಲೆಸಿರುವುದರಿಂದ ಸ್ವಭಾವದಲ್ಲಿ ಉದ್ರೇಕ, ಆತುರ ಮತ್ತು ಅಹಂಕಾರ ಹೆಚ್ಚಾಗಬಹುದು. ಸಣ್ಣ ವಿಷಯಗಳಿಗೂ ಸಹೋದ್ಯೋಗಿಗಳು ಅಥವಾ ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯಗಳು ಮೂಡುವುದು.
ಅಶಾಂತಿ ಮತ್ತು ಮಾನಸಿಕ ಒತ್ತಡ:
ರಾಶ್ಯಾಧಿಪತಿ ಶುಕ್ರನು ಕೇತುವಿನೊಂದಿಗೆ ಸೇರಿ ಚತುರ್ಥ ಭಾವದಲ್ಲಿ ಇರುವುದರಿಂದ ಮನೆಯ ವಾತಾವರಣದಲ್ಲಿ ನೆಮ್ಮದಿ ಕಡಿಮೆಯಾಗಬಹುದು. ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು ಅಥವಾ ಸುಖ-ಸಂತೋಷಗಳಿಗೆ ತಾತ್ಕಾಲಿಕ ಅಡ್ಡಿ.
ಅನಾರೋಗ್ಯ ಮತ್ತು ಭಯ:
ಮಂಗಳನ ಪ್ರಭಾವದಿಂದಾಗಿ ರಕ್ತದೊತ್ತಡ, ಅತಿಯಾದ ಉಷ್ಣ ಬಾಧೆ ಅಥವಾ ಸಣ್ಣಪುಟ್ಟ ರಕ್ತಪಾ, ಗಾಯಗಳಾಗುವ ಸಂಭವ ಇರುತ್ತದೆ. ವಾಹನ ಚಲಾಯಿಸುವಾಗ ಜಾಗರೂಕತೆ ಅಗತ್ಯ.
ಆರ್ಥಿಕ ಹಾಗೂ ಕೆಲಸದಲ್ಲಿ ವಿಳಂಬ:
ಲಾಭ ಸ್ಥಾನದಲ್ಲಿ ಶನಿಯು ವಕ್ರಿಯಾಗಿದ್ದು, ದಶಮದಲ್ಲಿ ರಾಹು ಇರುವುದರಿಂದ ಧನಲಾಭದ ವಿಷಯಗಳಲ್ಲಿ ಅಥವಾ ಹೊಸ ಉದ್ಯೋಗದ ಪ್ರಯತ್ನಗಳಲ್ಲಿ ಕೊನೆಯ ಕ್ಷಣದಲ್ಲಿ ಅಡೆತಡೆಗಳು ಅಥವಾ ವಿಳಂಬ ಎದುರಾಗಬಹುದು.
ಇದನ್ನೂ ಓದಿ: ನಿಮ್ಮ ರಾಶಿಗನುಗುಣವಾಗಿ ಈವಾರದ ಭವಿಷ್ಯ ತಿಳಿಯಿರಿ; ವಾರಭವಿಷ್ಯ ಇಲ್ಲಿದೆ
ಪರಿಹಾರ ಮಾರ್ಗ
ಈ ಗ್ರಹದೋಷಗಳ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು ಇದನ್ನು ಅನುಸರಿಸಬಹುದು.
ಮಂಗಳನ ದೋಷ ನಿವಾರಣೆಗಾಗಿ ಪ್ರತಿದಿನ ಅಥವಾ ಪ್ರತಿ ಮಂಗಳವಾರ ಹನುಮಾನ್ ಚಾಲೀಸಾ ಪಠಿಸಿ. ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸುವುದು ನಿಮ್ಮ ಕೋಪವನ್ನು ನಿಯಂತ್ರಿಸಲು ಮತ್ತು ಅಪಘಾತಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಸಿಂಹ ರಾಶಿಯಲ್ಲಿರುವ ಕೇತುವಿನ ಶಾಂತಿಗಾಗಿ ಪ್ರತಿದಿನ ವಿಘ್ನನಿವಾರಕ ಗಣೇಶನಿಗೆ ಗರಿಕೆ ಸಮರ್ಪಿಸಿ. ಇದರಿಂದ ಕೌಟುಂಬಿಕ ಕಲಹಗಳು ಶಾಂತವಾಗುತ್ತವೆ. ವೃಷಭ ರಾಶಿಯ ಅಧಿಪತಿಯಾದ ಶುಕ್ರನನ್ನು ಬಲಪಡಿಸಲು ಶುಕ್ರವಾರದ ದಿನ ಲಕ್ಷ್ಮೀ ದೇವಿಗೆ ಪೂಜೆ ಮಾಡಿ ಮತ್ತು ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಿ. ಮಂಗಳನ ನಕಾರಾತ್ಮಕ ಪ್ರಭಾವದಿಂದ ಪಾರಾಗಲು ವಾದ, ವಿವಾದಗಳಿಂದ ದೂರವಿರಿ. ಯಾವುದೇ ಪ್ರಮುಖ ಆಸ್ತಿ ಅಥವಾ ವಾಹನ ಖರೀದಿ ನಿರ್ಧಾರಗಳನ್ನು ಜುಲೈ ತಿಂಗಳಲ್ಲಿ ಯೋಚಿಸಿ ತೆಗೆದುಕೊಳ್ಳಿ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:02 pm, Mon, 6 July 26