
ಬಾಗಲಕೋಟೆ, ಜೂನ್ 30: ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಅಂಧಾ ದರ್ಬಾರ್ ಪ್ರಕರಗಳು ಹೆಚ್ಚುತ್ತಿದ್ದು, ಇತ್ತೀಚೆಗೆ ಕಲಾದಗಿ ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯ ಪತ್ನಿ ರೋಗಿಗಳ ತಪಾಸಣೆ ನಡೆಸಿದ್ದ ಪ್ರಕರಣ ಮಾಸುವ ಮುನ್ನವೇ ಅಧಿಕಾರಿಗಳ ಮತ್ತೊಂದು ಕಳ್ಳಾಟ ಬಯಲಾಗಿದೆ. ಬಾಗಲಕೋಟೆ ನಗರ ಸಭೆಯಲ್ಲಿ ಹೊರಗಿನವರು ಕಚೇರಿ ಕಾರ್ಯ ಮಾಡುತ್ತಿರುವ ವಿಚಾರ ಬಹಿರಂಗಗೊಂಡಿದ್ದು, ಸಿಬ್ಬಂದಿಯ ಕಾರುಬಾರು ಭಾರಿ ಚರ್ಚೆಗೆ ಗ್ರಾಸವಾಗಿದೆ.
ನಗರ ಸಭೆಗೆ ಸಂಬಂಧವೇ ಇಲ್ಲದವರು ಕಚೇರಿಯ ಕೊಠಡಿಯಲ್ಲಿ ಲ್ಯಾಪ್ಟಾಪ್ ಇಟ್ಟುಕೊಂಡು ಕರ ವಸೂಲಿಗೆ ಸಂಬಂಧಿಸಿದ ದಾಖಲೆ, ತೆರಿಗೆ ಚಲನ್ ತಯಾರಿಸುತ್ತಿದ್ದಾರೆ. ಬಾಳಪ್ಪ ನಿಡಸೋಸಿ ಎಂಬ ಬಿಲ್ ಕಲೆಕ್ಟರ್ ತಾವು ಮಾಡಬೇಕಾದ ಕೆಲಸವನ್ನು ಹೊರಗಿನ ಯುವಕರಿಂದ ಮಾಡಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ತಮ್ಮ ಕೆಲಸವನ್ನು ನಗರ ಸಭೆಗೆ ಸಂಬಂಧವೇ ಇಲ್ಲದ ಯುವಕರಿಂದ ಮಾಡಿಸುತ್ತಿದ್ದು, ಇದನ್ನ ಬೇರೆ ಸಮರ್ಥಿಸಿಕೊಂಡಿದ್ದಾರೆ. ನಗರ ಸಭೆಯಿಂದ ನೇಮಕವಾಗದ, ಹೊರಗುತ್ತಿಗೆ ನೌಕರರೂ ಅಲ್ಲದವರು ರಾಜಾರೋಷವಾಗಿ ನಗರಸಭೆ ಕೊಠಡಿಯಲ್ಲಿ ಡಾಟಾ ಎಂಟ್ರಿ ಕೆಲಸ ಮಾಡೋದು ಹೇಗೆ ಸಾಧ್ಯ ಎಂಬ ಪ್ರಶ್ನೆಯೀಗ ಉದ್ಭವಿಸಿದೆ.
ಇದನ್ನೂ ಓದಿ: ರೋಗಿಗಳ ಜೀವದ ಜೊತೆ ಚೆಲ್ಲಾಟ; ಪತಿ ಸರಕಾರಿ ವೈದ್ಯ, ಆದರೆ ಚಿಕಿತ್ಸೆ ನೀಡೋದು ಪತ್ನಿ!
ಇನ್ನು ಈ ಬಗ್ಗೆ ನಗರಸಭೆ ಆಯುಕ್ತ ಆರ್. ವಾಸಣ್ಣ ಪ್ರತಿಕ್ರಿಯಿಸಿದ್ದು, ವಿಚಾರ ತನಗೆ ಗೊತ್ತಿಲ್ಲ. ಬಾಳಪ್ಪ ಅವರು ತನ್ನಿಂದ ಯಾವುದೇ ಅನುಮತಿ ಪಡೆದಿಲ್ಲ. ಅಲ್ಲದೆ, ಈ ರೀತಿ ಕೆಲಸ ಮಾಡಿಸುವುದು ತಪ್ಪು. ಹೀಗಾಗಿ ಕೂಡಲೇ ಅವರಿಗೆ ನೊಟೀಸ್ ಜಾರಿ ಮಾಡುತ್ತೇವೆ. ಹೊರಗಿನವರನ್ನು ನಗರಸಭೆಯಿಂದ ಕಳುಹಿಸುವ ಜೊತೆಗೆ ಅಧಿಕಾರಿಯ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:18 pm, Tue, 30 June 26