
ಬಳ್ಳಾರಿ, ಜೂನ್ 11: ವಿಶ್ವ ವಿದ್ಯಾಲಯಗಳೆಂದರೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರಗಳು. ಆದರೆ ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮಾತ್ರ ಮಾತಿಗೆ ವಿರುದ್ಧ ಎಂಬಂತಿದೆ. ಹಣ ಪಡೆದು ನಕಲಿ ಘಟಿಕೋತ್ಸವ ಸರ್ಟಿಫಿಕೇಟ್ ಕೊಡುತ್ತಿದ್ದ ಹಗರಣದ ಬೆನ್ನಲ್ಲೇ ಯೂನಿವರ್ಸಿಟಿಯ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಡಿಗ್ರಿ ಫೇಲ್ ಆದ ವಿದ್ಯಾರ್ಥಿಗಳಿಂದ ಹಣ ಪಡೆದು ಪಾಸ್ ಮಾಡುವ ದಂಧೆಯಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿಯೇ ಭಾಗಿಯಾಗಿರೋದು ಹೌಹಾರುವಂತೆ ಮಾಡಿದೆ.
ಒಂದು ವಿಷಯಕ್ಕೆ 6 ಸಾವಿರ ರೂಪಾಯಿ ನೀಡಿದರೆ ಸಾಕು ಫೇಲ್ ಆದ ವಿದ್ಯಾರ್ಥಿಯನ್ನು ಇಲ್ಲಿನ ಸಿಬ್ಬಂದಿ ತೇರ್ಗಡೆ ಮಾಡುತ್ತಾರೆ. ಇದೇ ರೀತಿ ಹಣ ನೀಡಿ ಈಗಾಗಲೇ ಹಲವರು ಉತ್ತೀರ್ಣ ಕೂಡ ಆಗಿದ್ದಾರೆ. ಅಷ್ಟಕ್ಕೂ ಇದು ಈಗ ನಡೆಯುತ್ತಿರುವ ಹೊಸ ದಂಧೆಯಲ್ಲ. ಹಲವು ವರ್ಷಗಳಿಂದ ಯೂನಿವರ್ಸಿಟಿಯ ಕೆಲ ಸಿಬ್ಬಂದಿ ಈ ಕೆಲಸ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗಿದೆ. UCMC ವಿಭಾಗದ ರಿಯಾಜ್, ವೆಂಕಟೇಶ್ ವನದುರ್ಗ, ಯಲ್ಲಾಲಿಂಗ, ಚಂದ್ರಮೋಹನ್, ಉಮೇಶ್ ಎನ್ನುವವರ ಮೇಲೆ ಈ ಬಗ್ಗೆ ಗಂಭೀರ ಆರೋಪ ಕೇಳಿಬಂದಿದ್ದು, ಲಭ್ಯವಾಗಿರುವ ಆಡಿಯೋವೊಂದರಲ್ಲಿ ಕೆಲ ಸಿಬ್ಬಂದಿ ವಿದ್ಯಾರ್ಥಿಗಳ ಬಳಿ ಹಣ ಕೇಳಿರೋದು ದೃಢಪಟ್ಟಿದೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಮುಂಗಾರು ಮಳೆ ಅಬ್ಬರ, ಭಾರಿ ಅವಾಂತರ; ವಿಮ್ಸ್ ಆಸ್ಪತ್ರೆ, ಕೆಇಬಿ ಕಚೇರಿಗಳಿಗೆ ನುಗ್ಗಿದ ನೀರು
ಇನ್ನು ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಬ್ಬಂದಿಯ ಕಳ್ಳಾಟ ಬಯಲಾಗುತ್ತಿದ್ದಂತೆ ಈ ಬಗ್ಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಕ್ರೋಶ ವ್ಯಕ್ತಪಡಿಸಿದೆ. ಈ ದಂಧೆ ಹಲವಾರು ವರ್ಷಗಳಿಂದ ನಡೆಯುತ್ತಿದ್ದು, ಅನೇಕ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ. ದಂಧೆಯಲ್ಲಿ ವಿವಿಯ ಪ್ರಮುಖರು ಭಾಗಿಯಾಗಿದ್ದು, ದೊಡ್ಡ ಮಟ್ಟದಲ್ಲಿ ತನಿಖೆ ಮಾಡುವಂತೆ ಒತ್ತಾಯಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:30 pm, Thu, 11 June 26