2ನೇ ಮದ್ವೆಯಾದ ಪತಿ: ಮೊದಲ ಹೆಂಡ್ತಿ ಜೀವನಾಂಶ ಕೇಳಿದ್ದಕ್ಕೆ ಗಂಡ ರಾಕ್ಷಸ ಅವತಾರ
ಎಲ್ಲೆಡೆ ಯುಗಾದಿ ಹಬ್ಬ ಮನೆ ಮಾಡಿದ್ದು, ಜನರು ಮನೆಯಲ್ಲಿ ಸಿಹಿ ಮಾಡಿ ಹಬ್ಬವನ್ನು ಸಂಭ್ರಮಿಸುತ್ತಿದ್ದರೆ, ಮತ್ತೊಂದೆಡೆ ವ್ಯಕ್ತಿಯೋರ್ವ ನಟ್ಟ ನಡುರಸ್ತೆಯಲ್ಲೇ ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ನಾದಿನಿ ಮೇಲೆ ಮಚ್ಚಿನಿಂದ ಮನ ಬಂದಂತೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಯಾವ ಮಟ್ಟಿಗೆ ಅಂದ್ರೆ ಕೈ ಬೆರಳುಗಳು ಕಟ್ ಆಗಿ ರಸ್ತೆಯಲ್ಲೇ ಬಿದ್ದಿವೆ. ಅಷ್ಟಕ್ಕೂ ಆ ನರಹಂತಕನ ಅಟ್ಟಹಾಸಕ್ಕೆ ಕಾರಣ ಏನು ಎನ್ನುವ ವಿವರ ಇಲ್ಲಿದೆ.

ರಾಯಚೂರು, (ಮಾರ್ಚ್ 30): ಬೈಕ್ನಲ್ಲಿ ಬಂದ ಯಮಕಿಂಕರ ಬೈಕ್ನಲ್ಲಿಟ್ಟಿದ್ದ ಮಚ್ಚು ತೆಗೆದುಕೊಂಡು ಏಕಾಏಕಿ ಎಳೆನೀರು ಕೊಚ್ಚೊ ಹಾಗೆ ಕೊಚ್ಚಿ ಹಾಕಿದ್ದಾನೆ. ವ್ಯಕ್ತಿಯೋರ್ವ ತನ್ನ ಪತ್ನಿ(Wife) ಹಾಗೂ ನಾದಿನಿ ಮೇಲೆ ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಈ ಘಟನೆ ನಡೆದಿದ್ದು, ರಾಯಚೂರು (Raichur) ತಾಲ್ಲೂಕಿನ ಏಗನೂರು ಗ್ರಾಮದಲ್ಲಿ. ತಿಮ್ಮಪ್ಪ ಎನ್ನುವ ವ್ಯಕ್ತಿಯೇ ಈ ರೀತಿ ವಿಕೃತವಾಗಿ ದಾಳಿ ನಡೆಸಿದ್ದಾನೆ. ಆರೋಪಿ ತಿಮ್ಮಪ್ಪ ತನ್ನ ಪತ್ನಿ ಪದ್ಮಾವತಿ, ಪದ್ಮಾವತಿ ತಂಗಿ ಭೂದೇವಿಯನ್ನು ಮಚ್ಚಿನಿಂದ ಹೊಡೆದಿದ್ದಾನೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ಜನ ಬೆಚ್ಚಿಬಿದ್ದಿದ್ದಾರೆ.
ತಿಮ್ಮಪ್ಪ ಪತ್ನಿ ಹಾಗೂ ನಾದಿನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸೋಕೆ ಕಾರಣವೇ ಆಸ್ತಿ. ಹೌದು,ಈ ರಾಕ್ಷಸ ತಿಮ್ಮಪ್ಪ ಯಾದವ್ ಹಾಗೂ ಪತ್ನಿ ಪದ್ಮಾವತಿಗೆ ನಾಲ್ಕು ಜನ ಮುದ್ದಾದ ಮಕ್ಕಳಿದ್ದಾರೆ. ಮೊದಮೊದಲು ಮಟ್ಕಾ ದಂಧೆ ನಡೆಸ್ತಿದ್ದನಂತೆ. ಬಳಿಕ ಪತ್ನಿಗೆ ನಿತ್ಯ ಟಾರ್ಚರ್ ಶುರು ಮಾಡಿದ್ದ. ಅಲ್ಲದೇ ಎರಡನೇ ಮದುವೆ ಕೂಡ ಆಗಿದ್ದಾನಂತೆ. ಹೀಗಾಗಿ ಪತ್ನಿ ಪದ್ಮಾವತಿ ಕೋರ್ಟ್ ಮೊರೆ ಹೋಗಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಳು. ಕೋರ್ಟ್ ಕೂಡ ಪತ್ನಿ ಪದ್ಮಾವತಿಗೆ ಜೀವನಾಂಶ ಕೊಡುವಂತೆ ಪತಿ ತಿಮ್ಮಪ್ಪಗೆ ಸೂಚಿಸಿತ್ತು. ಆದ್ರೆ ಕಳೆದ ಎರಡು ತಿಂಗಳ ಹಿಂದಷ್ಟೇ ಆರೋಪಿ ತಿಮ್ಮಪ್ಪ ಪತ್ನಿಗೆ ಜೀವನಾಂಶ ಕೊಡಲಾಗದೇ ಜೈಲು ಸೇರಿದ್ದ. ಬಳಿಕ ಮತ್ತೆ ಹೊರ ಬಂದು ಪತ್ನಿಗೆ ಟಾರ್ಚರ್ ಕೊಡಲಾರಂಭಿಸಿದ್ದಾನೆ.
ಇದನ್ನೂ ಓದಿ: ಯಾದಗಿರಿ ಡಬಲ್ ಮರ್ಡರ್ ಪ್ರಕರಣಕ್ಕೆ ಟ್ವಿಸ್ಟ್: ಹೆಣ್ಣಿನ ವಿಚಾರಕ್ಕೆ ಶುರುವಾದ ದ್ವೇಷ ಇಬ್ಬರ ಕೊಲೆಯಲ್ಲಿ ಅಂತ್ಯ
ತಿಮ್ಮಪ್ಪ ಐದು ಎಕರೆ ಜಮೀನು ಮಾಲೀಕ. ಹೀಗಾಗಿ ತನ್ನ ನಾಲ್ಕು ಮಕ್ಕಳ ಭವಿಷ್ಯಕ್ಕಾಗಿ ಜಮೀನಿನಲ್ಲಿ ಪಾಲು ಕೇಳಿದ್ಲು ಪದ್ಮಾವತಿ. ಈ ಮಧ್ಯೆ ನಿನ್ನೆಯಷ್ಟೇ ಪದ್ಮಾವತಿ ಜೀವನಾಂಶದ ಕುರಿತು ಮತ್ತೆ ಕೋರ್ಟ್ಗೆ ಹೋಗಿ ಹೋಗಿದ್ದಳು. ಇತ್ತ ಆಕೆ ತಂಗಿ ಭೂದೇವಿಗೆ ನಿಶ್ಚಿತಾರ್ಥವಾಗಿದ್ದು ಇನ್ನೊಂದು ತಿಂಗಳಲ್ಲಿ ಮದುವೆಯಿದೆ. ಹೀಗಾಗಿ ಅಕ್ಕ ಪದ್ಮಾವತಿ ಜೊತೆ ಟೇಲರಿಂಗ್ ಕೆಲಸ ಕಲಿಯಲಿಕ್ಕೆ ಆಕೆ ಜೊತೆಗಿದ್ದಳು. ನಿನ್ನೆ ಗ್ರಾಮದಲ್ಲಿ ಅಕ್ಕತಂಗಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಪಾಪಿ ತಿಮ್ಮಪ್ಪ ಇಬ್ಬರ ಮೇಲೂ ಮಚ್ಚಿನಿಂದ ದಾಳಿ ಮಾಡಿದ್ದಾನೆ.
ಘಟನೆಯಲ್ಲಿ ಪದ್ಮಾವತಿಯ ಕೈ ಬೆರಳುಗಳು ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ಮತ್ತೊಂದೆಡೆ ಅಕ್ಕನ ಜೊತೆಗಿದ್ದ ತಂಗಿಯ ಮುಂಗೈ ತುಂಗಾಡಿಗಿದ್ದು, ಸದ್ಯ ರಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮಚ್ಚಿನಿಂದ ದಾಳಿ ಮಾಡಿದ್ದ ತಿಮ್ಮಪ್ಪನನ್ನ ರಾಯಚೂರು ಗ್ರಾಮೀಣ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.