ಅನಗತ್ಯವಾಗಿ ಮುಷ್ಕರಕ್ಕೆ ಮುಂದಾದ್ರೆ ಪರ್ಯಾಯ ವ್ಯವಸ್ಥೆಗೂ ಸರ್ಕಾರ ಸಿದ್ಧ: 108 ಸಿಬ್ಬಂದಿಗೆ ದಿನೇಶ್ ಗುಂಡೂರಾವ್ ಎಚ್ಚರಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: May 06, 2024 | 10:35 PM

108 ಸಿಬ್ಬಂದಿಗಳಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ. ಏಜನ್ಸಿ - ಚಾಲಕರ ನಡುವಿನ ಸಮಸ್ಯೆಯನ್ನ ನಾವು ಸರಿಪಡಿಸುತ್ತಿದ್ದೇವೆ. ಅನಗತ್ಯವಾಗಿ ಸಿಬ್ಬಂದಿಗಳು ಮುಷ್ಕರಕ್ಕೆ ಮುಂದಾದರೆ ಪರ್ಯಾಯ ವ್ಯವಸ್ಥೆಗೂ ಸರ್ಕಾರ ಸಿದ್ಧವಿದೆ . ಬಿಜೆಪಿ ಸರ್ಕಾರವಿದ್ದ ವೇಳೆ ವ್ಯವಸ್ಥೆಯಲ್ಲಾದ ಲೋಪವನ್ನ ಸರಿಪಡಿಸಲು ಸಿಬ್ಬಂದಿಗಳು ಸಹಕರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​ ಹೇಳಿದ್ದಾರೆ.

ಅನಗತ್ಯವಾಗಿ ಮುಷ್ಕರಕ್ಕೆ ಮುಂದಾದ್ರೆ ಪರ್ಯಾಯ ವ್ಯವಸ್ಥೆಗೂ ಸರ್ಕಾರ ಸಿದ್ಧ: 108 ಸಿಬ್ಬಂದಿಗೆ ದಿನೇಶ್ ಗುಂಡೂರಾವ್ ಎಚ್ಚರಿಕೆ
ಧರಣಿ ನಿರತ 108 ಆ್ಯಂಬುಲೆನ್ಸ್​ ಚಾಲಕರಿಗೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ
Follow us on

ಬೆಂಗಳೂರು, ಮೇ 06: 108 ಆರೋಗ್ಯ ಕವಚದ ಆಂಬ್ಯುಲೆನ್ಸ್ (108 Ambulance Employers Strike) ಚಾಲಕರಿಗೆ ಸರ್ಕಾರದ ಕಡೆಯಿಂದ ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಆಂಬ್ಯುಲೆನ್ಸ್ ಚಾಲಕರಿಗೆ ನ್ಯಾಯಯುತವಾಗಿ ಸಿಗಬೇಕಾದ ವೇತನವನ್ನ ಸರ್ಕಾರ ನೀಡುತ್ತಿದೆ ಎಂದು ಹೇಳಿದ್ದಾರೆ. ಸರ್ಕಾರದಲ್ಲಿ ಯಾವುದೇ ಹಣಕಾಸಿನ ತೊಂದರೆ ಇಲ್ಲ. 108 ಆಂಬ್ಯುಲೆನ್ಸ್ ಯೋಜನೆ ಸುಗಮವಾಗಿ ನಡೆಸಲು ಆರ್ಥಿಕ ವರ್ಷ 2023-24 ನೇ ಸಾಲಿನಲ್ಲಿ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ ರೂ. 210.33 ಕೋಟಿ ರೂ. ಅನುದಾನವನ್ನು ಆಯವ್ಯಯದಲ್ಲಿ ಅನುಮೋದನೆಯಾಗಿದ್ದು, ಸದರಿ ಅನುದಾನದಲ್ಲಿ ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ನಿಗದಿಯಾದ ರೂ. 162.40 ಕೋಟಿ ರೂ. ಪೂರ್ಣ ಅನುದಾನವನ್ನು ಸೇವಾದಾರರಿಗೆ ಬಿಡುಗಡೆಗೊಳಿಸಲಾಗಿದೆ.

2024-25 ನೇ ಸಾಲಿನಲ್ಲಿ 108-ಆರೋಗ್ಯ ಕವಚ ಯೋಜನೆಗೆ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ ರೂ. 260.33 ಕೋಟಿಗಳ ಅನುದಾನವನ್ನು ಆಯವ್ಯಯದಲ್ಲಿ ಅನುಮೋದನೆಯಾಗಿದ್ದು ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ವಾರ್ಷಿಕ ರೂ. 162.40 ಕೋಟಿಗಳ ಅನುದಾನವನ್ನು ಬಿಡುಗಡೆಗೊಳಿಸಬೇಕಾಗಿರುತ್ತದೆ. ಆರೋಗ್ಯ ಇಲಾಖೆ ಹಾಗೂ ಇ.ಎಂ.ಆರ್‌.ಐ ಗ್ರೀನ್‌ ಹೆಲ್ತ್‌ ಸಂಸ್ಥೆಯವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ 711 ಆಂಬ್ಯುಲೆನ್ಸ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಸೇವೆ ಒದಗಿಸಿದ್ದಲ್ಲಿ ಪ್ರತಿ ತ್ರೈಮಾಸಿಕಕ್ಕೆ ರೂ. 40.60 ಕೋಟಿಗಳಂತೆ ವಾರ್ಷಿಕ ರೂ. 162.40 ಕೋಟಿಗಳ ಅನುದಾನವು ಬಿಡುಗಡೆಗೊಳಿಸಲಾಗುವುದು.

ಇದನ್ನೂ ಓದಿ: ಇಂದಿನಿಂದ ಆಂಬ್ಯುಲೆನ್ಸ್​ ಸೇವೆ ಬಂದ್​​? ರಾಜ್ಯ ಸರ್ಕಾರಕ್ಕೆ ಕಿವಿ ಹಿಂಡಿದ ಕುಮಾರಸ್ವಾಮಿ

ವಿಪಕ್ಷಗಳ ನಾಯಕರು ಅನಗತ್ಯವಾಗಿ ಗ್ಯಾರಂಟಿ ಯೋಜನೆಯಿಂದ ಹಣಕಾಸಿನ ತೊಂದರೆಯಾಗಿದೆ ಎಂದು 108 ಆರೋಗ್ಯ ಕವಚ ಯೋಜನೆಗೆ ತಳುಕು ಹಾಕುವುದರಲ್ಲಿ ಯಾವುದೇ ಹುರುಳಿಲ್ಲ ಎಂದು‌ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 108 ವ್ಯವಸ್ಥೆಯಲ್ಲಿ ಒಂದಿಷ್ಟು ಲೋಪದೋಷಗಳು ಆಗಿರುವುದು ನಿಜ. 108 ಸಿಬ್ಬಂದಿಗಳಿಗೆ ಕನಿಷ್ಠಿ ವೇತನದ ಜಾರಿಗೊಳಿಸಿದ್ದಲ್ಲದೇ ಸರ್ಕಾರದ ಅನುಮತಿ ಇಲ್ಲದೇ ನಿಯಮಬಾಹಿರವಾಗಿ ಶೇ 45 ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು. ಇದೀಗ 108 ಸಿಬ್ಬಂದಿಗಳು ಶೇ 45 ರಷ್ಟು ವೇತನ ಹೆಚ್ಚಳ ಮಾಡಿರುವುದನ್ನ ಕಡಿತಗೊಳಿಸದಂತೆ ಬೇಡಿಕೆ ಇಡುತ್ತಿದ್ದಾರೆ.

ನಮ್ಮ ಸರ್ಕಾರ ನಿಯಮಾನುಸಾರ ಕನಿಷ್ಠ ವೇತನ ನೀಡಲು ಬದ್ಧವಾಗಿದ್ದು, ಅದರಂತೆ ಅನುದಾನವನ್ನ ನೀಡುತ್ತಾ ಬಂದಿದೆ. ಪ್ರತಿಯೊಬ್ಬ ಆಂಬ್ಯುಲೆನ್ಸ್ ಚಾಲಕರಿಗೆ 35 ಸಾವಿರಕ್ಕೂ ಹೆಚ್ವು ವೇತನ ದೊರೆಯುತ್ತಿದೆ. ಇದರ ಮೇಲೂ ಮೂಲ ವೇತನದಲ್ಲಿ ಶೇ 45 ರಷ್ಟು ಹೆಚ್ಚಳ ಮಾಡುವ ಬಗ್ಗೆ ಸಿಬ್ಬಂದಿಗಳು ಬೇಡಿಕೆ ಇಟ್ಟಿದ್ದು, ನಿಯಮಬಾಹಿರವಾಗಿ ಈ ಕ್ರಮ ಕೈಗೊಳ್ಳಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಈ ಬಗ್ಗೆ 108 ಸಿಬ್ಬಂದಿಗಳನ್ನ ಕರೆದು ಚರ್ಚಿಸಿ ಮನವರಿಕೆ ಮಾಡಿಕೊಡಲಾಗಿದೆ. ಅಲ್ಲದೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬದಲಾವಣೆ ಮಾಡಲು ಅವಕಾಶವಿಲ್ಲ ಎಂದು ಸಿಬ್ಬಂದಿಗಳಿಗೆ ತಿಳಿಸಲಾಗಿದೆ. ನ್ಯಾಯಯುತವಾಗ ಕನಿಷ್ಢ ವೇತನ ಸರ್ಕಾರ ನೀಡುತ್ತಿದ್ದು, ಸರ್ಕಾರದಲ್ಲಿ ಯಾವುದೇ ಹಣಕಾಸಿನ ಕೊರತೆಯಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಅರ್ಧ ಗಂಟೆ ಸುರಿದ ಮಳೆಗೆ ಬಿದ್ದ 25 ಮರಗಳು, ಎಲ್ಲೆಲ್ಲಿ ಏನಾಗಿದೆ? ಇಲ್ಲಿದೆ ವಿವರ

ಅಲ್ಲದೇ ಜಿವಿಕೆ ಇಎಂಆರ್ ಸಂಸ್ಥೆ ಹಾಗೂ ಚಾಲಕರ ನಡುವಿನ ವೇತನ ಪಾವತಿ ಸಮಸ್ಯೆಗಳ ಬಗ್ಗೆಯೂ ಸಂಸ್ಥೆಯವರೊಂದಿಗೆ ಇಲಾಖೆ ಆಯುಕ್ತರು ಚರ್ಚಿಸಿ, ವೇತನ ಬಾಕಿ ಉಳಿಸಿಕೊಳ್ಳದಂತೆ ಆದೇಶಿಸಿದ್ದಾರೆ. ಇದಕ್ಕೂ ಮೀರಿ 108 ಆಂಬ್ಯುಲೆನ್ಸ್ ಸಿಬ್ಬಂದಿಗಳು ಮುಷ್ಕರಕ್ಕೆ ಮುಂದಾದರೆ ಪರ್ಯಾಯ ವ್ಯವಸ್ಥೆಗೆ ಸರ್ಕಾರ ಸಿದ್ಧವಿದೆ. 108 ಆಂಬ್ಯುಲೆನ್ಸ್ ಸೇವೆಯನ್ನ ನಿಲ್ಲಿಸಲು ಸಾಧ್ಯವಿಲ್ಲ. ಅನಿವಾರ್ಯವಾಗಿ ಸರ್ಕಾರ ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕಾಗಲಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ.

ಹಿಂದಿನ ಸರ್ಕಾರವಿದ್ದ ವೇಳೆ ವ್ಯವಸ್ಥೆಯಲ್ಲಾದ ಲೋಪವನ್ನ ನಮ್ಮ ಸರ್ಕಾರ ಸರಿಪಡಿಸುತ್ತಿದೆ. ಟೆಂಡರ್ ಗಳನ್ನ ಕರೆಯದೇ ಜಿವಿಕೆ ಇಎಂಆರ್ ಸಂಸ್ಥೆಯೊಂದಿಗೆ ಒಡಂಬಡಿಕೆಯ ಮೂಲಕವೇ 108 ವ್ಯವಸ್ಥೆಯನ್ನ ಮುಂದುವರಿಸಿಕೊಂಡು ಬರಲಾಗಿದೆ. ನಮ್ಮ ಸರ್ಕಾರ ಬಂದ ಬಳಿಕ ನಿಯಮನುಸಾರ ಟೆಂಡರ್ ಕರೆಯಲು ಕ್ರಮ ಕೈಗೊಳ್ಳುತ್ತಿದೆ. ವ್ಯವಸ್ಥೆಯಲ್ಲಾದ‌ ಲೋಪಗಳನ್ನ ಸರಿಪಡಿಸುತ್ತಿರುವಾಗ ಸಿಬ್ಬಂದಿಗಳು ಸಹಕರಿಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:40 pm, Mon, 6 May 24