ಬೆಳಗಾವಿ: ಬಸ್ ನಿಲ್ಲಿಸಿಲ್ಲವೆಂದು ಚಾಲಕನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ
ಇತ್ತೀಚೆಗೆ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಜೈ ಶ್ರೀರಾಮ ಎಂದು ಹೇಳಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಅನ್ಯಕೋಮಿನ 20 ಯುವಕರ ಗುಂಪು ಸೇರಿ ಹಲ್ಲೆ ನಡೆಸಿದ ಘಟನೆ ಮಾಸುವ ಮುನ್ನವೇ ಬೈಲಹೊಂಗಲ(Bailhongal)ದಲ್ಲಿ ಬಸ್ ನಿಲ್ಲಿಸಿಲ್ಲ ಎಂದು ಸರ್ಕಾರಿ ಬಸ್ ನಿರ್ವಾಹಕ ಮತ್ತು ಚಾಲಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ನಡೆಸಿದೆ.
![ಬೆಳಗಾವಿ: ಬಸ್ ನಿಲ್ಲಿಸಿಲ್ಲವೆಂದು ಚಾಲಕನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ](https://images.tv9kannada.com/wp-content/uploads/2024/04/bailhongal-bus-driver-attacked-by-muslim-youths-for-not-stopping-bus.jpg?w=1280)
ಬೆಳಗಾವಿ, ಏ.25: ಬಸ್ ನಿಲ್ಲಿಸಿಲ್ಲ ಎಂದು ಸರ್ಕಾರಿ ಬಸ್ ನಿರ್ವಾಹಕ ಮತ್ತು ಚಾಲಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಬೈಲಹೊಂಗಲ(Bailhongal) ಬಸ್ ನಿಲ್ದಾಣದಲ್ಲಿ ನಡೆದಿದೆ. ಇನ್ನು ಈ ಬಸ್ ಬೈಲಹೊಂಗಲದಿಂದ ಧಾರವಾಡಕ್ಕೆ ಹೊರಟ್ಟಿತ್ತು. ಈ ವೇಳೆ ಓಡಿ ಬಂದು ಬಸ್ ಹತ್ತಲು ಮಹಿಳೆ ಯತ್ನಿಸಿದ್ದಾರೆ. ಆಗ ಮಹಿಳೆಗೆ ನಿರ್ವಾಹಕ ಬೈಯ್ದಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಬಸ್ಗಳನ್ನ ಸ್ಥಗಿತಗೊಳಿಸಿ ಪ್ರತಿಭಟನೆ
ಇನ್ನು ಈ ವೇಳೆ ಜಗಳ ಬಿಡಿಸಲು ಬಂದ ಚಾಲಕರ ಮೇಲೆಯೂ ಹಲ್ಲೆ ಮಾಡಿದ ಯುವಕರು, ಬಸ್ ನಿಲ್ದಾಣದಲ್ಲಿದ್ದ ಕಂಟ್ರೋಲರ್ ಕೊಠಡಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಬಳಿಕ ರೊಚ್ಚಿಗೆದ್ದ ಚಾಲಕರು ಮತ್ತು ನಿರ್ವಾಹಕರು ಬೈಲಹೊಂಗಲ ಬಸ್ ನಿಲ್ದಾಣದಿಂದ ಹೊರಡುವ ಬಸ್ಗಳನ್ನ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಬೈಲಹೊಂಗಲ ಪೊಲೀಸ್ ಠಾಣೆ ಬಳಿ ಜಮಾವಣೆಯಾದ ಅವರು, ಹಲ್ಲೆ ಮಾಡಿದವರನ್ನ ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಇದನ್ನೂ ಓದಿ:ಜೈಶ್ರೀರಾಮ ಹೇಳಿದ್ದಕ್ಕೆ ಹಲ್ಲೆ: ಘಟನೆ ಹೇಗಾಯ್ತು? ದೂರಿನಲ್ಲಿ ಘಟನೆ ಬಗ್ಗೆ ವಿವರಿಸಿದ ಹಲ್ಲೆಗೊಳಗಾದ ಯವಕ
ಘಟನೆ ವಿವರ
ಚಲಿಸುವ ವೇಳೆ ಬಸ್ ಹತ್ತಿದ ಮಹಿಳೆಗೆ, ಬಸ್ ಹೊರಡುವಾಗ ಹತ್ತಬೇಡ ಎಂದು ನಿರ್ವಾಹಕ ಬುದ್ದಿವಾದ ಹೇಳಿದ್ದಾನೆ. ಈ ವೇಳೆ ಮಹಿಳೆ ನಿರ್ವಾಹಕನಿಗೆ ಬೈಯ್ದಿದ್ದಾರೆ. ಇದರಿಂದ ಮಾತಿನ ಚಕಮಕಿಯಾಗಿ ಚಾಲಕ ಬಸ್ ನಿಲ್ಲಿಸಿದ್ದಾನೆ. ಅದೇ ಸಮಯಕ್ಕೆ ಅಲ್ಲೇ ಸ್ಥಳದಲ್ಲಿದ್ದ ಕೆಲ ಯುವಕರ ಗುಂಪು ನಿರ್ವಾಹಕ ಮತ್ತು ಚಾಲಕನ ಮೇಲೆ ಹಲ್ಲೆ ನಡೆಸಿದೆ. ಇನ್ನು ಪ್ರತಿಭಟನೆ ಸ್ಥಳಕ್ಕೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಭೇಟಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ