
ಬೆಂಗಳೂರು, ಫೆಬ್ರವರಿ 27: ಕಾಲೇಜು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣದ ತನಿಖೆ ವೇಳೆ ಬೆಚ್ಚಿಬೀಳಿಸುವ ಸಂಗತಿಗಳು ಬಯಲಾಗಿವೆ. ಯುವತಿಯರನ್ನು ಮಾದಕ ದ್ರವ್ಯಗಳ ಬಲೆಗೆ ಸಿಲುಕಿಸಿ, ನಂತರ ಅತ್ಯಾಚಾರ ಎಸಗಿ, ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡುತ್ತಿದ್ದ ದೊಡ್ಡ ಜಾಲವೊಂದನ್ನು ಅಮೃತಹಳ್ಳಿ ಪೊಲೀಸರು ಬಯಲಿಗೆಳೆದ್ದಿದ್ದಾರೆ. ನಿಖಿಲ್ ಮತ್ತು ಡಿಕ್ಸನ್ ಈ ಜಾಲದ ಪ್ರಮುಖ ಆರೋಪಿಗಳಾಗಿದ್ದು, ಈ ಪೈಕಿ ನಿಖಿಲ್ ಮಾಸ್ಟರ್ಮೈಂಡ್ ಎಂದು ತಿಳಿದುಬಂದಿದೆ. ಆರೋಪಿಗಳು ಇನ್ಸ್ಟಾಗ್ರಾಮ್ ಮೂಲಕ ಪ್ರತಿಷ್ಠಿತ ಕಾಲೇಜುಗಳ ಯುವತಿಯರೊಂದಿಗೆ ಸ್ನೇಹ ಬೆಳೆಸಿ, ಪಾರ್ಟಿಗಳಿಗೆ ಆಹ್ವಾನಿಸುತ್ತಿದ್ದರು. ಅಲ್ಲಿ ಅವರಿಗೆ ಡ್ರಗ್ಸ್ ಬೆರೆಸಿದ ಪಾನೀಯಗಳನ್ನು ನೀಡಿ ಅಥವಾ ನೇರವಾಗಿ ಡ್ರಗ್ಸ್ ನೀಡಿ ಪ್ರಜ್ಞಾಹೀನರನ್ನಾಗಿಸುತ್ತಿದ್ದರು.ನಂತರ ಅವರ ಮೇಲೆ ಅತ್ಯಾಚಾರ ಎಸಗಿ, ಬೆತ್ತಲೆ ವಿಡಿಯೋಗಳು ಮತ್ತು ಫೋಟೊಗಳನ್ನು ತೆಗೆದು ಬ್ಲಾಕ್ಮೇಲ್ ಮಾಡುತ್ತಿದ್ದರು. ಈ ಮೂಲಕ ಅವರನ್ನು ಮತ್ತೆ ಮತ್ತೆ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಪಾರ್ಟಿಯ ನಂತರ ಆರೋಪಿಗಳು ಏನೂ ಅರಿಯದವರಂತೆ ವರ್ತಿಸಿ, ಕುಡಿದ ನಶೆಯಲ್ಲಿದ್ದೆವು. ಏನಾಗಿದೆ ಎಂದು ಗೊತ್ತಿಲ್ಲ ಎಂದು ನಾಟಕವಾಡುತ್ತಿದ್ದರು. ಬಹಳಷ್ಟು ಯುವತಿಯರು ತಮ್ಮ ಗೌರವಕ್ಕೆ ಹೆದರಿ, ಪೊಲೀಸರಿಗೆ ದೂರು ನೀಡಲು ಹಿಂಜರಿದಿದ್ದರು. ಆದರೆ, ಇತ್ತೀಚೆಗೆ ನಡೆದ ಘಟನೆ ಸಂಬಂಧ ಯುವತಿಯೋರ್ವಳು ನೀಡಿರುವ ದೂರಿನಿಂದ ಆರೋಪಿಗಳ ಅಸಲಿ ಮುಖ ಬಯಲಾಗಿದೆ. ಸುಮಾರು 19 ಯುವತಿಯರು ದೌರ್ಜನ್ಯ ವಿಚಾರವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಮಾದಕ ಜಾಲದ ಹಿಂದೆ ರಾಜಕಾರಣಿಗಳು ಮತ್ತು ದೊಡ್ಡ ಹುದ್ದೆಗಳಲ್ಲಿರುವವರು ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಹನಿಟ್ರ್ಯಾಪ್ ಕೇಸ್ ಆರೋಪಿ ಯುವತಿಯಿಂದ ಸಾಮೂಹಿಕ ಅತ್ಯಾಚಾರ ದೂರು
ಆರೋಪಿಗಳಾದ ಡಿಕ್ಸನ್ ಮತ್ತು ಇತರರು ಇನ್ಸ್ಟಾಗ್ರಾಮ್ ಮೂಲಕ ಯುವತಿಯರನ್ನು ಸಂಪರ್ಕಿಸಿ, ಫೋಟೋ ಶೂಟ್, ಮಾಡೆಲಿಂಗ್ ಅಥವಾ ಪಾರ್ಟಿಗಳ ನೆಪದಲ್ಲಿ ಆಹ್ವಾನಿಸುತ್ತಿದ್ದರು. ಆರಂಭದಲ್ಲಿ ಪಬ್ಗಳು ಮತ್ತು ಕೆಫೆಗಳಲ್ಲಿ ಸಭೆಗಳನ್ನು ನಡೆಸುತ್ತಿದ್ದರು, ಅಲ್ಲಿ ಯಾವುದೇ ಅಸಭ್ಯ ವರ್ತನೆ ಇರುತ್ತಿರಲಿಲ್ಲ. ನಂತರ, ಆಫ್ಟರ್ ಪಾರ್ಟಿ ನೆಪದಲ್ಲಿ ವಿಲ್ಲಾಗಳಿಗೆ ಆಹ್ವಾನಿಸಿ ಲೈಂಗಿಕವಾಗಿ ಸಹಕರಿಸಲು ಒತ್ತಾಯಿಸುತ್ತಿದ್ದರು. ಕೆಲವರು ಒಪ್ಪಿಕೊಂಡರೆ, ಕೆಲವರಿಗೆ ಮಾದಕ ದ್ರವ್ಯಗಳನ್ನು ಬಲವಂತವಾಗಿ ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿತ್ತು. ಆರೋಪಿಗಳು ಮುಖ್ಯವಾಗಿ ಪ್ರತಿಷ್ಠಿತ ಕಾಲೇಜುಗಳ ಯುವತಿಯರನ್ನು ಗುರಿಯಾಗಿಸಿಕೊಂಡಿದ್ದರು, ಅನ್ಯ ರಾಜ್ಯದ ಯುವತಿಯರೇ ಇವರ ಟಾರ್ಗೆಟ್ ಆಗಿತ್ತು. ದೂರು ನೀಡಿರುವ ಸಂತ್ರಸ್ತ ಯುವತಿ ಕೂಡ ಮೂಲತಃ ತಮಿಳುನಾಡಿನವಳು. ಡಿಕ್ಸನ್ ಈ ಯುವತಿಯನ್ನು ಪ್ರೀತಿಸುವ ನೆಪದಲ್ಲಿ ಸಂಪರ್ಕಿಸಿ, ವಿಶ್ವಾಸ ಗಳಿಸಿ ಪಾರ್ಟಿಗೆ ಕರೆದುಕೊಂಡು ಹೋಗಿದ್ದನು. ಆಕೆ ಸಹಕರಿಸಲು ನಿರಾಕರಿಸಿದಾಗ, ಮಾದಕ ದ್ರವ್ಯ ನೀಡಿ ಇಬ್ಬರು ಆರೋಪಿಗಳು ಬಲವಂತವಾಗಿ ಆಕೆಯನ್ನು ಮಿಸ್ಯೂಸ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಘಟನೆ ಸಂಬಂಧ ಫೆಬ್ರವರಿ 21ರಂದು ಯುವತಿ ದೂರು ನೀಡುವ ಮೊದಲು, ಆರೋಪಿ ನಿಖಿಲ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಆ ಯುವತಿ ತನಗೆ ಬ್ಲಾಕ್ಮೇಲ್ ಮಾಡುತ್ತಿದ್ದಾಳೆ ಎಂದು ದೂರು ದಾಖಲಿಸಿದ್ದ. ನಂತರ, ಯುವತಿಯ ದೂರಿನ ಆಧಾರದ ಮೇಲೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಯುವತಿಯೇ ತಪ್ಪಿತಸ್ಥೆ ಎಂದು ಬಿಂಬಿಸಲು ಯತ್ನಿಸಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ಸಕಲೇಶಪುರದ ನಿಖಿಲ್ ಮತ್ತು ಪಶ್ಚಿಮ ಬಂಗಾಳದ ನಿಖಿಲ್ನ ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:24 pm, Fri, 27 February 26