ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ಗೆ ಉತ್ತರ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್
ಬಿಜೆಪಿ ಶಿಸ್ತು ಸಮಿತಿಯ ನೋಟಿಸ್ಗೆ ಉತ್ತರ ಕೊಡುವುದಕ್ಕೆ ಏನೂ ಇಲ್ಲ ಎಂದು ಹೇಳಿದ್ದ ಬಸನಗೌಡ ಪಾಟೀಲ್ ಯತ್ನಾಳ್, 9 ಪುಟಗಳ ಉತ್ತರ ನೀಡಿರುವುದು ಈಗ ತಿಳಿದುಬಂದಿದೆ. 72 ಗಂಟೆಗಳ ಒಳಗೆ ಉತ್ತರಿಸುವಂತೆ ನೀಡಲಾಗಿದ್ದ ಸೂಚನೆಗೆ ಅವರು ಮರುದಿನವೇ ಉತ್ತರಿಸಿದ್ದಾರೆ. ಈ ಹಿಂದೆ ನೀಡಿದ್ದ ಉತ್ತರವನ್ನೇ ಅವರು ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ನವದೆಹಲಿ, ಫೆಬ್ರವರಿ 18: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣಗಳ ನಡುವಣ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಪಕ್ಷಕ್ಕೆ ಮುಜುಗರ ತರುವಂಥ ಹೇಳಿಕೆಗಳನ್ನು ನೀಡುತ್ತಿರುವುದಕ್ಕಾಗಿ ಯತ್ನಾಳ್ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. 72 ಗಂಟೆ ಒಳಗೆ ಉತ್ತರಿಸುವಂತೆ ಖಡ್ ಸೂಚನೆ ನೀಡಿತ್ತು. ಈ ನೋಟಿಸ್ಗೆ ಯತ್ನಾಳ್ ಉತ್ತರವನ್ನೇ ನೀಡಿಲ್ಲ, ಅವರ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆಯೇ ಎಂಬುದು ಈವರೆಗಿನ ಪ್ರಶ್ನೆಯಾಗಿತ್ತು. ಆದರೆ, ನೋಟಿಸ್ ಪಡೆದ ಮರುದಿನವೇ ಶಿಸ್ತು ಸಮಿತಿಗೆ ಯತ್ನಾಳ್ ಉತ್ತರ ನೀಡಿದ್ದರು ಎಂಬ ವಿಚಾರ ಈಗ ತಿಳಿದುಬಂದಿದೆ.
ಕೇಂದ್ರ ಶಿಸ್ತು ಸಮಿತಿ ನೋಟಿಸ್ಗೆ ಯತ್ನಾಳ್ 9 ಪುಟಗಳ ಉತ್ತರ ನೀಡಿದ್ದಾರೆ. ಇ-ಮೇಲ್ ಮೂಲಕ ಉತ್ತರ ನೀಡಿದ್ದಾರೆ. ಇದರೊಂದಿಗೆ, ನೋಟಿಸ್ ದೊರೆತ 72 ಗಂಟೆಗಳ ಒಳಗಾಗಿಯೇ ಅವರು ಉತ್ತರ ನೀಡಿದಂತಾಗಿದೆ.
ಶಿಸ್ತು ಸಮಿತಿಯ ನೋಟಿಸ್ಗೆ ಉತ್ತರ ನೀಡುವುದಕ್ಕೆ ಏನೂ ಇಲ್ಲ ಎಂದು ಯತ್ನಾಳ್ ಕೆಲವು ದಿನಗಳ ಹಿಂದೆ ಹೇಳಿದ್ದರು.
ಯತ್ನಾಳ್ ನೀಡಿದ ಉತ್ತರವೇನು?
ಬಿಜೆಪಿ ಕೇಂದ್ರ ಶಿಸ್ತು ಸಮಿತಿಗೆ ಯತ್ನಾಳ್ ನೀಡಿರುವ ಉತ್ತರವೇನು ಎಂಬುದರ ವಿವರ ಸದ್ಯ ಬಹಿರಂಗವಾಗಿಲ್ಲ. ಆದಾಗ್ಯೂ, ವಿಜಯೇಂದ್ರ ವಿರುದ್ಧ ದೂರುಗಳ ಸರಮಾಲೆಯನ್ನೇ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ರಾಜಕೀಯ ಮಾಡುತ್ತಿದೆ. ನಾನು ಯಾವುದೇ ಬಣ ರಾಜಕೀಯ ಮಾಡಿಲ್ಲ. ಪಕ್ಷದ ಶಿಸ್ತನ್ನು ನಾನು ಉಲ್ಲಂಘಿಸಿಲ್ಲ’ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.
ಪಕ್ಷದ ಚೌಕಟ್ಟಿನಲ್ಲಿ ವಕ್ಫ್ ವಿರುದ್ಧ ಹೋರಾಟ ಮಾಡಿದ್ದೇವೆ. ತಂಡವಾಗಿ ಹೋರಾಟ ಮಾಡಿ ನಾವು ಯಶಸ್ವಿಯಾಗಿದ್ದೇವೆ. ವಕ್ಫ್ ಕುರಿತ ಹೋರಾಟವನ್ನು ಉನ್ನತ ನಾಯಕರು ಸಮರ್ಥಿಸಿದ್ದಾರೆ. ಬಿ.ವೈ.ವಿಜಯೇಂದ್ರ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಕಾರ್ಯಕರ್ತರು, ನಾಯಕರ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ ಎಂದು ಯತ್ನಾಳ್ ಉತ್ತರಿಸಿದ್ದಾರೆ.
ಮೌನಕ್ಕೆ ಶರಣಾದ ಯತ್ನಾಳ್ ಬಣದ ನಾಯಕರು
ಶಿಸ್ತು ಸಮಿತಿ ನೋಟಿಸ್ ಬಳಿಕ ಯತ್ನಾಳ್ ಬಣ ಮೌನಕ್ಕೆ ಶರಣಾಗಿತ್ತು. ಕಳೆದ ಕೆಲವು ದಿನಗಳಿಂದ ಬಹಿರಂಗ ಹೇಳಿಕೆಗಳಿಗೆ ಬ್ರೇಕ್ ಬಿದ್ದಿತ್ತು. ಯತ್ನಾಳ್ ಬಣದ ನಾಯಕ ರಮೇಶ್ ಜಾರಕಿಹೊಳಿ ಕೂಡ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡುವ ತಂತ್ರವನ್ನು ಬಣ ಅನುಸರಿಸುತ್ತಿದೆ ಎನ್ನಲಾಗಿದೆ.
ದೆಹಲಿ ಭೇಟಿಯಿಂದ ವಾಪಸಾದ ಬಳಿಕ ಬೆಂಗಳೂರಿಗೆ ತೆರಳಿದ್ದ ರಮೇಶ್ ಜಾರಕಿಹೊಳಿ ಸದ್ಯ ಗೋಕಾಕ್ ಕ್ಷೇತ್ರದಲ್ಲಿ ಸುತ್ತಾಟ ಮುಂದುವರಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಯತ್ನಾಳ್ಗೆ ನೋಟಿಸ್: ಇದೇ ಮೊದಲಲ್ಲ
ಅಂದಹಾಗೆ, ಬಸನಗೌಡ ಪಾಟೀಲ್ ಯತ್ನಾಳ್ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಈ ಹಿಂದೆ ಕೂಡ ನೋಟಿಸ್ ನೀಡಿತ್ತು. ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಯತ್ನಾಳ್ ಸಿಡಿದೆದ್ದಿದ್ದು, ಬಹಿರಂಗವಾಗಿಯೇ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಕಳೆದ ಡಿಸೆಂಬರ್ನಲ್ಲಿ ಅವರಿಗೆ ನೋಟಿಸ್ ನೀಡಲಾಗಿತ್ತು.
ಇದನ್ನೂ ಓದಿ: ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ತಾರಾ ವರಿಷ್ಠರು? ಬಿಜೆಪಿ ಹೈಕಮಾಂಡ್ ಮುಂದಿನ ನಡೆಯೇನು?
ನೋಟಿಸ್ಗೆ ಖುದ್ದು ಶಿಸ್ತು ಸಮಿತಿ ಮುಂದೆ ಹಾಜರಾಗಿ ವಿವರಣೆ ನೀಡಿದ್ದ ಯತ್ನಾಳ್, ಆ ನಂತರದಲ್ಲಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ್ದರು. ಅಲ್ಲದೆ, ಯತ್ನಾಳ್ ಬಣದ ಇತರ ನಾಯಕರೂ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು. ಬಣ ಜಗಳ ತೀವ್ರಗೊಂಡ ಬೆನ್ನಲ್ಲೇ ಶಿಸ್ತು ಸಮಿತಿ ಮತ್ತೆ ಶೋಕಾಸ್ ನೀಡಿತ್ತು.