ಬಾಗಲಕೋಟೆ, ಫೆ.10: ಬಾಗಲಕೋಟೆ(Bagalakote)ಯ ನವನಗರದ ಸೆಕ್ಟರ್ ನಂ.112 ರಲ್ಲಿ ಮುಸ್ಲಿಂ ಸಮುದಾಯದಿಂದ “ತಬ್ಲಿಘಿ ಬಡೆ ಇಜ್ತೆಮಾ”ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಡೆ ಇಜ್ತೆಮಾ ಮೂಲಕ ರಾಜ್ಯ-ಅಂತರ್ರಾಜ್ಯದಿಂದ ಮೌಲ್ವಿಗಳು ಸೇರಿದಂತೆ ಲಕ್ಷಾಂತರ ಮುಸ್ಲಿಂ ಜನರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತದೆ. ಫೆಬ್ರವರಿ 14 ರಿಂದ 15 ರಂದು ಎರಡು ದಿನ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಅದು ಒಂದು ಮತೀಯ ಕಾರ್ಯಕ್ರಮ ಆಗಿದ್ದು, ಮತೀಯ ಭಾವನೆ ಕೆರಳಿಸುವಂತ ಚರ್ಚೆಗಳು ಅಲ್ಲಿ ನಡೆಯುತ್ತವೆ. ಬೇರೆ ಬೇರೆ ರಾಜ್ಯದ ಮೌಲ್ವಿಗಳು ಬರುತ್ತಾರೆ, ಮುಸ್ಲಿಂರನ್ನು ಪ್ರಚೋಧಿಸುತ್ತಾರೆ. ಇಂತಹ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದೆಂದು ಆಗ್ರಹ ಮಾಡುತ್ತಿದ್ದಾರೆ. ಇದಕ್ಕೆ ಅನುಮತಿ ಕೊಟ್ಟಿದ್ದನ್ನು ಹಿಂಪಡೆಯಬೇಕೆಂದು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಇಂದು ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆ ಮಾಡಿದರು.
ನಗರದ ಕಿಲ್ಲಾ ಓಣಿಯ ಅಂಬಾ ಭವಾನಿ ದೇವಸ್ಥಾನದಿಂದ ಹಿಂದು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ನಂತರ ಎಮ್ಜಿ ರಸ್ತೆ, ವಲ್ಲಭಭಾಯಿ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಬಂದು ಸೇರಿದರು. ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಮತೀಯ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಒಂದು ಕಡೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ‘ತಬ್ಲಿಘಿ ಬಡೆ ಇಜ್ತೆಮಾ’ ಕಾರ್ಯಕ್ರಮ ಸಿದ್ದತಾ ಕಾರ್ಯ ಮಾತ್ರ ಬರದಿಂದ ಸಾಗುತ್ತಿದೆ.
ಇದನ್ನೂ ಓದಿ:ಪ್ರತ್ಯೇಕ ಲವ್ ಜಿಹಾದ್ ವಿರೋಧಿ ಪೋಲೀಸ್ ಪಡೆ ರಚನೆಗೆ ಹಿಂದೂ ಸಂಘಟನೆಗಳ ಒತ್ತಾಯ
ನವನಗರ ಸೆಕ್ಟರ್ ನಂ 112 ರಲ್ಲಿ ಹತ್ತು ಎಕರೆಗೂ ಅಧಿಕ ಜಾಗದಲ್ಲಿ ಟೆಂಟ್ ಹಾಕಲಾಗುತ್ತಿದೆ. ಈಗಾಗಲೇ ಹಿಂದುಪರ ಸಂಘಟನೆ ಕಾರ್ಯಕರ್ತರು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುಮತಿ ಹಿಂಪಡೆಯಬೇಕೆಂದು ಮನವಿ ಕೊಟ್ಟಿದ್ದಾರೆ. ಆದರೆ, ಬಡೆ ಇಜ್ತೆಮಾ ಟೆಂಟ್ ಕಾರ್ಯ ಮಾತ್ರ ಮುಂದುವರೆಯುತ್ತಲೇ ಇದೆ. ಇನ್ನು ಈ ಬಗ್ಗೆ ಬಾಗಲಕೋಟೆ ಶಾಸಕ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹೆಚ್ ವೈ ಮೇಟಿ ಅವರನ್ನು ಕೇಳಿದರೆ, ‘ಅವರವರ ಧರ್ಮದ ಕಾರ್ಯಕ್ರಮ ಮಾಡ್ತಾರೆ, ಆ ಬಗ್ಗೆ ನಾನು ಮಾತಾಡೋದಿಲ್ಲ ಎಂದು ಸಮರ್ಪಕ ಉತ್ತರ ನೀಡದೆ ಎಸ್ಕೇಪ್ ಫಲಾಯನಗೈದಿದ್ದಾರೆ. ಒಟ್ಟಿನಲ್ಲಿ ಹಿಂದು ಪರ ಸಂಘಟನೆ ವಿರೋಧದ ಮಧ್ಯೆ ಬಡೆ ಇಜ್ತಿಮಾ ಕಾರ್ಯಕ್ರಮ ಸಿದ್ದತೆ ಬರದಿಂದ ಸಾಗುತ್ತಿದೆ. ಬಡೆ ಇಜ್ತಿಮಾ ಕಾರ್ಯಕ್ರಮ ಯಾವುದೇ ಕಲಹಕ್ಕೆ ಎಡೆ ಮಾಡಿ ಕೊಡದಂತೆ ಪೊಲೀಸರು ಕಟ್ಟೆಚ್ಚರ ವಹಿಸಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ