
ಬಾಗಲಕೋಟೆ, ನವೆಂಬರ್ 13: ಟನ್ ಕಬ್ಬಿಗೆ 3500 ರೂ ಬೆಲೆ ನೀಡುವಂತೆ ಆಗ್ರಹಿಸಿ ನಡೆಸಿರುವ ಬಾಗಲಕೋಟೆ ಕಬ್ಬು ಬೆಳಗಾರರ ಹೋರಾಟ (Sugarcane Farmers Protest) ಇಂದು ಉಗ್ರ ಸ್ವರೂಪಕ್ಕೆ ತಿರುಗಿದೆ. ಮುಧೋಳ ತಾಲೂಕಿನ ಸೈದಾಪುರ ಗ್ರಾಮದ ಸಮೀರವಾಡಿಯ ಗೋದಾವರಿ ಕಾರ್ಖಾನೆ ಬಳಿ ಸಾಲಾಗಿ ನಿಲ್ಲಿಸಿದ್ದ 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ ಹಚ್ಚಲಾಗಿದೆ. ಇದೇ ವೇಳೆ ಕಲ್ಲೂ ತೂರಾಟ (stone pelting) ಉಂಟಾಗಿ ಬಾಗಲಕೋಟೆ ಎಎಸ್ಪಿ ಮಹಾಂತೇಶ್ವರ್ ಜಿದ್ದಿ ಅವರ ಕಾಲಿಗೆ ಗಂಭೀರ ಗಾಯವಾಗಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಮೀರ್ವಾಡಿಯ ಗೋದಾವರಿ ಕಾರ್ಖಾನೆ ಬಳಿ ಬೆಂಕಿ ಅವಘಡ ಬೆನ್ನಲ್ಲೇ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಮುಂದಾಗುತ್ತಿದ್ದಂತೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಬಾಗಲಕೋಟೆ ಎಎಸ್ಪಿ ಮಹಾಂತೇಶ್ವರ್ ಜಿದ್ದಿ ಅವರ ಕಾಲಿಗೆ ಬಲವಾಗಿ ಕಲ್ಲು ಬಿದ್ದಿದೆ. ಗಂಭೀರ ಗಾಯ ಹಿನ್ನೆಲೆ ತಕ್ಷಣ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಹಾಗೂ ಡಿಸಿ ಸಂಗಪ್ಪ ಜಿಲ್ಲಾ ಪಂಚಾಯತ್ ಸಿಇಓ ಶಶಿಧರ್ ಕುರೇರ ಸೇರಿದಂತೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಎಎಸ್ಪಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಮೀರ್ವಾಡಿಯ ಗೋದಾವರಿ ಕಾರ್ಖಾನೆ ಆವರಣ ಅಕ್ಷರಶಃ ರಣರಂಗವಾಗಿತ್ತು. 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಜಮಖಂಡಿ, ರಬಕವಿ-ಬನಹಟ್ಟಿ ಮತ್ತು ಮುಧೋಳ ತಾಲೂಕುಗಳಾದ್ಯಂತ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಘಟನೆ ಬಗ್ಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪುರ ಪ್ರತಿಕ್ರಿಯಿಸಿದ್ದು, ಈಗಾಗಲೇ ಡಿಸಿ ಅವರು ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರ ಜತೆ ಮೂರರಿಂದ ನಾಲ್ಕು ಬಾರಿ ಸಭೆ ಮಾಡಿದ್ದಾರೆ. ನಾನು ಚರ್ಚೆ ಮಾಡಿ ಬಗೆಹರಿಸುವ ಪ್ರಯತ್ನ ಮಾಡಿದ್ದೇನೆ. ಕೆಲವು ಕಿಡಿಗೇಡಿಗಳು ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿದ್ದಾರೆ. ದಯವಿಟ್ಟು ಯಾರು ಕೂಡ ತಾಳ್ಮೆ ಕಳೆದುಕೊಳ್ಳಬಾರದು. ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿದ್ದೇವೆ. ನಾನೂ ರೈತನ ಮಗ, ನನಗೂ ರೈತರ ಕಷ್ಟಗಳು ಗೊತ್ತಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:56 pm, Thu, 13 November 25