ಬೆಂಗಳೂರು: ಅಪಾರ್ಟ್‌ಮೆಂಟ್​ನಲ್ಲಿ ಸಿಕ್ಕ ಅಸ್ಥಿಪಂಜರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಂಗಳೂರಿ‌ನ ಅಪಾರ್ಟ್‌ಮೆಂಟ್​ನಲ್ಲಿ ಪತ್ತೆಯಾಗಿದ್ದ ಅಸ್ಥಿಪಂಜರ ಪ್ರಕರಣದ ಬಗ್ಗೆ ಮಹತ್ವದ ವಿಚಾರಗಳು ಹೊರಬಿದ್ದಿವೆ. ಪುರುಷನ ಅಸ್ಥಿಪಂಜರದ ಪ್ರಾಥಮಿಕ ಪರೀಕ್ಷೆಯಲ್ಲಿ ಕೊಲೆಯಲ್ಲ ಎಂಬುದು ಗೊತ್ತಾಗಿದೆ. ಅಷ್ಟೇ ಅಲ್ಲದೆ, ಸುಮಾರು 2 ವರ್ಷ ಹಿಂದೆ ಮೃತಪಟ್ಟಿರುವ ಸುಳಿವೂ ದೊರೆತಿದೆ. ಹಾಗಾದರೆ, ಪ್ರಾಥಮಿಕ ವರದಿಯಲ್ಲಿ ಇನ್ನೂ ಏನೇನಿದೆ? ಅಸ್ಥಿಪಂಜರ ಯಾರದ್ದು ಎಂಬ ಪ್ರಶ್ನೆ ಉದ್ಭವಿಸಿದೆ. ಹೀಗಾಗಿ ನಾಪತ್ತೆ ಪ್ರಕರಣಗಳ ಸಂಬಂಧ ಪೊಲೀಸರು ತಲಾಶ್​​ಗೆ ಇಳಿದಿದ್ದಾರೆ.

ಬೆಂಗಳೂರು: ಅಪಾರ್ಟ್‌ಮೆಂಟ್​ನಲ್ಲಿ ಸಿಕ್ಕ ಅಸ್ಥಿಪಂಜರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸಾಂದರ್ಭಿಕ ಚಿತ್ರ

Updated on: Jul 04, 2025 | 6:56 AM

ಬೆಂಗಳೂರು, ಜುಲೈ 4: ಇಡೀ ಬೆಂಗಳೂರಿಗೆ(Bengaluru) ಶಾಕ್ ನೀಡಿದ್ದ ಬೇಗೂರು ಅಪಾರ್ಟ್‌ಮೆಂಟ್ ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ (Apartment Skeleton Case) ಈಗ ದೊಡ್ಡ ತಿರುವು ದೊರೆತಿದೆ. ಖಾಸಗಿ ಆಸ್ಪತ್ರೆಯಲ್ಲಿ ನಡೆದ ಅಸ್ಥಿಪಂಜರದ ಪರೀಕ್ಷೆಯಲ್ಲಿ ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ. ಪತ್ತೆಯಾಗಿರುವ ಅಸ್ಥಿಪಂಜರ ಪುರುಷನದ್ದು ಎಂದು ಗೊತ್ತಾದ ಬೆನ್ನಲ್ಲೇ ಅನೇಕ ಪರೀಕ್ಷೆಗಳನ್ನು‌ ನಡೆಸಲಾಯಿತು. ಈ ವೇಳೆ, ಮೂಳೆಗಳ ಮೇಲೆ ಯಾವುದೇ ಗಾಯದ ಗುರುತು ಪತ್ತೆಯಾಗದ ಹಿನ್ನೆಲೆ ಇದು ಕೊಲೆಯಲ್ಲ ಎಂಬ ವರದಿ ಬಂದಿದೆ.

ಅಸ್ಥಿಪಂಜರ ಪತ್ತೆಯಾದಗಿನಿಂದಲೂ ಕೊಲೆಯ ಅನುಮಾನ‌‌ ಹೆಚ್ಚಾಗಿತ್ತು. ಆದರೆ ಪ್ರಾಥಮಿಕ ಪರೀಕ್ಷೆಯಲ್ಲಿ, ಕೊಲೆಯಲ್ಲ ಎಂಬುದು ಗೊತ್ತಾಗಿದೆ.

ಅಸ್ಥಿಪಂಜರದ ಪ್ರಾಥಮಿಕ ಪರೀಕ್ಷೆಯಲ್ಲಿ ಪತ್ತೆಯಾದ ಅಂಶಗಳೇನು?

  • ಅಸ್ಥಿಪಂಜರ 153 ಸೆ.ಮೀ ಉದ್ದವುಳ್ಳ, 30ರಿಂದ 35 ವರ್ಷದ ವ್ಯಕ್ತಿಯದ್ದು.
  • ಕೊಲೆ ಶಂಕೆ ಇಲ್ಲ.
  • ಅಸ್ಥಿಪಂಜರದ ಮೇಲೆ ಯಾವುದೇ ಗಾಯಗಳು ಪತ್ತೆಯಾಗಿಲ್ಲ.
  • ಯಾರಾದರೂ ಆಯತಪ್ಪಿ ಇಂಗುಗುಂಡಿಗೆ ಬಿದ್ದು ಸತ್ತಿರುವ ಶಂಕೆ.
  • 2 ವರ್ಷದ ಹಿಂದೆ ಇಂಗುಗುಂಡಿಯ ನೀರಿನಲ್ಲಿ ಮುಳುಗಿ ಸತ್ತಿರುವ ಶಂಕೆ
  • ಎಫ್​ಎಸ್​ಎಲ್​​ ವಿವಿಧ ವಿಭಾಗಗಳಲ್ಲಿ ಡಿಎನ್ಎ ಫಿಂಗರ್ ಪ್ರಿಂಟ್ ಸೇರಿದಂತೆ ಅನೇಕ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: RTO ಕಣ್ತಪ್ಪಿಸಿ ಓಡಾಡ್ತಿದ್ದ ಐಷರಾಮಿ ಕಾರು ಸೀಜ್‌

ಬೇಗೂರು ಪೊಲೀಸರು 2016ರ ನಂತರ ನಾಪತ್ತೆಯಾದವರ ಕೇಸ್​ಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಯಾಕೆಂದರೆ, 2016ರಲ್ಲಿ ಅಪಾರ್ಟ್‌ಮೆಂಟ್ ಕಾಮಗಾರಿ ಪೂರ್ಣಗೊಂಡಿದ್ದು, ಅದರ ನಿರ್ಮಾಣದ ಕೊನೆ ಹಂತದಲ್ಲಿ ಇಂಗುಗುಂಡಿ ನಿರ್ಮಾಣವಾಗುತ್ತದೆ. ಹೀಗಾಗಿ 2016ರಲ್ಲಿ ಬೇಗೂರು ಸುತ್ತಮುತ್ತ ಕಾಣೆಯಾದ ಪುರುಷರ ಕೇಸ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಡಿಎನ್ಎ ವರದಿ ಬಂದ ನಂತರ ಕಾಣೆಯಾಗದವರ ಸಂಬಂಧಿಕರ ಡಿಎನ್ಎಗೆ ಹೋಲಿಕೆ‌ ಮಾಡಿ‌ ಮೃತನ ಮಾಹಿತಿ ಪತ್ತೆಮಾಡಲಾಗುತ್ತದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಇದೀಗ ಅಸ್ಥಿಪಂಜರದ ಪ್ರಕರಣ ಮತ್ತಷ್ಟು ಕುತೂಹಲ ಹುಟ್ಟಿಸಿದೆ.

ವರದಿ:ಪ್ರದೀಪ್ ಚಿಕ್ಕಾಟಿ, ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us