Weekly Horoscope in Kannada: ವಾರ ಭವಿಷ್ಯ: ಜು 28 ರಿಂದ ಆ.4 ರವರೆಗೆ ನಿಮ್ಮ ಭವಿಷ್ಯ ಹೀಗಿದೆ ತಿಳಿಯಿರಿ

ಜುಲೈ 28 ರಿಂದ ಆಗಸ್ಟ್​ 04 ರವರೆಗಿನ ರಾಶಿ ಫಲ ವಿವರ ಇಲ್ಲಿದೆ. ಈ ವಾರ ಯಾವೆಲ್ಲ ರಾಶಿಗೆ ಶುಭಫಲ? ಯಾವ ರಾಶಿಗೆ ಅಶುಭ? ಯಾರಿಗೆಲ್ಲಾ ಅಶುಭವಾಗಲಿದೆ ಎಂದು ಈ ವಾರ ಭವಿಷ್ಯದಲ್ಲಿ ತಿಳಿಯಿರಿ. ಜುಲೈ ತಿಂಗಳ ಕೊನೆಯ ವಾರದಲ್ಲಿ ಯಾವ ರಾಶಿಗೆ ಮಿಶ್ರ ಫಲವಿರಲಿದೆ ತಿಳಿಯಿರಿ.

Weekly Horoscope in Kannada: ವಾರ ಭವಿಷ್ಯ: ಜು 28 ರಿಂದ ಆ.4 ರವರೆಗೆ ನಿಮ್ಮ ಭವಿಷ್ಯ ಹೀಗಿದೆ ತಿಳಿಯಿರಿ
ವಾರ ಭವಿಷ್ಯ: ಜು 28 ರಿಂದ ಆ.4 ರವರೆಗೆ ನಿಮ್ಮ ಭವಿಷ್ಯ ಹೀಗಿದೆ ತಿಳಿಯಿರಿ
Updated By: ಗಂಗಾಧರ​ ಬ. ಸಾಬೋಜಿ

Updated on: Jul 28, 2024 | 1:02 AM

ಜುಲೈ ತಿಂಗಳ ಕೊನೆ ವಾರವು 28 ರಿಂದ ಆಗಸ್ಟ್​ 04ರವರೆಗೆ ಇರಲಿದೆ. ರಾಶಿಗಳಲ್ಲಿ ಗ್ರಹಗಳ ಪರಿವರ್ತನೆ ಇರಲಿದೆ. ಸಣ್ಣ ಬದಲಾವಣೆಯೂ ದೊಡ್ಡ ಪರಿವರ್ತನೆ ತರುವುದು. ಅದಕ್ಕೆ ತಕ್ಕ ಸೂಚನೆಯೂ ನಿಮ್ಮ ಸುತ್ತ ನಡೆಯಲಿದೆ. ಅದನ್ನು ಗಮನಿಸಿ ಮುಂದುವರಿದರೆ ಪಡೆಯಬೇಕಾದ ಫಲ, ತೊಂದರೆಯಿಂದ ಮುಕ್ತಿ ಸಾಧ್ಯ.‌ ದೈವದಲ್ಲಿ ಭಕ್ತಿಯನ್ನು ಸದಾ ಇಟ್ಟು ಕಾರ್ಯವನ್ನು ಮಾಡಿ. ಶುಭಂ ಭವತು ಸರ್ವದಾ.

ಮೇಷ ರಾಶಿ: ಇದು ರಾಶಿ ಚಕ್ರದ ಮೊದಲೇ ರಾಶಿಯಾಗಿದ್ದು, ಕೊನೆಯ ವಾರದಲ್ಲಿ ಶುಭಫಲವಿದೆ. ರಾಶಿ ಅಧಿಪತಿನೂ ಅಷ್ಟಮದ ಅಧಿಪನೂ ಆದ ಕುಜನು ದ್ವಿತೀಯದಲ್ಲಿ ಮಿತ್ರರ ಜೊತೆ ಇದ್ದಾನೆ. ಸಂಪತ್ತು ಹಾಗು ದೈಹಿಕವಾದ ಆಪತ್ತು ಇರದು. ಗುರುವು ದ್ವಿತೀಯದಲ್ಲಿ ಇದ್ದಾನೆ. ಸಂಪತ್ತನ್ನು ಕುಟುಂಬದ ಕಡೆಯಿಂದ ಬರುವುದು ಅಥವಾ ಅವಶ್ಯಕತೆ ಇದ್ದರೆ ಪಡೆಯಲೂಬಹುದು. ಶನಿಯು ಉಚ್ಚ ಸ್ಥಾನದಲ್ಲಿ ಏಕಾದಶದಲ್ಲಿ ಇರುವ ಕಾರಣ ಶ್ರಮಕ್ಕೆ ಯೋಗ್ಯ ಸಂಪತ್ತು ಸಿಗಲಿದೆ. ದ್ವಾದಶದಲ್ಲಿ ರಾಹುವು ಕೆಟ್ಟ ಕಾರ್ಯಗಳಿಗೆ ಪ್ರೇರಿಸುವನು. ಅವಿವಾಹಿತರಿಗೆ ಕುಟುಂಬದ ಕಡೆಯಿಂದ ಸಂಗಾತಿಯ ಹುಡುಕಾಟ ನಡೆಯಲಿದೆ. ಕಾರ್ತಿಕೇಯನ ಸ್ಮರಣೆಯನ್ನು ಬಿಡುವುದು ಬೇಡ.

ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ಕೊನೆಯ ವಾರ ಮಿಶ್ರ ಫಲ. ರಾಶಿಯ ಅಧಿಪತಿಯು ಚತುರ್ಥದಲ್ಲಿ ಇರುವುದು ವಿದೇಶ ಪ್ರವಾಸವನ್ನು ಸೂಚಿಸುತ್ತದೆ. ಕುಟುಂಬದ ಜೊತೆ ಪುಣ್ಯ ಸ್ಥಳಗಳ ದರ್ಶನವನ್ನು ಪಡೆಯುವಿರಿ‌. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗುವುದು. ವೃತ್ತಿಯಲ್ಲಿ ಎದುರಾದ ಸಮಸ್ಯೆಯನ್ನು ಸೂಕ್ತ ಮಾರ್ಗದಲ್ಲಿ ಪರಿಹಾರವನ್ನು ಮಾಡಿಕೊಳ್ಳಿ. ಕುಟುಂಬದವರ ಸಹಕಾರ ನಿಮಗೆ ಲಭ್ಯವಾಗಲಿದೆ. ಸಂಗಾತಿಯ ಜೊತೆ ಮಾತುಕತೆ ಅಷ್ಟಾಗಿ ಇರದು. ಮಕ್ಕಳ ಕಿರಿಕಿರಿಯನ್ನು ನೀವು ಸಹಿಸಲಾರಿರಿ. ಹೆಚ್ಚು ಶ್ರಮ ಹಾಕಿ ಅಲ್ಪ ಆದಾಯವನ್ನು ಪಡೆಯಬೇಕಾಗುವುದು. ನಾಗಾರಾಧನೆಯಿಂದ ದೋಷ ನಿವಾರಣೆ ಆಗಲಿದೆ.

ಮಿಥುನ ರಾಶಿ: ಜುಲೈ ತಿಂಗಳ ಕೊನೆಯ ವಾರದಲ್ಲಿ ರಾಶಿ ಚಕ್ರದ ಮೂರನೇ ರಾಶಿಯವರಿಗೆ ಅಶುಭವು ಅಧಿಕವಾಗಲಿದೆ. ರಾಶಿಯ ಅಧಿಪತಿಯೂ ಚತುರ್ಥ ಸ್ಥಾನಾಧಿಪತಿಯೂ ಆದ ಬುಧನು ತೃತೀಯದಲ್ಲಿ ಇರುವುದು ಕುಟುಂಬಕ್ಕೆ ನಿಮ್ಮ ಬಗ್ಗೆ ತಿಳಿಸುವನು. ಸಹೋದರಿಯ ನಡುವೆ ಹೊಂದಾಣಿಕೆ ಇರುವುದು. ಹೆಣ್ಣು ಮಕ್ಕಳ ಕಾರಣದಿಂದ ಖರ್ಚು ಹೆಚ್ಚಾಗುವುದು. ವಾಹನದಿಂದ ತೊಂದರೆ ಎದುರಾಗುವುದು. ವೃತ್ತಿಯಲ್ಲಿ ಆಸಕ್ತಿ ಕಡಿಮೆಯಾಗಿ ಬಿಡುವ ಆಲೋಚನೆ ಮಾಡುವಿರಿ. ನವಮದಲ್ಲಿ ಶನಿಯು ಉಚ್ಚನಾಗಿ ನಿಮಗೆ ಕೊಡುವ ಗೌರವ ಸನ್ಮಾನಗಳನ್ನು ಕೊಡಿಸುವನು. ಮಾತು ಹರಿತವಾಗಿರಲಿದೆ‌ ಆದಷ್ಟು ತಾಳ್ಮೆಯಿಂದ ವರ್ತಿಸುವುದು ಸೂಕ್ತ. ಲಕ್ಷ್ಮೀನಾರಾಯಣರ ಸ್ತೋತ್ರವನ್ನು ಮಾಡಿ, ಬರುವ ಸಂಕಟವನ್ನು ದೂರ ಮಾಡಿಕೊಳ್ಳಿ.

ಕರ್ಕಾಟಕ ರಾಶಿ: ಈ ಕೊನೆಯ ವಾರದಲ್ಲಿ ಶುಭ ಫಲ. ಗುರುವು ಏಕಾದಶದಲ್ಲಿ ಇರುವುದು, ದಶಮಾಧಿಪತಿ ಏಕಾದಶದಲ್ಲಿ ಇರುವುದು ವೃತ್ತಿಯಲ್ಲಿ ಉತ್ತಮ ಸ್ಥಾನ ಪ್ರಾಪ್ತಿಯಾಗಲಿದೆ. ಸೂರ್ಯನು ನಿಮ್ಮ ರಾಶಿಯಲ್ಲಿ ಇರುವುದು ಒತ್ತಡದ ವಾತಾವರಣವನ್ನು ಸೃಷ್ಟಿಸುವನು. ಗೌರವ ಕೊಡಬೇಕಾದವರಿಗೆ ಕೊಡದೇ ಯಾರಿಗೋ ಕೊಡುವಿರಿ. ವಿದೇಶ ಉತ್ಪನ್ನಗಳಿಂದ ಲಾಭ ಗಳಿಸುವಿರಿ. ವಾತದಿಂದ ಅನಾರೋಗ್ಯವು ಉಂಟಾಗಿದ್ದರೆ ಅದು ಶಮನವಾಗುವುದು. ಸಹೋದರರ‌ ಜೊತೆ ಸಾಮರಸ್ಯ ಕೊರತೆ ಕಾಣಿಸುವುದು. ಬಂಧುಗಳಿಂದ ನಿಮಗೆ ಬೇಕಾದ ಸಹಕಾರವು ಸಿಗಲಿದೆ.

ಸಿಂಹ ರಾಶಿ: ಜುಲೈ ತಿಂಗಳ‌ ಕೊನೆಯ ವಾರದಲ್ಲಿ ಈ ರಾಶಿಯವರಿಗೆ ಸಾಧಾರಣ ಫಲ. ರಾಶಿ ಅಧಿಪತಿ ವ್ಯಯದಲ್ಲಿ ಇದ್ದಾನೆ. ಅಂದುಕೊಂಡ ಕಾರ್ಯವು ಕೂಡಲೇ ಆಗದು. ಹಿರಿಯರ ಒಪ್ಪಿಗೆ ಪಡೆದು ಮುಂದುವರಿಯುವುದು ಕಷ್ಟವಾಗುವುದು. ವಿದೇಶದಲ್ಲಿ ಇರುವವರು ಮರಳಿ‌ಬರುವ ಸಂದರ್ಭವು ಬರುವುದು. ಶುಕ್ರನು ನೀಚಗಾಮಿಯಾದ ಕಾರಣ ಬೇಡ ಕಾರ್ಯಗಳಿಗೆ ಹಣವು ಖರ್ಚಾಗುವುದು. ಸಂಗಾತಿಯಿಂದ‌ ನಿಂದನೆಯೂ ಸಿಗುವುದು. ಯಾವುದಕ್ಕೂ ಉತ್ತರಿಸುವುದು ಕಷ್ಟವಾದೀತು. ಮೌನವೇ ಎಲ್ಲದಕ್ಕೂ ಉತ್ತರ. ಉದ್ಯಮದ ಹಿನ್ನಡೆಯಿಂದ ಆತಂಕ ಕಾಣಿಸುವುದು. ಶಿವನಿಗೆ ಸೋಮವಾರ ರುದ್ರಾಭಿಷೇಕ‌ ಮಾಡಿ.

ಕನ್ಯಾ ರಾಶಿ: ಇದು ರಾಶಿ ಚಕ್ರದ ಆರನೇ ರಾಶಿ. ಈ ತಿಂಗಳ ಕೊನೆಯ ವಾರವು ಇವರಿಗೆ ಶುಭ. ರಾಶಿ ಅಧಿಪತಿ ಹಾಗೂ ದಶಮಾಧಿಪತಿ ಇಬ್ಬರೂ ದ್ವಾದಶದಲ್ಲಿ ಇರುವುದು ವೃತ್ತಿಯಿಂದ ತೊಂದರೆ. ಖಾಸಗೀ ಉದ್ಯೋಗದಲ್ಲಿ ಅಸ್ಥಿರತೆ ಕಾಡುವುದು. ಆದರೂ ನೀವು ಧೈರ್ಯದಿಂದ ಇರಬೇಕು. ನವಮದಲ್ಲಿ ಇರುವ ಗುರುವು ಒಂದೊಂದಾಗಿ ಎಲ್ಲವನ್ನೂ ನಿವಾರಿಸುವನು. ಶತ್ರುಗಳು ನಿಮ್ಮ ಬಗ್ಗೆ ಒಳ್ಳೆಯ ಭಾವನೆಗಳನ್ನು ಇಟ್ಟುಕೊಳ್ಳುವರು. ಸಂಗಾತಿಯ ಮನಃಪರಿವರ್ತನೆ ಕಷ್ಟವಾದೀತು. ತಾಳ್ಮೆಯೂ ಇಲ್ಲದಂತ ಸ್ಥಿತಿ ಬರುವುದು. ನೀವು ಮಾತ್ರ ಎಲ್ಲ ತೀರ್ಮಾನವನ್ನು ತೆಗೆದುಕೊಳ್ಳದೇ ಹಿರಿಯ ಅನುಭವವನ್ನೂ ಕೇಳಿ ಮುಂದುವರಿಯಿರಿ.

ತುಲಾ ರಾಶಿ: ಈ ರಾಶಿಯವರಿಗೆ ಜುಲೈ ತಿಂಗಳ ಕೊನೆಯ ವಾರ ಶುಭಪ್ರದವಾಗಿಲ್ಲ. ರಾಶಿಯ ಅಧಿಪತಿಯೂ ಷಷ್ಠ ಸ್ಥಾನಾಧಿಪತಿಯೂ ನೀಚ ಸ್ಥಾನದ ಕಡೆಗೆ ಹೋಗಲಿದ್ದಾನೆ. ಅನಾರೋಗ್ಯದ ಕಾರಣಕ್ಕೆ ನೀವು ಖರ್ಚು ಮಾಡುವಿರಿ. ಅಪಮಾನವನ್ನು ಸಹಿಸಿಕೊಳ್ಳಲಾರಿರಿ. ವಿವಾಹದ ವಿಚಾರದಲ್ಲಿ ಪೂರ್ಣವಾದ ಮನಸ್ಸು ಇರದು. ಉದ್ಯೋಗದಲ್ಲಿ ಹೊಂದಾಣಿಕೆ ಇಲ್ಲವಾಗುವುದು. ಸಂಗಾತಿಯನ್ನು ಮನವೊಲಿಸಿ ಮುನ್ನಡೆಯಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸವು ಕಾರಣಾಂತರದಿಂದ ನಿಲ್ಲುವುದು. ಮುಂದುವರಿಸಲು ಪ್ರೇರಣೆ ಅಗತ್ಯ. ಬಂಧುಗಳ ಜೊತೆ ಮಿತಿಯಲ್ಲಿ ವರ್ತಿಸಿ. ಮಹಾಲಕ್ಷ್ಮಿಯ ಸ್ತೋತ್ರವನ್ನು ಪಠಿಸಿ.

ವೃಶ್ಚಿಕ ರಾಶಿ: ಜುಲೈ ತಿಂಗಳ ಈ ವಾರದಲ್ಲಿ ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಶುಭ ಫಲ. ರಾಶಿಯ ಅಧಿಪತಿಯೂ ಷಷ್ಠದ ಅಧಿಪತಿಯೂ ಆದ ಕುಜನು ಸಪ್ತಮದಲ್ಲಿ ಇರುವನು. ವಿವಾಹಿತರಿಗೆ ದಾಂಪತ್ಯದಲ್ಲಿ ಕಿರಿಕಿರಿ ಅನಿಸದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳರು. ಆದರೆ ಸಣ್ಣ ವಿಚಾರಕ್ಕೂ ಮಾತಿಗೆ ಮಾತು ಬೆಳೆಯುವುದು. ಅವಿವಾಹಿತರಿಗೆ ಸೂಕ್ತ ಸಂಗಾತಿಯನ್ನು ಹುಡುಕಿಕೊಳ್ಳಲು ಉತ್ತಮ‌ ಸಮಯ. ಅಥವಾ ಪ್ರೀತಿಯ ವಿಚಾರದಲ್ಲೂ ನಿಮಗೆ ಒಳ್ಳೆಯ ಸಂಗಾತಿಯೆರ ಸಿಗುವರು. ಸರ್ಕಾರದ ಕೆಲಸವನ್ನು ಬೇಗ ಮಾಡಿ ಮುಗಿಸುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಪ್ರಯತ್ನ ಇರುವುದು.

ಧನು ರಾಶಿ: ಜುಲೈ ತಿಂಗಳ ಕೊನೆಯ ವಾರದಲ್ಲಿ ಈ ರಾಶಿಯವರಿಗೆ ಅಶುಭ ಫಲ. ಸ್ವರಾಶಿಯ ಅಧಿಪತಿಯೂ ಚತುರ್ಥ ಸ್ಥಾನಾಧಿಪತಿಯೂ ಆದ ಗುರುವು ಷಷ್ಠದಲ್ಲಿ ಇದ್ದಾನೆ. ಕೌಟುಂಬಿಕ ಸಮಸ್ಯೆಯನ್ನು ಎದುರಿಸಬೇಕಾಗುವುದು. ಕ್ಲೇಶಗಳು ಒಂದೊಂದಾಗಿ ನಿಮ್ಮನ್ನು ಕುಗ್ಗಿಸುವುವು. ವಿದೇಶದಲ್ಲಿ ಇರುವವರಿಗೆ ಆದಾಯ ಕಡಿಮೆ ಖರ್ಚು ಹೆಚ್ಚಾಗಲಿದೆ. ಹಿತಶತ್ರುಗಳಿಂದ ನೀವು ತಪ್ಪಿಸಿಕೊಳ್ಳಲು ಕಷ್ಟವಾಗುವುದು. ಸಂಗಾತಿಯಿಂದ ಆರ್ಥಿಕ‌ ಸಹಕಾರ ಸಿಗುವುದು. ವೃತ್ತಿಯಲ್ಲಿ ಕೆಲವು ಕಹಿ‌ಯಾದ ಮಾತುಗಳನ್ನು ಕೇಳಬೇಕಾಗುವುದು. ನಿಮ್ಮ ಬೆಳವಣಿಗೆಯು ಮಂದಗತಿಯಲ್ಲಿ ಸಾಗಲಿದೆ. ರಾಯರ ಸನ್ನಿಧಿಯಲ್ಲಿ ಸ್ವಲ್ಪ ಸಮಯ ಇದ್ದು ಬನ್ನಿ.

ಮಕರ ರಾಶಿ: ಈ ತಿಂಗಳಲ್ಲಿ ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಶುಭ ಫಲ. ರಾಶಿಯ ಅಧಿಪತಿ ಸ್ವಕ್ಷೇತ್ರದಲ್ಲಿ ಉಚ್ಚ ಸ್ಥಾನದಲ್ಲಿ ಇರುವುದರಿಂದ ಸಾಲ ಕೊಟ್ಟ ಹಣವು ವಿಳಂಬವಾದರೂ ವಾಪಾಸು ಬರಲಿದೆ. ತಂದೆ ಮಕ್ಕಳ‌ ನಡುವೆ ವೈಮನಸ್ಯ ಕಾಣಿಸಿಕೊಳ್ಳುವುದು. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿಯು ನಿಮಗೆ ಖುಷಿ ಕೊಡುವುದು. ಯಶಸ್ಸು ಪಡೆಯನು ನೇರ ದಾರಿಯಲ್ಲಿ ಸಾಗಿ. ಬುದ್ಧಿವಂತಿಕೆಯನ್ನು ಪ್ರದರ್ಶಿಸುವಾಗ ಎಡವಬಹುದು. ನರಕ್ಕೆ ಸಂಬಂಧಿಸಿದ ಖಾಯಿಲೆ ಕಾಣಿಸುವುದು. ಶಿವನಿಗೆ ಬಿಲ್ವಾರ್ಚನೆ ಮಾಡಿಸಿ.

ಕುಂಭ ರಾಶಿ: ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ವಾರವು ಮಿಶ್ರ ಫಲ. ರಾಶಿಯ ಅಧಿಪತಿಯ ತನ್ನ ಉತ್ತಮ ಸ್ಥಾನದಲ್ಲಿ ಮಾಡಬೇಕಾದ ಕಾರ್ಯಗಳಿಗೆ ಧೈರ್ಯವನ್ನು ಕೊಡುವನು. ಆದರೆ ಏನು ಮಾಡಬೇಕು, ಹೇಗೆ ಮಾಡಬೇಕು ಎನ್ನುವ ಗೊಂದಲ ಇರುವುದು. ಸಂಪತ್ತಿಗಾಗಿ ಅತಿಯಾಸೆ ಬೇಡ. ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿಯೂ ಬರಬಹುದು. ಭೂಮಿಯ ಖರೀದಿಗೆ ಮನೆಯವರ ಒಪ್ಪಿಗೆ ಪಡೆದು ಮುಂದುವರಿಯಿರಿ. ನಿಮ್ಮ ಮಾತುಗಳು ಅಸಭ್ಯ ಎನಿಸಬಹುದು. ಬಂಧುಗಳ ಕಡೆಯಿಂದ ನಿಮಗೆ ವಿವಾಹ ಸಂಬಂಧವು ಕೂಡಿಬರುವುದು. ಆಂಜನೇಯನಿಗೆ ಪ್ರಿಯವಾದ ನೈವೇದ್ಯ ಮಾಡಿ.

ಮೀನ ರಾಶಿ: ಜುಲೈ ತಿಂಗಳ ಕೊನೆಯ ವಾರದಲ್ಲಿ ಈ ರಾಶಿಯವರಿಗೆ ಮಿಶ್ರ ಫಲ. ರಾಶಿಯ ಅಧಿಪತಿಯೂ ದಶಮಾಧಿಪತಿಯೂ ಆದ ಗುರುವು ತೃತೀಯದಲ್ಲಿ ಇದ್ದಾನೆ. ಶತ್ರುವಿನ ರಾಶಿಯಾದ ಕಾರಣ ವೃತ್ತಿಯಲ್ಲಿ ತೊಂದರೆ, ಮಾನಸಿಕವಾಗಿ ಭಯ, ಗೊಂದಲ ಕಾಡುವುದು. ಶರೀರ ಪೀಡೆಯಿಂದ ಕಷ್ಟವಾಗುವುದು. ವಿವಾಹಕ್ಕೆ ಶತ್ರುಗಳಿಂದ ತಡೆಯುಂಟಾಗುವುದು. ನಿಶ್ಚಯವಾದ ವಿವಾಹ ಸಂಬಂಧವು ಮುರಿದುಬೀಳುವ ಸಾಧ್ಯತೆ ಹೆಚ್ಚು. ವಿವಾಹಿತರಿಗೆ ಸಂಗಾತಿಯ ಮನೋಭಾವ ಅರ್ಥವಾಗದು. ಸಮಯವನ್ನೂ ಕೊಡಲಾಗದ ಸ್ಥಿತಿ ಬರುವುದು. ನಾಗರ ಉಪಾಸನೆಯನ್ನು ಮಾಡಿ.

ಲೋಹಿತ ಹೆಬ್ಬಾರ್-8762924271 (what’s app only)

Published On - 1:02 am, Sun, 28 July 24