AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rain: ಬೆಳಗಾವಿಯಲ್ಲಿ ಧಾರಾಕಾರ ಮಳೆ, ಪ್ರವಾಹ; ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ದೂರವಾಣಿ ಕರೆ

ಪ್ರವಾಹ ಮತ್ತು ನದಿಪಾತ್ರದಲ್ಲಿ ಹೆಚ್ಚಿನ‌ ನಿಗಾ ವಹಿಸುವಂತೆ ಸೂಚನೆ ನೀಡಿದ್ದು, ಸರ್ಕಾರದಿಂದ ಹೆಚ್ಚಿನ‌ ನೆರವು ಬೇಕಾದಲ್ಲಿ ಕೂಡಲೇ ಕರೆ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಬೆಳಗಾವಿ ಡಿಸಿಗೆ ತಿಳಿಸಿದ್ದಾರೆ.

Karnataka Rain: ಬೆಳಗಾವಿಯಲ್ಲಿ ಧಾರಾಕಾರ ಮಳೆ, ಪ್ರವಾಹ; ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ದೂರವಾಣಿ ಕರೆ
ಬೆಳಗಾವಿಯಲ್ಲಿ ಧಾರಾಕಾರ ಮಳೆ
TV9 Web
| Updated By: preethi shettigar|

Updated on:Jul 23, 2021 | 2:30 PM

Share

ಬೆಳಗಾವಿ: ಕೃಷ್ಣಾ ನದಿ ಪಾತ್ರದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಜತೆ ದೂರವಾಣಿಯಲ್ಲಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. ಅಲ್ಲದೆ ಪ್ರವಾಹ ಮತ್ತು ನದಿಪಾತ್ರದಲ್ಲಿ ಹೆಚ್ಚಿನ‌ ನಿಗಾ ವಹಿಸುವಂತೆ ಸೂಚನೆ ನೀಡಿದ್ದು, ಸರ್ಕಾರದಿಂದ ಹೆಚ್ಚಿನ‌ ನೆರವು ಬೇಕಾದಲ್ಲಿ ಕೂಡಲೇ ಕರೆ ಮಾಡಿ ಎಂದು ತಿಳಿಸಿದ್ದಾರೆ. ಇನ್ನು ಪ್ರವಾಹ ಪೀಡಿತ ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಸಹ ಸಿಎಂ ಚರ್ಚೆ ನಡೆಸಿದ್ದು, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಸಿಎಂ ಕಚೇರಿಯಿಂದ ಕರೆ ಬಂದಿತ್ತು, ನಂತರ ಸಿಎಂ ಕೂಡ ಮಾತನಾಡಿದ್ದಾರೆ. ನೆರೆ ಸಂತ್ರಸ್ತರಿಗೆ ಇರಲು ವ್ಯವಸ್ಥೆ ಹಾಗೂ ಸರಿಯಾದ ಊಟ ಕೊಡಿ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ. ನಿಪ್ಪಾಣಿ ತಾಲೂಕಿನ ನಾಲ್ಕೈದು ಗ್ರಾಮಗಳು ಮುಳಗುವ ಭೀತಿ ಇದೆ. ಅವರನ್ನು ಶಿಪ್ಟ್ ಮಾಡುವ ಕೆಲಸ ನಡೆದಿದೆ, ಆರು ಕಾಳಜಿ ಕೇಂದ್ರ ತೆರೆಯುತ್ತೇವೆ ಎಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಟಿವಿ9 ಡಿಜಿಟಲ್​ಗೆ ಡಿಸಿ ಎಂ.ಜಿ ಹಿರೇಮಠ ಹೇಳಿಕೆ ನೀಡಿದ್ದಾರೆ.

ವಾಘವಾಡೆ ಬಳಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ವಾಘವಾಡೆ ಬಳಿ ಏಕಾಏಕಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದ ಹಿನ್ನೆಲೆಯಲ್ಲಿ, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಹಳ್ಳದ ನೀರಿನಲ್ಲಿ ಸಿಲುಕಿ ಕೊಚ್ಚಿ ಹೋಗುತ್ತಿದ್ದ. ಈ ವೇಳೆ ಹಗ್ಗ ಎಸೆದು ಯುವಕನನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದು, ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

boy rescue

ವಾಘವಾಡೆ ಬಳಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ

ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಹಿರಣ್ಯಕೇಶಿ ನದಿ ಪಶ್ಚಿಮ ಘಟ್ಟ, ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹಿರಣ್ಯಕೇಶಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಸಂಕೇಶ್ವರ ಪಟ್ಟಣದ ಶಂಕರಗಲ್ಲಿ, ಬಿರೇಶ್ವರ್, ಮಠ್​​ಗಲ್ಲಿ, ಕುಂಬಾರ ಗಲ್ಲಿಯಲ್ಲಿ ಈ ನದಿ ನೀರು ಸುತ್ತುವರೆದಿದೆ. ಈ ಭಾಗದ ನೂರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಕುಂಬಾರ ಗಲ್ಲಿಯಲ್ಲಿರುವ ಲಕ್ಷ್ಮೀ ದೇವಸ್ಥಾನ ಜಲಾವೃತವಾಗಿದೆ. ಒಟ್ಟಾರೆ ಮನೆಗಳಿಗೆ ನೀರು ನುಗ್ಗಿದ್ದರಿಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಕಾಲೋನಿ ಜನರು ಪರದಾಡುವಂತಾಗಿದೆ.

hiranyakasi river

ಹಿರಣ್ಯಕೇಶಿ ನದಿ

ಮಿರ್ಜಿ ಗ್ರಾಮದ ಬಳಿಯ ಹಳೇ ಸೇತುವೆ ಜಲಾವೃತ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ಬಳಿಯ ಹಳೇ ಒಂಟಗೋಡಿ ಮಹಾಲಿಂಗಪುರ ಸಂಪರ್ಕದ ಸೇತುವೆ ಜಲಾವೃತವಾಗಿದೆ. ಇನ್ನು ಹೊಸ ಸೇತುವೆ ಜಲಾವೃತ ಆಗಲು ಎರಡು ಅಡಿ ಮಾತ್ರ ಬಾಕಿ ಇದೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪಾಂಡ್ರಿ ನದಿ‌ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ, ಅಪಾಯದ ಮಟ್ಟ ಮೀರಿ ಪಾಂಡ್ರಿ ನದಿ‌ ಹರಿಯುತ್ತಿದೆ. ಪರಿಣಾಮ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ತೋಟದ ಮನೆಯನ್ನು ಪಾಂಡ್ರಿ ನದಿ ಸುತ್ತುವರೆದಿದೆ. ಹೀಗಾಗಿ ಲೋಂಡಾ ಗ್ರಾಮದ ನಿವಾಸಿ ಗಣಪತ್ ಮಿಟಾರೆ ಸಂಕಷ್ಟಕ್ಕೆ ಸಿಲುಕಿದ್ದು, ಬಹುತೇಕ ಮನೆ ಮುಳುಗಡೆಯಾಗಿದೆ. ನೀರಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಜೀವ ಉಳಿಸಿ ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: Gurugram Rains: ಭಾರೀ ಮಳೆಯಿಂದ ನದಿಗಳಾದ ಗುರುಗ್ರಾಮದ ರಸ್ತೆಗಳು; ನೀರಿನಲ್ಲಿ ತೇಲಿಬಂದ ಕಾರುಗಳ ವಿಡಿಯೋ ವೈರಲ್

Karnataka Rain: ಭಾರಿ ಮಳೆಗೆ ತುಂಬಿ ಹರಿಯುತ್ತಿದ್ದಾಳೆ ವೇದಗಂಗಾ, ನದಿ ನೀರಿನಲ್ಲಿ ಸಿಲುಕಿಕೊಂಡ ಓಮ್ನಿ ತರಲು ಹರ ಸಾಹಸ

Published On - 10:19 am, Fri, 23 July 21