ಬೆಳಗಾವಿ: ಕೃಷ್ಣಾಪುರದಲ್ಲಿ ರಸ್ತೆ ಸಂಪರ್ಕ ಇಲ್ಲದೆ ಶವವನ್ನು 6 ಕಿಮೀ ಹೊತ್ತುಕೊಂಡೇ ಸಾಗಿದ ಗ್ರಾಮಸ್ಥರು

| Updated By: ಗಣಪತಿ ಶರ್ಮ

Updated on: Jul 29, 2024 | 2:32 PM

ಒಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಮತ್ತೊಂದೆಡೆ, ಮೂಲಸೌಕರ್ಯ ಕೊರತೆ ಜನರ ಸಂಕಷ್ಟವನ್ನು ಹೆಚ್ಚಿಸಿದೆ. ಖಾನಾಪುರದ ಭೀಮಗಡ ಅಭಯಾರಣ್ಯದಲ್ಲಿರುವ ಕೃಷ್ಣಾಪುರ ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದೆ ಗ್ರಾಮಸ್ಥರು ಶವವನ್ನು ಅಂತ್ಯಸಂಸ್ಕಾರಕ್ಕೆ 6 ಕಿಮೀ ಹೊತ್ತುಕೊಂಡೇ ಸಾಗಿದ್ದಾರೆ.

ಬೆಳಗಾವಿ: ಕೃಷ್ಣಾಪುರದಲ್ಲಿ ರಸ್ತೆ ಸಂಪರ್ಕ ಇಲ್ಲದೆ ಶವವನ್ನು 6 ಕಿಮೀ ಹೊತ್ತುಕೊಂಡೇ ಸಾಗಿದ ಗ್ರಾಮಸ್ಥರು
ಶವವನ್ನು ಹೊತ್ತುಕೊಂಡು ಕಟ್ಟಿಗೆಯ ಸೇತುವೆ ಮೇಲೆ ಸಾಗುತ್ತಿರುವ ಗ್ರಾಮಸ್ಥರು
Follow us on

ಬೆಳಗಾವಿ, ಜುಲೈ 29: ರಸ್ತೆ ಸಂಪರ್ಕ ಇಲ್ಲದ ಕಾರಣ ಶವವನ್ನು ಅಂತ್ಯಸಂಸ್ಕಾರಕ್ಕೆ 6 ಕಿಮೀ ಹೊತ್ತುಕೊಂಡೇ ಸಾಗಿದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ. ಖಾನಾಪುರದ ಭೀಮಗಡ ಅಭಯಾರಣ್ಯದಲ್ಲಿರುವ ಕೃಷ್ಣಾಪುರ ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದಿರುವುದರಿಂದ ಗ್ರಾಮಸ್ಥರಿಗೆ ತೀವ್ರ ಸಮಸ್ಯೆಯಾಗುತ್ತಿದೆ.

ಗ್ರಾಮದ ಸದಾನಂದ ನಾಯಕ ಎಂಬವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆಗಾಗಿ ಪಕ್ಕದ ವಾಳ್​ಪೈ ಗ್ರಾಮಕ್ಕೆ ಕುಟುಂಬದವರು ಕರೆದೊಯ್ದಿದ್ದರು. ಆದರೆ, ಆಸ್ಪತ್ರೆಯಲ್ಲಿ ಸದಾನಂದ ನಾಯಕ ಮೃತಪಟ್ಟಿದ್ದರು. ನಂತರ, ಅಂತ್ಯಸಂಸ್ಕಾರಕ್ಕಾಗಿ ಶವವನ್ನು ಹೊತ್ತುಕೊಂಡು ಗ್ರಾಮಸ್ಥರು 6 ಕಿಮೀ ನಡೆದುಕೊಂಡು ಹೋಗಿದ್ದಾರೆ.

ಶವವನ್ನು ಹೊತ್ತುಕೊಂಡು ತೆರಳುವಾಗ ಬಂಡೂರಿ ನಾಲಾಗೆ ಅಡ್ಡಲಾಗಿ ನಿರ್ಮಿಸಿರುವ ಕಟ್ಟಿಗೆಯ ತೂಗುಸೇತುವೆ ಮೇಲೆ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಶವ ಸಾಗಾಟ ಮಾಡಬೇಕಾಯಿತು. ರಸ್ತೆ ಸಂಪರ್ಕ ಹಾಗೂ ಸೇತುವೆ ಇಲ್ಲದೇ ಕಾಡಂಚಿನ ಜನರು ಪರದಾಡುವಂತಾಗಿದೆ.

3 ನದಿಗಳ ಆರ್ಭಟ; 30 ಮನೆಗಳಿಗೆ ಜಲದಿಗ್ಬಂಧನ!

ಬೆಳಗಾವಿಯಲ್ಲಿ ಮೂರು ನದಿಗಳ ಮಳೆ ಆರ್ಭಟಕ್ಕೆ ಅಡಿಬಟ್ಟಿ ಗ್ರಾಮದ 30ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತವಾಗಿವೆ. ನೆಮ್ಮದಿಯಾಗಿ ಬದುಕುತ್ತಿದ್ದ ಜನರ ಬದುಕು ಬೀದಿದೆ ಬಂದಿದೆ. ಭಾನುವಾರವಷ್ಟೇ ಮನೆಯಲ್ಲಿದ್ದವರು ಇದೀಗ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವ ಸ್ಥಿತಿ ಬಂದಿದೆ. ಮಾರ್ಕಂಡೇಯ, ಹಿರಣ್ಯಕೇಶಿ, ಕೃಷ್ಣಾ ನದಿಯ ಅಬ್ಬರಕ್ಕೆ ನದಿಪಾತ್ರದಲ್ಲಿನ ಜನರು ಕಣ್ಣೀರು ಹಾಕುವಂತಾಗಿದೆ. ಇನ್ನು ನೂರಾರು ಎಕರೆ ಪ್ರದೇಶದಲ್ಲಿನ ಬೆಳೆದಿದ್ದ ಕಬ್ಬು, ಇತರೆ ಬೆಳೆಗಳು ಸಂಪೂರ್ಣ ನಾಶವಾಗಿದೆ.

ಪ್ರವಾಹದಿಂದ 20 ಕುಟುಂಬ ಬೀದಿಗೆ

ಭೀಕರ ಪ್ರವಾಹದಿಂದ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ 20 ಕುಟುಂಬಗಳು ಬೀದಿಗೆ ಬಂದಿವೆ. ಮಳೆಗಾಳಿಯಲ್ಲೇ ಟಾರ್ಪಲ್ ಕಟ್ಟಿಕೊಂಡು ರಸ್ತೆಬದಿ ಸಂತ್ರಸ್ತರು ಜೀವನ ಮಾಡುತ್ತಿದ್ದಾರೆ. 4 ದಿನಗಳಿಂದ ಸಂತ್ರಸ್ತರು ಬೀದಿಯಲ್ಲಿದ್ದರೂ ಅಧಿಕಾರಿಗಳು ಮಾತ್ರ ಇತ್ತ ಸುಳಿದಿಲ್ಲ.

ಸಪ್ತ ನದಿಗಳ ಆರ್ಭಟಕ್ಕೆ 41 ಸೇತುವೆಗಳು ಜಲಾವೃತ

ಬೆಳಗಾವಿ ಜಿಲ್ಲೆಯಲ್ಲಿ ಸಪ್ತ ನದಿಗಳಿಂದಾಗಿ 43 ಗ್ರಾಮಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಗೋಕಾಕ್, ಮೂಡಲಗಿ, ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಅಥಣಿ, ಹುಕ್ಕೇರಿ ತಾಲೂಕಿನ ಗ್ರಾಮಗಳಲ್ಲಿ ಜನರು ನರಕಯಾತನೆ ಅನುಭವಿಸ್ತಿದ್ದಾರೆ. ಮನೆಯಲ್ಲಿ ಇರೋಕೂ ಆಗದೇ, ಊರು ಬಿಡೋಕೂ ಆಗದೇ ಅತಂತ್ರ ಪರಿಸ್ಥಿತಿಯಲ್ಲಿ ಹಲವು ಕುಟುಂಬಗಳು ಸಿಲುಕಿವೆ. ಇನ್ನು ಈವರೆಗೆ 2,106 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿ: ಕರ್ನಾಟಕ ಗ್ರಾಮೀಣಾಭಿವೃದ್ಧಿಗೆ 25 ಕೋಟಿ ರೂ. ಘೋಷಿಸಿದ ಕೇಂದ್ರ

ಬೆಳಗಾವಿ ಮಾತ್ರವಲ್ಲ, ಬಾಗಲಕೋಟೆಯಲ್ಲೂ ನಾನಾ ಅವಾಂತರವೇ ಆಗೋಗಿದೆ. ಘಟಪ್ರಭಾ ನದಿಯ ಅಬ್ಬರದಿಂದ ಮಿರ್ಜಿ ಗ್ರಾಮದಲ್ಲಿನ 70 ಮನೆಗಳು ಸಂಪೂರ್ಣ ಮುಳುಗಡೆಯಾಗಿವೆ. ಇಡೀ ಗ್ರಾಮಸ್ಥರು ಊರನ್ನೇ ತೊರೆದಿದ್ದಾರೆ. ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಸದ್ಯ ಎಲ್ಲರೂ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:25 pm, Mon, 29 July 24