ಬೆಳಗಾವಿ: ಕನ್ನಡ ಬಾವುಟ ಹಾರಿಸಿದ್ದಕ್ಕೆ ಸಹಪಾಠಿಗಳು ಹೊಡೆದರು, ಠಾಣೆಗೆ ಕರೆದೊಯ್ದ ಡಿಸಿಪಿ ಬೂಟಗಾಲಿಂದ ಒದ್ದರು ಎಂದ ವಿದ್ಯಾರ್ಥಿ

ಡಿಸಿಪಿ ನನ್ನ ವಿರುದ್ಧ ಅವಾಚ್ಯ ಶಬ್ದ ಬಳಸಿ ಬೈದು ಬೂಟಗಾಲಿಂದ ಒದ್ದರು. ಅಶ್ಲೀಲ ಪದ ಬಳಸಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಎಂದು ಬೆಳಗಾವಿಯಲ್ಲಿ ಹಲ್ಲೆಗೊಳಗಾದ ಅಪ್ರಾಪ್ತ ವಿದ್ಯಾರ್ಥಿ ಹೇಳಿಕೆ ನೀಡಿದ್ದಾನೆ.

ಬೆಳಗಾವಿ: ಕನ್ನಡ ಬಾವುಟ ಹಾರಿಸಿದ್ದಕ್ಕೆ ಸಹಪಾಠಿಗಳು ಹೊಡೆದರು, ಠಾಣೆಗೆ ಕರೆದೊಯ್ದ ಡಿಸಿಪಿ ಬೂಟಗಾಲಿಂದ ಒದ್ದರು ಎಂದ ವಿದ್ಯಾರ್ಥಿ
ಹಲ್ಲೆಗೊಳಗಾದ ವಿದ್ಯಾರ್ಥಿ
Edited By: ಆಯೇಷಾ ಬಾನು

Updated on: Dec 01, 2022 | 12:13 PM

ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸುಪ್ರೀ ಕೋರ್ಟ್​ ಅಂಗಳದಲ್ಲಿದೆ. ಇದರ ನಡುವೆ ಕನ್ನಡ ಬಾವುಟ ಹಾರಿಸಿದ್ದಕ್ಕೆ ಕಾಲೇಜಿನಲ್ಲಿ ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದ ಹಲ್ಲೆ ನಡೆದಿರುವ ಘಟನೆ ಬೆಳಗಾವಿಯ ಕಾಲೇಜೊಂದರಲ್ಲಿ ನಡೆದಿದೆ. ಟಿಳಕವಾಡಿಯಲ್ಲಿನ ಗೋಗಟೆ ಕಾಲೇಜಿನಲ್ಲಿ ಇಂಟರ್​ ಕಾಲೇಜು ಫೆಸ್ಟ್​​ನಲ್ಲಿ ವಿದ್ಯಾರ್ಥಿ ಕನ್ನಡ ಬಾವುಟ ಹಿಡಿದು ಡ್ಯಾನ್ಸ್​ ಮಾಡಿದಕ್ಕೆ ಸಹಪಾಠಿಗಳು ಆತನನ್ನು ಥಳಿಸಿದ್ದಾರೆ. ಜೊತೆಗೆ ದೂರು ನೀಡಲು ಹೋದ ವೇಳೆ ಪೊಲೀಸರಿಂದಲೂ ಹಲ್ಲೆ ನಡೆದಿರುವುದಾಗಿ ವಿದ್ಯಾರ್ಥಿ ಆರೋಪಿಸಿದ್ದಾನೆ.

ಇನ್ನು ಈ ವಿಚಾರ ತಿಳಿದು ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಹಲ್ಲೆಗೊಳಗಾದ ವಿದ್ಯಾರ್ಥಿಯಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಈವರೆಗೂ ಪ್ರಕರಣದ ಕುರಿತು ದೂರು ದಾಖಲಾಗಿಲ್ಲ. ಎಲ್ಲರೂ ಅಪ್ರಾಪ್ತರಾಗಿದ್ದು ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಗಲಾಟೆಯಾಗಿದೆ. ಸದ್ಯ ಪರಿಸ್ಥಿತಿ ಶಾಂತಿಯುತವಾಗಿದೆ ಅಂತ ಹೇಳಿದ್ದಾರೆ.

ಎಸಿಪಿ, ಡಿಸಿಪಿ ನನ್ನ ಮೇಲೆ ಹಲ್ಲೆ ಮಾಡಿದ್ರು

ಮತ್ತೊಂದೆಡೆ ಘಟನೆ ಬಗ್ಗೆ ಹಲ್ಲೆಗೊಳಗಾದ ವಿದ್ಯಾರ್ಥಿ ಮಾತನಾಡಿದ್ದು, ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡುತ್ತಿದ್ದಾಗ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಪೈಕಿ ಓರ್ವ ನನ್ನ ಕ್ಲಾಸ್‌ಮೇಟ್ ಇದ್ದ. ಬಳಿಕ ನಾನು ಕನ್ನಡ ಸಂಘಟನೆಯ ಮುಖಂಡರ ಜೊತೆಗೆ ಸಂಪರ್ಕ ಮಾಡಿದೆ. ನಾನು ದೂರು ಕೊಡಲು ಸಿದ್ದವಿದ್ಧೆ. ಠಾಣೆಗೆ ಕರೆದುಕೊಂಡು ಹೋಗಿ ಹೆದರಿಸಿ ಡಿಸಿಪಿ ರವೀಂದ್ರ ಗಡಾದಿ ಮತ್ತು ಎಸಿಪಿ ನಾರಾಯಣ್ ಭರಮನಿ ನನ್ನ ಮೇಲೆ ಹಲ್ಲೆ ಮಾಡಿದ್ರು. ಡಿಸಿಪಿ ನನ್ನ ವಿರುದ್ಧ ಅವಾಚ್ಯ ಶಬ್ದ ಬಳಸಿ ಬೈದು ಬೂಟಗಾಲಿಂದ ಒದ್ದರು. ಅಶ್ಲೀಲ ಪದ ಬಳಸಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಎಂದು ಬೆಳಗಾವಿಯಲ್ಲಿ ಹಲ್ಲೆಗೊಳಗಾದ ಅಪ್ರಾಪ್ತ ವಿದ್ಯಾರ್ಥಿ ಹೇಳಿಕೆ ನೀಡಿದ್ದಾನೆ.

ಹೀಗಾಗಿ ವಿದ್ಯಾರ್ಥಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಎಂಎಲ್‌ಸಿ(ಮೆಡಿಕೋ ಲಿಗಲ್ ಕೇಸ್) ಮಾಡಿದ್ದಾನೆ. ಟೀಳಕವಾಡಿ ಪೊಲೀಸರ ವಿರುದ್ಧ ಜಿಲ್ಲಾಸ್ಪತ್ರೆಯಲ್ಲಿ ಎಂಎಲ್‌ಸಿ ಮಾಡಿಸಿದ್ದಾನೆ.

ಇದನ್ನೂ ಓದಿ: ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಸ್ಥಿತಿ: ಎಡಿಜಿಪಿ ಅಲೋಕ್ ಕುಮಾರ್ ನಡೆಸಿದ ಸಭೆಯಲ್ಲಿ ಸಾಂಗ್ಲಿ, ಕೊಲ್ಹಾಪುರ ಎಸ್​ಪಿ ಭಾಗಿ

ಘಟನೆಗೆ ಕರುನಾಡ ವಿಜಯ ಸೇನೆ ಯುವಘಟಕ ಖಂಡನೆ
ಈ ಘಟನೆಗೆ ಕರುನಾಡ ವಿಜಯ ಸೇನೆ ಯುವಘಟಕ ಖಂಡನೆ ವ್ಯಕ್ತಪಡಿಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ದೂರು ನೀಡಿದರೆ ಪಡೆಯುತ್ತಿಲ್ಲ. ದೂರು ಪಡೆಯದೆ ಪೊಲೀಸರು ನಮ್ಮನ್ನೇ ಹೆದರಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಗೋಗಟೆ ಕಾಲೇಜು ಆಡಳಿತ ಮಂಡಳಿಯಿಂದ ರಜೆ ಘೋಷಣೆ

ಇಷ್ಟೆಲ್ಲಾ ಆಗುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮಕ್ಕಾಗಿ ಗೋಗಟೆ ಕಾಲೇಜು ಆಡಳಿತ ಮಂಡಳಿ ರಜೆ ಘೋಷಿಸಿದೆ. ಪಿಯುಸಿ ಪ್ರಥಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇಂದು ಕಾಲೇಜಿಗೆ ಕನ್ನಡಪರ ಸಂಘಟನೆ ಮುತ್ತಿಗೆ ಎಚ್ಚರಿಕೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಗೋಗಟೆ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಪಿಯುಸಿ ಹೊರತುಪಡಿಸಿ ಉಳಿದ ತರಗತಿಗಳು ಎಂದಿನಂತೆ ಆರಂಭವಾಗಿವೆ. ಕಾಲೇಜು ಮುಂಭಾಗದಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Kannada Flag: ಬೆಳಗಾವಿಯಲ್ಲಿ ಕನ್ನಡ ಬಾವುಟ ಹಾರಿಸಿದ್ದಕ್ಕೆ ವಿದ್ಯಾರ್ಥಿಗೆ ಥಳಿತ: ನಮ್ಮ ನಾಡಲ್ಲಿ ಇದೆಂಥಾ ದೌರ್ಜನ್ಯ..?

ಬೆಳಗಾವಿಯಲ್ಲಿ ಕರವೇ ನಾರಾಯಣಗೌಡ ಬಣದಿಂದ ಪ್ರತಿಭಟನೆ

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳದೇ ಹಲ್ಲೆಗೊಳಗಾದ ವಿದ್ಯಾರ್ಥಿ ಮೇಲೆ ಪೊಲೀಸರ ದರ್ಪ ಖಂಡಿಸಿ ಬೆಳಗಾವಿಯ ಆರ್‌ಪಿಡಿ ವೃತ್ತದ ಬಳಿ ಕರವೇ ನಾರಾಯಣಗೌಡ ಬಣದಿಂದ ಪ್ರತಿಭಟನೆ ನಡೆಯುತ್ತಿದೆ. ಕನ್ನಡಿಗ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮಗೊಳ್ಳಬೇಕು. ದರ್ಪ ತೋರಿದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹಿಸಿದೆ.

ಬೆಳಗಾವಿಯ ಆರ್‌ಪಿಡಿ ವೃತ್ತದಲ್ಲಿ ಬೆಳಗಾವಿ-ಗೋವಾ ಹೆದ್ದಾರಿ ತಡೆದು ರಸ್ತೆ ಮೇಲೆ ಧರಣಿ ಕುಳಿತು ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ. ಪುಂಡಾಟಿಕೆ ಮಾಡುತ್ತಿರುವ ಎಂಇಎಸ್ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ.

Published On - 12:13 pm, Thu, 1 December 22

Web contact

TV9 Kannada

Read More
Follow Us