ಪ್ರತಿ ಕ್ಷೇತ್ರದಿಂದ 5-10 ಜನ ಅರ್ಜಿ ಸಲ್ಲಿಕೆ, ಸರ್ವೆ ಮಾಡಿದ ಬಳಿಕ ಟಿಕೆಟ್ ನಿರ್ಧಾರ: ಸತೀಶ್ ಜಾರಕಿಹೊಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 04, 2022 | 5:48 PM

ಪ್ರತಿ ಕ್ಷೇತ್ರದಿಂದ 5-10 ಜನ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಅರ್ಜಿ ಸಲ್ಲಿಸಲು ಎಲ್ಲರಿಗೂ ಅವಕಾಶವಿದ್ದು, ಹೀಗಾಗಿ ಹಾಕಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಪ್ರತಿ ಕ್ಷೇತ್ರದಿಂದ 5-10 ಜನ ಅರ್ಜಿ ಸಲ್ಲಿಕೆ, ಸರ್ವೆ ಮಾಡಿದ ಬಳಿಕ ಟಿಕೆಟ್ ನಿರ್ಧಾರ: ಸತೀಶ್ ಜಾರಕಿಹೊಳಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
Follow us on

ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆ (election) 2023ಕ್ಕೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಚುನಾವಣೆಗೆ ರಾಜ್ಯದ ಪ್ರಬಲ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ಇತ್ತ ಜಿಲ್ಲೆಯಲ್ಲಿ ಪ್ರತಿ ಕ್ಷೇತ್ರದಿಂದ 5-10 ಜನ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಅರ್ಜಿ ಸಲ್ಲಿಸಲು ಎಲ್ಲರಿಗೂ ಅವಕಾಶವಿದ್ದು, ಹೀಗಾಗಿ ಹಾಕಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (satish jarkiholi) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಈಗಾಗಲೇ ಎಐಸಿಸಿ, ಕೆಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ನಾಯಕರಿಂದ ಸರ್ವೆ ಮಾಡಲಾಗಿದ್ದು, ಈಗ ಮತ್ತೊಮ್ಮೆ ಮಾಡುತ್ತಿದ್ದಾರೆ. ಕುಡಚಿಯಲ್ಲಿ 12, ಅಥಣಿಯಲ್ಲಿ 10 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಸವದತ್ತಿಯಿಂದ ಹೆಚ್.ಎಂ.ರೇವಣ್ಣ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಂತಿಮವಾಗಿ ಸರ್ವೆ ಮಾಡಿದ ಬಳಿಕ ಟಿಕೆಟ್ ನಿರ್ಧಾರ ಆಗಲಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಕಿತ್ತೂರು ಕ್ಷೇತ್ರದಲ್ಲಿ ಅಳಿಯ ಮಾವನ ಮಧ್ಯೆ ಕಾಂಗ್ರೆಸ್ ಟಿಕೆಟ್ ಫೈಟ್ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು,  ಸರ್ವೇಯಲ್ಲಿ ಯಾರ ಹೆಸರು ಬರುತ್ತೆ ಅವರಿಗೆ ಟಿಕೆಟ್ ನೀಡೋದಾಗಿ ಹೇಳಿದ್ದೇವೆ. ಡಿ.ಬಿ.ಇನಾಂದಾರ್ ಹೆಸರು ಬಂದ್ರೆ ಇನಾಂದಾರ್‌ಗೆ ಕೊಡ್ತೀವಿ. ಬಾಬಾಸಾಹೇಬ್ ಪಾಟೀಲ್ ಹೆಸರು ಬಂದ್ರೆ ಬಾಬಾಸಾಹೇಬ್‌ಗೆ ಕೊಡ್ತೀವಿ. ಅಂತಹ ಕ್ಷೇತ್ರಗಳು ನಮ್ಮ ಜಿಲ್ಲೆಯಲ್ಲಿ ಬಹಳಷ್ಟು ಇವೆ ಎಂದು ಹೇಳಿದರು.

ಗೆಲ್ಲುವಂತಹ ಕ್ಷೇತ್ರಗಳು ಬಹಳಷ್ಟಿವೆ, ಈಗ ಹೇಳಿದ್ರೆ ಸಮಸ್ಯೆ ಆಗುತ್ತೆ

ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂಬ ಸಂತೋಷ್​ ಲಾಡ್ ಹೇಳಿಕೆಗೆ ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಡಿ.ಕೆ.ಶಿವಕುಮಾರ್​ ಗೆದ್ದೇ ಗೆಲ್ಲುತ್ತಾರೆ, ಅವರ ಬಗ್ಗೆ ಪ್ರಶ್ನೆ ಇಲ್ಲ. ಸಿದ್ದರಾಮಯ್ಯ ಹೆಚ್ಚು ಭೇಟಿ ನೀಡದ ಕ್ಷೇತ್ರ ಆಯ್ಕೆ ಒಳ್ಳೆಯದು. ಬಾದಾಮಿ ರೀತಿ ಆದರೆ ಪಕ್ಷ ಮತ್ತು ಅವರಿಗೂ ತೊಂದರೆ ಆಗುತ್ತೆ. ಗೆಲ್ಲುವಂತಹ ಕ್ಷೇತ್ರಗಳು ಬಹಳಷ್ಟು ಇವೆ. ಕೊನೆಗೆ ಹೇಳುತ್ತೇವೆ. ಈಗ ಹೇಳಿದ್ರೆ ಸಮಸ್ಯೆ ಆಗುತ್ತೆ ಎಂದರು ಸತೀಶ್ ಜಾರಕಿಹೊಳಿ.

ಇದನ್ನೂ ಓದಿ; 2023ರ ವಿಧಾನಸಭೆ, 2024ರ ಲೋಕಸಭೆ ಚುನಾವಣೆಯಲ್ಲಿ ನಾನು ಮೇನ್ ಲೀಡರ್ ಆಗಿರುತ್ತೇನೆ: ರಮೇಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ

ಧಮ್ ಬಗ್ಗೆ ಮಾತನಾಡುವ ಸರ್ಕಾರಕ್ಕೆ ಧಮ್ ಇಲ್ವೇ ಇಲ್ಲ

ಕಾಲೇಜಿನಲ್ಲಿ ಕನ್ನಡ ಬಾವುಟ ಪ್ರದರ್ಶಿಸಿದ್ದಕ್ಕೆ ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದ ಹಲ್ಲೆ ಪ್ರಕರಣ ಮತ್ತು ಡಿಸಿಪಿ ಅವಾಚ್ಯ ಶಬ್ದ ಬಳಕೆ ಆರೋಪ ವಿಚಾರವಾಗಿ ಮಾತನಾಡಿದ್ದು, ಪೊಲೀಸರು ಬಳಸಿದ ಭಾಷೆ ಖಂಡಿಸುವೆ. ಪೊಲೀಸರು ಸಂಯಮವಾಗಿ ವರ್ತನೆ ಮಾಡಬೇಕು. ರಫ್ ಆಗಿ ವರ್ತನೆ ಮಾಡಿದ್ದಿದೆ, ಅವರು ಬೈದಿದ್ದು ಇದೆ. ಬೇರೆ ಶಬ್ದಗಳಿವೆ, ಬೇರೆ ರೀತಿಯಿಂದ ಅವರಿಗೆ ಕನ್ವಿಯನ್ಸ್ ಮಾಡಬೇಕು. ಸರ್ಕಾರ ಯಾವುದೇ ತರಹದ ನಿರ್ಣಯ ಕೈಗೊಳ್ಳುವ ಶಕ್ತಿ ಅವರಿಗೆ ಇಲ್ಲವೇ ಇಲ್ಲ. ಅವರಿಗೆ ಧಮ್ ಇಲ್ವೇ ಇಲ್ಲ ಏನ್ ಮಾಡೋದು ಎಂದು ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದ ಬಗ್ಗೆ ಸತೀಶ್ ಗರಂ ಆದರು. ಇಲ್ಲಿಯ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಹೇಳುವಂತ ಶಕ್ತಿ ಸರ್ಕಾರಕ್ಕೆ ಇಲ್ಲ. ಇದೊಂದೇ ಅಲ್ಲ ಬೇರೆ ಬೇರೆ ವಿಚಾರದಲ್ಲಿ ಸಾಬೀತಾಗಿದೆ.
ಇದನ್ನ ಮುಂದೆ ಬೆಳೆಸದೇ ಇಲ್ಲಿಯೇ ಕ್ಲೋಸ್ ಮಾಡಬೇಕು ಎಂದರು.

ಆ ಜನರು ಇಲ್ಲಿಗೆ ಬರಲು ಆಗಲ್ಲ, ನಾವು ಅಲ್ಲಿಗೆ ಹೋಗಲು ಆಗಲ್ಲ

ಮಹಾರಾಷ್ಟ್ರದ ಗಡಿ ಜನ ಕರ್ನಾಟಕಕ್ಕೆ ಸೇರಲು ಒಲವು ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಆ ಜನರು ಇಲ್ಲಿಗೆ ಬರಲು ಆಗಲ್ಲ, ನಾವು ಅಲ್ಲಿಗೆ ಹೋಗಲು ಆಗಲ್ಲ. ಒಮ್ಮೆ ವಿಭಜನೆ ಆಯ್ತು, ಅದೇ ಅಂತಿಮ ಎಂಬುದು ನನ್ನ ಅನಿಸಿಕೆ. ರಾಜಕೀಯ ಗಿಮಿಕ್​​ ಮಾಡಲು ಸಚಿವರು ಬರುತ್ತಿದ್ದಾರೆ, ಏನೂ ಆಗಲ್ಲ. ಮಹಾರಾಷ್ಟ್ರ ಸಚಿವರು ನಿಪ್ಪಾಣಿ ಗಡಿಗೆ ಬಂದು ವಾಪಸ್​​ ಹೋಗುತ್ತಾರೆ. ನಾವು ಇಲ್ಲಿ ತನಕ ಬಂದಿದ್ದೀವಿ ಎಂದು ಸಚಿವರು ಹೇಳ್ತಾರೆ ಅಷ್ಟೇ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:47 pm, Sun, 4 December 22