ಅಕಿರಾ ಮಿಯಾವಾಕಿ ಕಿರು ಅರಣ್ಯ ಪದ್ಧತಿ ಅನುಷ್ಠಾನ: ಅರಣ್ಯ ಬೆಳೆಸುವ ಯೋಜನೆಗೆ ಮುಂದಾದ ಹು-ಧಾ ಮಹಾನಗರ ಪಾಲಿಕೆ

| Updated By: preethi shettigar

Updated on: Jun 25, 2021 | 11:03 AM

ಜಪಾನ್ ಸಸ್ಯ ತಜ್ಞ ಡಾ. ಅಕಿರಾ ಮಿಯಾವಾಕಿ ಅಭಿವೃದ್ಧಿಪಡಿಸಿರುವ ಈ ಮಿಯಾವಕಿ ಅರಣ್ಯ ಪ್ರದೇಶವು ಸಾಂಪ್ರದಾಯಿಕ ಅರಣ್ಯಕ್ಕಿಂತ 30 ಪಟ್ಟು ಹೆಚ್ಚು ದಟ್ಟವಾಗಿರುತ್ತದೆ. ಮೊದಲಿಗೆ ನಿರ್ದಿಷ್ಟ ಸ್ಥಳವನ್ನು ಆಯ್ಕೆ ಮಾಡಿಕೊಂಡು ಮಣ್ಣಿನ ಫಲವತ್ತತೆ, ಅಲ್ಲಿನ ಪರಿಸರವನ್ನು ಅಧ್ಯಯನ ಮಾಡಲಾಗುತ್ತದೆ.

ಅಕಿರಾ ಮಿಯಾವಾಕಿ ಕಿರು ಅರಣ್ಯ ಪದ್ಧತಿ ಅನುಷ್ಠಾನ: ಅರಣ್ಯ ಬೆಳೆಸುವ ಯೋಜನೆಗೆ ಮುಂದಾದ ಹು-ಧಾ  ಮಹಾನಗರ ಪಾಲಿಕೆ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
Follow us on

ಧಾರವಾಡ: ಇತ್ತೀಚಿಗೆ ನಗರೀಕರಣ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತಿದೆ. ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭವಾದರೂ ಮೊದಲಿಗೆ ಅಲ್ಲಿರುವ ಗಿಡ-ಮರಗಳಿಗೆ ಕೊಡಲಿ ಏಟು ಬೀಳುತ್ತದೆ. ಈ ಬಗ್ಗೆ ಪರಿಸರವಾದಿಗಳು ಎಷ್ಟೇ ಹೋರಾಟ ಮಾಡಿದರೂ ಅಭಿವೃದ್ಧಿಯ ವಿಚಾರವಾಗಿ ಇದೆಲ್ಲಾ ಅನಿವಾರ್ಯ ಎಂದು ಹೇಳಿ ಎಲ್ಲರನ್ನೂ ಸುಮ್ಮನೇ ಇರಿಸಲಾಗುತ್ತದೆ. ಈ ವಿಚಾರವನ್ನೇ ಗಮನದಲ್ಲಿಟ್ಟಿಕೊಂಡು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಅತಿ ಕಡಿಮೆ ಸಮಯದಲ್ಲಿ ಕಿರು ಅರಣ್ಯ ಬೆಳೆಸುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಅವಳಿ ನಗರದ ಐದು ಸ್ಥಳಗಳಲ್ಲಿ ಸದ್ಯ ಈ ಕಿರು ಅರಣ್ಯಗಳು ಸೃಷ್ಟಿಯಾಗಲಿದೆ.

ಅಕಿರಾ ಮಿಯಾವಾಕಿ ಕಿರು ಅರಣ್ಯ ಪದ್ಧತಿ
ಇತ್ತೀಚೆಗೆ ಅಭಿವೃದ್ಧಿ ಹೆಸರಲ್ಲಿ ಕಾಡು ಬರಿದಾಗುತ್ತಿರುವ ಹೊತ್ತಿನಲ್ಲಿ ಕಡಿಮೆ ಸಮಯ ಹಾಗೂ ಸ್ವಲ್ಪವೇ ಜಾಗದಲ್ಲಿ ವೇಗವಾಗಿ ಅರಣ್ಯ ಬೆಳೆಸಬಹುದಾದ ಅಕಿರಾ ಮಿಯಾವಾಕಿ ಕಿರು ಅರಣ್ಯ ಪದ್ಧತಿಯನ್ನು ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಐದು ಸ್ಥಳಗಳಲ್ಲಿ ಜಾರಿಗೆ ತರಲು ಮಹಾನಗರ ಪಾಲಿಕೆ ಸಿದ್ಧವಾಗಿದೆ. ಈ ವಿಧಾನವು ಪಂಜಾಬ್, ಮುಂಬೈ, ಬೆಂಗಳೂರು ಮುಂತಾದ ಕಡೆಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಪ್ರಸ್ತುತ ಅವಳಿ ನಗರದಲ್ಲಿ ಬೆಳೆಸಲು ಮುಂದಾಗಿರುವುದು ವಿಶೇಷವಾಗಿದೆ. ಈ ವಿಧಾನದಲ್ಲಿ ಕೇವಲ ಒಂದರಿಂದ ಎರಡು ಗುಂಟೆಯಷ್ಟು ಜಾಗದಲ್ಲಿ 200 ರಿಂದ 400 ಗಿಡಗಳನ್ನು ಬೆಳೆಯಬಹುದು. ಅಲ್ಪ ಜಾಗದಲ್ಲೇ ಹೆಚ್ಚು ಗಿಡಗಳನ್ನು ಬೆಳೆಸುವುದೇ ಮಿಯಾವಾಕಿ ಪದ್ಧತಿಯ ಪ್ರಮುಖ ಅಂಶವಾಗಿದೆ.

ಈ ಯೋಜನೆಯಡಿ ಗಿಡಗಳನ್ನು ಬೆಳೆಸುವುದು ಹೇಗೆ?
ಜಪಾನ್ ಸಸ್ಯ ತಜ್ಞ ಡಾ. ಅಕಿರಾ ಮಿಯಾವಾಕಿ ಅಭಿವೃದ್ಧಿಪಡಿಸಿರುವ ಈ ಮಿಯಾವಕಿ ಅರಣ್ಯ ಪ್ರದೇಶವು ಸಾಂಪ್ರದಾಯಿಕ ಅರಣ್ಯಕ್ಕಿಂತ 30 ಪಟ್ಟು ಹೆಚ್ಚು ದಟ್ಟವಾಗಿರುತ್ತದೆ. ಮೊದಲಿಗೆ ನಿರ್ದಿಷ್ಟ ಸ್ಥಳವನ್ನು ಆಯ್ಕೆ ಮಾಡಿಕೊಂಡು ಮಣ್ಣಿನ ಫಲವತ್ತತೆ, ಅಲ್ಲಿನ ಪರಿಸರವನ್ನು ಅಧ್ಯಯನ ಮಾಡಲಾಗುತ್ತದೆ. ಸಗಣಿ, ಭತ್ತದ ಸಿಪ್ಪೆ ಹಾಗೂ ಇತರ ಸಾವಯವ ಪದಾರ್ಥಗಳನ್ನು ಮಣ್ಣಿಗೆ ಸೇರಿಸುವ ಮೂಲಕ ಪೋಷಕಾಂಶಗಳನ್ನು ಹೆಚ್ಚಿಗೆ ಮಾಡಲಾಗುತ್ತದೆ. ಆ ಮೂಲಕ ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯನ್ನು ನೀಗಿಸಲಾಗುತ್ತದೆ.

ಒಂದು ಚದರ ಮೀಟರ್ ವ್ಯಾಪ್ತಿಯಲ್ಲಿ 3 ರಿಂದ 4 ಗುಂಡಿಗಳನ್ನು ತೆಗೆದು, ಬಳಿಕ ಆ ಗುಂಡಿಗಳಲ್ಲಿ ಗಿಡ ನೆಡಲಾಗುತ್ತದೆ. ಆ ಮಣ್ಣಿಗೆ ಹೊಂದುವ ಸ್ಥಳೀಯ ಜಾತಿಯ ಗಿಡಗಳನ್ನು ಆಯ್ಕೆ ಮಾಡಿಕೊಂಡು ನೆಡುವುದರಿಂದ ಇತರ ಗಿಡಗಳ ಬೆಳವಣಿಗೆಗಳಿಗಿಂತ ಇವು ಹತ್ತು ಪಟ್ಟು ವೇಗವಾಗಿ ಬೆಳೆಯುತ್ತವೆ. ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿ ಸಾಕಷ್ಟು ಅಂತರ ಬಿಟ್ಟು ಗಿಡಗಳನ್ನು ನೆಡಲಾಗುತ್ತದೆ. ಆದರೆ ಮಿಯವಾಕಿ ಮಾದರಿಯಲ್ಲಿ ಒಂದು ಚದರ ಮೀಟರ್ ವ್ಯಾಪ್ತಿಯಲ್ಲಿ 3 ರಿಂದ 4 ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತದೆ. ಕಡಿಮೆ ಜಾಗದಲ್ಲಿ ಹೆಚ್ಚು ಗಿಡಗಳನ್ನು ಬೆಳೆಸುವುದು ಮಿಯವಾಕಿಯ ವಿಶೇಷ.

ನಗರ ಪ್ರದೇಶದಲ್ಲಿ ಯಾವ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ?
ಈ ವಿಧಾನದಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆಯುವ ಗಿಡಗಳ ಬದಲು, ಸಾಧಾರಣ ದಪ್ಪ ಬೆಳೆಯುವ ಗಿಡಗಳನ್ನು ನಗರ ಪ್ರದೇಶಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದರಿಂದ ಗಾಳಿ, ಮಳೆಯ ಸಮಯದಲ್ಲಿ ಗಿಡಗಳು ಉರುಳುವ ಅಪಾಯ ಇರುವುದಿಲ್ಲ. ಸಾಂದ್ರತೆ ಹೆಚ್ಚಾಗಿರುವುದರಿಂದ ನೆಲಕ್ಕೆ ಉರುಳುವ ಅಪಾಯ ತೀರಾ ಕಡಿಮೆಯಾಗಿರುತ್ತದೆ. ಸ್ಥಳೀಯ ಜಾತಿಯ ಬೇವು, ಹುಣಸೆ ಸೇರಿದಂತೆ ಔಷಧೀಯ ಸಸ್ಯಗಳನ್ನು ಈ ಪದ್ಧತಿಯಲ್ಲಿ ಬೆಳೆಸಬಹುದು. ಎರಡು ವರ್ಷ ಗಿಡಗಳನ್ನು ಪೋಷಿಸಿದರೆ ಸಾಕು, ಗೊತ್ತಿಲ್ಲದಂತೆ ಪುಟ್ಟದೊಂದು ಅರಣ್ಯ ನಿರ್ಮಾಣವಾಗುತ್ತದೆ.

ಹುಬ್ಬಳ್ಳಿಯ ತೋಳನಕೆರೆ ಪ್ರದೇಶದಲ್ಲಿ ಔಷಧ ವನ
ಈ ಯೋಜನೆಯಡಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ತೋಳನಕೆರೆ ಸಮೀಪ ಸಸ್ಯ ಸಂಕುಲಗಳನ್ನು ಬೆಳೆಸಿ ನಗರ ಅರಣ್ಯೀಕರಣ ಮಾಡುವ ಗುರಿ ಹೊಂದಲಾಗಿದೆ. ಇಲ್ಲಿ ಔಷಧ ಗಿಡ ಮೂಲಿಕೆಗಳ ಪಾರ್ಕ್ ಬೆಳೆಸಲು ನಿರ್ಧರಿಸಲಾಗಿದೆ. 35 ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಈ ತೋಳನಕೆರೆ ಹತ್ತಿರದಲ್ಲಿ 2.5 ಎಕರೆ ಜಾಗದಲ್ಲಿ ಅರ್ಬನ್ ಫಾರೆಸ್ಟ್ ಗಾರ್ಡನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಜಾಗದ ಅರ್ಧ ಎಕರೆಯಲ್ಲಿ ಅರ್ಬನ್ ಫಾರೆಸ್ಟ್, ಅರ್ಧ ಎಕರೆಯಲ್ಲಿ ಟ್ರೀ ಪಾರ್ಕ್, ಅರ್ಧ ಎಕರೆಯಲ್ಲಿ ಔಷಧ ಸಸ್ಯಗಳನ್ನು ಬೆಳೆಸಲು ನಿರ್ಧರಿಸಲಾಗಿದೆ.

ಅವಳಿ ನಗರದ ಐದು ಪ್ರದೇಶಗಳು
ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಐದು ಸ್ಥಳಗಳಲ್ಲಿ ಈ ಅಕಿರಾ ಮಿಯಾವಾಕಿ ಕಿರು ಅರಣ್ಯ ಬೆಳೆಸಲು ಯೋಜನೆ ರೂಪಿಸಲಾಗಿದೆ. ಹುಬ್ಬಳ್ಳಿಯಲ್ಲಿ ಎರಡು, ಧಾರವಾಡದಲ್ಲಿ ಮೂರು ಕಡೆ ಈ ಯೋಜನೆ ಜಾರಿ ಮಾಡಲಾಗುವುದು. ಹುಬ್ಬಳ್ಳಿಯ ತೋಳನಕೆರೆ ಮತ್ತು ನೃತಪತುಂಗ ಬೆಟ್ಟದ ಪಿರಮಿಡ್ ಧ್ಯಾನ ಕೇಂದ್ರದ ಯೋಜನೆ ರೂಪಿಸಲು ನಿರ್ಧರಿಸಲಾಗಿದ್ದರೆ, ಧಾರವಾಡದ ದೊಡ್ಡ ನಾಯಕನಕೊಪ್ಪ ಬಡಾವಣೆ ಸೇರಿದಂತೆ ಇತರ ಎರಡು ಕಡೆ ಯೋಜನೆಯ ನೀಲ ನಕ್ಷೆ ಸಿದ್ಧವಾಗಿದೆ. ನಗರದಲ್ಲಿ ಹಸಿರು ವಲಯಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯಿಂದ ಪಾಲಿಕೆಯು ರೋಟರಿ ಕ್ಲಬ್ ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಈ ಕೆಲಸಕ್ಕೆ ಕೈ ಹಾಕಿದೆ.

ನಗರದಲ್ಲಿ ದಿನದಿಂದ ದಿನಕ್ಕೆ ಗಿಡ-ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಗರಗಳು ಬೆಳೆಯುತ್ತಿರುವುದೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಹಸಿರು ಹೆಚ್ಚಿಸಲು ಈ ಯೋಜನೆಯನ್ನು ಜಾರಿ ಮಾಡಲು ನಿರ್ಧರಿಸಲಾಗಿದೆ. ಅವಳಿ ನಗರದ ಒಟ್ಟು ಐದು ಸ್ಥಳಗಳಲ್ಲಿ ಅಕಿರಾ ಮಿಯಾವಾಕಿ ಕಿರು ಅರಣ್ಯ ಬೆಳೆಸಲು ಯೋಜನೆ ರೂಪಿಸಲಾಗಿದೆ. ಈ ಅರಣ್ಯ ಪದ್ಧತಿಯಲ್ಲಿ ಸ್ಥಳೀಯ ಸಸ್ಯ ಸಂಕುಲಗಳನ್ನು ಬೆಳೆಸಿ, ನಗರ ಅರಣ್ಯೀಕರಣ ಮಾಡುವ ಗುರಿ ಇದೆ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.

ಇದನ್ನೂ ಓದಿ:

ಲಸಿಕೆ ಹಾಕಿಸಿಕೊಳ್ಳಲು ಬನ್ನಿ ಎಂದರೆ ಅರಣ್ಯಕ್ಕೆ ಓಟ; ಬುಡಕಟ್ಟು ಜನರಲ್ಲಿ ವ್ಯಾಕ್ಸಿನೇಷನ್​ ಕುರಿತು ದೂರವಾಗದ ಮೂಢನಂಬಿಕೆ

ರೈತರ ಅನುಕೂಲಕ್ಕಾಗಿ ಹೊಸ ಪ್ರಯೋಗ; ಕುಂದಾಪುರದಲ್ಲಿ 50,000 ಟ್ರೇ ಭತ್ತದ ಸಸಿ ಮಾಡುವ ನರ್ಸರಿ ಆರಂಭ