ಕೊಲೆ ಪ್ರಕರಣದಲ್ಲಿ ಅಮಾಯಕರ ಬಂಧಿಸಿ 15 ಲಕ್ಷ ಲಂಚ ಪಡೆದು ಕಿರುಕುಳ; ನ್ಯಾಯಕ್ಕಾಗಿ ಆಗ್ರಹಿಸಿ ಕುಟುಂಬಸ್ಥರ ಕಣ್ಣೀರು

ತಮ್ಮ ಮಕ್ಕಳ ಮೇಲಿನ ಕೇಸ್ ಹಿಂಪಡೆಯಲು 15 ಲಕ್ಷ ರೂಪಾಯಿ ಹಣವನ್ನ ಗ್ರಾಮದ ಪಂಚರ ಮಧ್ಯಸ್ಥಿಕೆಯಲ್ಲಿ ಪೊಲೀಸರು ಪಡೆದಿದ್ದಾರೆಂದು ಆರೋಪಿಸಿದ್ದಾರೆ. ಜಮೀನು ಅಡವಿಟ್ಟು ಹಣ ನೀಡಿದ್ದೀವಿ ನ್ಯಾಯ ದೊರಕಿಸಿಕೊಡಿ ಅಂತಾ ಕಣ್ಣೀರು ಹಾಕಿದ್ದಾರೆ.

ಕೊಲೆ ಪ್ರಕರಣದಲ್ಲಿ ಅಮಾಯಕರ ಬಂಧಿಸಿ 15 ಲಕ್ಷ ಲಂಚ ಪಡೆದು ಕಿರುಕುಳ; ನ್ಯಾಯಕ್ಕಾಗಿ ಆಗ್ರಹಿಸಿ ಕುಟುಂಬಸ್ಥರ ಕಣ್ಣೀರು
ಅರ್ಜುನ್, ಕೃಷ್ಣ, ಮೃತ ಮಂಜುನಾಥ ಮತ್ತು ಗೋಕಾಕ್ ಇನ್ಸ್‌ಪೆಕ್ಟರ್ ಗೋಪಾಲ್ ರಾಠೋಡ್
Edited By: ಆಯೇಷಾ ಬಾನು

Updated on: Apr 24, 2022 | 8:42 AM

ಬೆಳಗಾವಿ: ಕೊಲೆ ಪ್ರಕರಣದಲ್ಲಿ ಅಮಾಯಕರ ಬಂಧಿಸಿ 15 ಲಕ್ಷ ಲಂಚ ಪಡೆದು ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಗೋಕಾಕ್ ಇನ್ಸ್‌ಪೆಕ್ಟರ್ ಗೋಪಾಲ್ ರಾಠೋಡ್ ಹಾಗೂ ಸಿಬ್ಬಂದಿ ವಿರುದ್ಧ ಬೆಳಗಾವಿ ಜಿಲ್ಲೆ ಗೋಕಾಕ್‌ನ ಸಿದ್ದಪ್ಪ ಬಬಲಿ ಕುಟುಂಬ ಗಂಭೀರ ಆರೋಪ ಮಾಡಿದೆ. ನ್ಯಾಯಕ್ಕಾಗಿ ಆಗ್ರಹಿಸಿ ವೃದ್ಧ ದಂಪತಿ, ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಇನ್ನು ಮತ್ತೊಂದೆಡೆ ಈ ಘಟನೆ ಸಂಬಂಧ ಕುಟುಂಬಸ್ಥರು ಸಿಎಂ ಬೊಮ್ಮಾಯಿ, ಗೃಹಸಚಿವರಿಗೂ ಪತ್ರ ಬರೆದು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಗೋಕಾಕ್ ಇನ್ಸ್‌ಪೆಕ್ಟರ್, ಸಿಬ್ಬಂದಿ ವಿರುದ್ಧ ಲೋಕಾಯುಕ್ತ, ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ. 2021ರ ಜುಲೈ 17ರಂದು ಗೋಕಾಕ್‌ನ ಮಹಾಂತೇಶ ನಗರ ಬಡಾವಣೆಯಲ್ಲಿ ಮಂಜುನಾಥ ಮುರಕಿಭಾವಿ ಎಂಬುವವರ ಕೊಲೆಯಾಗಿತ್ತು. ಕೊಲೆ ಪ್ರಕರಣದಲ್ಲಿ ಸಿದ್ದಪ್ಪ ಬಬಲಿ ಮಕ್ಕಳಾದ ಕೃಷ್ಣ, ಅರ್ಜುನ್ ಬಂಧನವಾಗಿತ್ತು. ಬಂಧಿತರ ಅಕ್ಕನ ಮಗಳ ಜೊತೆ ಕೊಲೆಯಾದ ಯುವಕ ಮಂಜುನಾಥ ಪ್ರೀತಿಸುತ್ತಿದ್ದ ಆರೋಪವಿದೆ. ಅಕ್ಕನ ಮಗಳ ಮದುವೆಯಾದ ಬಳಿಕವೂ ಮಂಜುನಾಥ ಸಂಪರ್ಕದಲ್ಲಿದ್ದ ಹಿನ್ನೆಲೆ ಮಂಜುನಾಥ ಮುರಕಿಭಾವಿಯನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು.

ಆದ್ರೆ ಬಂಧಿತರಿಗೂ, ಕೊಲೆಯಾದ ಯುವಕನಿಗೂ ಯಾವುದೇ ಸಂಬಂಧ ಇಲ್ಲವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಂಜು ಬಸಪ್ಪ ರಂಗನಕೊಪ್ಪ ಎಂಬುವರ ಹೇಳಿಕೆ ಮೇಲೆಯಷ್ಟೇ ಸಿದ್ದಪ್ಪ ಬಬಲಿ ಮಕ್ಕಳಾದ ಕೃಷ್ಣ, ಅರ್ಜುನ್ನ ಪೊಲೀಸರು ಬಂಧಿಸಿದ್ದಾರೆ. ಯಾವುದೇ ಸಾಕ್ಷ್ಯಾಧಾರ ಇಲ್ಲದೇ ಇಬ್ಬರನ್ನೂ ಬಂಧಿಸಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮಕ್ಕಳ ಮೇಲಿನ ಕೇಸ್ ಹಿಂಪಡೆಯಲು 15 ಲಕ್ಷ ರೂಪಾಯಿ ಹಣವನ್ನ ಗ್ರಾಮದ ಪಂಚರ ಮಧ್ಯಸ್ಥಿಕೆಯಲ್ಲಿ ಪೊಲೀಸರು ಪಡೆದಿದ್ದಾರೆಂದು ಆರೋಪಿಸಿದ್ದಾರೆ. ಜಮೀನು ಅಡವಿಟ್ಟು ಹಣ ನೀಡಿದ್ದೀವಿ ನ್ಯಾಯ ದೊರಕಿಸಿಕೊಡಿ ಅಂತಾ ಕಣ್ಣೀರು ಹಾಕಿದ್ದಾರೆ. ನ್ಯಾಯ ಸಿಗದಿದ್ರೇ ಇಡೀ ಕುಟುಂಬ ಆತ್ಮಹತ್ಯೆ ಹಾದಿ ಹಿಡಿಯುತ್ತೇವೆ. ಇದಕ್ಕೆ ಗೋಕಾಕ್ ಪೊಲೀಸರೇ ಕಾರಣರಾಗ್ತಾರೆಂದು ಕುಟುಂಬಸ್ಥರು ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: Accident: ಭೀಕರ ಅಪಘಾತ; 8 ಮಂದಿ ಸಾವು, 11 ಜನರಿಗೆ ಗಾಯ

Truecaller: ಗೂಗಲ್ ಹೊಸ ನಿಯಮಕ್ಕೆ ಬೆಚ್ಚಿಬಿದ್ದ ಟ್ರೂ ಕಾಲರ್: ಇನ್ಮುಂದೆ ಇರಲ್ಲ ಈ ಫೀಚರ್

Web contact

TV9 Kannada

Read More
Follow Us