ಕರ್ನಾಟಕಕ್ಕೆ ಸೇರುತ್ತೇವೆ ಎಂದಿದ್ದ ಉಡುಗಿ ಗ್ರಾಮದ 17 ಕನ್ನಡಿಗರಿಗೆ ನೋಟಿಸ್ ನೀಡಿದ ಮಹಾರಾಷ್ಟ್ರ ಸರ್ಕಾರ! ಬೆಳಗಾವಿ ಗಡಿಯಲ್ಲಿ ಅಲರ್ಟ್

ಕರವೇ ಕಾರ್ಯಕರ್ತರು ನಾಡದ್ರೋಹಿ ಎಂಇಎಸ್​, ಮಹಾರಾಷ್ಟ್ರ ರಾಜಕಾರಣಿಗಳ ವಿರುದ್ಧ ಕಿಡಿಕಾರಿದ್ದು ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಇಂದು ಬೃಹತ್ ಬಹಿರಂಗ ಸಭೆ ನಡೆಸಲಿದ್ದಾರೆ

ಕರ್ನಾಟಕಕ್ಕೆ ಸೇರುತ್ತೇವೆ ಎಂದಿದ್ದ ಉಡುಗಿ ಗ್ರಾಮದ 17 ಕನ್ನಡಿಗರಿಗೆ ನೋಟಿಸ್ ನೀಡಿದ ಮಹಾರಾಷ್ಟ್ರ ಸರ್ಕಾರ! ಬೆಳಗಾವಿ ಗಡಿಯಲ್ಲಿ ಅಲರ್ಟ್
ಬೆಳಗಾವಿ ಗಡಿಯಲ್ಲಿ ಅಲರ್ಟ್
Edited By:

Updated on: Dec 06, 2022 | 11:53 AM

ಬೆಳಗಾವಿ: ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ನಡುವೆ ಗಡಿ ವಿವಾದ ಸಂಬಂಧ ಬೆಳಗಾವಿಗೆ ಬರಬೇಕಿದ್ದ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಬೆಳಗಾವಿ ಪ್ರವಾಸ ರದ್ದಾದರೂ ಗಡಿಯಲ್ಲಿ ಹೈ ಅಲರ್ಟ್​​ ಮುಂದುವರೆದಿದೆ. ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್​​ ಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ 21 ಕಡೆ ಚೆಕ್​ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಅದರಲ್ಲೂ ಕೊಗನೋಳ್ಳಿ ಚೆಕ್​ಪೋಸ್ಟ್​​ನಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. 5 ಡಿಎಆರ್​ ತುಕಡಿ ಸೇರಿ 450ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಬೆಳಗಾವಿ ಎಸ್​ಪಿ ಡಾ.ಸಂಜೀವ್ ಎಂ.ಪಾಟೀಲ್ ನೇತೃತ್ವದಲ್ಲಿ ಬೆಂಗಳೂರು-ಪುಣೆ ಹೆದ್ದಾರಿಯಲ್ಲೂ ಪೊಲೀಸ್ ಬಂದೋಬಸ್ತ್​​ ಕೈಗೊಳ್ಳಲಾಗಿದೆ. ಓರ್ವ ಎಎಸ್​​ಪಿ, ಮೂವರು DySP, 8 ಪಿಐ, 30 PSI ನಿಯೋಜಿಸಲಾಗಿದ್ದು ಮಹಾರಾಷ್ಟ್ರದಿಂದ ಬೆಳಗಾವಿ ಪ್ರವೇಶಿಸುವ ಎಲ್ಲಾ ಮಾರ್ಗದಲ್ಲಿ ಭದ್ರತೆ ಕೈಗೊಳ್ಳಲಾಗಿದೆ.

ನಾಡದ್ರೋಹಿ ಎಂಇಎಸ್​, ಮಹಾರಾಷ್ಟ್ರ ರಾಜಕಾರಣಿಗಳ ವಿರುದ್ಧ ಕಿಡಿ

ಕರವೇ ಕಾರ್ಯಕರ್ತರು ನಾಡದ್ರೋಹಿ ಎಂಇಎಸ್​, ಮಹಾರಾಷ್ಟ್ರ ರಾಜಕಾರಣಿಗಳ ವಿರುದ್ಧ ಕಿಡಿಕಾರಿದ್ದು ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಇಂದು ಬೃಹತ್ ಬಹಿರಂಗ ಸಭೆ ನಡೆಸಲಿದ್ದಾರೆ. ಹೀಗಾಗಿ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ಬೆಳಗಾವಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್​​ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಇಬ್ಬರು ಡಿಸಿಪಿ, ನಾಲ್ವರು ಸಿಪಿಐ, 10 ಪಿಎಸ್​ಐ, 12 ಕೆಎಸ್​ಆರ್​​ಪಿ, 8 ಸಿಎಆರ್​ ತುಕಡಿ, ಅಶ್ರುವಾಯು ಪ್ರಯೋಗಿಸುವ ವರುಣಾ ವಾಹನ ನಿಯೋಜನೆಗೊಂಡಿದೆ.

ಇದನ್ನೂ ಓದಿ: ಕನ್ನಡಿಗರ ಹೋರಾಟಕ್ಕೆ ಬೆದರಿದ್ರಾ ಮಹಾ ಸಚಿವರು? ಮಹಾರಾಷ್ಟ್ರ ಸಚಿವದ್ವಯರ ಬೆಳಗಾವಿ ಭೇಟಿ ಕ್ಯಾನ್ಸಲ್

ಮಹಾರಾಷ್ಟ್ರದಲ್ಲಿನ ಉಡುಗಿ ಗ್ರಾಮದ 17 ಕನ್ನಡಿಗರಿಗೆ ನೋಟಿಸ್

ಕರ್ನಾಟಕ ಸೇರಲು‌ ನಿರ್ಧಾರ ಮಾಡಿದ ಉಡುಗಿ ಗ್ರಾಮದ 17 ಜನರಿಗೆ ಪೊಲೀಸ್ ನೋಟಿಸ್ ನೀಡಿದೆ. ನೋಟಿಸ್ ಜಾರಿ ಮಾಡೋ ಮೂಲಕ ಒತ್ತಡ ಹಾಕೋ ತಂತ್ರಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಕರ್ನಾಟಕ ರಾಜ್ಯ ಸೇರ್ಪಡೆಗೆ ಠರಾವು ಪಾಸ್ ಮಾಡಿದ್ದ ಉಡುಗಿ ಗ್ರಾಮದ ಜನರು ಗ್ರಾಮದಲ್ಲಿ ಕನ್ನಡ ಧ್ವಜ ಹಾರಿಸಿ ಕನ್ನಡ ಪರ ಘೋಷಣೆ ಕೂಗಿದ್ದರು. ಆದ್ರೆ ಕರ್ನಾಟಕ ಸೇರಬೇಕೆನ್ನುವ ಕನ್ನಡಿಗರ ಧ್ವನಿ ಅಡಗಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಕರ್ನಾಟಕ ಸೇರ ಬಯಸುವ ಹೋರಾಟ ನಡೆಸೋ ಮುನ್ನ ಪೊಲೀಸರ ಗಮನಕ್ಕೆ ತರಬೇಕೆಂದು ನೋಟಿಸ್​ನಲ್ಲಿ ಸೂಚಿಸಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:41 am, Tue, 6 December 22

Follow Us