ತೀವ್ರಗೊಳ್ಳುತ್ತಿರುವ ಬೆಳಗಾವಿ ಜಿಲ್ಲೆ ವಿಭಜನೆ ಕಿಚ್ಚು: ಅಥಣಿ ಜಿಲ್ಲೆ ಮಾಡುವಂತೆ ಮಠಾಧೀಶರ ನೇತೃತ್ವದಲ್ಲಿ ಸಭೆ

ಕಳೆದ ಮೂರು ದಶಕಗಳಿಂದ ಬೆಳಗಾವಿ ಜಿಲ್ಲೆ ವಿಭಜನೆಯ ಕೂಗು ಕೇಳಿಬರುತ್ತಿದೆ. ಈ ಕೂಗು ಜೋರಾಗಿದ್ದು ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ವಿಭಜನೆಯ ಮಾತುಗಳನ್ನು ಆಡಿದ ನಂತರ. ಬೆಳಗಾವಿಯನ್ನು ವಿಭಜಿಸಿ ಮೂರು ಜಿಲ್ಲೆ ಮಾಡಬೇಕೆಂದು ಆಗ್ರಹವಿದೆ. ಗೋಕಾಕ್, ಚಿಕ್ಕೋಡಿ ಮತ್ತು ಬೆಳಗಾವಿ ನಗರ ಜಿಲ್ಲೆ ಮಾಡಬೇಕೆಂದು ಕೂಗು ಇದೆ. ಇದೀಗ ಅಥಣಿಯನ್ನೂ ಜಿಲ್ಲೆ ಮಾಡುವಂತೆ ಆಗ್ರಹ ಕೇಳಿಬಂದಿದೆ.

ತೀವ್ರಗೊಳ್ಳುತ್ತಿರುವ ಬೆಳಗಾವಿ ಜಿಲ್ಲೆ ವಿಭಜನೆ ಕಿಚ್ಚು: ಅಥಣಿ ಜಿಲ್ಲೆ ಮಾಡುವಂತೆ ಮಠಾಧೀಶರ ನೇತೃತ್ವದಲ್ಲಿ ಸಭೆ
ಅಥಣಿ ಜಿಲ್ಲೆ ನೀಲ ನಕ್ಷೆ
Follow us
| Updated By: ವಿವೇಕ ಬಿರಾದಾರ

Updated on:Aug 25, 2023 | 9:18 AM

ಚಿಕ್ಕೋಡಿ: ಬೆಳಗಾವಿ (Belagavi) ಜಿಲ್ಲೆ ವಿಭಜನೆ ಕಿಚ್ಚು ದಿನೇದಿನೆ ತೀವ್ರಗೊಳ್ಳುತ್ತಿದೆ. ಅಥಣಿಯನ್ನು (Athani) ಜಿಲ್ಲೆ ಮಾಡುವಂತೆ ಹೋರಾಟ ಮಾಡವ ಕುರಿತು ಮೂವರು ಮಠಾಧೀಶರ ನೇತೃತ್ವದಲ್ಲಿ ಸಭೆ ನಡೆದಿದೆ. ಅಥಣಿ ಪಟ್ಟಣದಲ್ಲಿರುವ ಮೋಟಗಿ ಮಠದ (Motagi Math) ಪ್ರಭುಚನ್ನಬಸವ ಸ್ವಾಮೀಜಿ, ಗಚ್ಚಿನಮಠದ ಶಿವಬಸವಶ್ರೀ, ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ನೇತೃತ್ವದಲ್ಲಿ ಅಥಣಿಯ ಶಿವಣಗಿ ಸಾಂಸ್ಕೃತಿಕ ಸಭಾಭವನದಲ್ಲಿ ರೈತ ಮುಖಂಡರು, ಸಾಹಿತಿಗಳು, ಮಾಜಿ ಯೋಧರು ಸೇರಿ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು.

ಸಚಿವ ಸತೀಶ್ ಜಾರಕಿಹೊಳಿ ಗೋಕಾಕ್, ಚಿಕ್ಕೋಡಿ ಜಿಲ್ಲೆ ಮಾಡಲು ಸರ್ಕಾರಕ್ಕೆ ಆಗ್ರಹಿಸುವುದಾಗಿ ಹೇಳಿದ ಬೆನ್ನಲ್ಲೇ ಅಥಣಿಯನ್ನೂ ಜಿಲ್ಲೆ ಮಾಡಬೇಕೆಂದು ಕೂಗು ಕೇಳಿಬಂದಿದೆ. ಅಥಣಿ ಜಿಲ್ಲೆ ನಮ್ಮ ಹಕ್ಕು ಘೋಷವಾಕ್ಯದಡಿ ನಡೆದ ಪೂರ್ವಭಾವಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಅಥಣಿ ಜಿಲ್ಲಾ ಹೋರಾಟದ ಸ್ವರೂಪ ಮತ್ತು ರೂಪರೇಷೆ ಕುರಿತು ಚರ್ಚೆ ನಡೆದಿದೆ. ಅಥಣಿ ಜಿಲ್ಲೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ.

ಕೆಲ ದಿನಗಳ ಹಿಂದೆ ಅಥಣಿಯನ್ನು ಜಿಲ್ಲೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಅಥಣಿ ಜಿಲ್ಲಾ ಹೋರಾಟ ಸಮಿತಿ ಕಾಂಗ್ರೆಸ್​ ಶಾಸಕ ರಾಜು ಕಾಗೆ ಅವರಿಗೆ ಮನವಿ ಮಾಡಿತ್ತು. ಅಲ್ಲದೇ ಗೋಕಾಕ್, ಚಿಕ್ಕೋಡಿ, ಬೈಲಹೊಂಗಲ ಜನ ಜಿಲ್ಲೆಗೆ ಬೇಡಿಕೆ ಇಡುತ್ತಿದ್ದಾರೆ. ಅದೇರೀತಿ ಅಥಣಿಯನ್ನು ಕೂಡ ಜಿಲ್ಲೆ ಮಾಡುವಂತೆ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ ಎಂದು ಸಮೀತಿ ಸದಸ್ಯರು ಹೇಳಿದ್ದರು.

ಇದನ್ನೂ ಓದಿ: ಬೆಳಗಾವಿ ವಿಭಜನೆ: ಬೈಲಹೊಂಗಲ ನಿವಾಸಿಗಳ ಆಗ್ರಹದ ಬಳಿಕ ಅಥಣಿಯನ್ನು ಜಿಲ್ಲಾ ಕೇಂದ್ರವಾಗಿಸಬೇಕೆಂಬ ಒತ್ತಾಯ

ಅಥಣಿ, ಕಾಗವಾಡ, ರಾಯಬಾಗ ಹಾಗೂ ಬಾಗಲಕೋಟ ಜಿಲ್ಲೆಯ ಜಮಖಂಡಿ, ರಬಕವಿ, ಬನಹಟ್ಟಿ ಸೇರಿಸಿ ಅಥಣಿ ಜಿಲ್ಲೆ ಮಾಡಬೇಕು. ಅಥಣಿಯಿಂದ ಜಿಲ್ಲಾ ಕೇಂದ್ರ ಬೆಳಗಾವಿಗೆ ಬರಲು 200 ಕಿಮೀ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಜನರ ಅನುಕೂಲ, ಅಭಿವೃದ್ಧಿ ದೃಷ್ಟಿಯಿಂದ ಅಥಣಿಯನ್ನು ಜಿಲ್ಲೆ ಮಾಡಬೇಕು ಎಂದು ಸಮಿತಿ ಒತ್ತಾಯ ಮಾಡಿತ್ತು. ಇದೀಗ ಪೂರ್ವಭಾವಿ ಸಭೆ ಮಾಡುವ ಮೂಲಕ ಅಥಣಿ ಜಿಲ್ಲೆ ಮಾಡಲೇಬೆಂಕೆದು ಸರ್ಕಾರಕ್ಕೆ ಒತ್ತಡ ಹೇರಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:09 am, Fri, 25 August 23