ಜಾತ್ರೆಗೆ ಹಣ ಕೊಡದಿದ್ದಕ್ಕೆ 7 ಕುಟುಂಬಗಳಿಗೆ ಊರಿನಿಂದಲೇ ಬಹಿಷ್ಕಾರ: ಬಾಗಲಕೋಟೆಯಲ್ಲೊಂದು ಅಮಾನವೀಯ ಘಟನೆ

ಬಾಗಲಕೋಟೆ ಜಿಲ್ಲೆಯ ಹುಣಸಿಕಟ್ಟಿ ಗ್ರಾಮದಲ್ಲಿ ಹನುಮಂತ ದೇವರ ಜಾತ್ರೆಗೆ 600 ರೂ. ಹಣ ನೀಡದ ಕಾರಣ 7 ಕುಟುಂಬಗಳಿಗೆ ಗ್ರಾಮದಿಂದಲೇ ಅಮಾನವೀಯವಾಗಿ ಬಹಿಷ್ಕಾರ ಹಾಕಲಾಗಿದೆ. ಪೂಜಾರಿಗಳು, ಕಿರಾಣಿ ಅಂಗಡಿಯವರು ಇವರೊಂದಿಗೆ ವ್ಯವಹರಿಸದಂತೆ ಡಂಗುರ ಸಾರಲಾಗಿದೆ. ಘಟನೆಯಿಂದ ಮಾನಸಿಕವಾಗಿ ನೋವುಂಡ ಕುಟುಂಬವೊಂದು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ಕಾನೂನು ಕ್ರಮಕ್ಕೆ ಆಗ್ರಹಿಸಿದೆ.

ಜಾತ್ರೆಗೆ ಹಣ ಕೊಡದಿದ್ದಕ್ಕೆ 7 ಕುಟುಂಬಗಳಿಗೆ ಊರಿನಿಂದಲೇ ಬಹಿಷ್ಕಾರ: ಬಾಗಲಕೋಟೆಯಲ್ಲೊಂದು ಅಮಾನವೀಯ ಘಟನೆ
7 ಕುಟುಂಬಗಳಿಗೆ ಊರಿಂದ ಬಹಿಷ್ಕಾರ
Image Credit source: Tv9 Kannada
Edited By:

Updated on: May 01, 2026 | 4:01 PM

ಬಾಗಲಕೋಟೆ, ಮೇ 01: ರಾಜ್ಯ ಸರ್ಕಾರ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಕೆಲ ಅನಿಷ್ಟ ಪದ್ಧತಿಗಳಿಗೆ ಮಾತ್ರ ಬ್ರೇಕ್​​ ಬೀಳುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆಯೆಂದರೆ ಬಾಗಲಕೋಟೆ ಜಿಲ್ಲೆಯಲ್ಲಿ 7 ಕುಟುಂಬಗಳಿಗೆ ಊರಿನಿಂದಲೇ ಬಹಿಷ್ಕಾರ ಹಾಕಿರೋದು. ಹೌದು, ಹನುಮಂತ ದೇವರ ಓಕುಳಿ ಜಾತ್ರೆಗೆ 600 ರೂಪಾಯಿ ಹಣ ನೀಡಿಲ್ಲ ಎಂಬ ಕಾರಣಕ್ಕೆ ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಜಮಖಂಡಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಯಲಪ್ಪ ಛಗಣ್ಣವರ, ಅಣ್ಣಪ್ಪ ಕಡಪಟ್ಟಿ, ಸಿದ್ದಪ್ಪ ಎಣ್ಣಿ, ಕರೆಪ್ಪ ಎಣ್ಣಿ, ಯಲ್ಲಪ್ಪ, ಮಲ್ಲಪ್ಪ ಬಟಕುರ್ಕಿ, ರಾಮಪ್ಪ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ಸಾಲದ್ದಕ್ಕೆ ಈ 7 ಕುಟುಂಬ ಹೊರಗೆ ಇಟ್ಟಿದ್ದೇವೆ ಎಂದು ಡಂಗುರ ಕೂಡ ಸಾರಲಾಗಿದೆ.

ಏಪ್ರಿಲ್​​ 2ರಂದು ಹನುಮನ ಓಕುಳಿ ಜಾತ್ರೆ ಹಿನ್ನೆಲೆ ಹಣ ಸಂಗ್ರಹಕಾರ್ಯ ನಡೆದಿತ್ತು. ಆದರೆ ಈ 7 ಕುಟುಂಬಗಳು ದುಡ್ಡನ್ನು ನೀಡದ ಕಾರಣಕ್ಕೆ ಏಪ್ರಿಲ್​​ 5ರಂದು ಬಹಿಷ್ಕಾರದ ಬಗ್ಗೆ ಡಂಗುರ ಸಾರಲಾಗಿದೆ. ಇವರ ಮನೆಗೆ ಸ್ವಾಮಿಗಳು, ಪೂಜಾರಿಗಳು ಹೋಗುವ ಹಾಗಿಲ್ಲ. ಇವರ ಮನೆ ಕಾರ್ಯಗಳಿಗೆ ಯಾರೂ ಹೋಗಬಾರದು. ಕಿರಾಣಿ ಅಂಗಡಿಯವರು ಈ ಕುಟುಂಬಗಳಿಗೆ ಏನು ಕೊಡುವ ಹಾಗಿಲ್ಲ ಎಂದು ಡಂಗುರ ಸಾರಲಾಗಿದೆ.

ಇದನ್ನೂ ಓದಿ: ಬಾಗಲಕೋಟೆ ಕಾರ್ಮಿಕರ ಖಾತೆಗೆ ಕೋಟಿ ಕೋಟಿ ಹಣ; ಮುಂದಾಗಿದ್ದೇನು ಗೊತ್ತಾ?

ಬಹಿಷ್ಕಾರ ಹಾಕಿರೋದನ್ನು ಪ್ರಶ್ನಿಸಿದ ವ್ಯಕ್ತಿ

ಇನ್ನು ಬಹಿಷ್ಕಾರಕ್ಕೆ ಒಳಗಾಗಿರುವ 7 ಕುಟುಂಬಗಳ ಸದಸ್ಯರ ಪೈಕಿ ರೇಲ್ವೆ ಇಲಾಖೆಯ ನೌಕರರಾಗಿರುವ ಯಲ್ಲಪ್ಪ ಛಗಣ್ಣವರ ಈ ನಿರ್ಧಾರವನ್ನು ಪ್ರಶ್ನೆ ಮಾಡಿದ್ದಾರೆ. ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವವರ ಮೇಲೆ ಕ್ರಮಕ್ಕೆ ಆಗ್ರಹಿಸಿರುವ ಅವರು, ಜಮಖಂಡಿ ತಹಶೀಲ್ದಾರ್​​, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ನಮಗೆ ಊರಲ್ಲಿ ಬಹಿಷ್ಕಾರ ಹಾಕಿದ ಹಿನ್ನೆಲೆ ಅಪಮಾನವಾಗಿದೆ, ಗೌರವಕ್ಕೆ ಧಕ್ಕೆಯಾಗಿದೆ. ಹೀಗಾಗಿ ಡಂಗುರ ಸಾರಿದವರು ಮತ್ತು ಸಾರಿಸಿದವರ ಮೇಲೆ‌ ಕಾನೂನು ಕ್ರಮ ಆಗಬೇಕು. ಅವರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ಊರಿಗೆ ಬಂದ ಅಧಿಕಾರಿಗಳು ಸಭೆ ನಡೆಸಿ ಎಲ್ಲರನ್ನೂ ಸಮಾಧಾನ ಮಾಡಿ ಹೋಗಿದ್ದಾರೆ. ಆದರೆ ನಮಗಾದ ಅಪಮಾನಕ್ಕೆ ಹೊಣೆ ಯಾರು ಎಂದು ಅವರು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us