ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಕ್ಷೇತ್ರದಲ್ಲಿ ಅಮಾನವೀಯ ಘಟನೆ; ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲೇ ಅಮಾನವೀಯ ಘಟನೆ ನಡೆದಿದೆ. ಶ್ರೀದೇವಿ ಎಂಬ ಮಹಿಳೆಗೆ ಮಧ್ಯರಾತ್ರಿ ನಡುರಸ್ತೆಯಲ್ಲಿ ಚಪ್ಪಲಿ ಹಾರ ಹಾಕಿ ಘಟಪ್ರಭಾ ಮೃತ್ಯುಂಜಯ ಸರ್ಕಲ್​ನಲ್ಲಿ ಮೆರವಣಿಗೆ ಮಾಡಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಕ್ಷೇತ್ರದಲ್ಲಿ ಅಮಾನವೀಯ ಘಟನೆ; ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ
ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ
Updated By: ವಿವೇಕ ಬಿರಾದಾರ

Updated on: Oct 14, 2023 | 2:33 PM

ಬೆಳಗಾವಿ ಅ.14: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ತವರು ಜಿಲ್ಲೆಯಲ್ಲೇ ಅಮಾನವೀಯ ಘಟನೆ ನಡೆದಿದೆ. ಗೋಕಾಕ್ (Gokak) ತಾಲೂಕಿನ ಘಟಪ್ರಭಾದ ಮಲ್ಲಾಪುರ ಪಿಜಿ ನಗರ ವಾಸಿಗಳು, ಶ್ರೀದೇವಿ ಎಂಬ ಮಹಿಳೆಗೆ ಮಧ್ಯರಾತ್ರಿ ನಡುರಸ್ತೆಯಲ್ಲಿ ಚಪ್ಪಲಿ ಹಾರ ಹಾಕಿ ಘಟಪ್ರಭಾ ಮೃತ್ಯುಂಜಯ ಸರ್ಕಲ್​ನಲ್ಲಿ ಮೆರವಣಿಗೆ ಮಾಡಿದ್ದಾರೆ. ಅಲ್ಲದೆ ಮಹಿಳೆ ವಿರುದ್ಧ ಧಿಕ್ಕಾರ ಕೂಗಿ ಥಳಿಸಿರುವ ಆರೋಪ ಕೇಳಿಬಂದಿದೆ.

ಶ್ರೀದೇವಿ ಯುವಕರನ್ನ ಹನಿ ಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾಳೆ ಎಂದು ಕೆಲ ಮಹಿಳೆಯರು ಹಾಗೂ ಪುರುಷರು ಆಕೆಯ ಮನೆಗೆ ಹೋಗಿ ಪ್ರಶ್ನಿಸಿದ್ದರು. ಈ ವೇಳೆ ಮಹಿಳೆಯರಿಗೆ ಶ್ರೀದೇವಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಮಹಿಳೆಯರು ಶ್ರೀದೇವಿಯನ್ನು ಮನೆಯಿಂದ ಹೊರ ತಂದು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಬಳಿಕ ಘಟಪ್ರಭಾ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಒಪ್ಪಿಸಿದ್ದಾರೆ. ಸದ್ಯ ಶ್ರೀದೇವಿ ಘಟಪ್ರಭಾ ಪೊಲೀಸರ ಸುಪರ್ದಿಯಲ್ಲಿದ್ದಾರೆ. ಇನ್ನು ಅಮಾನವೀಯವಾಗಿ ನಡೆಸಿಕೊಂಡವರ ವಿರುದ್ಧ ಘಟಪ್ರಭಾ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪೊಲೀಸ್​ ಠಾಣೆಯಲ್ಲಿ ಎಎಸ್​ಐ ಮೇಲೆ ಚಪ್ಪಲಿ ಎಸೆದು, ಪಿಎಸ್​​ಐಗೆ ಕಚ್ಚಿದ ಮಹಿಳೆ

ಕಳೆದ ತಿಂಗಳು 30ನೇ ತಾರೀಖು ದಲಿತ ಸಂಘಟನೆಯವರು ನನ್ನ ಬಳಿ ಬಂದು ಐದು ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಇಲ್ಲವಾದರೆ ನಿನ್ನ ಗಡಿಪಾರು ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಆಗ ನಾನು ಭೀಕ್ಷೆ ಬೇಡಿಕೊಂಡು ಜೀವನ ಮಾಡುತ್ತೇನೆ, ನಾನು ಎಲ್ಲಿಂದ ಹಣ ಕೊಡಬೇಕು ಎಂದು ಪ್ರಶ್ನಿಸಿದ್ದೆ. ಮತ್ತೆ ನಿನ್ನೆ ರಾತ್ರಿ ನಮ್ಮ ಮನೆಗೆ ಬಂದು  ಐದು ಲಕ್ಷ ಕೊಡು ಎಂದು ಪೀಡಿಸಿದರು‌. ನಾನು ಯಾಕೆ ಹಣ ಕೊಡಬೇಕು ಎನ್ನುತ್ತಿದ್ದಂತೆ ನನಗೆ ಸಿಕ್ಕಾಪಟ್ಟೆ ಹೊಡೆದರು‌. ನಂತರ ಬೆತ್ತಲೆಗೊಳಿಸಿ, ಅತ್ಯಾಚಾರ ಮಾಡಿದರು. ಬಳಿಕ ಚಪ್ಪಲಿ ಮಾಲೆ ಹಾಕಿ ಮೆರವಣಿಗೆ ಮಾಡಿದರು ಎಂದು ಮಹಿಳೆ ಕಣ್ಣೀರು ಹಾಕಿದ್ದಾಳೆ. ಸದ್ಯ ಶ್ರೀದೇವಿ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:06 pm, Sat, 14 October 23