
ಬೆಳಗಾವಿ, ಜೂನ್ 23: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಿಡಕಲ್ ಡ್ಯಾಂ ನೀರಿನಿಂದ ವಿದ್ಯುತ್ ಉತ್ಪಾದಿಸಿಲಾಗುತ್ತೆ. ಆದರೆ ದುರ್ದೈವ ಅಂದರೆ ಇದೇ ಜಲಾಶಯ ಪ್ರದೇಶದಲ್ಲಿರುವ ನೀರಾವರಿ ಇಲಾಖೆ ಕಚೇರಿಯಲ್ಲಿಯೇ ಕರೆಂಟಿಲ್ಲ. ಹೌದು, 1.98 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಹಿನ್ನೆಲೆ ನೀರಾವರಿ ಇಲಾಖೆ ಕಚೇರಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಹೀಗಾಗಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕತ್ತಲಲ್ಲೆ ಕಾಲ ಕಳೆಯುತ್ತಿದ್ದಾರೆ.
2022ರಿಂದ 1 ಕೋಟಿ 98 ಲಕ್ಷ 15 ಸಾವಿರ ಬಾಕಿ ವಿದ್ಯುತ್ ಬಿಲ್ ಬಂದಿಲ್ಲ. ಈ ಸಂಬಂಧ ನೋಟಿಸ್ ಕೊಟ್ಟರೂ ಹಣ ತುಂಬಿಲ್ಲ. ಹೀಗಾಗಿ ಇಲಾಖೆಗೆ ಸಂಬಂಧಿಸಿದ ಮುಖ್ಯ ಅಭಿಯಂತರರ ಕಚೇರಿಗೆ ವಿದ್ಯುತ್ ಸರಬರಾಜನ್ನು ಬಂದ್ ಮಾಡಿದ್ದೇವೆ. ಇಷ್ಟು ದೊಡ್ಡ ಮೊತ್ತದ ವಿದ್ಯುತ್ ಬಿಲ್ನ ಬಾಕಿ ಇರಿಸಿಕೊಂಡಿರುವ ಕಾರಣ ಸಂಘದ ಹಿತದೃಷ್ಟಿಯಿಂದ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾಕಸಕೊಪ್ಪ ಡ್ಯಾಂ ಖಾಲಿ ಖಾಲಿ; ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವು ರಾಜ್ಯದಲ್ಲಿ ವಿದ್ಯುತ್ ಸರಬರಾಜು ಮಾಡುವ ಏಕೈಕ ಸಹಕಾರಿ ಸಂಘವಾಗಿದ್ದು, ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಬಗ್ಗೆ ಕಳೆದ 4 ವರ್ಷಗಳಿಂದ ನೀರಾವರಿ ಇಲಾಖೆ ಹಲವು ಬಾರಿ ಮಾಹಿತಿ ನೀಡಲಾಗಿದೆ. ಆದರೆ ಕಾರಣ ಹೇಳಿಕೊಂಡು ಇಷ್ಟು ದಿನ ದೂಡಿದ್ದಾರೆ. ಹೀಗಾಗಿ ಅವರ ವಸತಿ ಪ್ರದೇಶ, ಡ್ಯಾಂ ಇರುವ ಸ್ಥಳ ಸೇರಿ ಯಾವುದಕ್ಕೂ ತೊಂದರೆ ಆಗದಂತೆ ಇಲಾಖೆ ಕಚೇರಿಯ ವಿದ್ಯುತ್ ಸಂಪರ್ಕವನ್ನು ಮಾತ್ರ ಕಡಿತಗೊಳಿಸಿದ್ದೇವೆ. ವರ್ಷದಲ್ಲಿ ಕನಿಷ್ಠ 25-50 ಲಕ್ಷ ಹಣವನ್ನಾದರೂ ಅವರು ಕಟ್ಟಬಹುದಿತ್ತು. ಹೀಗಾದರೆ ನಾವು ಸಹಕಾರ ಸಂಘವನ್ನು ನಡೆಸೋದು ಹೇಗೆ? 2022ರ ಸೆಪ್ಟಂಬರ್ನಲ್ಲಿ ಅವರು ವಿದ್ಯುತ್ ಬಿಲ್ ಪಾವತಿಸಿರೋದು. ಆ ಬಳಿಕ ಒಂದು ರೂಪಾಯಿಯನ್ನೂ ಇಲಾಖೆ ಪಾವತಿಸಿಲ್ಲ. ಈ ಕಾರಣಕ್ಕೆ ಬಿಲ್ ಪಾವತಿ ಮಾಡುವವರೆಗೂ ಮರಳಿ ವಿದ್ಯುತ್ ಸಂಪರ್ಕ ನೀಡಲ್ಲ ಎಂದು ಸಂಘ ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.