ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: ಕೊಲೆಗೆ ಸಾಥ್ ಕೊಟ್ಟು ಡ್ರಾಮಾ ಮಾಡಿದ್ದ ಹೆಂಡ್ತಿ, ಮಗ!

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿಯಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಆಸ್ತಿ ವಿವಾದ (3 ಎಕರೆ) ಹಾಗೂ ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಕೊಲೆಯಾಗಿದ್ದು, ಪತ್ನಿ ಮತ್ತು ಪುತ್ರನ ಸಾಥ್​ನಿಂದಲೇ ಕೃತ್ಯ ನಡೆದಿದೆ ಎಂಬುದನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಸದ್ಯ ಘಟನೆ ಸಂಬಂಧ ನಾಲ್ವರನ್ನು ಬಂಧಿಸಿ, ತನಿಖೆ ಮುಂದುವರೆಸಲಾಗಿದೆ.

ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: ಕೊಲೆಗೆ ಸಾಥ್ ಕೊಟ್ಟು ಡ್ರಾಮಾ ಮಾಡಿದ್ದ ಹೆಂಡ್ತಿ, ಮಗ!
ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಹತ್ಯೆ ಪ್ರಕರಣ ಬಯಲಿಗೆಳೆದ ಪೊಲೀಸರು (ಒಳಚಿತ್ರದಲ್ಲಿ ಕಲ್ಮೇಶ್)
Image Credit source: tv9
Edited By:

Updated on: Feb 26, 2026 | 10:32 AM

ಬೆಳಗಾವಿ, ಫೆಬ್ರವರಿ 26: ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಹೊರವಲಯದಲ್ಲಿ ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಅಮಾನುಷವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಕೊಲೆಯಾದ ವ್ಯಕ್ತಿಯ ಪತ್ನಿ ಹಾಗೂ ಮಗನೇ ಕೃತ್ಯಕ್ಕೆ ಸಾಥ್ ನೀಡಿ, ನಂತರ ನಾಟಕವಾಡಿದ್ದರು ಎಂಬ ಆಘಾತಕಾರಿ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಫೆಬ್ರವರಿ 20ರಂದು ಹಿರೇನಂದಿಹಳ್ಳಿ ಗ್ರಾಮ ಹೊರವಲಯದ ಜಮೀನಿನಲ್ಲಿ ಶವ ಪತ್ತೆಯಾಗಿತ್ತು. ನಂತರ ಮೃತ ವ್ಯಕ್ತಿ ಹಿರೇನಂದಿಹಳ್ಳಿ ಗ್ರಾಮದ ಕಲ್ಮೇಶ್ ಕೋಟಿ ಎಂದು ಗುರುತಿಸಲಾಯಿತು. ತುಮಕೂರಿನಲ್ಲಿ ಹೋಮ್ ಕೇರ್ ಉದ್ಯೋಗದಲ್ಲಿ ತೊಡಗಿದ್ದ ಕಲ್ಮೇಶ್, ಶಿವರಾತ್ರಿ ಹಬ್ಬದ ಪ್ರಯುಕ್ತ ಊರಿಗೆ ಬಂದಿದ್ದ ವೇಳೆ ಸಂಚು ರೂಪಿಸಿ ಕೊಲೆಗೈಯಲಾಗಿತ್ತು.

ಪಾರ್ಟಿ ನೆಪದಲ್ಲಿ ಜಮೀನಿಗೆ ಕರೆದೊಯ್ದು ಕೊಲೆ

‘ಪಾರ್ಟಿ ಮಾಡಿ ಬರೋಣ’ ಎಂದು ಹೇಳಿ ಜಮೀನಿಗೆ ಕರೆದೊಯ್ದ ಆರೋಪಿಗಳು, ಹಲ್ಲೆ ಮಾಡಿ, ಮರ್ಮಾಂಗ ಕತ್ತರಿಸಿ ಕೊಲೆ ಮಾಡಿದ್ದರು. ಕೊಲೆಗೈದ ಬಳಿಕ ಆರೋಪಿಗಳಲ್ಲಿ ಒಬ್ಬ ತನ್ನ ಅಕ್ಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪತ್ನಿ–ಮಗನ ಡ್ರಾಮಾ ಬಯಲು

ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ನೀಡಿದ ಸಂಗತಿ ಎಂದರೆ, ಕೊಲೆಗೆ ಸಾಥ್ ನೀಡಿದ್ದೇ ಪತ್ನಿ ಮತ್ತು ಪುತ್ರ ಎಂಬುದು. ಶವ ಪತ್ತೆಯಾದ ನಾಲ್ಕು ದಿನಗಳ ಬಳಿಕ ಗುರುತು ಪತ್ತೆಗೆ ಬಂದು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಪತ್ನಿ ಕಸ್ತೂರಿ ಕೋಟಿ ಹಾಗೂ ಪುತ್ರ ಕಿರಣ್ ಕೋಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಕೈಜೋಡಿಸಿದ ಕಲ್ಮೇಶ್ ಬಾಮೈದ ಮಲ್ಲೇಶ ಅಂಬಣ್ಣವರ (32) ಹಾಗೂ ಅವನ ಸ್ನೇಹಿತ ಮುದುಕಪ್ಪ ಕೋಲೇಕರ್ ಅವರನ್ನು ಕೂಡ ಕಿತ್ತೂರು ಠಾಣೆ ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.

12 ವರ್ಷಗಳ ದಾಂಪತ್ಯ ಕಲಹ, ಮೂರು ಎಕರೆ ಆಸ್ತಿಯೇ ಮೂಲ ಕಾರಣ

ಕಲ್ಮೇಶ್ ಮತ್ತು ಪತ್ನಿ ಕಸ್ತೂರಿ ಕಳೆದ 12 ವರ್ಷಗಳಿಂದ ದಾಂಪತ್ಯ ಕಲಹದ ಹಿನ್ನೆಲೆ ದೂರವಿದ್ದು, ಕಸ್ತೂರಿ ಪುತ್ರನೊಂದಿಗೆ ಕುಂದಗೋಳದಲ್ಲಿರುವ ತವರು ಮನೆಯಲ್ಲಿ ವಾಸವಾಗಿದ್ದರು. ದಂಪತಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಐದು ವರ್ಷಗಳ ಹಿಂದೆ ಪುತ್ರಿಯ ಮದುವೆಗೆ 8 ಲಕ್ಷ ರೂಪಾಯಿ ಸಾಲವನ್ನು ಸಹೋದರ ಮಲ್ಲೇಶ ಅಂಬಣ್ಣವರಿಂದ ಪಡೆದಿದ್ದ ಕಸ್ತೂರಿ, ಕಲ್ಮೇಶ್ ಹೆಸರಿನ ಮೂರು ಎಕರೆ ಪಿತ್ರಾರ್ಜಿತ ಜಮೀನನ್ನು ಅಡಮಾನ ಇಟ್ಟು ಹಣ ಪಡೆದಿದ್ದಳು.

ಆದರೆ, ಜಮೀನು ಬರೆದುಕೊಡಲು ಕಲ್ಮೇಶ್ ನಿರಾಕರಿಸಿದ್ದಲ್ಲದೆ, ಸಾಲ ಮರುಪಾವತಿಗಾಗಿ ಒತ್ತಾಯಿಸುತ್ತಿದ್ದ. ಇದರಿಂದ ಬೇಸತ್ತ ಕಸ್ತೂರಿ, ತನ್ನ ಸಹೋದರರೊಂದಿಗೆ ಸಭೆ ನಡೆಸಿ ಸಂಚು ರೂಪಿಸಿದ್ದಳು ಎನ್ನಲಾಗಿದೆ. ಪತಿ ಸತ್ತರೆ ಜಮೀನು ತನ್ನ ಹೆಸರಿಗೆ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಲ್ಮೇಶ್ ಕಥೆ ಮುಗಿಸಲು ಸಂಚು ರೂಪಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ, ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ!

ಮೊದಲಿನಿಂದಲೇ ಕೊಲೆ ಬಗ್ಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದ ಕಿತ್ತೂರು ಪೊಲೀಸರು, ಆಸ್ತಿಯ ಲೆಕ್ಕಾಚಾರವೇ ಕೊಲೆಗೆ ಮೂಲ ಕಾರಣ ಎಂಬುದನ್ನು ಪತ್ತೆಹಚ್ಚಿದ್ದಾರೆ. ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us