2023ರಲ್ಲಿ ನಿನ್ನ ಹತ್ಯೆ ತಪ್ಪುವುದಿಲ್ಲ: ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿಗೆ ಮತ್ತೆ ಜೀವ ಬೆದರಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 09, 2023 | 4:19 PM

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ಬಸವಣ್ಣನವರ ವಿಚಾರಧಾರೆಯ ಪ್ರಚಾರಕರು ಮತ್ತು ತಮ್ಮ ಖಡಕ್ ಮಾತುಗಳಿಂದಲೇ ರಾಜ್ಯದಲ್ಲಿ ಖ್ಯಾತಿಗಳಿಸಿರುವ ನಿಜಗುಣಾನಂದ ಸ್ವಾಮೀಜಿಗೆ ಇದೀಗ ದುಷ್ಕರ್ಮಿಗಳಿಂದ ಮತ್ತೆ ಜೀವ ಬೆದರಿಕೆ ಪತ್ರ ಒಂದು ಬಂದಿದೆ. 2020ರಲ್ಲಿ ನಿನ್ನ ಹತ್ಯೆ ತಪ್ಪಿರಬಹುದು, 2023ರಲ್ಲಿ ತಪ್ಪುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ.

2023ರಲ್ಲಿ ನಿನ್ನ ಹತ್ಯೆ ತಪ್ಪುವುದಿಲ್ಲ: ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿಗೆ ಮತ್ತೆ ಜೀವ ಬೆದರಿಕೆ
ನಿಜಗುಣಾನಂದ ಸ್ವಾಮೀಜಿ
Follow us on

ಬೆಳಗಾವಿ, ಸೆಪ್ಟೆಂಬರ್​ 9: ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ಬಸವಣ್ಣನವರ ವಿಚಾರಧಾರೆಯ ಪ್ರಚಾರಕ ನಿಜಗುಣಾನಂದ ಸ್ವಾಮೀಜಿಗೆ (Nijagunanand Swamiji) ದುಷ್ಕರ್ಮಿಗಳಿಂದ ಮತ್ತೆ ಜೀವ ಬೆದರಿಕೆ ಹಾಕಲಾಗಿದೆ. ಆಗಸ್ಟ್​ 8 ರಂದೇ ಜೀವ ಬೆದರಿಕೆ ಪತ್ರ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 2020ರಲ್ಲಿ ನಿನ್ನ ಹತ್ಯೆ ತಪ್ಪಿರಬಹುದು, 2023ರಲ್ಲಿ ತಪ್ಪುವುದಿಲ್ಲ. ನಿನ್ನ ಪಾಪದ ಕೊಡ ತುಂಬಿದೆ, ಬೇಗ ನಿನ್ನ ತಿಥಿ ಬಗ್ಗೆ ಭಕ್ತರಿಗೆ ಹೇಳು. ನಮ್ಮ ಧರ್ಮದ ದೇವತೆಗಳನ್ನು ನಿಂದಿಸುವ ನಿನ್ನ ಘೋರ ಹತ್ಯೆ ಆಗುತ್ತೆ. ನಿನ್ನ ಅಂತಿಮ ದಿನಗಳು ಆರಂಭವಾಗಿವೆ, ಇನ್ನು ದಿನಗಳನ್ನು ಎಣಿಸು ಎಂದು ಪೋಸ್ಟ್ ಮೂಲಕ ಜೀವ ಬೇದರಿಕೆ ಪತ್ರ ಮಠಕ್ಕೆ ಬಂದಿದೆ.

2020ರಲ್ಲಿ ಹತ್ಯೆ ಮಾಡುವುದಾಗಿ ಸ್ವಾಮೀಜಿಗೆ ಜೀವ ಬೆದರಿಕೆ ಪತ್ರ ಬಂದಿತ್ತು. ಇದೀಗ ಮತ್ತೆ ಜೀವ ಬೇದರಿಕೆ ಪತ್ರ ಬಂದಿದ್ದು, ಈವರೆಗೂ 5ಕ್ಕೂ ಹೆಚ್ಚು ಬಾರಿ ಜೀವ ಬೆದರಿಕೆ ಪತ್ರ ಬರೆದಿದ್ದಾರೆ. ಜೀವ ಬೆದರಿಕೆ ಪತ್ರದ ಬಗ್ಗೆ ಈವರೆಗೂ ದೂರು ದಾಖಲಿಸಿಕೊಳ್ಳದೇ ಕಿತ್ತೂರು ಠಾಣೆಯ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಟೆಲಿಗ್ರಾಂನಲ್ಲಿ ಇನ್ವೆಸ್ಟಮೆಂಟ್ ಹೆಸರಿನಲ್ಲಿ ವಂಚನೆ, ಮಹಿಳೆಯರಿಗೆ 46 ಲಕ್ಷ‌ ರೂ. ಮರಳಿ ಕೊಡಿಸಿದ ಬೆಳಗಾವಿ ಪೊಲೀಸರು

ತಮ್ಮ ಖಡಕ್ ಮಾತುಗಳಿಂದಲೇ ರಾಜ್ಯದಲ್ಲಿ ಖ್ಯಾತಿಗಳಿಸಿರುವ ನಿಜಗುಣಾನಂದ ಶ್ರೀ, ಪ್ರಮುಖ ಲಿಂಗಾಯತ ಸ್ವಾಮೀಜಿಗಳಲ್ಲಿ ಒಬ್ಬರು. ದಶಕಗಳಿಂದ ಬಸವಣ್ಣನವರ ವಿಚಾರಧಾರೆಯ ಪ್ರಚಾರಕರಾಗಿದ್ದಾರೆ. ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲವನ್ನು ಕೇಂದ್ರವಾಗಿಸಿಕೊಂಡು ತಮ್ಮ ವಿಚಾರಗಳನ್ನು ಬಿತ್ತಿತ್ತು ಬಂದಿದ್ದಾರೆ. ಮೂರ್ತಿ ಪೂಜೆ, ಮೌಢ್ಯ ವಿರೋಧಿ ವಿಚಾರಗಳನ್ನು ಅವರ ಪ್ರವಚನದಲ್ಲಿ ಕಾಣಬಹುದಾಗಿದೆ.

ಕೊಲೆ ಬೆದರಿಕೆ ಬರುತ್ತಿರುವುದರಿಂದ ನನಗೆ ಆತಂಕ ಶುರುವಾಗಿದೆ: ನಿಜಗುಣಾನಂದಶ್ರೀ

ಬೆದರಿಕೆ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಜಗುಣಾನಂದಶ್ರೀ, ಒಬ್ಬನೇ ವ್ಯಕ್ತಿ ನನಗೆ ಜೀವ ಬೆದರಿಕೆ ಪತ್ರ ಬರೆಯುತ್ತಿದ್ದಾನೆ. ಒಂದೇ ಹಸ್ತಾಕ್ಷರ ಇದೆ, ಹೆಸರು ಇಲ್ಲ, ದ್ವೇಷದ ಉದ್ದೇಶ ಇಲ್ಲ. ಸೈದ್ಧಾಂತಿಕ ಹೋರಾಟ ಬಗ್ಗೆ ದ್ವೇಷ ಇಟ್ಟುಕೊಂಡು ಪತ್ರ ಬರೀತಿದ್ದಾನೆ. 15 ದಿನಗಳ ಹಿಂದೆ ಅನಾಮಿಕ ವ್ಯಕ್ತಿಯಿಂದ ಬೆದರಿಕೆ ಪತ್ರ ಬಂದಿದೆ. ಜೀವ ಬೆದರಿಕೆ ಪತ್ರ ಸಂಬಂಧ ಕಿತ್ತೂರು ಪೊಲೀಸರಿಗೆ ದೂರು ನೀಡಿದ್ದೇವೆ ಎಂದರು.

ಚಿತ್ರದುರ್ಗ, ದಾವಣಗೆರೆ ಹೀಗೆ ಬೇರೆ ಬೇರೆ ಕಡೆಗಳಿಂದ ಪತ್ರ ಬರುತ್ತಿವೆ. ಸಾವಿನ ಬಗ್ಗೆ ನನಗೆ ಯಾವುದೇ ಭಯವಿಲ್ಲ. ಆದರೆ ಸಮಾಜಕ್ಕೆ ನಮ್ಮ ಸೇವೆ ನಿಂತು ಹೋಗುತ್ತೆ ಎಂಬ ಚಿಂತೆ ಇದೆ. ಸರ್ಕಾರ ಆದಷ್ಟು ಬೇಗ ಇದರ ಹಿಂದೆ ಇದ್ದವರನ್ನು ಪತ್ತೆ ಹಚ್ಚಬೇಕು. ರಾಜ್ಯದಲ್ಲಿ ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯಾಗಿದೆ. ಈಗ ಕೊಲೆ ಬೆದರಿಕೆ ಬರುತ್ತಿರುವುದರಿಂದ ನನಗೆ ಆತಂಕ ಹುಟ್ಟಿಸಿದೆ.

ಇದನ್ನೂ ಓದಿ: ಮರಾಠಾ ಮೀಸಲಾತಿ ಕಿಚ್ಚು: ಸಾಂಗ್ಲಿಯಲ್ಲಿ ಟಯರ್​ಗೆ ಬೆಂಕಿ ಹಚ್ಚಿ ಆಕ್ರೋಶ, ಕೆಎಸ್​ಆರ್​ಟಿಸಿ ಬಸ್​​ ಸಂಚಾರ ಸ್ಥಗಿತ

ಕ್ಷೇತ್ರದ ಶಾಸಕರು ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಸರ್ಕಾರಕ್ಕೆ ನಾನು ಮನವಿ ಮಾಡುವುದಿಲ್ಲ, ಇದು ಸರ್ಕಾರದ ಕೆಲಸ. ನಾನು ಒಬ್ಬನೇ ಮಠದಲ್ಲಿ ಇರುತ್ತೇನೆ, ಹೀಗಾಗಿ ಆತಂಕ ಶುರುವಾಗಿದೆ ಎಂದು ಹೇಳಿದ್ದಾರೆ.

ಸಿಎಂ ಮತ್ತು ಗೃಹಮಂತ್ರಿ ಅವರ ಗಮನಕ್ಕೆ ತರುತ್ತೇನೆ: ಜಗದೀಶ್ ಶೆಟ್ಟರ್

ಈ ವಿಚಾರವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಪ್ರತಿಕ್ರಿಯೆ ನೀಡಿದ್ದು, ಬಸವಣ್ಣನವರ ರೀತಿಯಲ್ಲಿ ನಿಜಗುಣಾನಂದ ಸ್ವಾಮೀಜಿ ಕೆಲಸ ಮಾಡುತ್ತಿದ್ದಾರೆ. ಬಸವ ತತ್ವ ಪ್ರಚಾರ ಮಾಡುತ್ತಾರೆ. ವಸ್ತು ಸ್ಥಿತಿ ಹೇಳುತ್ತಾರೆ. ಹೀಗಾಗಿ ಬೆದರಿಕೆ ಬರುವಂತಹದ್ದು. ಹೆದರುವ ಅವಶ್ಯಕತೆ ಇಲ್ಲಾ, ಏನೂ ಆಗುವುದಿಲ್ಲ. ಈ‌ ರೀತಿ ಬೆದರಿಕೆ ಹಾಕುವವರಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಸ್ವಾಮೀಜಿಗೆ ರಕ್ಷಣೆ ಕೊಡುವ ಕೆಲಸ ಮಾಡಬೇಕು. ಈ ಕುರಿತು ನಾನು ಸಿಎಂ ಮತ್ತು ಗೃಹಮಂತ್ರಿ ಅವರ ಗಮನಕ್ಕೆ ತರುತ್ತೇನೆ. ನನ್ನ ಗಮನಕ್ಕೆ ಬಂದಿರಲಿಲ್ಲ ಸರ್ಕಾರ ರಕ್ಷಣೆ ಕೊಡುವ ಕೆಲಸ ಆಗದಿದ್ದರೆ ನಾನು ಮಾತಾಡುತ್ತೇನೆ ಎಂದಿದ್ದಾರೆ.

ನಿಜಗುಣಾನಂದ ಸ್ವಾಮೀಜಿ ಅವರಿಗೆ ಹಾಕಿದ ಜೀವ ಬೆದರಿಕೆ ಪತ್ರದಲ್ಲಿ ಏನಿದೆ?

ಓಂ‌ ಶ್ರೀ ಕಾಳಿಕಾದೇವಿ ನಮಃ ಓಂ ಶ್ರೀ ಕಾಳಿಕಾದೇವಿ ನಮಃ ನಿಜಗುಣನಂದಾ ನಿನ್ನ ಸಾವು 2020 ರಲ್ಲಿ ತಪ್ಪಿರಬಹುದು. 2023 ರಲ್ಲಿ ತಪ್ಪುದಿಲ್ಲ. ನಿನ್ನ ಪಾಪದ ಮಾತಿನ ಕೊಡ ತುಂಬಿದೆ. ಅತಿ ಬೇಗ ನಿನ್ನ ತಿಥಿಗೆ ನಿನ್ನ ಭಕ್ತಾದಿಗಳಿಗೆ ಹೇಳು. ನಮ್ಮ ಧರ್ಮ ದೇವತೆಗಳನ್ನು ನಿಂದಿಸುವ ನಿನಗೆ ಘೋರವಾದ ಹತ್ಯೆಯೇ ಬರುತ್ತೆ. ನಿನ್ನ ಅಂತಿಮ ದಿನಗಳು ಪ್ರಾರಂಭವಾಗಿದೆ. ಇನ್ನೂ ದಿನಗಳನ್ನು ಮಾತ್ರ ಎಣಿಸು. ಓಂ ಶ್ರೀ ಕಾಳಿಕಾದೇವಿ ನಮಃ ಓಂ ಶ್ರೀ ಕಾಳಿಕಾದೇವಿ ನಮಃ ಸಹಿಷ್ಣು ಹಿಂದೂ ಅಂತಾ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:13 pm, Sat, 9 September 23