ಚಳಿಗೆ ಮೈ ಬಿಸಿ ಮಾಡಿಕೊಳ್ಳಲು ಹೋದ ಮೂವರು ಕಾರ್ಮಿಕರು ಬೆಂಕಿಗಾಹುತಿ; ಓರ್ವ ಸಾವು, ಇಬ್ಬರಿಗೆ ಸುಟ್ಟ ಗಾಯ

ಕೆರಕಲಮಟ್ಟಿ ಗ್ರಾಮದ ಬಳಿ ಇರುವ ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ ನಿನ್ನೆ (ಜ.12) ನಡೆದ ಬೆಂಕಿ ಅವಘಡದಲ್ಲಿ 37 ವರ್ಷದ ಅಶೋಕ ಚೌಹಾಣ್ ಎಂಬ ಕಾರ್ಖಾನೆ ಕಾರ್ಮಿಕ ಬೆಂಕಿ ತಗುಲಿ‌ ಚಿಕಿತ್ಸೆ ಫಲಿಸದೆ ಇಂದು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ‌.

ಚಳಿಗೆ ಮೈ ಬಿಸಿ ಮಾಡಿಕೊಳ್ಳಲು ಹೋದ ಮೂವರು ಕಾರ್ಮಿಕರು ಬೆಂಕಿಗಾಹುತಿ; ಓರ್ವ ಸಾವು, ಇಬ್ಬರಿಗೆ ಸುಟ್ಟ ಗಾಯ
ಚಳಿಗೆ ಮೈ ಬಿಸಿ ಮಾಡಿಕೊಳ್ಳಲು ಹೋದ ಮೂವರು ಕಾರ್ಮಿಕರು ಬೆಂಕಿಗಾಹುತಿ, ಓರ್ವ ಸಾವು, ಇಬ್ಬರಿಗೆ ಸುಟ್ಟ ಗಾಯ
Follow us
| Updated By: ಆಯೇಷಾ ಬಾನು

Updated on: Jan 13, 2022 | 3:16 PM

ಬಾಗಲಕೋಟೆ: ಸದ್ಯ ಜನವರಿ ಬಂದರೂ ಚಳಿ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಚಳಿಗೆ ಹೆದರಿ ಬೆಳಿಗ್ಗೆ ಎದ್ದು ಹೊರಹೋಗಲು ಜನ ಹಿಂದೇಟು ಹಾಕುವಂತಾಗಿದೆ. ಇಂತಹ ಚಳಿಯೇ ಈಗ ಮೂವರನ್ನು ಬೆಂಕಿಗೆ ಆಹುತಿ ಮಾಡಿ ಓರ್ವನ ಸಾವಿಗೆ ಕಾರಣವಾಗಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಕೇದಾರನಾಥ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಇಂತಹದ್ದೊಂದು ಘಟನೆ ನಡೆದು ಓರ್ವ ಬಲಿ ಪಡೆದಿದೆ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರ್ಖಾನೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಒಡೆತನಕ್ಕೆ ಸೇರಿದ್ದು ಕಳೆದ ವರ್ಷ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಖಾನೆ ಉದ್ಘಾಟನೆ ಮಾಡಿದ್ದರು.

ಬ್ಯಾರಲ್ನಲ್ಲಿ ಬೆಂಕಿ ಹಾಕಿ ಮೈ ಕಾಯಿಸಿಕೊಳ್ಳಲು ಹೋಗಿ ಮೈಗೆ ಬೆಂಕಿ ಹಚ್ಚಿಕೊಂಡರು ಕೆರಕಲಮಟ್ಟಿ ಗ್ರಾಮದ ಬಳಿ ಇರುವ ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ ನಿನ್ನೆ (ಜ.12) ನಡೆದ ಬೆಂಕಿ ಅವಘಡದಲ್ಲಿ 37 ವರ್ಷದ ಅಶೋಕ ಚೌಹಾಣ್ ಎಂಬ ಕಾರ್ಖಾನೆ ಕಾರ್ಮಿಕ ಬೆಂಕಿ ತಗುಲಿ‌ ಚಿಕಿತ್ಸೆ ಫಲಿಸದೆ ಇಂದು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಿನ್ನೆ ಬೆಳಿಗ್ಗೆ ಅಶೋಕ ಚೌಹಾಣ್, ಪ್ರಮೋದ್, ಮೆಹಬೂಬ್ ಸಾಬ್ ಎಂಬ ಮೂವರು ಕಾರ್ಮಿಕರು ಕಾರ್ಖಾನೆಯ ನೀರಿನ ಘಟಕದ ಬಳಿ ಬ್ಯಾರಲ್ ನಲ್ಲಿ ಬೆಂಕಿ ಹಾಕಿ ಮೈ ಕಾಯಿಸಿಕೊಳ್ಳುತ್ತಿದ್ದರು. ಈ ವೇಳೆ ಹೆಚ್ಚು ಬೆಂಕಿ‌ ಉರಿಯಲಿ ಅಂತ ಉರಿಯುವ ಬೆಂಕಿಯಲ್ಲಿ ಥಿನ್ನರ್ ಹಾಕಿದಾಗ ಬೆಂಕಿ ಭುಗಿಲೆದ್ದು ಈ ಮೂವರಿಗೆ ಬೆಂಕಿ ತಗುಲಿತ್ತು. ಮೂವರು ಓಡೋಡಿ ಬಂದು ನೀರಿನ ಪೈಪ್ ಕೆಳಗೆ ಕೂತು ಬೆಂಕಿ ನಂದಿಸಿಕೊಂಡಿದ್ದರು. ಆದರೆ ಅಶೋಕ ಚೌಹಾಣ್ ಅವರಿಗೆ ಪ್ರತಿಶತ 80 ರಷ್ಟು ಮೈ ಸುಟ್ಟಿತ್ತು. ಇನ್ನುಳಿದ ಇಬ್ಬರಿಗೆ ಸುಟ್ಟ ಗಾಯವಾಗಿದ್ದು ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ನಿನ್ನೆ ಅಶೋಕ ಚೌಹಾಣ್ ಅವರನ್ನು ಧಾರವಾಡ ಎಸ್ಡಿಎಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಕೆ ಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಅಶೋಕ ಚೌಹಾಣ್ ಸಾವನ್ನಪ್ಪಿದ್ದಾರೆ‌. ಮೃತ ಅಶೋಕ ಚೌಹಾಣ್ ಮುಧೋಳ ತಾಲ್ಲೂಕಿನ ಅಕ್ಕಿಮರಡಿ ಗ್ರಾಮದ ನಿವಾಸಿಯಾಗಿದ್ದು ಪತ್ನಿ ಮತ್ತು ಎರಡು ಗಂಡು‌ ಮಕ್ಕಳನ್ನು ಅಗಲಿದ್ದಾರೆ. ಘಟನೆ ಕೆರೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆ ಬಗ್ಗೆ ಮಾತಾಡಿದ ಎಸ್ ಪಿ ಲೋಕೇಶ್ ಜಗಲಾಸರ್ “ಕೆರೂರು ಪೊಲೀಸರು ಘಟನೆ ಕುರಿತು ಮೃತ ಹಾಗೂ ಗಾಯಾಳು ಕುಟುಂಬಸ್ಥರ ವಿಚಾರಣೆ ನಡೆಸುತ್ತಿದ್ದಾರೆ.ಅವರಿಂದ ಎಲ್ಲ‌ ಮಾಹಿತಿ ಸಂಗ್ರಹಿಸುತ್ತಿದ್ದು,ಕುಟುಂಬಸ್ಥರು ಏನು ಹೇಳಿಕೆ ಕೊಡುತ್ತಾರೆ ಅದರ ಮೇಲೆ ಮುಂದಿನ ಕ್ರಮ ” ಎಂದರು.

ಒಟ್ಟಾರೆ ಕೇವಲ ಮೈ ಬಿಸಿ ಮಾಡಿಕೊಳ್ಳೋಕೆ ಹೋದ ಕಾರ್ಮಿಕರಲ್ಲಿ ಓರ್ವ ಅದೇ ಬೆಂಕಿಗೆ ಸಿಲುಕಿ ಜೀವ ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸ.

ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ

ಇದನ್ನೂ ಓದಿ: ಮೂವರು ಸುಂದರಿಯರ ಜತೆ ಧರ್ಮ ಕೀರ್ತಿರಾಜ್​; ‘ಸುಮನ್​’ ಚಿತ್ರದ ಹಾಡುಗಳು ರಿಲೀಸ್​