AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್ ಮಾಡುವುದಿದ್ದರೆ ಮೊದಲು ಜನರ ಅಕೌಂಟ್​ಗೆ 25,000 ರೂ ಹಾಕಿ; ಸಭೆಯಲ್ಲಿ ಪ್ರತಿಪಕ್ಷಗಳ ಒತ್ತಾಯ

ಲಾಕ್​ಡೌನ್​ ಮಾಡಿದರೆ ಅದರ ಹೊಡೆತ ತಡೆದುಕೊಳ್ಳಲು ಜನರಿಗೆ ಆಗುವುದಿಲ್ಲ. ಅದರ ಬದಲು 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ.

ಲಾಕ್​ಡೌನ್ ಮಾಡುವುದಿದ್ದರೆ ಮೊದಲು ಜನರ ಅಕೌಂಟ್​ಗೆ 25,000 ರೂ ಹಾಕಿ; ಸಭೆಯಲ್ಲಿ ಪ್ರತಿಪಕ್ಷಗಳ ಒತ್ತಾಯ
ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Ghanashyam D M | ಡಿ.ಎಂ.ಘನಶ್ಯಾಮ
|

Updated on: Apr 19, 2021 | 6:16 PM

Share

ಬೆಂಗಳೂರು: ನಗರದಲ್ಲಿ ಲಾಕ್​ಡೌನ್ ಬೇಡವೇ ಬೇಡ. ಲಾಕ್​ಡೌನ್ ಮಾಡುವುದೇ ಆದರೆ ಜನರ ಅಕೌಂಟ್​ಗೆ ಮೊದಲು ₹ 25,000 ಹಾಕಿ. ಲಾಕ್​ಡೌನ್​ ಮಾಡಿದರೆ ಅದರ ಹೊಡೆತ ತಡೆದುಕೊಳ್ಳಲು ಜನರಿಗೆ ಆಗುವುದಿಲ್ಲ. ಅದರ ಬದಲು 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ. ಕೊರೊನಾ ನಿಯಮಾವಳಿಗಳ ಅನುಸರಣೆಗೆ ಒತ್ತು ಕೊಡಿ ಎಂದು ವಿಧಾನಸೌಧದಲ್ಲಿ ಸೋಮವಾರ ನಡೆದ ಬೆಂಗಳೂರಿನ ಶಾಸಕರು, ಸಂಸದರು ಮತ್ತು ಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಒಕ್ಕೊರಲ ಒತ್ತಾಯ ಮಾಡಿದರು. ಲಾಕ್​ಡೌನ್ ಬಗ್ಗೆ ನಾಳೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಕೊರೊನಾ ಪಾಸಿಟಿವ್ ಆಗಿರುವ ಕಾರಣ ಮಣಿಪಾಲ ಆಸ್ಪತ್ರೆಯಿಂದಲೇ ವಿಡಿಯೊ ಕಾನ್ಫರೆನ್ಸ್​ನಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಿಮ್ಮ ಸಲಹೆಗಳನ್ನು ಸ್ವೀಕರಿಸಿದ್ದೇನೆ. ನಿಮ್ಮೆಲ್ಲರನ್ನೂ ಗೌರವಿಸುತ್ತೇನೆ. ನಾಳೆ ಸರ್ವಪಕ್ಷ ಸಭೆಯ ಬಳಿಕ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕೋವಿಡ್-19 ನಿಯಂತ್ರಣಕ್ಕಾಗಿ ನಗರದಲ್ಲಿ ನಿಷೇಧಾಜ್ಞೆ ಜಾರಿಮಾಡಬೇಕು ಎಂದು ವಿಧಾನಸೌಧದಲ್ಲಿ ಸೋಮವಾರ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ರಾಮಲಿಂಗಾರೆಡ್ಡಿ ಒತ್ತಾಯ ಮಾಡಿದರು. ಒಂದು ವೇಳೆ ಲಾಕ್​ಡೌನ್ ಜಾರಿ ಮಾಡುವುದಾದರೆ ಸರ್ಕಾರದ ವತಿಯಿಂದ ಎಲ್ಲರಿಗೂ ಅಗತ್ಯವಸ್ತು ಪೂರೈಕೆ ಮಾಡಿ ಎಂದು ಸಲಹೆ ಮಾಡಿದರು.

ಕೊರೊನಾ ನಿಯಂತ್ರಿಸಲು ಸರ್ಕಾರ ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ನಮ್ಮ ಸಹಕಾರವಿದೆ. ನಾವು ಇಲ್ಲಿಗೆ ರಾಜಕಾರಣ ಮಾಡಲು ಬಂದಿಲ್ಲ. ನೀವೂ ಇಲ್ಲಿ ರಾಜಕಾರಣ ಮಾಡಬೇಡಿ. ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದಲ್ಲಿ ಅದಕ್ಕೆ ಪೂರಕವಾಗಿ ವಿಪಕ್ಷಗಳು ಏನು ಮಾಡಬಹುದೆಂದು ಹೇಳಬಹುದು ಎಂದು ತಿಳಿಸಿದರು.

ರಾಜ್ಯದಲ್ಲಿ ಒಂದೆಡೆ ಹಾಸಿಗೆ ಇಲ್ಲ, ಮತ್ತೊಂದೆಡೆ ತೀವ್ರ ನಿಗಾ ಘಟಕದಲ್ಲಿ ಸ್ಥಳಾವಕಾಶ ಇಲ್ಲ. ಆಮ್ಲಜನಕದ ದಾಸ್ತಾನು ಇಲ್ಲ ಎಂಬ ಭಯಾನಕ ಪರಿಸ್ಥಿತಿ ಉಂಟಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಬೆಂಗಳೂರು ನಗರದಲ್ಲಿ ಕನಿಷ್ಠ 25,000 ಹಾಸಿಗೆಗಳನ್ನು ವ್ಯವಸ್ಥೆ ಮಾಡಿ. ಹೋಮ್ ಐಸೋಲೇಷನ್​ನಲ್ಲಿ ಇರಬೇಕಿದ್ದ ಜನರು ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಲಾಕ್​ಡೌನ್ ಗಿಂತಲೂ ಐಪಿಸಿ 144 ಜಾರಿ ಮಾಡಿ ಗುಂಪು ಸೇರುವುದನ್ನು ತಡೆಯುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

ಕಲ್ಯಾಣ ಮಂಟಪ, ಸಮುದಾಯ ಭವನ, ಮಾರುಕಟ್ಟೆಗಳಲ್ಲಿ ಜನಸಂದಣಿ ನಿಯಂತ್ರಿಸಿ. ನೈಟ್ ಕರ್ಫ್ಯೂ ಸಮಯ ಬದಲಾವಣೆ ಅಗತ್ಯವಿಲ್ಲ. ಕೊಳಗೇರಿಗಳಲ್ಲಿ ಲಸಿಕಾ ಆಭಿಯಾನಕ್ಕೆ ಒತ್ತು ಕೊಡಬೇಕು. ಬಿಯು ನಂಬರ್ ಸೃಜನೆಯಾಗುವಲ್ಲಿ ವಿಳಂಬವಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರಲ್ಲಿ ಸೋಂಕಿತರ ಚಿಕಿತ್ಸೆ ಬೆಡ್ ಸಮಸ್ಯೆ ಹೆಚ್ಚಾಗಿದೆ. ನಾನೇ ಖುದ್ದು ಕರೆಮಾಡಿ ಬೆಡ್ ಅರೇಂಜ್ ಮಾಡೋಕೆ ಆಗುತ್ತಾ? ಕೊವಿಡ್ ವಾರ್​ ರೂಂಗೆ ಕರೆ ಮಾಡಿದರೂ ಮಾಹಿತಿ ಕೊಡುತ್ತಿಲ್ಲ. ಬೆಡ್ ಕೊಟ್ಟರೆ ಆಕ್ಸಿಜನ್ ಸಿಗುತ್ತಿಲ್ಲ ಎಂದು ಸಭೆಯಲ್ಲಿ ಸಮಸ್ಯೆಗಳನ್ನು ರಾಮಲಿಂಗಾರೆಡ್ಡಿ ಎಳೆಎಳೆಯಾಗಿ ಬಿಚ್ಚಿಟ್ಟರು. ಬೆಂಗಳೂರು ವಲಯಗಳನ್ನು ನಿರ್ವಹಿಸಲು ಸಚಿವರನ್ನು ನೇಮಿಸಿ ಎಂದು ಸಲಹೆ ಮಾಡಿದರು.

ಲೋಕಸಭೆ ಸ್ಪೀಕರ್ ಸಭೆ ಕೊವಿಡ್ ತಡೆ ಸಂಬಂಧ ಲೋಕಸಭೆ ಸಚಿವಾಲಯದಿಂದಲೂ ಸೋಮವಾರ ಸಭೆ ನಡೆಯಿತು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ದೇಶದ ಎಲ್ಲ ವಿಧಾನಸಭಾಧ್ಯಕ್ಷರು ಸಭೆಯಲ್ಲಿ ಭಾಗಿಯಾಗಿದ್ದರು. ರಾಜ್ಯದಿಂದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ಪಾಲ್ಗೊಂಡಿದ್ದರು.

(Bangalore Representatives Demand No Lockdown in City Meeting in Vidhana Soudha Concludes)

ಇದನ್ನೂ ಓದಿ: ನಾನಲ್ಲ, ಕೊರೊನಾ ಬಳಲುತ್ತಿದೆ; ಅಚ್ಚರಿಯ ಟ್ವೀಟ್​ ಮಾಡಿದ ಸೋನು ಸೂದ್

ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ಮುಸ್ಲಿಮರ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ಸ್ಥಳಾವಕಾಶ ಕೇಳಿದ ಜಮೀರ್ ಅಹ್ಮದ್