
ಬೆಳಗಾವಿ, ಫೆಬ್ರವರಿ 02: ಅದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ತವರು ಕ್ಷೇತ್ರ. ಸಂಗೊಳ್ಳಿ ರಾಯಣ್ಣ ಕೂಡ ಈ ಕೌರಿ ಗುಡ್ಡದಲ್ಲಿ ಉಳಿದಿದ್ದ ಅನ್ನೋದು ಇತಿಹಾಸ. ಈ ಗುಡ್ಡದಲ್ಲಿ ಶ್ರೀಗಂಧದ ಮರ ಸೇರಿದಂತೆ ಹಲವು ಬಗೆಯ ಗಿಡಗಳು, ಪ್ರಾಣಿ-ಪಕ್ಷಿಗಳು ವಾಸವಾಗಿವೆ. ಆದರೆ ಇದೀಗ ಸೋಲಾರ್ ಪ್ಲಾಂಟ್ ಹೆಸರಿನಲ್ಲಿ ಗುಡ್ಡವನ್ನೇ ಅಗೆಯಲಾಗಿದ್ದು, ಸಾವಿರಾರು ಮರಗಳ (tree) ಮಾರಣಹೋಮವೇ ನಡೆದಿದೆ. ಸದ್ಯ ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ತಾಲೂಕಿನ ಬಡಲಾ ಅಂಕಲಗಿ ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಗುಡ್ಡ ಅಗೆಯುವ ಹಾಗೂ ಮರಗಳನ್ನ ಕಟ್ ಮಾಡುವ ಕೆಲಸ ನಡೆಯುತ್ತಿದೆಯಂತೆ. ವಿಚಾರ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ತಡೆಯುವ ಕೆಲಸ ಮಾಡಿದ್ದು, ಅವರಿಗೂ ಬೆದರಿಕೆ ಹಾಕಿ ಕೆಲಸ ಮುಂದುವರೆಸಿದ್ದಾರೆ. ಯಾವಾಗ ರೈತರು ವಿರೋಧ ವ್ಯಕ್ತಪಡಿಸಿದರೂ ಆಗ ಜೆಸಿಬಿ ಸಮೇತ ಕಾಲ್ಕಿತ್ತಿದ್ದಾರೆ. ಈವರೆಗೂ 40 ಎಕರೆಗೂ ಹೆಚ್ಚು ಪ್ರದೇಶವನ್ನ ಅಗೆದು ಹಾಳು ಮಾಡಲಾಗಿದೆ.
ಶ್ರೀಗಂಧದ, ತೇಗು ಮತ್ತು ವಿವಿಧ ಹಣ್ಣಿನ ಗಿಡಗಳು, ರಾಷ್ಟ್ರೀಯ ಪಕ್ಷಿ ನವಿಲು ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳು ಈ ಜಾಗದಲ್ಲಿ ವಾಸಿಸುತ್ತಿದ್ದವು. ಸೋಲಾರ್ ಪ್ಲಾಂಟ್ ನಿರ್ಮಾಣದ ಹೆಸರಿನಲ್ಲಿ ಈ ರೀತಿ ಮರಗಿಡಗಳನ್ನ ಕಟಾವು ಮಾಡಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದ್ರೂ ಅವರಿಗೆ ಈ ವಿಚಾರ ಗೊತ್ತಿಲ್ಲವಾ ಅಥವಾ ಅವರ ಕುಮ್ಮಕ್ಕಿನಿಂದ ಈ ರೀತಿ ಆಗಿದೆ ಅಂತಾನೂ ರೈತರು ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ: Belagavi: ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಇನ್ನು ಟಿವಿ9 ಮರಗಳ ಮಾರಣಹೋಮ ಕುರಿತು ವಿಸ್ತೃತವಾದ ಸುದ್ದಿ ಬಿತ್ತರಿಸುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದರು. ಅಷ್ಟೇ ಅಲ್ಲದೆ ಹೆಸ್ಕಾಂ ಅಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಕಂದಾಯ ಇಲಾಖೆಗೆ ಸೇರಿರುವ ಸರ್ವೇ ನಂಬರ್ 359ರ ಗೈರಾಣು ಜಾಗದಲ್ಲಿ 67ಎಕರೆ ಜಮೀನು ಪ್ರದೇಶದಲ್ಲಿ ಸೊಲಾರ್ ಪ್ಲಾಂಟ್ ಮಾಡಲು ತಹಶಿಲ್ದಾರ್ ಬಸವರಾಜ್ ನಾಗರಾಳ ಅನುಮತಿ ನೀಡಿದ್ದಾರೆ. ಇದು ಹೆಸ್ಕಾಂ ಇಲಾಖೆಗೆ ಕಳುಹಿಸಿದ್ದು, ಇಂಧನ ಇಲಾಖೆಯಿಂದ ಈ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದೆ.
ಪಿಎಂ ಕುಸುಮ ಪೀಡರ್ ಲೇವಲ್ ಸೊಲ್ ರೈಸೇಷನ್ ಯೋಜನೆಯಡಿ ಸೌರಘಟಕ ಸ್ಥಾಪನೆಗೆ ಅನುಮತಿ ನೀಡಲಾಗಿದೆ. ಗೈರಾಣು ಜಾಗವಿದ್ರೂ ಅರಣ್ಯ ಇರುವ ಕಾರಣಕ್ಕೆ ಅರಣ್ಯ ಇಲಾಖೆಗೆ ಹೆಸ್ಕಾಂ ಇಲಾಖೆಯಿಂದ ಪತ್ರ ಕೂಡ ಬರೆದಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಪತ್ರ ಬರೆದಿದ್ದು, ಅನುಮತಿ ನೀಡಿಲ್ಲ. ಅರಣ್ಯ ಇಲಾಖೆಯಿಂದ ಅನುಮತಿ ಸಿಗದಿದ್ರೂ ಮರಗಳನ್ನ ಕಟ್ ಮಾಡಲಾಗಿದೆ. ಈ ಬಗ್ಗೆ ಸ್ಥಳಕ್ಕೆ ಬಂದ ಹೆಸ್ಕಾಂ ಅಧಿಕಾರಿಗಳನ್ನ ಕೇಳಿದರೆ ಮೌಖಿಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದು, ಹೀಗಾಗಿ ಕೆಲಸ ಆರಂಭಿಸಿದ್ದೇವೆ ಅಂತಾ ಹೇಳಿದ್ದಾರೆ.
ಸ್ಥಳಕ್ಕೆ ಬಂದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹೆಸ್ಕಾಂ ಎಇಇ ಅಣ್ಣಪ್ಪ ಅವರ ಮಾತು ಕೇಳ್ತಿದ್ದಂತೆ ತರಾಟೆಗೆ ತೆಗೆದುಕೊಂಡರು. ಎಸಿಎಫ್ ನಾಗರಾಜ್ ಅವರೇ ತರಾಟೆಗೆ ತೆಗೆದುಕೊಂಡು ದಿಕ್ಕು ತಪ್ಪಿಸದಂತೆ ಹೇಳಿದರು. ಇದೇ ವೇಳೆ ರೈತರು ಎರಡು ಇಲಾಖೆಯ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡರು. ಮರಗಳನ್ನ ಕಟ್ ಮಾಡಿರುವ ಅಧಿಕಾರಿ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸಿಎಫ್ ನಾಗರಾಜ್, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಕೋಲಾರದಲ್ಲಿ ಜೀರೋ ಹೆಸರಿನಲ್ಲಿ ಭೂ ಹಗರಣ: ವಾರಸುದಾರರಿಲ್ಲದ ಭೂಮಿ ಲಪಟಾಯಿಸಿದ ಪ್ರಭಾವಿಗಳು
ಸದ್ಯ ಪ್ರಕರಣವನ್ನ ಬೆಳಗಾವಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಕೂಡ ಗಂಭೀರವಾಗಿ ತೆಗೆದುಕೊಂಡಿದ್ದು ಅನುಮತಿ ಇಲ್ಲದೇ ಮರಗಳನ್ನ ಕಟ್ ಮಾಡಿರುವುದೇಕೆ ಅನ್ನೋ ನಿಟ್ಟಿನಲ್ಲಿ ತನಿಖೆ ಆಗುತ್ತಿದೆ. ಇನ್ನೊಂದು ಕಡೆ ಶ್ರೀಗಂಧದ ಮರಗಳಿರುವ ಕಾಡನ್ನ ತರಾತುರಿಯಲ್ಲಿ ಯಾರ ಗಮನಕ್ಕೆ ತರದೇ ಕಟ್ ಮಾಡಿರುವುದೇಕೆ ಇದರ ಹಿಂದೆ ಯಾರಿದ್ದಾರೆ ಅನ್ನೊದು ಕೂಡ ಹೊರಬರಬೇಕಿದೆ. ಸದ್ಯ ಸಾವಿರಾರು ಮರಗಳ ಮಾರಣಹೋಮ ನಡೆದಿದ್ದು, ಇದಕ್ಕೆ ಹೊಣೆ ಯಾರು, ತಪ್ಪಿತಸ್ಥರ ವಿರುದ್ದ ಕ್ರಮವಾಗುತ್ತಾ ಅನ್ನೋದನ್ನ ಕೂಡ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.