ಬಾಗಲಕೋಟೆ, ಮಾರ್ಚ್ 31: ಬಾದಾಮಿ (Badami) ತಾಲ್ಲೂಕಿನ ಹಳಗೇರಿ ವ್ಯಾಪ್ತಿಯ ಹೊಲದಲ್ಲಿ ಮಾರ್ಚ್ 9 ರಂದು ರಾತ್ರಿ 9 ಗಂಟೆಗೆ ಅವಧಿಯಲ್ಲಿ ಶರಣಪ್ಪ ಜಮ್ಮನಕಟ್ಟಿ ಎಂಬ ಕುರಿಗಾಹಿ ಕೊಲೆಯಾಗಿತ್ತು. ಶರಣಪ್ಪ ಅವರ ಕುರಿ ದೊಡ್ಡಿಗೆ ಕುರಿಕಳ್ಳತನಕ್ಕೆ ಯಾಕುಬ್, ಸಲ್ಮಾನ್, ಸಚಿನ್ ಎಂಬ ಕುರಿಗಳ್ಳರು ಬಂದಿದ್ದರು. ಶರಣಪ್ಪ ಅವರು ಈ ಕುರಿ ಕಳ್ಳರನ್ನು ಹಿಡಿಯಲು ಹೋದರು. ಆಗ, ಈ ಕುರಿ ಕಳ್ಳಲು ಶರಣಪ್ಪ ಅವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದರು. ಹೀಗಾಗಿ, ಕುರಿಗಾಹಿಗಳಿಗೆ ರಕ್ಷಣೆ ನೀಡಬೇಕು, ನಮ್ಮ ಆತ್ಮರಕ್ಷಣೆಗೆ ಬಂದೂಕು (Gun) ನೀಡಬೇಕೆಂದು ಕುರಿಗಾಹಿಗಳು ಹಾಗೂ ಕುರುಬ ಸಮುದಾಯದ (Kurub Community) ಜನರು ಪ್ರತಿಭಟನೆ ನಡೆಸಿದ್ದರು.
ಇದರಿಂದ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರು ಎಪ್ರಿಲ್ 7 ರಿಂದ ಕುರಿಗಾಹಿಗಳಿಗೆ ಬಂದೂಕು ತರಬೇತಿ ನೀಡಲು ಮುಂದಾಗಿದ್ದಾರೆ. ಈಗಾಗಲೇ 300 ಅರ್ಜಿ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಕೊಲೆಯಾದ ಕುರಿಗಾಹಿ ಶರಣಪ್ಪ ಬಾದಾಮಿ ತಾಲ್ಲೂಕಿನ ಉಗಲವಾಟ ಗ್ರಾಮದವರಾಗಿದ್ದರು. ಇವರ ಕೊಲೆ ಪ್ರಕರಣ ಇಡೀ ಕುರಿಗಾಹಿಗಳಿಗೆ ಬಂದೂಕು ತರಬೇತಿ ಪಡೆಯುವಲ್ಲಿ ಮಾರ್ಗ ತೋರಿದೆ. ಎಸ್ ಪಿ ಅಮರನಾಥ ರೆಡ್ಡಿ ಕುರಿಗಾಹಿಗಳ ರಕ್ಷಣೆಗೆ ವಿಶೇಷ ಆಸಕ್ತಿ ತೋರಿದ್ದಾರೆ. ರಾತ್ರಿ ಕುರಿ ದೊಡ್ಡಿಗಳಿಗೆ ಭೇಟಿ ನೀಡಿ ಅವರ ಜೀವನವನ್ನು ಅರ್ಥ ಮಾಡಿಕೊಂಡಿದ್ದಾರೆ. ಅವರಿಂದ ಮಾಹಿತಿ ಪಡೆದು ಎಪ್ರಿಲ್ 7 ರಿಂದ ಎಪ್ರಿಲ್ 15 ರವರೆಗೆ ಎಸ್ಬಿಬಿಎಲ್ ಹಾಗೂ ಡಿಬಿಬಿಎಲ್ ಬಂದೂಕತು ತರಬೇತಿ ನೀಡಲು ಮುಂದಾಗಿದ್ದಾರೆ. ಪೊಲೀಸ್ ಪರೇಡ್ ಗ್ರೌಂಡ್ನಲ್ಲಿ ಎಪ್ರಿಲ್ 7 ರಿಂದ ಬೆಳಿಗ್ಗೆ 6.30 ಕ್ಕೆ ತರಬೇತಿ ಆರಂಭವಾಗಲಿದೆ. ಜೊತೆಗೆ ಅರ್ಜಿ ಹಾಕುವ ವಿಧಾನವನ್ನು ಸರಳೀಕರಣ ಮಾಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಬಂದೂಕು ಲೈಸೆನ್ಸ್ ಪಡೆಯುವುದು ಹೇಗೆ? ಅರ್ಜಿ ಸಲ್ಲಿಕೆ ಪ್ರಕ್ರಿಯೆ, ನಿಯಮಗಳೇನು? ಇಲ್ಲಿದೆ ಮಾಹಿತಿ
ತರಬೇತಿ ನಂತರ ಪರವಾನಗಿ ಪಡೆದು ಬಂದೂಕು ಖರೀದಿಸಬಹುದಾಗಿದೆ. ಇನ್ನು, ಈ ಬಗ್ಗೆ ಕುರುಬ ಸಮುದಾಯದ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತ್ಮರಕ್ಷಣೆಗೆ ಬಂದೂಕು ತರಬೇತಿ ನೀಡುತ್ತಿರುವುದು ಒಳ್ಳೆಯದು. ಆದರೆ, ಅದು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಜೊತೆಗೆ ಸರಕಾರ ಕುರಿಗಾಹಿಗಳಿಗೆ ಉಚಿತವಾಗಿ ಸೋಲಾರ್ ಸಿಸಿ ಕ್ಯಾಮೆರಾ ನೀಡಬೇಕೆಂದು ಆಗ್ರಹಿಸಿದ್ದಾರೆ.
Published On - 10:33 pm, Mon, 31 March 25