ಅವೈಜ್ಞಾನಿಕವಾಗಿ ಸವಾರರನ್ನು ತಡೆಯಬೇಡಿ: ಪೊಲೀಸರಿಗೆ ಗೃಹ ಸಚಿವ ಪರಮೇಶ್ವರ್ ಖಡಕ್ ಎಚ್ಚರಿಕೆ

ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟ ಘಟನೆಯಿಂದ ಕರ್ನಾಟಕಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯ ಬಗ್ಗೆ ಗೃಹ ಸಚಿವರು ಪ್ರತಿಕ್ರಿಯಿಸಿದ್ದು, ಪೊಲೀಸರ ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಅವೈಜ್ಞಾನಿಕವಾಗಿ ಸವಾರರನ್ನು ತಡೆಯಬೇಡಿ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.

ಅವೈಜ್ಞಾನಿಕವಾಗಿ ಸವಾರರನ್ನು ತಡೆಯಬೇಡಿ: ಪೊಲೀಸರಿಗೆ ಗೃಹ ಸಚಿವ ಪರಮೇಶ್ವರ್ ಖಡಕ್ ಎಚ್ಚರಿಕೆ
ಗೃಹ ಸಚಿವ ಡಾ. ಜಿ ಪರಮೇಶ್ವರ
Updated By: Ganapathi Sharma

Updated on: May 27, 2025 | 10:45 AM

ಬೆಂಗಳೂರು, ಮೇ 27: ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದಾಗಿ ಮಂಡ್ಯದಲ್ಲಿ (Mandya) ಮಗು ಮೃತಪಟ್ಟ ಘಟನೆ ಕರ್ನಾಟಕದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಆ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ (G Parameshwara) ಪೊಲೀಸರಿಗೆ ಖಡಕ್ ಸೂಚನೆಯನ್ನೂ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಸಂಭವಿಸಿದ ಘಟನೆ ತಲೆತಗ್ಗಿಸುವಂತಹದ್ದು. ಘಟನೆ ಸಂಬಂಧ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಮತ್ತೆ ಇಂತಹ ಘಟನೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಇವತ್ತು ಸಭೆ ಕರೆದಿದ್ದೇನೆ, ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದರು.

ಮಂಡ್ಯದ ಘಟನೆಯಲ್ಲಿ ಪೊಲೀಸರು ಮಾನವೀಯತೆ ತೋರಲಿಲ್ಲ, ಸ್ವಂತಿಕೆ ಪ್ರದರ್ಶಿಸಲಿಲ್ಲ. ಸರಿಯಾಗಿ ನಡೆದುಕೊಳ್ಳಲಿಲ್ಲ. ಪೊಲೀಸರು ಅವೈಜ್ಞಾನಿಕವಾಗಿ ಸವಾರರನ್ನು ತಡೆಯುವುದು ಬೇಡ. ಪೊಲೀಸರು ಎಲ್ಲೋ ಮೂಲೆಯಲ್ಲಿ ನಿಂತು ದಿಢೀರ್ ಆಗಿ ಎದುರು ಬಂದು ತಡೆಯುತ್ತಾರೆ. ಪೊಲೀಸರು ಹೀಗೆ ಮಾಡಬಾರದು. ತಪಾಸಣೆ ನಡೆಸಲು ಅದರದ್ದೇ ಆದ ಒಂದು ಪದ್ಧತಿ ಇದೆ. ಅದನ್ನು ಪೊಲೀಸರು ಅನುಸರಿಸಬೇಕು ಎಂದು ಪರಮೇಶ್ವರ್ ಖಡಕ್ ಸೂಚನೆ ನೀಡಿದರು.

ಸ್ಪೀಡಾಗಿ ಬರುವ ಬೈಕ್​ ಸವಾರರನ್ನು ಪೊಲೀಸರು ದಿಢೀರಾಗಿ ಎದುರು ಬಂದು ತಡೆಯುತ್ತಾರೆ. ಇದರಿಂದ ಸವಾರರು ವಿಚಲಿತರಾಗುತ್ತಾರೆ. ಈ ವಿಚಾರವಾಗಿ ಇಂದಿನ ಸಭೆಯಲ್ಲಿ ಚರ್ಚೆ ಮಾಡಿ ಸರಿಯಾದ ಸೂಚನೆ ಕೊಡುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ
ಇಂದು ಕರ್ನಾಟಕದ ಕರಾವಳಿ, ಕೊಡಗು, ಶಿವಮೊಗ್ಗ ಸೇರಿ ಹಲವೆಡೆ ಭಾರಿ ಮಳೆ
ಭೂಕುಸಿತ ಭೀತಿ: ಉತ್ತರ ಕನ್ನಡದಲ್ಲಿ ಹೆದ್ದಾರಿಯ 19 ಕಡೆ ವಾಹನ ನಿಲುಗಡೆ ಬಂದ್
ವಾಡಿಕೆಗಿಂತ ಮೊದಲೇ ಮುಂಗಾರು ಆಗಮನ, ಕರ್ನಾಟಕ, ಕೇರಳದಲ್ಲಿ ಭಾರಿ ಮಳೆ
ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆ ಖಚಿತ, ಮೇ 13ಕ್ಕೆ ಆದೇಶ ಸಾಧ್ಯತೆ

ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರೂ ಪೊಲೀಸರು ಬಿಡಲಿಲ್ಲ. ಇಂತಹ ಸಂದರ್ಭಗಳಲ್ಲಿ ಪೊಲೀಸರು ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ: ಮಂಡ್ಯದಲ್ಲೊಂದು ಮನಕಲಕುವ ಘಟನೆ: ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದ ಮಗು ಸಾವು

ಮಂಡ್ಯದಲ್ಲಿ ಸೋಮವಾರ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆ ಮಾಡುವ ವೇಳೆ ಬೈಕ್ ಸವಾರ ಪೊಲೀಸರ ಮುಂದೆ ನಿಲ್ಲಿಸಲು ಹೋಗಿ ಆಯತಪ್ಪಿದ ಕಾರಣ ಮೂರು ವರ್ಷ ಮಗು ಕೆಳಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿತ್ತು.

ವಾಹನಗಳ ಟೋಯಿಂಗ್ ಬಗ್ಗೆ ಚರ್ಚೆಯಾಗಿದೆ: ಪರಮೇಶ್ವರ್

ರಸ್ತೆ ಬದಿ ವಾಹನಗಳ ಟೋಯಿಂಗ್ ಮಾಡುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಆ ಕುರಿತು ಚರ್ಚಿಸಲಾಗಿದೆ. ನನ್ನ ಗಮನಕ್ಕೆ ತಂದಿದ್ದರು. ಟೋಯಿಂಗ್​ನಿಂದ ಸಾರ್ವಜನಿಕರಿಗೆ ಉಪಯೋಗ ಆಗುವುದಾದರೆ ಮತ್ತೆ ಜಾರಿಗೆ ತರುತ್ತೇವೆ. ಆದರೆ, ಅದು ಸಾರ್ವಜನಿಕರಿಗೆ ತೊಂದರೆ ಆಗುವುದಾದರೆ ಜಾರಿಗೊಳಿಸಲ್ಲ. ಏನೇ ನಿರ್ಧಾರ ಮಾಡಿದರೂ ಸಾರ್ವಜನಿಕರಿಗೆ ಉಪಯೋಗ ಆಗಬೇಕು. ಸಾಧಕ ಬಾಧಕ ಚರ್ಚೆ ಮಾಡಿ ತೀರ್ಮಾನ ತಗೊಳ್ಳುತ್ತೇವೆ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ